ಪೋಸ್ಟ್‌ಗಳು

ಫೆಬ್ರವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ಸಮಾಧಿಯ ಎದುರು ನಿಂತು ಅಳದಿರು

ಇಮೇಜ್
ಮೂಲ: ಕ್ಲೇರ್ ಹಾರ್ನರ್ ಅನುವಾದ: ಸಿ. ಪಿ. ರವಿಕುಮಾರ್ ನನ್ನ ಸಮಾಧಿಯ ಎದುರು ನಿಂತು ಅಳದಿರು, ನಾನಲ್ಲಿಲ್ಲ,  ನಾನು ನಿದ್ರಿಸುವುದಿಲ್ಲ, ತಿಳಿದಿರು: ಲೀನವಾಗಿದೆ ಬೀಸುವ ಗಾಳಿಗಳಲ್ಲಿ ಸಾವಿರಾರು ವಜ್ರದಂತೆ ಹೊಳೆವ ಹಿಮಕಣದಲ್ಲಿ ನನ್ನುಸಿರು. ಬಲಿತ ಕಾಳಿನ ಮೇಲೆ ಹೊಳೆವ  ಕಿರಣವು ನಾನು, ನಾನು ಶ್ರಾವಣದ ನಿಶಬ್ದ ತುಂತುರು ಮಳೆ. ಶಾಂತ ನಸುಕಿನೊಳು ನಿದ್ದೆಯಿಂದೆದ್ದಾಗ ನೀನು ಯಾವ ಸದ್ದಿನಿಂದ ಪುಳಕಗೊಳ್ಳುವುದೋ ಇಳೆ, ಆ ಇಂಚರಗೈಯುವ ಪಕ್ಷಿವೃಂದವು ನಾನು, ದಿವರಾತ್ರಿಗಳ ಮಾಯಾ ಪರಿವರ್ತನೆ ನಾನು. ಸುರಿಸದಿರು ನನ್ನ ಸಮಾಧಿಯ ಎದುರು  ನಿನ್ನ ಕಣ್ಣುಗಳಿಂದ ಅಶ್ರುಬಿಂದು. ನಾನಲ್ಲಿಲ್ಲ ಎಲ್ಲರೂ ತಿಳಿದಿರುವಂತೆ, ಯಾರು ಹೇಳಿದರು ನಾನು ಇನ್ನಿಲ್ಲವೆಂದು?

ದೊರೆ ನೆಬುಕಡ್ನೆಜ್ಜರ್ ಕಂಡನಂತೆ ಒಂದು ದುಃಸ್ವಪ್ನ

ಇಮೇಜ್
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕವಿತೆ ಓದುವ ಮುನ್ನ: ನೆಬೂಕಡ್ನೆಜ್ಜರ್ ಎಂಬ ರಾಜನ ಕಥೆ ಬೈಬಲ್ಲಿನಲ್ಲಿದೆ. ಇವನು ಬ್ಯಾಬಿಲಾನ್ ದೇಶದ ದೊರೆ. ತನ್ನ ಬಗ್ಗೆ ಅವನಿಗೆ ಗರ್ವ ಉಂಟಾದಾಗ ದೇವರು ಅವನಿಗೆ ಪಾಠ ಕಲಿಸಲೆಂದು ಒಂದು ಕನಸು ಕಾಣುವಂತೆ ಮಾಡುತ್ತಾನೆ. ಈ ಕನಸಿನಲ್ಲಿ ಅವನ ಪ್ರತಿಮೆಯೊಂದು ಕಾಣುತ್ತದೆ. ಅದರ ತಲೆ ಬಂಗಾರದ್ದು. ತಲೆಯಿಂದ ಪಾದಗಳ ಕಡೆಗೆ ಇಳಿಯುತ್ತಾ ಬೆಳ್ಳಿ, ಕಂಚು ಇತ್ಯಾದಿ ಕಡಿಮೆ ಮೌಲ್ಯದ ಲೋಹಗಳು. ಈ ಕನಸಿನ ಅರ್ಥವೇನೆಂದು ಅವನಿಗೆ ಹೊಳೆದರೂ ಅವನು ತನ್ನ ಆಸ್ಥಾನದ ಮುತ್ಸದ್ದಿಗಳನ್ನು ಕೇಳುತ್ತಾನೆ. ಮುಂದೆ ಬರುವ ರಾಜರು ಇವನಿಗಿಂತಲೂ ಕಡಿಮೆ ಮಹತ್ವದ ರಾಜರು ಎಂಬುದು ಕನಸಿನ ಗೂಢ.  ಯಾರೂ ಕನಸಿನ ಅರ್ಥ ಹೇಳಲಾರದಾದಾಗ ಕೋಪಗೊಂಡ ರಾಜ ಅವರನ್ನು ಕೊಲ್ಲಿಸುತ್ತಾನೆ.  ಡೇನಿಯಲ್ ಎಂಬುವನು ಮಾತ್ರ ಅದರ ಅರ್ಥ ಹೇಳುತ್ತಾನೆ. ರಾಜನ ಗರ್ವಭಂಗ ಮಾಡಲು ದೇವರು ಅವನಿಗೆ ಹುಚ್ಚು ಹಿಡಿಯುವ ಹಾಗೆ ಮಾಡುತ್ತಾನೆ. ರಾಜನು ಇಲಿಬಾವಲಿಗಳೊಂದಿಗೆ ಬಾಳುತ್ತಾ ಹುಲ್ಲು ತಿನ್ನುತ್ತಾ ಬದುಕುತ್ತಾನೆ.  ಕೆಲವು ವರ್ಷಗಳ ನಂತರ ಅವನ ಮನೋವ್ಯಾಧಿ ಗುಣವಾಗಿ ಅವನು ದೇವರಿಗೆ ತಲೆಬಾಗುತ್ತಾನೆ.  ಪ್ರಸ್ತುತ  ಸಾನೆಟ್ಟಿನಲ್ಲಿ ಕೀಟ್ಸ್ ಅಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಕುರಿತು ಕೂಡಾ ವಿಶ್ಲೇಷಿಸುತ್ತಿರಬಹುದು.  ಕವಿತೆ: ಇಲಿಬಾವಲಿಗಳೊಂದಿಗೆ ವಾಸ ಮಾಡಲು ಹೊರಡುವ ಮುನ್ನ ದೊರೆ ನೆಬುಕಡ್ನೆಜ್ಜರ್ ಕಂಡನಂತೆ ಒಂದು ದು

ನಾನಿರುವುದಿಲ್ಲ ಎಂಬ ಭೀತಿ

ಇಮೇಜ್
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಾನಿರುವುದಿಲ್ಲ ಮುಂದೊಂದು ದಿನ, ಅದಕ್ಕೆ ಮೊದಲೇ ಜೇನುನೊಣದಂತೆ ಹೀರಿಕೊಂಡು ನನ್ನ ಲೇಖನಿಯು ಮಾನಸೋದ್ಯಾನದ ಅಸಂಖ್ಯ ಕಲ್ಪನಾಪುಷ್ಪಗಳ ಮಧುವನ್ನು ಘನೀಕರಿಸದಿದ್ದರೆ ಅಕ್ಷರರೂಪ ಗ್ರಂಥಮಾಲೆಯಲ್ಲಿ , ಎಂದು ಧೇನಿಸಿ ಭೀತಗೊಳ್ಳುವೆನು. ನೋಡಿದಾಗ ಆಗಸದ ಕಡೆಗೆ ಕಾಣಿಸಿ ನಕ್ಷತ್ರಪುಂಜದಲ್ಲಿ ಯಾವುದೋ ಪ್ರೇಮಕಥನವು ಬಾನಲ್ಲಿ, ನಿಡುಸುಯ್ಯುವೆನು ಅದರ  ನೆರಳನ್ನಾದರೂ ನಾನಿಲ್ಲಿ ಗ್ರಹಿಸಿಡಲು ಬಿಡುವುದೇ ವಿಧಿಯ ಮಾಯಾಹಸ್ತ! ನಿನ್ನ ಮೊಗದ ಚೆಲುವನ್ನು ನೋಡುತ್ತಾ ದುಃಖಿಸುವೆ ಮತ್ತೆ ಇನ್ನೆಂದೂ ಕಾಣಲು ಸಿಕ್ಕದೆಂದು;  ದೊರೆಯದು ನನಗೆ ಇನ್ನೆಂದೂ ಭಾವನಾತೀತ, ನಿಷ್ಕಲ್ಮಶ ಪ್ರೇಮದ ಸುಖ; ಕಣ್ಣಾಡಿಸಿ ನೋಡುತ್ತೇನೆ ಜಗತ್ತಿನ ಕಿನಾರೆಯಲ್ಲಿ ನಿಂತು: ಎಲ್ಲಿಯವರೆಗೆ ನಿಂತಿರುತ್ತೇನೆ ಇಲ್ಲಿ ನಾನೆಂದರೆ ಯಾವ ಘಳಿಗೆ ಮುಳುಗುವುವೋ ಕೀರ್ತಿ ಮತ್ತು ಪ್ರೇಮ ಶೂನ್ಯದೊಳಗೆ.

ಲಾಟ್ ಮಹಾಶಯನ ಹೆಂಡತಿ

ಇಮೇಜ್
ಮೂಲ: ಆನಾ ಅಹ್ಮತೋವಾ  (ರಷ್ಯಾ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಕಪ್ಪು ಪರ್ವತದ ಮೇಲೆ ಕಡುಕಷ್ಟದ ದಾರಿಯಲ್ಲಿ  ಅವನು ಹೊರಟಿದ್ದ ದೇವಸೇವಕರನ್ನು ಹಿಂಬಾಲಿಸಿ.  ನಿಯತ್ತಿನ ಮನುಷ್ಯ; ಆದರವನ ಹೆಂಡತಿಗೆ ಯಾಕೋ "ಹಿಂತಿರುಗಿ ನೋಡೆಂದು" ಒಳದನಿಯ ಕಸಿವಿಸಿ.  "ನೋಡು ಸೊಡೋಮ್ ನಗರದ ಕೆಂಪು ಮೀನಾರಗಳು,  ಅಗೋ ನೀನು ಹಾಡುತ್ತಿದ್ದ ಸಭಾಮೈದಾನ.  ನಿನ್ನ ಮನೆಯ ಕಿಟಕಿಗಳು ಕಾಣುತ್ತಿವೆ ಇನ್ನೂ,  ಈ ಮನೆಯಲ್ಲೇ ಅಲ್ಲವೇ ಹಡೆದದ್ದು ನಿನ್ನೆಲ್ಲ ಮಕ್ಕಳನ್ನ?"  ಒಮ್ಮೆ ಹಿಂದಿರುಗಿ ನೋಡಿಯೇ ಬಿಟ್ಟಳು! ಕೂಡಲೇ ದೇಹದಲ್ಲಿ  ಎದ್ದಿತು ನೋವು, ಕಡಿಮೆಯಾಗಿತ್ತು ಕಚ್ಚಿದಂತೆ ಚೇಳು. ಹೊಲೆದುಕೊಂಡು ಕಣ್ಣು, ಉಪ್ಪಿನ ಹೊರೆಯಾಯ್ತು ದೇಹ, ನಿಂತಲ್ಲೇ ಮರಗಟ್ಟಿದವು ಅವಳ ಕಾಲು.  ಈ ಹೆಂಗಸಿಗಾಗಿ ಯಾರು ಅಳುವರು ಹೇಳಿ?  ತೀರಾ ಯಃಕಶ್ಚಿತ್ ಅನಿಸುವುದಲ್ಲವೇ ಅವಳ ಸಂಗತಿ? ನನ್ನ ಹೃದಯದಲ್ಲಂತೂ ಅವಳಿಗೆ ಸದಾ ಇರುವುದು ಸ್ಥಾನ, ತಿರುಗಿದ್ದಕ್ಕೆ ಪಡೆದಳಲ್ಲ ಸಾವಿನ ದುರ್ಗತಿ! ಆನಾ ಅಹ್ಮತೋವಾ ರಷ್ಯಾ ದೇಶದ ಪ್ರಸಿದ್ಧ ಕವಯಿತ್ರಿ. ಪ್ರಸ್ತುತ ಕವಿತೆಯಲ್ಲಿ ಬೈಬಲ್ ಗ್ರಂಥದಲ್ಲಿ ಬರುವ ಒಂದು ಕಥೆಯ ಉಲ್ಲೇಖವಿದೆ. ಲಾಟ್ಸ್ ಎಂಬುವನು ಸೊಡೋಮ್ ನಗರದ ನಿವಾಸಿ. ಆ ನಗರದ ನಿವಾಸಿಗಳೆಲ್ಲರೂ ಪಾಪಕ್ಕೆ ಮುಡಿಪಾದವರು; ಇವನೊಬ್ಬನೇ ಸದಾಚಾರಿ. ಒಮ್ಮೆ ಇವನ ಮನೆಗೆ ಇಬ್ಬರು ಅಪ್ಸರೆಯರು ರಾತ್ರಿ ತಂಗಲೆಂದು ಬರುತ್ತಾರೆ. ಊರಿನವರ ಕಣ್

ಸುಲಭ ಎನ್ನುತಿಹನು ಕಬೀರ

ಇಮೇಜ್
ಮೂಲ: ಮಹಾತ್ಮಾ ಕಬೀರ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕಣ್ಣಿಗೆ ಹೇಗೆ ಕಾಣುವುದೋ ಅದಲ್ಲ ವರ್ಣಿಸಲಾಗದು ಏನೆಂದು, ಇಲ್ಲ ಪದಗಳಾಧಾರ. ನೋಡದೇ ಹೇಗೆ ಬಂದೀತು ನಂಬಿಕೆ? ಅರ್ಥವಾದೀತೆ ಮಾಡದೇ ಶಬ್ದಲೋಕವಿಹಾರ? ಪದಗಳ ಪರಿಚಯ ಬರೀ ಜ್ಞಾನಿಗೆ ಮಾತ್ರ ಅಜ್ಞಾನಿಗೆ ಬರಿ ವಿಸ್ಮಯಿಸುವ ಪರಿಹಾರ. ನಿರಾಕಾರನೆಂದು ಪೂಜಿಸುವರು ಕೆಲವರು ಕೆಲವರಿಗೋ ದೇವನು ಹಲವು ರೂಪ ಪ್ರಕಾರ. ದೇವನು ಇವೆರಡನ್ನೂ ಮೀರಿದವನೆಂದು ಜ್ಞಾನಿಯು ತಿಳಿದ ವಿಚಾರ. ಬರೆದಿಡಲಾಗದ ರಾಗವು ದೇವರು, ಹಾಕಲಾಗುವುದೆ ಪ್ರಸ್ತಾರ? ಸುರತ ನಿರಋತಗಳನು ಅರಿತವನಿಗೆ ಮಾತ್ರ ಸುಲಭ ಎನ್ನುತಿಹನು ಕಬೀರ

ನಾನು

ಇಮೇಜ್
ಮೂಲ: ಚಾರ್ಲ್ಸ್ ಕಾಸ್ಲೆ ಅನುವಾದ: ಸಿ. ಪಿ. ರವಿಕುಮಾರ್ ಹಕ್ಕಿಯನ್ನು ಹಾಡುವ ಹಾಡು ನಾನು, ನಾನು ಭೂಮಿಯನ್ನು ಬೆಳೆವ ಎಲೆ. ನಾನು ಚಂದ್ರಮನನ್ನು ಚಲಿಸುವ ಅಲೆ, ನಾನು ಮರಳನ್ನು ತಡೆಹಿಡಿವ ನೀರ ಸೆಲೆ. ನಾನು ಬಿರುಗಾಳಿಯನ್ನಟ್ಟಿ ಓಡಿಸುವ ಮುಗಿಲು, ನಾನು ಸೂರ್ಯನನ್ನು ಬೆಳಗಿಸುವ ಭೂಮಿ. ಕಲ್ಲಿನ ಮೇಲೆರಗುವ ಬೆಂಕಿಯ ಕಿಡಿ ನಾನು, ನಾನು ಕೈಗಳನ್ನು ರೂಪಿಸುವ ಜೇಡಿಮಣ್ಣು, ಆ ಸದ್ದು ನಾನು ಯಾವುದು  ಉದ್ಗರಿಸುವುದೋ ಮನುಷ್ಯನನ್ನು.

ಪ್ರೇಮವನ್ನು ಸ್ವೀಕರಿಸು ಹಗುರಾಗಿ

ಇಮೇಜ್
ಮೂಲ: ಡಬ್ಲ್ಯು. ಬಿ. ಯೇಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಸಂಧಿಸಿದೆ ನನ್ನೊಲವನ್ನು ರಾ ಣಿಯ ಉದ್ಯಾನದೊಳಗೆ, ಹಿಮದ ಹೆಜ್ಜೆ ಇಡುತ್ತಾ ಹೆಣ್ಣು ನಡೆದುಬಂದಳು ಬಳಿಗೆ, ಹೇಗೆ ಚಿಗುರುವುದೋ ಹಸಿರೆಲೆ ಮರದಲ್ಲಿ ಹಾಗೆ, ಪ್ರೇಮವನ್ನು ಸ್ವೀಕರಿಸು ಹಗುರವಾಗಿ ಎಂದಳು ನನಗೆ. ಕೇಳುವ ವಿವೇಕವಿತ್ತೇ ನನ್ನ ಬಿಸಿರಕ್ತಕ್ಕೆ? ಹತ್ತಲಿಲ್ಲ ತಲೆಗೆ. ನದಿಯ ಬಳಿ ಹೊಲದಲ್ಲಿ ಸಂಧಿಸಿದೆನು ನನ್ನೊಲವನ್ನು, ಹೀಗೆಂದಳು ಹೆಗಲ ಮೇಲೆ ಹಿಮಶ್ವೇತ ಕೈಯಿಟ್ಟು ಹೆಣ್ಣು: ನೋಡಿದೆಯಾ ಪಾತಿಯ ಮೇಲೆ ಬೆಳೆದ ಹುಲ್ಲನ್ನು? ಹಾಗೆ ಸ್ವೀಕರಿಸು ಹಗುರವಾಗಿ ಪ್ರೇಮವನ್ನು. ಅವಳ ಮಾತಿಗೆ ಬೆಲೆ ಕೊಡದೆ ಈಗ  ಕಂಬನಿ ಹರಿಸುತ್ತಿವೆ ಕಣ್ಣು.

ಆಧುನಿಕ ಕವಿಯ ಆತ್ಮಸ್ವೀಕಾರ

ಇಮೇಜ್
ಹಿಂದಿ ಮೂಲ: ಅಗ್ನೇಯ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಯಾರದ್ದೋ ಸತ್ಯವಾಗಿತ್ತು ಅದು ಸಂದರ್ಭಕ್ಕೆ ಸರಿಯಾಗಿ ಸೇರಿಸಿದೆ ನಾನು ಯಾರೋ ಕಿತ್ತು ತಂದಿದ್ದರು ಜೇನುಗೂಡು ನಾನು ಹಿಂಡಿಕೊಂಡೆ  ಜೇನು ಯಾರದೋ ಉಕ್ತಿಯಲ್ಲಿತ್ತು ಗರಿಮೆ ನಾನು ಅದನ್ನು ಸ್ವಲ್ಪ ತಿದ್ದಿದೆ  ಯಾರದೋ ಸಂವೇದನೆಯಲ್ಲಿತ್ತು ಬೆಂಕಿಯ ತಾಪ ದೂರದಿಂದಲೇ ನಾನದನ್ನು ಧಿಕ್ಕರಿಸಿದೆ. ಯಾರಲ್ಲೋ ಕಂಡಾಗ ನೈಪುಣ್ಯ ನಾನು ನೋಡಿ ಉದ್ಗರಿಸಿದೆ: ಹೀಗೆ! ದಣಿದಿದ್ದ ಭಾರ ಹೊತ್ತವನನ್ನು ಕಂಡು ಏಕೆ ಎಂದು ಬೊಗಳಿದೆ ರೇಗಿ. ಯಾರದ್ದೋ ಸಸಿಗೆ ನಾನು ನೀರೆರೆದೆ ಬೆಳೆದಾಗ ಅದನ್ನು ನನ್ನದೇ ಎಂದೆ. ಯಾರೋ ಬೆಳೆಸಿದ್ದರು ಒಂದು ಬಳ್ಳಿ, ಬೊಂಬು ನೆಟ್ಟು ಅದಕ್ಕೆ ಹಬ್ಬಿಸಿಕೊಂಡೆ. ಬೇರೆ ಯಾರದ್ದೋ  ಬಳ್ಳಿಯ ಮೊಗ್ಗು, ನಾನು ನನ್ನದೇ ಎಂಬಂತೆ ಎತ್ತಿಕೊಂಡೆ. ಯಾರದ್ದೋ ಆಗಿತ್ತು ಮಾತು, ಅವರ ಬಾಯಿಂದ  ಕಿತ್ತುಕೊಂಡೆ. ಹೀಗೆ ನಾನು ಕವಿ, ಆದುನಿಕನು, ನವ್ಯನು, ಕಾವ್ಯ ತತ್ತ್ವ ಶೋಧನೆಗೆ ಎಲ್ಲೆಲ್ಲೂ ಅಲೆವೆನು, ಆಶಿಸುವೆ ನಾನು ಬರೆದ ಒಂದೊಂದೂ ಪದ ಅಕ್ಕರೆಯಿಂದ ನೀವು ಓದಿ ತಿಳಿಯಬೇಕು ಹದ, ಪ್ರತಿಮೆಯ ವಿಷಯವೇ, ಅಯ್ಯೋ, ಅದಕ್ಕೇನು, ನಿಮಗೆ ಯಾವುದು ಇಷ್ಟವೋ ಸ್ಥಾಪಿಸಿಕೊಳ್ಳಿ ಅದನ್ನು.

ನಗುತ್ತಿರು

ಇಮೇಜ್
ಮೂಲ: ಜಾನ್ ಮೇಸ್ ಫೀಲ್ಡ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಗುತ್ತಿರು, ನಲಿಯುತ್ತಿರು, ಜಗವನ್ನು ಇನ್ನಷ್ಟು  ಹಸನಾಗಿಸಲಿ ನಿನ್ನ ಹಾಡು, ತಪ್ಪಿನ ಹಲ್ಲಿನ ಮೇಲೆ ಹಾಕಿ ಒಂದೇಟು ಜಗವನ್ನು ಇನ್ನಷ್ಟು ಹಸನು ಮಾಡು, ನಗುತ್ತಿರು, ಏಕೆಂದರೆ ಸಮಯ ಹೆಚ್ಚಿಲ್ಲ, ಅಳೆದರೆ ಇದ್ದೀತು ಒಂದು ಮಾರು, ಹೊರಟಿದೆ ಮಾನವನ ಹೆಮ್ಮೆಯ  ಜಾತ್ರೆ, ನಗುನಗುತ್ತಾ ಈ ಪುರಾತನ ಜಾತ್ರೆಯನು ಸೇರು. ಕೂದಲು ನೆರೆತಾಗಲೂ ನೆನಪಿಟ್ಟುಕೋ ನಗುನಗುತ್ತಾ ನಲಿಯುತ್ತಿರಲು, ಸ್ವರ್ಗ ಸೃಷ್ಟಿಸಿದವನೇ ಸೃಜಿಸಿದನು ಭೂಮಿಯಲ್ಲದರ ನಕಲು, ತುಂಬಿದನು ಅವುಗಳಲ್ಲಿ ತನ್ನ ಸಂತೋಷದ ಕೆಂಪು ದ್ರಾಕ್ಷಾರಸ, ನಕ್ಷತ್ರಗಳಲ್ಲಿ ನಗೆಮಿನುಗನ್ನು, ಭೂಮಿಯಲ್ಲಿ  ತುಂಬಿದನು ಸಂತಸ. ಹೀಗಿರಲು ತುಂಬಿಕೋ ಬಟ್ಟಲಿಗೆ, ಹೀರು, ನೀಲನಭದಿಂದ ಸುರಿವ ರಸಧಾರೆ, ಸೇರಿ ನೀನೂ ಹಾಡು, ಕೇಳಿಸಿಕೋ! ಸಮೂಹಗೀತೆ ಹಾಡುತ್ತಿವೆ ತಾರೆ, ನಗುತ್ತಾ ಮಾಡು ದುಡಿಮೆಯ ಯುದ್ಧ, ಸುರಿಸು ಬೆವರು ಹೀರು ದೇವನು ಭೂಮಿಯ ಮೇಲೆ ಚೆಲ್ಲಿರುವ ಹಸಿರು  ಎಲ್ಲರೂ ನಿನ್ನ ಸೋದರರು, ಅವರೊಂದಿಗೆ ನಗುತ್ತಾ ಕಳೆದುಬಿಡು ಸಿಕ್ಕ ಪ್ರತಿಕ್ಷಣ, ಕೆಲವೇ ದಿನಗಳ ಅತಿಥಿಗಳು ನಾವು, ಈ ಭೂಮಿ ನಮ್ಮ ತಂಗುದಾಣ, ನರ್ತಿಸುತ್ತಿರು ನಿಲ್ಲುವವರೆಗೂ ವಾದ್ಯಗೋಷ್ಠಿ, ಸಂಗೀತ, ನಗುತಿರು ಗೆಳೆಯಾ, ನಿಲ್ಲುವವರೆಗೂ ನೆಲದ ಆಟ.

ಕಡಲಿನ ಕರೆ

ಇಮೇಜ್
ಮೂಲ: ಜಾನ್ ಮೇಸ್ ಫೀಲ್ಡ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಹೋಗಬೇಕು ಸಾಗರಕ್ಕೆ ನಾ ಮತ್ತೊಮ್ಮೆ, ಒಂಟಿ ಸಾಗರದೆಡೆಗೆ, ಗಗನದೆಡೆಗೆ, ಬೇಕಾಗಿಲ್ಲ ಬೇರೇನೂ, ಎತ್ತರದ ಜಹಜೊಂದು, ಮತ್ತು ದಿಗ್ದರ್ಶಿಸುವ ಒಂದು ತಾರೆ, ಚಕಚಕ ಚಲಿಸುವ ಚಕ್ರ, ಹಾಡು ಹೇಳುವ ಗಾಳಿ, ಪಟಪಟ ಹಾರಾಡುವ ನೌಕಾಪಟ, ಕಡಲ ಮುಖ ಆವರಿಸಿದ ಬೂದು ಮಂಜು, ಬೂದಿ ಆಗಸದಲ್ಲಿ ಮೆಲೇರುವ ಕೆಂಬಾವುಟ. ಹೋಗಲೇ ಬೇಕು ಸಾಗರಕ್ಕೆ ನಾನೀಗ, ನನ್ನನ್ನು ಕೂಗುತ್ತಿದೆ ಕೈಬೀಸಿ ಕಡಲ ಕರೆ, ಹೇಗೆ ಉಪೇಕ್ಷಿಸಲಿ ಈ ಕರೆಯನ್ನು, ಬಾ ಎಂದು ಭೋರ್ಗರೆಯುತ್ತಿದೆ ಬೀಳುತ್ತ ಬೆಳ್ದೆರೆ, ಕೇಳೆನು ಬೇರೇನನ್ನೂ, ಸೂಸುವ ಗಾಳಿ, ಹಾರಾಡುವ ಮೋಡಗಳ ವಿನಾ, ಬೀಳುವ ತೆರೆಗಳ ಬಿಳಿನೊರೆ, ಚಿಮ್ಮುವ ನೀರು, ಮತ್ತು ಕಡಲ್ವಕ್ಕಿಗಳ ಕಲರವ. ಮರಳಬೇಕು ಕಡಲಿಗೆ ನಾನಿನ್ನು, ಕರೆಯುತ್ತಿದೆ ಜೀವನ ಅಲೆಮಾರಿ, ಕಡಲ್ವಕ್ಕಿ, ತಿಮಿಂಗಿಲಗಳ ಹಾದಿ, ಗಾಳಿ ಎಲ್ಲಿ ಕೂರಲಗಿನ ಚೂರಿ, ಕೇಳೆನು ನಾ ಬೇರೇನನ್ನೂ, ಸಹಪಯಣಿಗನ ನಲ್ಗತೆಗಳ ಹೊರತು, ಪಯಣದ ನಂತರ ಸಕ್ಕರೆ ನಿದ್ದೆ, ನಿದ್ದೆಯಲ್ಲಿ ಸವಿಗನಸಿನ ಗುರುತು.

ಖಗೋಳಶಾಸ್ತ್ರ ಮತ್ತು ತಾರೆ

ಇಮೇಜ್
ಮೂಲ: ವಾಲ್ಟ್ ವ್ಹಿಟ್ಮನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಖಗೋಳಶಾಸ್ತ್ರ ಪಂಡಿತನೊಬ್ಬನ ಉದ್ದುದ್ದ ವಿವರಣೆ ಕೇಳುತ್ತಾ  ಭಾಗಾಕಾರ ಗುಣಾಕಾರಗಳೊಂದಿಗೆ ಪುರಾವೆಗಳು ಮೈದಾಳುತ್ತಾ  ಅಗೋಚರ ಆಕಾಶಕಾಯಗಳನ್ನು ಮಾಪನ ಮಾಡಿ ಯುಗಾಂತರಗಳ ಆಚೆಗೂ ಇಣುಕಿ ನೋಡಿ ಆಗಾಗ ಭಾಷಣ ಸಭಾಗೃಹದಲ್ಲಿದ್ದ ಶ್ರೋತೃಗಣ  ಮುಗಿಲುಮುಟ್ಟುವ ಹಾಗೆ ಮಾಡುತ್ತಿತ್ತು ಕರತಾಡನ. ನನಗೆ ಸಾಕಾಗಿಹೋಯಿತು ಅದೇಕೋ; ಮೇಲೆದ್ದೆ, ಜನರ ನಡುವೆ ನುಸುಳಿ ಹೇಗೋ ಹೊರಗೆ ಬಂದೆ. ತಂಗಾಳಿಗೆ ಮೈಯೊಡ್ಡಿ ನಿಂತೆ ಒಂದಷ್ಟು ಹೊತ್ತು, ಹಾಗೇ ನಡೆದೆ ಇಲ್ಲದೆ ಯಾವ ಗುರಿಗೊತ್ತು. ಅಗಾಧ ಆಕಾಶದ ಕಡೆಗೆ ಬೀರುತ್ತ ದೃಷ್ಟಿ, ಸಾಗಿದೆ ಕೇಳುತ್ತಾ ತಾರೆಗಳ ಮೌನಗಾನಗೋಷ್ಠಿ.