ಪೋಸ್ಟ್‌ಗಳು

ಲಲಿತ ಪ್ರಬಂಧ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮೈಸೂರುಪಾಕ್ ನೆನಪುಗಳು

ಇಮೇಜ್
ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನನಗೆ ರಾಂಕ್ ಬರಬಹುದು ಎಂದು ನ್ಯಾಷನಲ್ ಹೈಸ್ಕೂಲಿನ  ಕೆಲವು ಅಧ್ಯಾಪಕರು ಅಪೇಕ್ಷೆ ಇಟ್ಟುಕೊಂಡಿದ್ದರು. ನಾನು ಪ್ರಥಮ ಭಾಷೆ ಕನ್ನಡ ತೆಗೆದುಕೊಂಡ ಕಾರಣ ಇದು ಸುಲಭವಲ್ಲ ಎಂದು ಅವರಿಗೆ ತಿಳಿದಿತ್ತು. ಆಗ ಕನ್ನಡದಲ್ಲಿ ಹೆಚ್ಚು ಮಾರ್ಕ್ಸ್ ಕೊಡುತ್ತಿರಲಿಲ್ಲ.  ಎರಡು ಪರೀಕ್ಷೆಗಳು ಇರುತ್ತಿದ್ದವು. ಮುಖ್ಯ ಪಠ್ಯಪುಸ್ತಕವನ್ನು ಆಧರಿಸಿ ಮೊದಲ ಪರೀಕ್ಷೆ. ನಾನ್ ಡೀಟೇಲ್ಡ್ ಪಠ್ಯವನ್ನು ಆಧರಿಸಿ ಎರಡನೇ ಪರೀಕ್ಷೆ. ಇವು ಬೆಳಗ್ಗೆ ಮತ್ತು ಮಧ್ಯಾಹ್ನ ನಡೆಯುತ್ತಿದ್ದವು. ಎರಡನೇ ಭಾಗದಲ್ಲಿ ಪ್ರಬಂಧ, ಪತ್ರಲೇಖನ, ನಾವು ಹಿಂದೆ ಓದಿರದ ಕವಿತೆಯ ವಿಶ್ಲೇಷಣೆ ಇವೆಲ್ಲ ಇರುತ್ತಿದ್ದವು.   ಕನ್ನಡದಲ್ಲಿ ನನಗೆ ನೂರಾ ಐವತ್ತಕ್ಕೆ ನೂರಾ ಇಪ್ಪತ್ತೈದು ಅಂಕಗಳು ಬಂದವು. ಹೀಗಾಗಿ ಕನ್ನಡದ ಕಾರಣ ರಾಂಕ್ ತಪ್ಪಿತು ಎಂದು ಹೇಳಲು ಸಾಧ್ಯವಿರಲಿಲ್ಲ. ಸೋಷಿಯಲ್ ಸ್ಟಡೀಸ್ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಬಂದು ನನಗೆ ನಲವತ್ತಮೂರನೇ ರಾಂಕ್ ಬಂತು.  ಪ್ರಥಮ ಪಿಯುಸಿ ಪರೀಕ್ಷೆಗಳು ಮುಗಿದ ನಂತರ ನಮ್ಮ ತಾಯಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಗೈನಕಾಲಜಿ ಸಂಬಂಧದ ಚಿಕಿತ್ಸೆಗಾಗಿ  ಅವರು  ಮಾರ್ಥಾಸ್ ಆಸ್ಪತ್ರೆ ಸೇರಿದರು. ಅವರನ್ನು ಸೇರಿಸಲು ನಾನು ಮತ್ತು ನನ್ನ ದೊಡ್ಡಮ್ಮ ಇಂದಿರಮ್ಮ ಹೋಗಿದ್ದೆವು.  ನಮ್ಮ ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಅದಾದ ನಂತರ ಅವರಿಗೆ ಶುಶ್ರೂಷೆಯ ಅಗತ್ಯ ಇತ್...

ನಾಗಿರೆಡ್ಡಿ ಅವರನ್ನು ಮಾತಾಡಿಸಿದ್ದು

ಇಮೇಜ್
ನಾನು ಇನ್ನೂ ಆರನೇ ಅಥವಾ ಏಳನೇ ಕ್ಲಾಸಿನಲ್ಲಿದ್ದಾಗ ನಡೆದ ಘಟನೆ. ನಮ್ಮ ತಂದೆಗೆ ದೆಹಲಿಗೆ ವರ್ಗವಾಗಿದ್ದರಿಂದ ಐದು ವರ್ಷ ನಾವು ಅಲ್ಲಿ ವಾಸ ಮಾಡಬೇಕಾಯಿತು. ಮೊದಲು ಲೋಧಿ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿದ್ದೆವು. ಒಂದೇ ಕೋಣೆಯಲ್ಲಿ ಒಂದು ವರ್ಷ ವಾಸ ಮಾಡಿದ ನಂತರ ಜೋರ್ ಬಾಗ್ ಎಂಬಲ್ಲಿ ನಮಗೆ ಬಾಡಿಗೆ ಮನೆ ಸಿಕ್ಕಿತು. ನಮ್ಮ ತಂದೆಯವರ ಆಫೀಸಿಗಾಗಿ ಬಾಡಿಗೆ ಪಡೆದ ಕಟ್ಟಡದಲ್ಲಿ ಮೇಲಿನ ಎರಡು ಕೋಣೆಯ ಪುಟ್ಟ ಮನೆಯನ್ನು ನಮಗೆ ಸಬ್-ಲೆಟ್ ಮಾಡಿಕೊಟ್ಟರು. ಹೀಗೆ ಒಂದು ಕೋಣೆಯ ಮನೆಯಿಂದ ಎರಡು ಕೋಣೆಯ ಮನೆಗೆ ಪ್ರಗತಿ ಸಾಧಿಸಿದೆವು. ಇಲ್ಲಿ ಎರಡು ಕೋಣೆ ಎಂದರೆ ನೀವು ಟೂ ಬಿ.ಎಚ್.ಕೆ. ಎಂದೆಲ್ಲ ಕಲ್ಪಿಸಿಕೊಳ್ಳಬೇಡಿ. ಅಲ್ಲಿದ್ದದ್ದು ಎರಡೇ ಕೋಣೆ. ಒಂದು ನಮಗೆ ಲಿವಿಂಗ್ ರೂಮ್, ಬೆಡ್ ರೂಮ್, ಸ್ಟಡಿ ಎಲ್ಲವೂ ಆಗಿತ್ತು. ಇನ್ನೊಂದು ಕಿಚನ್, ಡೈನಿಂಗ್ ಹಾಲ್ ಆಗಿತ್ತು. ಆದರೆ ಮನೆಯ ಸುತ್ತಲೂ ಇದ್ದ ಬಿಸಿಲುಮಚ್ಚು ದೇಶೋವಿಶಾಲವಾಗಿತ್ತು. ಬೇಸಗೆ ದಿನಗಳಲ್ಲಿ ಅಲ್ಲಿ ಚಾರ್ ಪಾಯಿ ಹಾಕಿಕೊಂಡು ನಾವು ಮಲಗಿಕೊಳ್ಳುತ್ತಿದ್ದೆವು.  ಚಳಿಗಾಲದಲ್ಲಿ ಮಾತ್ರ ಒಂದು ಕೋಣೆಯಲ್ಲಿ ರಜಾಯಿಯ ಕೆಳಗೆ ಸೇರಿಕೊಳ್ಳುತ್ತಿದ್ದೆವು. ಇದೆಲ್ಲ ಯಾಕೆ ಹೇಳಲು ಹೊರಟೆ ಎಂದರೆ ನಿಮಗೆ ಮುಂದೆ ಹೇಳಲು ಹೊರಟಿರುವ ಕಥೆಗೆ ಪೀಠಿಕೆ, ಅಷ್ಟೇ. ನಮ್ಮ ತಂದೆಯವರ ಆಫೀಸ್ ಅದೇ ಕಟ್ಟಡದ ಗ್ರೌಂಡ್ ಫ್ಲೋರಿನಲ್ಲಿತ್ತು. ಅಲ್ಲಿ ಒಂದು ಗೆಸ್ಟ್ ರೂಮ್ ಕೂಡಾ ಇತ್ತು. ಬೆಂಗಳೂರಿನಲ್ಲಿ ನಮ್ಮ ತಂದೆಯವರ ಆಫ...

ವಾರ್ಡನ್ ಕಥನ

ಇಮೇಜ್
ನಾನು ದೆಹಲಿ ಐಐಟಿಯ ನೀಲಗಿರಿ ಹಾಸ್ಟೆಲಿಗೆ ವಾರ್ಡನ್ ಆಗಿ ನಿಯುಕ್ತನಾಗಿ ಕೊನೆಗೂ ಮನೆಯನ್ನು ಬದಲಾಯಿಸಿ ವಾರ್ಡನ್ ಮನೆಗೆ ಬಂದೆ. ಆ ಮನೆಯ ಸ್ಥಿತಿ ಏನೂ ಚೆನ್ನಾಗಿರಲಿಲ್ಲ. ಮನೆಯ ಮುಂದೆ ಮತ್ತು ಹಿಂದೆ ಇದ್ದ ದೊಡ್ಡ ತೋಟ ನನಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ತೋಟಗಾರಿಕೆ ಮಾಡಲು ನನಗೆಲ್ಲಿ ಸಮಯವಿತ್ತು! ಮಗಳಿಗೆ ಆಗತಾನೇ ಒಂದು ವರ್ಷ ತುಂಬಿತ್ತು.  ಅವಳನ್ನು ಹಿಡಿಯುವುದೇ ಒಂದು ಸಾಹಸ. ಅವಳಿಗೆ ಅವಳ ಅಮ್ಮ ಹಿತ್ತಲಲ್ಲಿದ್ದ ಶೆಹತೂತ್ ಅಥವಾ ಹಿಪ್ಪುನೇರಳೆ ಮರದಲ್ಲಿ ಉಯ್ಯಾಲೆ ಹಾಕಿಕೊಟ್ಟಳು. ಇಬ್ಬರೂ ಈ ಉಯ್ಯಾಲೆಯಲ್ಲಿ ಬೇಕಾದಷ್ಟು ಆಡಿದರು. ದೆಹಲಿಯ ವಾಯುಮಾಲಿನ್ಯ ಆಗಲೂ ಹದಗೆಟ್ಟಿತ್ತು. ಮಗಳಿಗೆ ಹವಾಮಾನ ಬದಲಾವಣೆಯಾದಾಗಲೆಲ್ಲಾ ನೆಗಡಿ, ಕೆಮ್ಮು. ಐಐಟಿಯ ದವಾಖಾನೆಯಲ್ಲಿ ಯಾವಾಗಲೂ ಗಿಜಿಗಿಜಿ ಜನ ತುಂಬಿರುತ್ತಿದ್ದ ಕಾರಣ ನಾವು ಹೊರಗಿನ ವೈದ್ಯರಿಗೆ ಶರಣಾದೆವು.  ಒಬ್ಬ ಹೋಮಿಯೋಪತಿ ವೈದ್ಯೆಯ ಪರಿಚಯವನ್ನು ಯಾರೋ ಹೇಳಿದರು. ಆಕೆಯ ಕ್ಲಿನಿಕ್ ದೂರದಲ್ಲಿತ್ತು. ನನ್ನ ಹೆಂಡತಿ ಟ್ಯಾಕ್ಸಿ ಮಾಡಿಕೊಂಡು ಅಲ್ಲಿಗೆ ಹೋಗಿಬರುತ್ತಿದ್ದಳು.  ಒಮ್ಮೆ ಹೋಮಿಯೋಪತಿಯ ಸಿಹಿಗುಳಿಗೆಗಳ ಬಾಟಲ್ ಮಗಳ ಕೈಗೆ ಸಿಕ್ಕಿ ಅವಳು ಅದರಲ್ಲಿದ್ದ ಸಿಹಿಯ ರುಚಿ ನೋಡಿದಳು..ಹೋಮಿಯೋಪತಿ ಔಷಧಕ್ಕೆ ಕಾಫಿ ಒಂದು ಆಂಟಿಡೋಟ್ ಅಥವಾ ಪ್ರತ್ಯೌಷಧ ಎಂದು ತಿಳಿದಿದ್ದ ನನ್ನ ಹೆಂಡತಿ ಮಗಳಿಗೆ ಸ್ವಲ್ಪ ಕಾಫಿ ಕುಡಿಸಿ ಡಾಕ್ಟರಿಗೆ ಫೋನ್ ಮಾಡಿ ಹೋದಳು.  ದೂರದ ಡಾಕ್ಟರ್ ...

ನಾನೇ ಮಾಡಿದ ಅಡುಗೆ

ಇಮೇಜ್
"ನೋಡಿ, ನಮ್ಮ ಫ್ರೆಂಡ್ ಒಬ್ಬರು ಹಾಕಿರೋ ಪಟ!" ಎಂದು ಮರಿಗೌಡ ಫೋನ್ ಮುಂದೆಮಾಡಿದರು. ಚಪಾತಿ, ಪಲ್ಯ. "ಇದೇನು ಈ ಸ್ತರಕ್ಕೆ ಇಳಿದು ಹೋಗಿದೆ ನಿಮ್ಮ ಸ್ನೇಹವಲಯ! ಬೇರೆ ಏನೂ ಹಂಚಲು ಇಲ್ಲ ಅಂತ ಹಂಚುತ್ತಾರೆ ಚಪಾತಿ ಪಲ್ಯ!" ಎಂದು ನಾನು ವಲಯ, ಪಲ್ಯ ಇವುಗಳನ್ನು ಪ್ರಾಸ ಮಾಡಲು ತ್ರಾಸ ಪಡುತ್ತಾ ಆಶುಕವಿತ್ವ ಮಾಡಿದೆ. ರಾಜಾರಾಂ ಸುಮ್ಮನಿರದೆ "ಅಯ್ಯೋ ದಿಸ್ ಈಸ್ ಬೆಟರ್ ದ್ಯಾನ್ ಜೀ ಎಂ ಅಂಡ್ ಜೀ ಎನ್, ಫ್ರೆಂಡ್ ಶಿಪ್ ರಿಯಲಿ ಬಿಗಿನ್ಸ್ ಟು ಸಿಂಕ್ ದೆನ್!" ಎಂದು ತಮ್ಮ ಇಂಗ್ಲಿಷ್ ಕವಿತ್ವ ಮೆರೆದರು. ಫ್ರೆಂಡ್ ಶಿಪ್ ಎಂಬಲ್ಲಿ ಶಿಪ್ ಮತ್ತು ಸಿಂಕ್ ಎಂಬುದರ ದ್ವಂದ್ವಾರ್ಥ ನನಗೆ ಇಷ್ಟವಾಗಿ ನಾನು ನಕ್ಕೆ. ಮರಿಗೌಡರು ನಗಲಿಲ್ಲ. "ನೋಡಿ, ಇದು ಸೀರಿಯಸ್ ಮ್ಯಾಟರ್. ಅವರು ಹಾಕಿರೋ ಬೇರೆ ಪಟಗಳು ನೋಡಿ" ಎಂದು ಸ್ಕ್ರಾಲ್ ಮಾಡಿದರು. ವೆಜಿಟಬಲ್ ಭಾತ್, ವಾಂಗಿ ಭಾತ್, ಅನ್ನ ಸಾರು, ಇತ್ಯಾದಿ.  "ಯಾಕ್ರೀ ಅವರ ಮನೆಯವರು ಬರ್ಗರ್, ಪಾಸ್ಟಾ, ಕೇಕ್, ಇದನ್ನೆಲ್ಲ ಮಾಡಲ್ವಾ! ಇದೇನು ಮಹಾ ಅನ್ನ ಸಾರು, ತುಂಬಾ ಬೋರು!" "ನೋಡಿ ನಿಮ್ಮಂಥವರು ಹೀಗೆ ಹೇಳೋದರಿಂದಲೇ ಕಣ್ರೀ ನಮ್ಮ ಸನಾತನ ಧರ್ಮಕ್ಕೂ ಈ ಗತಿ ಬಂದಿರೋದು" ಎಂದು ಮರಿಗೌಡ ಮುನಿಸು ತೋರಿಸಿದರು. "ನೋಡಿ ಮರಿಗೌಡ, ಸಿರಿಧಾನ್ಯ ಈಸ್ ಓಕೆ. ನವಣೆ ಉಪ್ಪಿಟ್ಟು, ರಾಗಿ ಮುದ್ದೆ, ಇವೆಲ್ಲ ಸ್ಪೆಷಲ್ ಕ್ಯಾಟಗರಿಯಲ್ಲೇ ಬರುತ್ವೆ. ನಮ್ಮ ಫ್...

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ (ಹಾಸ್ಯಪ್ರಬಂಧ)

ಇಮೇಜ್
ಇನ್ನೂ ನನಗೆ ಒಮ್ಮೊಮ್ಮೆ ಪರೀಕ್ಷೆಯಲ್ಲಿ ಬರೆಯುತ್ತಿರುವ ಕನಸುಗಳು ಬರುತ್ತವೆ! ಕೊರೋನಾ ಭಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಿಲಗಳೊಳಗೆ ಸೇರಿಕೊಂಡಿರುವ ಈ  ಸಂದರ್ಭದಲ್ಲೂ ನನಗೆ ಇಂಥದೊಂದು ಕನಸಾಯಿತು. ಕನ್ನಡ ಪರೀಕ್ಷೆಯಲ್ಲಿ "ಈ ವಚನವನ್ನು ಕುರಿತು ಟಿಪ್ಪಣಿ ಬರೆಯಿರಿ" ಎಂಬ ಪ್ರಶ್ನೆ ಬಂದಿದೆ. "ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ? ತನುವಿನಲಿ ಹುಸಿ ತುಂಬಿ ಮನದಲಿ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ !" ಇದಕ್ಕೆ ನಾನು ಉತ್ತರಿಸುತ್ತಿದ್ದೇನೆ. ಈ ವಚನದಲ್ಲಿ ಕೋವಿಡ್ ೧೯ ಕಾಲಮಾನದಲ್ಲಿ ಮನೆಯೊಡೆಯರ  ಪಾಡನ್ನು ವಚನಕಾರರು ಮನೋಜ್ಞವಾಗಿ ಚಿತ್ರಿಸಿದ್ದಾರೆ.  ಮನೆಯಲ್ಲೇ ಇರುವ ಮನೆಯೊಡೆಯನಿಗೆ ಒಂದೇ ಎರಡೇ ಕೆಲಸ? ಕಸ ("ರಜ") ಗುಡಿಸಬೇಕು. ಹೊಸ್ತಿಲನ್ನು ಸಾರಿಸಿ ರಂಗವಲ್ಲಿ ಹಾಕಬೇಕು. ಇವೆಲ್ಲವನ್ನೂ ಪಕ್ಕದ ಮನೆಯವರು ನೋಡುವ ಮುನ್ನವೇ ಮಾಡಿ ಮುಗಿಸಬೇಕು. ಅನಂತರ  ಅಡಿಗೆ ಇತ್ಯಾದಿ ಕೆಲಸಗಳೂ ಇಲ್ಲವೇ? ಪ್ರಸ್ತುತ  ವಚನದಲ್ಲಿ "ರಜ" ಎಂಬ ಪದದ ವಿಶೇಷ ಪ್ರಯೋಗವನ್ನು ಗಮನಿಸಿ. ಲಾಕ್ ಡೌನ್ ಕಾಲದಲ್ಲಿ ಕೆಲವರಿಗೆ ಪ್ರತಿದಿನವೂ ರಜದಂತೆ ತೋರುತ್ತಿದೆ! ಮಕ್ಕಳಿಗೆ ರಜಾ ಬಂದರೂ ಏನು ಮಾಡಲೂ ತಿಳಿಯದೆ ಅಪ್ಪ-ಅಮ್ಮಂದಿರನ್ನು ಕಾಡುತ್ತಿದ್ದಾರೆ. ಇನ್ನು ವರ್ಕ್ ಫ್ರಮ್...