ಕೆಲವಂ ಬಲ್ಲವರಿಂದ && ಬಲ್ಲೆವೆಂದು ಬಲ್ಲವರಿಂದ ಕಲ್ತು

ಬಹಳ ಹಿಂದೆ ನಾನು ಇಂಗ್ಲಿಷ್ ಭಾಷಾಂತರದಲ್ಲಿ ಓದಿದ ಒಂದು ಅರೇಬಿಯನ್ ಗಾದೆ ಹೀಗಿದೆ:

ಯಾರಿಗೆ ಗೊತ್ತಿದೆಯೋ ಮತ್ತು ತಮಗೆ ಗೊತ್ತು ಎಂದು ಗೊತ್ತಿದೆಯೋ ಅವನು ಜ್ಞಾನಿ, ಅವನನ್ನು ಗುರುವಾಗಿ ಸ್ವೀಕರಿಸು.
ಯಾರಿಗೆ ಗೊತ್ತಿದೆಯೋ, ಆದರೆ  ತಮಗೆ ಗೊತ್ತಿದೆ ಎಂದು ಗೊತ್ತಿಲ್ಲವೋ ಅವರನ್ನು ನಿದ್ರೆಯಿಂದ ಎಚ್ಚರಿಸು. 
ಯಾರಿಗೆ ಗೊತ್ತಿಲ್ಲವೋ ಮತ್ತು ತಮಗೆ ಗೊತ್ತಿಲ್ಲವೆಂದು ಗೊತ್ತಿದೆಯೋ ಅವರು ಮುಗ್ಧರು, ಅವರಿಗೆ ತಿಳುವಳಿಕೆ ನೀಡು.
ಯಾರಿಗೆ ಗೊತ್ತಿಲ್ಲವೋ ಮತ್ತು ತಮಗೆ ಗೊತ್ತಿಲ್ಲವೆಂದೂ  ಗೊತ್ತಿಲ್ಲವೋ ಅವರು ಮೂರ್ಖರು, ಅವರಿಂದ ದೂರವಿರು.

ನೀವು ಯಾವುದೋ ವಿಷಯವನ್ನು ಕುರಿತು ವಿಷಯ ಸಂಗ್ರಹಣೆ ಮಾಡಬೇಕು ಎಂದುಕೊಳ್ಳಿ. ಈಗಂತೂ ಗೂಗಲ್ಲಿಗೆ ಹೋಗಿ ಏನೇ ಹುಡುಕಿದರೂ ಅದು ಪುಟಗಟ್ಟಲೆ ಮಾಹಿತಿ ಕಕ್ಕಿಬಿಡುತ್ತದೆ! ಇವುಗಳಲ್ಲಿ ಯಾವುದನ್ನು ನಂಬುವುದು? ಯಾವುದನ್ನು ಸ್ವೀಕರಿಸುವುದು? ಅರೇಬಿಯನ್ ಗಾದೆ ನಮಗೆ ಸಹಾಯ ಮಾಡುತ್ತದೆ. 

ಕೆಲವರಿಗೆ ವಿಷಯ ಗೊತ್ತಿರುತ್ತದೆ; ಅಷ್ಟೇ ಅಲ್ಲ, ತಮಗೆ ಅದು ಗೊತ್ತು ಎಂಬುದರ ಅರಿವೂ ಇರುತ್ತದೆ. ಹೀಗಾಗಿ ಅವರನ್ನು ಕೇಳಿದರೆ ಅವರು ಆತ್ಮವಿಶ್ವಾಸದಿಂದ ನಿಮಗೆ ವಿಷಯವನ್ನು ಹೇಳಿಕೊಡುತ್ತಾರೆ. ಇಂಥ ಗುರುಗಳು ಸಿಕ್ಕುವುದು ಅಪರೂಪ. ಕುಮಾರವ್ಯಾಸ "ಗುರುವರಿಯದವನೆ ಮರುಳ" ಎಂದಿದ್ದಾನೆ. ಇಂಥ ಗುರುಗಳು ಸಿಕ್ಕಾಗ ಗುರುತಿಸದೇ ಹೋದವನು ಮರುಳ ಎನ್ನುವುದು ಈ ಮಾತಿನ ಅರ್ಥ. 

 ಕೆಲವರಿಗೆ ವಿಷಯ ಗೊತ್ತಿದ್ದರೂ ಅದು ತಮಗೆ ಗೊತ್ತಿದೆ ಎಂಬ ಅರಿವು ಇರುವುದಿಲ್ಲ. ಚೆನ್ನಾಗಿ ಹಾಡಲು ಬಂದರೂ ಹಾಡಲು ಅಳುಕುವ ಸ್ವಭಾವದವರನ್ನು, ಚೆನ್ನಾಗಿ ಬರೆಯಲು ಬಂದರೂ "ಅಯ್ಯೋ ಇದು ಓದಲು ಯೋಗ್ಯವೇ?" ಎಂದು ಬರೆದದ್ದನ್ನು ಮುಚ್ಚಿಡುವವರನ್ನು ನೀವು ಖಂಡಿತ ನೋಡಿರುತ್ತೀರಿ. ಅಂಥವರಿಗೆ ಪ್ರೋತ್ಸಾಹ ನೀಡಬೇಕು ಎಂದು ಗಾದೆ ಹೇಳುತ್ತದೆ. ಫೇಸ್ ಬುಕ್ ನಲ್ಲಿ ನಿಮ್ಮ ಕಣ್ಣಿಗೆ ಯಾರೋ ಬರೆದ ಒಳ್ಳೆಯ ಬರಹ ಕಾಣುತ್ತದೆ. ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಬೇಕಾದದ್ದು ಕೂಡಾ ಮುಖ್ಯ. ಯಾರೂ ಪ್ರೋತ್ಸಾಹ ನೀಡದಿದ್ದರೆ ಬರೆದವರು ಅಯ್ಯೋ, ಇದು ಯಾರಿಗೂ ಇಷ್ಟವಿಲ್ಲವೇನೋ" ಎಂದುಕೊಂಡುಬಿಡಬಹುದು. ಒಳ್ಳೆಯ ಚಲನಚಿತ್ರ ಬಂದಾಗ ಅದನ್ನು ನೋಡಿ ಪ್ರೋತ್ಸಾಹಿಸದೆ ಇದ್ದರೆ. ಒಳ್ಳೆಯ ಪುಸ್ತಕ ಕಂಡಾಗ ಅದನ್ನು ಕೊಂಡು ಪ್ರೋತ್ಸಾಹ ನೀಡದೆ ಇದ್ದರೆ ಕ್ರಮೇಣ ಆ  ನಿರ್ದೇಶಕ/ಲೇಖಕ ತನ್ನ ಹಾದಿ ಬಿಟ್ಟು "ಜನಪ್ರಿಯ" ಯಾವುದೋ ಅದನ್ನು ಹುಡುಕಿಕೊಂಡು ಹೋಗಬಹುದು. ಜನ ತಮಗೆ ಪ್ರಿಯವಾದದ್ದು ಏನು ಎಂದು ಹೇಳದಿದ್ದರೆ ಆಗುವ ಅಪಾಯ ಇದು. 
 ಕೆಲವರಿಗೆ ವಿಷಯ ಗೊತ್ತಿರುವುದಿಲ್ಲ; ಆದರೆ ವಿಷಯ ತಮಗೆ ಗೊತ್ತಿಲ್ಲ ಎನ್ನುವ ಅರಿವು ಅವರಿಗೆ ಇರುತ್ತದೆ. ಅಂಥವರಲ್ಲಿ ಕೆಲವರು ಕಲಿಯಲು ಆಸಕ್ತಿಯನ್ನೂ ಉಳ್ಳವರು. ಇಂಥವರು ಒಳ್ಳೆಯ ಶಿಷ್ಯರು. ಅವರಿಗೆ ಹೇಳಿಕೊಡು ಎನ್ನುತ್ತದೆ ಗಾದೆ. 

  ಇನ್ನೂ ಒಂದು ಪ್ರಕಾರದ ಜನ ಇದ್ದಾರೆ. ಅವರಿಗೆ ವಿಷಯದ ಜ್ಞಾನವಿಲ್ಲ. ಆದರೆ ತಮಗೆ ಅರಿವಿಲ್ಲ ಎಂಬುದರ ಅರಿವೂ ಇಲ್ಲ! ತಮಗೆ ವಿಷಯ ಗೊತ್ತು ಎಂದುಕೊಂಡು ಮಾತಾಡುತ್ತಾರೆ. ಇಂಥವರನ್ನು ನೀವು ಖಂಡಿತಾ ನೋಡಿರುತ್ತೀರಿ! ಇವರು ಮೀಟಿಂಗ್ ಗಳಲ್ಲಿ ಎಲ್ಲರನ್ನೂ ತಪ್ಪು ಹಾದಿಗೆ ಎಳೆಯುತ್ತಾರೆ. ರಾಜಕಾರಣಕ್ಕೆ ಬರುವ ಬಹಳಷ್ಟು ಜನ ಇಂಥವರೇ ಎನ್ನುವುದು ನಮ್ಮ ದುರದೃಷ್ಟ. ಅಂಬೇಡ್ಕರ್ ಬಗ್ಗೆ, ವಿವೇಕಾನಂದರ ಬಗ್ಗೆ, ಭಗವದ್ಗೀತೆ ಬಗ್ಗೆ, ಕುರಾನ್ ಬಗ್ಗೆ, ಮಾತೃಭಾಷೆಯಲ್ಲಿ ಶಿಕ್ಷಣದ ಬಗ್ಗೆ  ಒಂದು ಅಕ್ಷರವೂ ಓದಿಲ್ಲದೆ ಅಥವಾ ಅರೆಬರೆ ಓದಿಕೊಂಡು ಮಾತಾಡುತ್ತಾರೆ. ಗಾಂಧಿ ಬಗ್ಗೆ, ನೆಹರೂ ಬಗ್ಗೆ ಒಂದು ಲವಲೇಶವೂ ಗೊತ್ತಿಲ್ಲದೇ ಯಾರೋ ಕಳಿಸಿದ ಕುರಿತಾದ ವಿಷಪೂರ್ಣ ಮಾಹಿತಿಯನ್ನು ಷೇರ್ ಮಾಡುತ್ತಾರೆ.  ಶಿವರಾಮ ಕಾರಂತರ ಬಗ್ಗೆ, ರಾಜರತ್ನಂ ಬಗ್ಗೆ ಏನೋ ವಿವಾದ ಹಬ್ಬಿಸಿ ಪ್ರಸಿದ್ಧರಾಗಲು ಹಾತೊರೆಯುತ್ತಾರೆ.  ಇಂಥವರು ಶಾಲಾ-ಕಾಲೇಜುಗಳಲ್ಲಿ ಅಧ್ಯಾಪಕರಾದರೆ ಮಕ್ಕಳ ಗತಿ ಏನು!  ಇಂಥವರಿಂದ ದೂರವಿರುವುದು ಒಳ್ಳೆಯದು ಎಂದು ಗಾದೆ ಜಾಣ್ಮೆಯ ಮಾತನ್ನು ಹೇಳುತ್ತದೆ. 

 ಗಾದೆಯ ಬಗ್ಗೆ ಬೇಕಾದಷ್ಟು ಬರೆದಮೇಲೆ ಅದನ್ನು ನಾನು ಸರಿಯಾಗಿ ಅರ್ಥ ಮಾಡಿಕೊಂಡಿದ್ದೀನಾ ಅಂತ ಸಂದೇಹ ಬರುತ್ತಿದೆ! 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)