ಮಾಸ್ತಿ, ಪ್ರೇಮ್ ಚಂದ್ ಮತ್ತು ಕಾಸ್ಮಿಕ್ ಎನರ್ಜಿ
ಸಿ ಪಿ ರವಿಕುಮಾರ್ ಗುಲ್ಜಾರ್ ಅವರ ನಿರ್ದೇಶನದಲ್ಲಿ ಪ್ರೇಮ್ ಚಂದ್ ಅವರ ಕತೆಗಳು ಹೊಳಪು ಮಾಡಿದ ವಜ್ರಗಳ ಹಾಗೆ ಕಂಗೊಳಿಸುತ್ತಿವೆ. ಮಾಸ್ತಿ ಅವರ ಕತೆಗಳನ್ನೂ ಇಂದಿನ ಪೀಳಿಗೆಗೆ ಇದೇ ರೀತಿ ಅತ್ಯುತ್ತಮ ರೀತಿಯಲ್ಲಿ ಸಮರ್ಥ ನಿರ್ದೇಶಕರ ಕೈಯಲ್ಲಿ ಸಿದ್ಧಗೊಳಿಸಿ ಸುಲಭವಾಗಿ ಸಿಕ್ಕುವ ಹಾಗೆ ಮಾಡುವುದು ಇಂದಿನ ಅಗತ್ಯ. ಕೆಲವು ದಿನಗಳ ಹಿಂದೆ ನನಗೆ ಒಂದು ಈ-ಮೇಲ್ ಸಂದೇಶ ಬಂತು. ಕನ್ನಡ ಲೇಖಕ ಶ್ರೀ ಕೆ ಸತ್ಯನಾರಾಯಣ ಅವರ ಪತ್ರ. ಇದಕ್ಕೆ ಒಂದು ಹಿನ್ನೆಲೆ ಹೀಗೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಇಂದಿಗೂ ಪ್ರಸ್ತುತರೇ ಎಂಬ ಬಗ್ಗೆ ಅವರು ನೀಡಿದ ಭಾಷಣದ ಬಗ್ಗೆ ನಾನು ಹಿಂದೆ ಬರೆದಿದ್ದೆ. ಅದನ್ನು ನೀವು ಇಲ್ಲಿ ಓದಬಹುದು . ನನ್ನ ಗುರುಗಳಾದ ಶ್ರೀ ಎಚ್ ಎಸ್ ಮಾಧವರಾವ್ ಈ ಬ್ಲಾಗನ್ನು ಓದಿ ಕೆ ಎಸ್ ಅವರಿಗೆ ಆ ವಿಷಯ ಹೇಳಿದರಂತೆ. ತಮ್ಮ ಪತ್ರದಲ್ಲಿ ನನ್ನ ತಂದೆಯವರು ಹಿಂದೂ ಪತ್ರಿಕೆಯಲ್ಲಿ ಬರೆಯುತ್ತಿದ್ದ ಕಾಲಂ "Between You and Me" ತಾವು ಓದುತ್ತಿದ್ದರೆಂದು ನೆನೆಸಿಕೊಂಡಿದ್ದರು. ನಾನು ಮಾಸ್ತಿ ಅವರನ್ನು ಕುರಿತು ಬರೆದದ್ದು ಅವರಿಗೆ ತುಂಬಾ ಸಂತೋಷವಾಗಿತ್ತು. ತಾವು ಬರೆದ "ಮಾಸ್ತಿಗನ್ನಡಿ" ಎಂಬ ಕತೆಯನ್ನು ನನಗೆ ಓದಲು ಕಳಿಸಿದರು. ಕೆ ಎಸ್ ಅವರ ಭಾಷಣ ಕೇಳಿದ ನಂತರ ನಾನು ನನ್ನಲ್ಲಿದ್ದ ಮಾಸ್ತಿ ಅವರ ಸಣ್ಣಕತೆಗಳ ಸಂಗ್ರಹವನ್ನು ಮತ್ತೆ ಹೊರತೆಗೆದೆ. ಪ್ರಿಸಂ ಪ್ರಕಾಶಕರು ಪ್ರಕಟಿಸಿದ ಪುಸ್ತಕದಲ್ಲಿ ಕನ್ನಡ...