ಪೋಸ್ಟ್‌ಗಳು

ಮಕ್ಕಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಧ್ಯಾಹ್ನದ ಮಳೆ (ಮಕ್ಕಳ ಪದ್ಯ)

ಇಮೇಜ್
ಕತ್ತಲಾಗುತಿದೆ ನಡುಮಧ್ಯಾಹ್ನ ಸೂರ್ಯನೆಲ್ಲಿ ಹೋದನು ಹೇಳಮ್ಮಾ ಮೋಡಗಳಿವು ಬಂದವು ಎಲ್ಲಿಂದ? ಒಮ್ಮೆಲೇ ಸೂರ್ಯನಿಗೇತಕೆ ಬಂಧ! ಬ್ರೇಕಿಂಗ್ ನ್ಯೂಸ್ ಬರುತಿದೆಯೇನಮ್ಮಾ ಹಚ್ಚು ಟಿವಿ ಹಚ್ಚು! ನಡೆಯುತ್ತಿದೆಯೇನಮ್ಮಾ ಯುದ್ಧ? ಏನದು ಬಾನೊಳು ಗುಡುಗುಡು ಶಬ್ದ! ನೋಡಮ್ಮಾ ಈ ರೊಯ್ಯನೆ ಗಾಳಿ ನುಗ್ಗುವ ಹಾಗೆ ಸೊಕ್ಕಿದ ಗೂಳಿ ಗುಟುರು ಹಾಕಿ ಬರುತಿದೆ ಸನ್ನದ್ಧ! ಮುಚ್ಚು ಕದವ ಮುಚ್ಚು! ಧೋ ಧೋ ಮಳೆ  ಸುರಿಯುತ್ತಿದೆ ಹೇಗೆ ಮರಗಳೆಲ್ಲ ಉಯ್ಯಾಲೆಯ ಹಾಗೆ ತೂಗಾಡುತ್ತಿವೆ ಅತ್ತಿಂದಿತ್ತ! ಗಿಡಗಳು ಬಾಗಿವೆ ಸೊಟ್ಟಂಪಟ್ಟ! ಕಾಣದು ಏನೂ ಕಿಟಕಿಯ ಹೊರಗೆ, ಎಲ್ಲಿ ದೀಪ ಸ್ವಿಚ್ಚು! ಕೊನೆಗೂ ನಿಂತಿತು ಮಳೆ ಸುರಿಸುರಿದು ಶುಭ್ರಾಕಾಶವು ಬರಿದೋ ಬರಿದು ಶಾಂತವಾಗಿಹವು ಗಿಡಮರಬಳ್ಳಿ ಸೂರ್ಯ ನಗುತಿಹನು ಆಗಸದಲ್ಲಿ ಏಳು ಬಣ್ಣಗಳ ಕಮಾನು ತೆರೆದು! ಹೊರಡುವೆ, ಆಟದ ಹೊತ್ತು! ಸಿ. ಪಿ. ರವಿಕುಮಾರ್ 

ಮಗುವಿನ ಮೌನಸಂದೇಶ

ನೀಡಿ ನಮಗೂ ಒಂದೇ ಒಂದು ಅವಕಾಶ ರಚನೆ - ಸಿ. ಪಿ. ರವಿಕುಮಾರ್ ನೀಡಿ ನಮಗೂ ಒಂದೇ ಒಂದು ಅವಕಾಶ! ನಿಮ್ಮ ಧರ್ಮಗಳ ಜಾತಿಗಳ ಒಳಪಂಗಡಗಳಲ್ಲಿ ವಿಂಗಡಿಸಿ ಮೂಲೆಗುಂಪಾಗಿಸುವಿರೇಕೆ? ಗೋಡೆಗಳೇ ತುಂಬಿರುವ ಮನೆಯಲ್ಲಿ ಇನ್ನೆಷ್ಟು ಬಿಡಿಸುವಿರಿ ವಿಭಜಿಸುವ ಅಗ್ನಿರೇಖೆ? ಒಡೆದು ಉರುಳಿಸಿ ಭಿತ್ತಿ! ನೀಡಿ ಹಾರಲು ಮುಕ್ತಿ! ಕೈಬೀಸಿ ಕರೆಯುತ್ತಿಹುದು ಆಕಾಶ! ನೀಡಿ ನಮಗೂ ಒಂದೇ ಒಂದು ಅವಕಾಶ! ನಿಮ್ಮ ಕನಸುಗಳನ್ನು ಅರಸದಿರಿ ನಮ್ಮಲ್ಲಿ ಚಿಗುರುತ್ತಿದೆ ನಮ್ಮದೇ ಕನಸುಗಳ ಬಳ್ಳಿ! ಚಿಗುಟದಿರಿ ಎಳೆಯ ಕುಡಿ-ಮೊಗ್ಗು-ಹೀಚುಗಳನ್ನು ಹಬ್ಬಿಕೊಳ್ಳಲಿ ಕಲ್ಪನೆಯ ಆಧಾರದಲ್ಲಿ! ನಾನೂ ಒಬ್ಬ ವ್ಯಕ್ತಿ, ನನಗೂ ಇದೆ ಅಭಿವ್ಯಕ್ತಿ, ಕೇಳುತ್ತಿದೆಯೇ ನನ್ನ ಮೌನಸಂದೇಶ? ನೀಡಿ ನಮಗೂ ಒಂದೇ ಒಂದು ಅವಕಾಶ! ದೊಡ್ಡದೊಡ್ಡದು ನಿಮ್ಮ ಕಲ್ಪನಾಸಾಮ್ರಾಜ್ಯ ಅಲ್ಲಿ ಯಂತ್ರ, ತಂತ್ರಜ್ಞಾನಗಳ ರಾಜ್ಯ! ನನ್ನ ಮುಗ್ಧತೆ ಕಸಿಯುತ್ತಿದೆ ನಿಮ್ಮ ಏಐ ಕಿರಿದಾಗುತ್ತಿದೆ ನೋಡುತ್ತ ನೋಡುತ್ತ ಬಾಲ್ಯ! ನಮ್ಮ ಭೂಮಿ ಮಂತ್ರದ ಹಕ್ಕಿ, ನಿತ್ಯ ಚಿನ್ನದ ತತ್ತಿ ಕೊಟ್ಟರೂ ಏತಕ್ಕೆ ಕತ್ತಿ ಮಸೆಯುವ ಆವೇಶ! ನೀಡಿ ಭೂಮಿಗೂ ಒಂದೇ ಒಂದು ಅವಕಾಶ!