ಟಿಪ್ಪಣಿ 1
ಕವಿತೆ ಓದುವ ಮುನ್ನ: ಈ ಕವಿತೆಯನ್ನು ಬರೆದವನು ಪ್ರಸಿದ್ಧ ಕ್ಯೂಬನ್ ಕವಿ ಆಸ್ಕರ್ ಕ್ರೂಜ್ (೧೯೭೯-). ಹತ್ತು ಸಲ ಸತತವಾಗಿ ಕ್ಯೂಬನ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದುಕೊಂಡ ಕೀರ್ತಿ ಇವನದ್ದು. ಈತನ ಭಾಷೆ ಒರಟು ಮತ್ತು 'ಸುಸಂಸ್ಕೃತ'ರಿಗೆ ಆಘಾತಕಾರಿ. ಪ್ರಸ್ತುತ ಕವಿತೆಯಲ್ಲಿ ಈತ ಕಾವ್ಯದ ಬಗ್ಗೆ ಮತ್ತು ಕಾವ್ಯರಚನೆಯ ಬಗ್ಗೆ ಬರೆದಿದ್ದಾನೆ. ಕಾವ್ಯ ಬರೆಯುವ (ಮತ್ತು ಓದುವ) ಪ್ರಕ್ರಿಯೆಗೆ ಈತ ನೀಡುವ ನೈಸರ್ಗಿಕ ಕ್ರಿಯೆಯ ಉಪಮೆ ಯಾರಿಗಾದರೂ ಒಂದು ಕ್ಷಣ ಅಸಹ್ಯ ಎನ್ನಿಸಬಹುದು. ಕವಿತೆ ಓದಿದ ನಂತರ ಈ ಟಿಪ್ಪಣಿ ಮತ್ತೊಮ್ಮೆ ಓದಿ ಅನಂತರ ಕವಿತೆಗೆ ಮತ್ತೊಮ್ಮೆ ಹಿಂದಿರುಗಿ. (ಈಗಿನ) ಬಹುತೇಕ ಕಾವ್ಯ ಕೆಟ್ಟ ಕಾವ್ಯ ಎಂದೂ ಕವಿ ಹೇಳುತ್ತಿರಬಹುದು! ಬಹುತೇಕ ಕೆಟ್ಟ ಕಾವ್ಯವನ್ನೇ ಓದುತ್ತಾ ಬದುಕವವರಿಗೆ (ಉದಾ. ವಿಮರ್ಶಕ) ಕೊನೆಗೆ ಈ ಕಾವ್ಯದ ದುರ್ನಾತ ಹತ್ತಿಕೊಳ್ಳುತ್ತದೆ ಎಂಬ ಕವಿಯ ಅನ್ನಿಸಿಕೆ ಅತಿಶಯೋಕ್ತಿಯೇನಲ್ಲ! ಕವಿತೆಯ ಕೆಲಸ ಒಂದು ವಿಧದಲ್ಲಿ ನೋಡಿದರೆ ಕರುಳಿನ ಹಾಗೆ ತಿಂದದ್ದರಲ್ಲಿ ರಸವನ್ನು ಹೀರಿಕೊಳ್ಳುವುದು ಅಷ್ಟೇ ಅಲ್ಲ ಉಳಿದಿದ್ದನ್ನು ಹೊರಗೆಸೆಯುವುದೂ ಕೂಡಾ. ಹೀಗಾಗಿ ಭಾವನೆಗಳು ಗುದದ್ವಾರದ ಹಾಗೆ ಅರಳುತ್ತವೆ ಮತ್ತು ಸಂಕುಚಿತಗೊಳ್ಳುತ್ತವೆ. ಕೆಟ್ಟ ಕಾವ್ಯ ಅತಿಯಾದರೆ ಗುದದ್...