ಕಣ್ಣಿಗೆ ಹರಿದರ್ಶನದ ದಾಹ (ಸೂರದಾಸರ ರಚನೆ)
"ಅಂಖಿಯಾ ಹರಿದರ್ಶನ್ ಕೀ ಪ್ಯಾಸೀ" ... ಸೂರದಾಸರ ಈ ಗೀತೆಯನ್ನು ಎಂ.ಎಸ್. ಸುಬ್ಬುಲಕ್ಷ್ಮಿ ಅವರ ದಿವ್ಯಕಂಠದಲ್ಲಿ ನೀವು ಕೇಳಬಹುದು. ಈ ರಚನೆಯಲ್ಲಿ ಸೂರದಾಸರು ತಮ್ಮ ಇಷ್ಟದೈವ ಕೃಷ್ಣನನ್ನು ಕಾಣಲಾರದೇ ತಮಗೆ ಉಂಟಾಗುವ ಸಂಕಟವನ್ನು ತೋಡಿಕೊಂಡಿದ್ದಾರೆ. ಸೂರದಾಸರು ಹುಟ್ಟಾ ಕುರುಡರಾಗಿದ್ದವರು. ಅವರಿಗೆ ಕೃಷ್ಣನ ದರ್ಶನ ಹೇಗೆ ಉಂಟಾಯಿತು ಎಂಬುದಕ್ಕೆ ಒಂದು ಕಥೆ ಜನಜನಿತವಾಗಿದೆ. ಒಮ್ಮೆ ಸೂರದಾಸರು ದಾರಿಯಲ್ಲಿದ್ದ ಬಾವಿಯನ್ನು ಕಾಣದೇ ಅದರೊಳಕ್ಕೆ ಬಿದ್ದರಂತೆ. ಆಗ ಸಾಕ್ಷಾತ್ ಶ್ರೀ ಕೃಷ್ಣನೇ ಬಂದು ಅವರನ್ನು ಬಾವಿಯಿಂದ ಮೇಲೆತ್ತಿ ರಕ್ಷಿಸಿದನಂತೆ. ಕೃಷ್ಣನ ಸಂಗಡ ಇದ್ದ ರಾಧೆ "ಇವನಿಗಾಗಿ ನೀನೇ ಸ್ವತಃ ಬರುವ ಅಗತ್ಯವೇನಿತ್ತು?" ಎಂದು ಪ್ರಶ್ನಿಸುತ್ತಾಳೆ. "ಅವನು ನನ್ನ ಪರಮ ಭಕ್ತ" ಎಂದು ಕೃಷ್ಣ ಉತ್ತರಿಸುತ್ತಾನೆ. ಹಾಗೇ "ಅವನ ಬಳಿಗೆ ಹೋಗಬೇಡ," ಎಂದು ಎಚ್ಚರಿಸುತ್ತಾನೆ. ಆದರೆ ರಾಧೆ ಕುತೂಹಲದಿಂದ ಸೂರದಾಸನ ಬಳಿಗೆ ಹೋಗುತ್ತಾಳೆ. ಆಕೆ ಯಾರೆಂದು ಊಹಿಸಿದ ಸೂರದಾಸರು ಆಕೆಯ ಕಾಲಿನ ಗೆಜ್ಜೆಯನ್ನು ಕಿತ್ತುಕೊಂಡು ಇಟ್ಟುಕೊಳ್ಳುತ್ತಾರೆ. ರಾಧೆ ಎಷ್ಟು ಬೇಡಿಕೊಂಡರೂ ಕೊಡುವುದಿಲ್ಲ. "ನಾನು ಯಾರು ಗೊತ್ತೇ? ನಾನು ಕೃಷ್ಣನ ಪ್ರಿಯತಮೆ, ರಾಧೆ" ಎಂದು ಆಕೆ ಹೇಳಿದಾಗ ಸೂರದಾಸರು "ನಾನು ಹೇಗೆ ನಂಬಲಿ? ಕುರುಡನೆಂದು ನೀನು ಮೋಸ ಮಾಡುತ್ತಿರಬಹುದು!" ಎನ್ನುತ್ತಾರೆ. ರಾಧೆ ...