ಪೋಸ್ಟ್‌ಗಳು

ಜನವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಿಮದ ಕಣ

ಇಮೇಜ್
 ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕಾಲಿಂದ ಕೆದರಿ ಕೆಳಗೆ ಬೀಳಿಸಿದಾಗ ನನ್ನ ಮೇಲೆ ಕಾಗೆಯೊಂದು ಹೆಮ್ಲಾಕ್ ಮರದ ಮೇಲಿದ್ದ ಹಿಮಕಣ ಬದಲಾಯಿತು ನನ್ನ ಹೃದಯದ ಭಾವನೆ ಸ್ವಲ್ಪವಾದರೂ ಮತ್ತು ಭಾಗಶಃ ಉಳಿಸಿತು ನಾನು ಬೇಸರದಲ್ಲಿ ಕಳೆದುಕೊಂಡಿದ್ದ ದಿನ

ನಿನ್ನನ್ನು ಒಮ್ಮೆ ಪ್ರೀತಿಸುತ್ತಿದ್ದೆ

ಇಮೇಜ್
ಮೂಲ: ಅಲೆಕ್ಸಾಂಡರ್ ಪುಷ್ಕಿನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನಿನ್ನನ್ನು ಒಮ್ಮೆ ಪ್ರೀತಿಸುತ್ತಿದ್ದೆ. ಆರಿಲ್ಲ ಅದರ ಕಿಚ್ಚು ನನ್ನ ಹೃದಯದಲ್ಲಿ ಇನ್ನೂ. ಮಂದವಾಗಿ ಉರಿಯುತ್ತಿದೆ ಈಗ ನಂದಾದೀಪದಂತೆ ನಿನಗೆ ನೀಡದು ಯಾವ ಪೀಡೆಯನ್ನೂ. ಹತಾಶೆಯಿತ್ತು ನಿನ್ನ ಕುರಿತು ನನ್ನ ಮೂಕ ಪ್ರೀತಿಯಲ್ಲಿ ಕೆಲವೊಮ್ಮೆ ಅತಿ ಸಂಕೋಚ, ಕೆಲವೊಮ್ಮೆ ಭುಗಿಲೆದ್ದ ಈರ್ಷೆ. ದೇವರು ಕರುಣಿಸಲಿ ನಿನಗೆ ಬೇರೊಬ್ಬರನ್ನು ಯಾರು  ಪ್ರೀತಿಸುವರೋ ನಿಜವಾಗಿ, ಕೋಮಲವಾಗಿ ನನ್ನಂತೆ.

ಪ್ರೇಮ

ಇಮೇಜ್
 ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಪ್ರೇಮವು – ಹೊತ್ತಿ ಉರಿಯುವ ಆತ್ಮದಿಂದ ಸ್ಫುರಿಸಿ ಸುತ್ತಲಿನ ಭೂಮಿಯನ್ನು ಬೆಳಗುವ ಒಂದು ಮಾಂತ್ರಿಕ ಕಿರಣ. ಅದರ ಬೆಳಕಿನಲ್ಲಿ ನಮಗೆ ಮೂಡುವುದು ನಮ್ಮ ಜಾಗೃತ ಸ್ಥಿತಿಗಳ ನಡುವೆ ಜೀವನ ಒಂದು ಸುಂದರ ಕನಸೆಂಬ ಪರಿಜ್ಞಾನ.

ಜೀವನವೊಂದು ಕನಸು

ಇಮೇಜ್
 ಮೂಲ: ಲೂಯಿಸ್ ಕ್ಯಾರಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಹೊಳೆಯುವ ಸೂರ್ಯನ ಕೆಳಗೊಂದು ದೋಣಿ ಕನಸೋ ಎಂಬಂತೆ ಮುಂದೆ ಸಾಗುತ್ತಿದೆ ತೇಲಿ ಜುಲೈ ತಿಂಗಳ ಸಾಯಂಕಾಲದಲ್ಲಿ. ಮೂವರು ಮಕ್ಕಳು ಕೂಡುತ್ತಾರೆ ಹತ್ತಿರ ಕಣ್ಣಲ್ಲಿ ಕಿವಿಯಲ್ಲಿ ತುಂಬಿರುವ ಕಾತರ ಕತೆಯೊಂದನ್ನು ಕೇಳಬೇಕೆಂಬ ಆತುರ. ಇಂದು ಪೇಲವವಾಗಿದೆ ಅಂದು ಹೊಳೆದ ಆಕಾಶ ಶಾಂತವಾದಂತೆ ಪ್ರತಿಧ್ವನಿ, ಬರಿದಾದಂತೆ ಸ್ಮೃತಿಕೋಶ ಸತ್ತು ಬಿದ್ದಿದೆ ಜುಲೈ ತಾಳಲಾರದೆ ಶಿಶಿರದ ಆಕ್ರೋಶ. ನನ್ನನ್ನು ಅವಳು ಇನ್ನೂ ಕಾಡುತ್ತಾಳೆ ಭೂತವಾಗಿ, ಆಲಿಸ್, ಮೋಡಗಳಲ್ಲಿ ತೇಲುತ್ತಾ ಸಾಗಿ, ಜಾಗೃತ ಕಣ್ಣುಗಳಿಂದ ನೋಡಲಾಗದ ಹುಡುಗಿ. ಕಥೆ ಎಂದರೆ ಇನ್ನೂ ಆಸೆ ಮಕ್ಕಳಿಗೆ ಕಣ್ಣಲ್ಲಿ ಕುತೂಹಲ, ಅಮೃತ ಕಿವಿಗಳಿಗೆ, ಲಗುಬಗೆಯಿಂದ ಬಂದು ಕೂಡುವರು ಬಳಿಗೆ. ಕೌತುಕಲೋಕದಲ್ಲಿ ವಿಹರಿಸುವರು ಅವರು ಕನಸುಗಳ ಕಾಣುತ್ತ ದಿನವ ಕಳೆಯುವರು ಬೇಸಗೆಗಳು ಬಂದರೂ ಬೇಸಗೆಗಳು ಮುಗಿದರೂ. ತೇಲುತ್ತಾ ಸಾಗುವರು ತೊರೆಯ ಹರಿವಿನಲಿ, ಬಂಗಾರದ ಬೆಳಕನ್ನು ಸ್ವೀಕರಿಸಿ ಅರಿವಿನಲಿ, ಜೀವನವೊಂದು ಕನಸಲ್ಲದೇ ಬೇರೇನು ಹೇಳಿ!

ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ

ಮೂಲ: ಅವಧಿ ಜಾನಪದ ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ತಲೆಯ ಮೇಲೆ ರೇಷ್ಮೆಯ ಸೆರಗಿನೊಳು  ಸೀತೆಯ ಮುಖಕಮಲವು ಅರಳುತಿದೆ! ಹಣೆಯ ಮೇಲೆ ಮಾಣಿಕ್ಯದ ತಿಲಕ  ತಾರಗೆಯಂತೆ ಬೆಳಗುತಿದೆ! ಅರಳದೆ ಏನು, ಬೆಳಗದೆ ಏನು ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ಕೈಗಳಲ್ಲಿ ಕಿಂಕಿಣಿಸುವ ಬಳೆ ಕೆಂಪು ಏನೋ ಗುಣುಗುಣು ಗುನುಗುತಿದೆ ತೋಳಬಂದಿಯೊಳು ಚಿನ್ನದ ನಡುವೆ ವಜ್ರವು ಫಳಫಳ ಮಿನುಗುತಿದೆ! ಗುನುಗದೆ ಏನು ಮಿನುಗದೆ ಏನು  ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ಬಂಗಾರದ ಹೊಳೆಹೊಳೆಯುವ ಡಾಬು ಸೀತೆಯ ಸೊಂಟವ ಬಳಸುತಿದೆ! ಕಿವಿಗಳಲ್ಲಿ ತೂಗುವ ಬಿಳಿಮುತ್ತು ಏನೋ ಹೇಳಲು ಬಯಸುತಿದೆ! ಬಳಸದೆ ಏನು, ಬಯಸದೆ ಏನು, ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ಕಾಲಿನಲ್ಲಿ ಘಲುಘಲು ಎಂದು ನೂಪುರ ಹರುಷದಿ ನುಡಿಯುತಿದೆ ಪದ್ಮಪಾದಗಳ ಕಾಲಂದುಗೆಯೋ ಸಿಹಿನೋವಿನಲಿ ಮಿಡಿಯುತಿದೆ! ನುಡಿಯದೆ ಏನು, ಮಿಡಿಯದೆ ಏನು ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ!

ಚೇಳಿನ ರಾತ್ರಿ

ಇಮೇಜ್
ಮೂಲ: ನಿಸ್ಸೀಮ್ ಎಳಿಕಿಯೆಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನೆನಪಿದೆ ನನಗೆ ನನ್ನ ತಾಯಿಯನ್ನು ಚೇಳು ಕಚ್ಚಿದ ರಾತ್ರಿ. ಹತ್ತು ಗಂಟೆ ನಿರಂತರ ಸುರಿದ ಮಳೆಗೆ ಬೇಸತ್ತು ಅಕ್ಕಿಯ ಚೀಲದ ಕೆಳಗೆ ಬಂದು ಸೇರಿಕೊಂಡಿತ್ತು. ಕೋಣೆಯ ಕತ್ತಲಿನಲ್ಲಿ  ತನ್ನ ಪೈಶಾಚಿಕ ಕೊಂಡಿಯಿಂದ ನೀಡಿ ವಿಷದ ಚುಚ್ಚುಮದ್ದು ಮತ್ತೊಮ್ಮೆ ಮಳೆಯನ್ನು ಎದುರಿಸಲು ನಿರ್ಧರಿಸಿತು. ನೊಣಗಳ ಹಿಂಡಿನ ಹಾಗೆ ಬಂದು ಸೇರಿದ ರೈತಾಪಿ ಜನ ಗುಂಯ್ ಗುಟ್ಟಿದರು ನೂರಾರು ಸಲ ದೇವರ ಹೆಸರನ್ನ ದುಷ್ಟಶಕ್ತಿಯನ್ನು ಮಾಡಲು ಶಮನ. ಕೈಯಲ್ಲಿ ಹಿಡಿದು ಲಾಂದ್ರ ಮೋಂಬತ್ತಿ ಮಣ್ಣಿನ ಗೋಡೆಯ ಮೇಲೆ ನಡೆದಾಡುತ್ತಿರಲು ಚೇಳುನೆರಳು  ಹೋದರು ಅದನ್ನು ಬೆಂಬತ್ತಿ ಯಾರಿಗಾದರೂ ಸಿಕ್ಕಿದ್ದರೆ ಕೇಳು. ಬಂದವರು ಲೊಚಗುಟ್ಟಿದರು. ಏನೇನೋ ಕತೆ ಕಟ್ಟಿದರು. ಚೇಳು ಓಡಾಡಿದಾಗೆಲ್ಲನಿನ್ನ ರಕ್ತದಲ್ಲೂ  ವಿಷ ಹರಡುವುದು ಎಂದರು. ಒಂದು ಕಡೆ ತೆಪ್ಪಗೆ ಬಿದ್ದಿದ್ದರೆ ಸಾಕು ಹಾಳಾದ್ದು! ನಿನ್ನ ಪೂರ್ವಜನ್ಮದ ಕರ್ಮ! ಸುಟ್ಟುಹೋಗಲಿ ಇಂದು! ಮುಂದಿನ ಜನ್ಮದ ನೋವು ಕಡಿಮೆಯಾಗುವುದು ಬಿಡು! ಜಗತ್ತಿನಲ್ಲಿದೆ ಕೆಟ್ಟದ್ದು ಒಳ್ಳೆಯದು ಎರಡೂ, ಕೆಟ್ಟದ್ದು ಒಂದಿಷ್ಟು ನಾಶವಾದೀತು!  ವಿಷವು ನಿನ್ನ ದೇಹವನ್ನು ಮಾಡಲಿ ಶುದ್ಧ, ನಶಿಸಲಿ ಮೋಹ,ಮತ್ಸರ,ಲೋಭ,ಕಾಮಕ್ರೋಧ! ಹೀಗೆ ಮಾತಾಡುತ್ತ ಕುಳಿತರು ಅಮ್ಮನ ಸುತ್ತ, ಅರಿವಿನಿಂದ ಶಾಂತವಾದಂತಿತ್ತು ಅವರ ಚಿತ್ತ. ಇನ್ನಷ್ಟು ಮೋಂಬತ್ತಿ, ಇನ್ನಷ್ಟು ಲಾಂದ್ರಗಳು, ಇನ್ನಷ್ಟು ನೆರೆಯವರು, ಇನ್ನಷ

ಕಟ್ಟುವೆನು ನಾನು

ಇಮೇಜ್
ಸ್ಫೂರ್ತಿ: ರಾಬರ್ಟ್ ಲೂಯಿ ಸ್ಟೀವನ್ಸನ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ನೋಡಿ ನಾನು ಮನೆಯಲ್ಲೇ ಏನೇನು ಕಟ್ಟಬಲ್ಲೆ! ಅರಮನೆ, ದೇವಸ್ಥಾನ, ಕೋಟೆ ಕೊತ್ತಲ ಕಿಲ್ಲೆ! ಸುರಿದುಕೊಳ್ಳಲಿ ಎಷ್ಟು ಸುರಿಯುತ್ತದೋ ಮಳೆ, ನಾನಂತೂ ಕಟ್ಟುವ ಆಟ ಆಡುವೆ ಮನೆಯಲ್ಲೇ! ಮೇಜು ಕುರ್ಚಿಗಳೆಲ್ಲ ಆಗಿ ಬೆಟ್ಟದ ಸಾಲು, ಕೆಳಗೆ ಹಾಸಿದ ಚಾಪೆ ಆಗುವುದು ಕಡಲು! ಗೋಡೆ ಕಟ್ಟುವೆ ಸುತ್ತ ಪುಸ್ತಕಗಳ ಪೇರಿಸಿ, ಕಟ್ಟುವೆನು ಗುಡಿಗೋಪುರ, ಧ್ವಜವ ಮೇಲಿರಿಸಿ! ನಾಲ್ಕು ಕಂಬಗಳಿವೆ ನನ್ನ ಪುಸ್ತಕದರಮನೆಗೆ, ಚಾದರದ ಗೋಪುರವನೆಬ್ಬಿಸುವೆ ಕೊನೆಗೆ, ಮೇಲಿಂದ ರಾಜ ಮೆಟ್ಟಿಲು ಇಳಿಯುತ್ತಾ ಬಂದರೆ, ಸಿದ್ಧವಾಗಿದೆ ಕೆಳಗೆ ಜಹಜುಗಳ ಬಂದರೇ! ಅಮ್ಮನ ಪಾತ್ರೆಗಳೆಲ್ಲವೂ ನನ್ನ ಪಾಲು! ಸಾಲಾಗಿ ನಿಂತಿರುವ ಜಹಜುಗಳ ಸಾಲು! ಕಡಲಲ್ಲಿ ತೇಲುತ್ತಿವೆ ಒಂದೆರಡು ಬೋಟು, ಒಂದು ಅಕ್ಕನ ಪರ್ಸ್, ಒಂದು ತಾತನ ಕೋಟು!! ಗುಡಿಯ ಸುತ್ತಲೂ ದೀಪ ಹಚ್ಚಿಟ್ಟ ಹಾಗೆ ಹೇಗೆ ಮಾಡುವುದೆಂದು ಹೊಳೆದದ್ದೇ ನನಗೆ ತಂದು ಅಜ್ಜಿಯ ಭಾರೀ ಜರತಾರಿ ಸೀರೆ ಸುತ್ತಿರುವೆ, ನೋಡೋಣ ಏನನ್ನುತಾರೆ! ಮುಗಿಯಿತಲ್ಲ ಆಟ,ಕಟ್ಟಿದ್ದು ಸಾಕು ಈಗ ಕಟ್ಟಿದ್ದನ್ನು ಕೆಡವಲೇ ಬೇಕು ಕಟ್ಟಲು ಬೇಕಾಯಿತು ಒಂದೆರಡು ಗಂಟೆ ಕೆಡವಲು ಅಷ್ಟೆಲ್ಲಾ ವ್ಯವಧಾನ ಉಂಟೇ! ಕೋಣೆಯ ತುಂಬಾ ಬಿದ್ದಿರುವ ರಾಶಿ  ಸಾಮಾನು, ನೋಡುತ್ತಾ ಕಲ್ಪಿಸಿಕೊಳ್ಳುವೆ ಕಟ್ಟಬಹುದು ಬೇರೇನು, ನಡೆದೇ ಇರುತ್ತದೆ ಕೆಡವಿ ಕಟ್ಟುವ ಆಟ,  ಹೊಟ್ಟೆ ಹಾಕುತ್ತಿದೆ ತಾಳ, ಕರೆಯುತ್ತಿದೆ ಪಾಠ

ಬೇಸಗೆಯಲ್ಲಿ ನಿದ್ದೆ

ಇಮೇಜ್
 ಮೂಲ - ರಾಬರ್ಟ್ ಲೂಯಿ ಸ್ಟೀವನ್ ಸನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಚಳಿಗಾಲದಲ್ಲೋ ಕತ್ತಲಲ್ಲೇ ಎದ್ದು ಮೋಂಬತ್ತಿಯ ಹಳದಿ ಬೆಳಕಲ್ಲಿ ಹಾಕಿಕೊಳ್ಳಬೇಕು ಬಟ್ಟೆ! ಬೇಸಗೆಯಲ್ಲಿ ಇದೆಲ್ಲಾ  ತಳಕಂಪಳಕ ಬೆಳಕಿದ್ದಾಗಲೇ ಮಾಡಬೇಕಂತೆ ನಿದ್ದೆ! ಅಡ್ಡಾದರೆ ಕಾಣುವುದು ಕಿಟಕಿಯಿಂದಾಚೆಗೆ ಕುಪ್ಪಳಿಸುತ್ತಾ ಹಕ್ಕಿಗಳು ಮಾಡುವುದು ಕಲಕಲ ಹೊರಗೆ ಬೀದಿಗಳಿಂದ ಕೇಳುತ್ತದೆ ದೊಡ್ಡವರು ಓಡಾಡುವಾಗ ಪಾದರಕ್ಷೆಗಳ ಸಪ್ಪಳ ಹೇಳಿ ನಿಮಗಿದು ಕಷ್ಟ ಅನ್ನಿಸುವುದಿಲ್ಲವೇ, ಹೊರಗೆ ಹೊಳೆಯುತ್ತಿರುವಾಗ ನೀಲಿ ಆಕಾಶ, ಮತ್ತೆ ನನಗೆ ಇನ್ನೂ ಆಟವಾಡುವ ಮನಸ್ಸಿರುವಾಗ, ಹೋಗು ಮಲಗಿಕೋ ಎಂಬ ಕಠಿಣಶಿಕ್ಷೆ?

ಒಂದು ಪುರಾತನ ಸಂಜ್ಞೆ

ಇಮೇಜ್
  ಒಂದು ಪುರಾತನ ಸಂಜ್ಞೆ ಮೂಲ: ಎಡ್ನಾ ಸೆಂಟ್ ವಿನ್ಸೆಂಟ್ ಮಿಲೇ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಹಿನ್ನೆಲೆ: ಯೂಲಿಸಿಸ್ ಯುದ್ಧಕ್ಕೆ ಹೋದಾಗ ಅವನ ಹೆಂಡತಿ ಪಿನೊಲಪಿ ಅವನಿಗಾಗಿ ಕಾಯುತ್ತಾಳೆ. ವರ್ಷಗಳು ಕಳೆದರೂ ಅವನು ಹಿಂತಿರುಗಿದೇ ಹೋದಾಗ ಅನೇಕರು ಅವಳನ್ನು ವರಿಸಲು ಮುಂದೆ ಬರುತ್ತಾರೆ. ಅವಳು ಒಂದು ವಸ್ತ್ರವನ್ನು ಹೆಣೆಯಲು ಪ್ರಾರಂಭಿಸಿ ಹೆಣಿಗೆ ಮುಗಿದಾಗ ತಾನು ಮತ್ತೊಮ್ಮೆ ಮದುವೆ ಆಗುತ್ತೇನೆ ಎಂದು ಆಶ್ವಾಸನೆ ನೀಡುತ್ತಾಳೆ. ಬೆಳಗ್ಗೆ ವಸ್ತ್ರ ಹೆಣೆದು ರಾತ್ರಿ ಅದನ್ನು ಬಿಚ್ಚಿಬಿಡುತ್ತಾಳೆ. ಹೀಗಾಗಿ ವಸ್ತ್ರದ ಹೆಣಿಗೆ ಮುಗಿಯುವುದೇ ಇಲ್ಲ. ಕೊನೆಗೆ ಯೂಲಿಸಿಸ್ ಹಿಂದಿರುಗಿ ಬಂದಾಗ ತನ್ನ ಪತ್ರ್ನಿ ತನಗೆ ನಿಷ್ಠೆಯಿಂದ ಕಾಯುವುದನ್ನು ಕಂಡು ಭಾವುಕನಾಗುತ್ತಾನೆ. (ಯುದ್ಧದಿಂದ ಹಿಂದಿರುಗುವಾಗ ಅವನು  ಪರಸ್ತ್ರೀಯರೊಂದಿಗೆ ಸಂಬಂಧ ಹೊಂದಿರುತ್ತಾನೆ.) ಸೆರಗಿನ ತುದಿಯಿಂದ ಒರೆಸಿಕೊಂಡಾಗ ಒದ್ದೆಗಣ್ಣು  ಯೋಚಿಸಿದೆ, ಇದನ್ನೇ ಮಾಡಿದಳು ಪಿನೋಲಪಿ ಸಹ ಒಮ್ಮೆಯಲ್ಲ  ದಿನವಿಡೀ ಮಾಡಿದಳು ಇದನ್ನು ಸುಲಭವೇ ಹೇಳಿ ದಿನವಿಡೀ ಹೆಣೆಯುವುದು ವಸ್ತ್ರ ಮತ್ತು ಇಡೀ ರಾತ್ರಿ ಬಿಚ್ಚುವುದು ಹಾಕಿದ ಹೆಣಿಗೆ? ಸೋತುಹೋಗುವುವು ತೋಳು, ಬಿಗಿಯುವುದು ಕುತ್ತಿಗೆ  ಯಾವಾಗ ಆದೀತೋ ಎಂದು ಕಾದು ಬೆಳಗಿನ ಹೊತ್ತಿಗೆ ಎಲ್ಲಿರುವನೋ ಗಂಡ ಮತ್ತು ಬರುವನೋ ಎಂದಿಗೆ  ಎಂದು ಪರಿತಪಿಸಿ ವರ್ಷಗಟ್ಟಲೆ  ದುಃಖ ಉಮ್ಮಳಿಸಿ ಒಮ್ಮೆಲೇ ಮತ್ತೆ ಬೇರೇನಿದೆ ಮಾಡಲು  ತೋಡಿಕೊಳ್ಳದೆ ತನಗೇ ತನ್ನ

ಬ್ರಹ್ಮ

ಇಮೇಜ್
 ಮೂಲ: ರಾಲ್ಫ್ ವಾಲ್ಡೋ ಎಮರ್ಸನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ದಾರುಣ ಹಂತಕನು ತಾನು ಕೊಂದೆನೆಂದು ಬೀಗಿದರೆ, ಹತ್ಯೆಯಾದವನು ಭಾವಿಸಿದರೆ ಮುಗಿಯಿತೆಂದು ತನ್ನ ಕತೆ, ಅವರಿಗೆ ಸರಿಯಾಗಿ ತಿಳಿಯದು  ನನ್ನ ಸೂಕ್ಷ್ಮ ನಡೆ, ನಾನು ಕಾಪಿಡುವೆ, ದಾಟಿಸುವೆ, ತಿರುಗಿಸುವೆ ಮತ್ತೆ. ಹತ್ತಿರ ಎನ್ನಿಸುವುದು ನನಗೆ ದೂರವಿರುವುದು, ಮರೆತದ್ದು; ನೆರಳು ಬೆಳಕುಗಳು ಎರಡೂ ನನಗೆ ಸಮಾನ; ಅದೃಶ್ಯ ದೇವತೆಗಳು ನನಗೆ  ಕಾಣಿಸಿಕೊಳ್ಳುವರು, ನನಗೆ ಒಂದೇ ತೂಕ ಪ್ರಸಿದ್ಧಿ, ಅಪಮಾನ. ತಪ್ಪಾಗಿದೆ ನನ್ನನ್ನು ಕೈ ಬಿಟ್ಟವರ ಲೆಕ್ಕಾಚಾರ, ನನ್ನನ್ನೇರಿ ಹಾರಿದರೆ ನಾನು ರೆಕ್ಕೆಗಳ ಆಧಾರ, ಸಂದೇಹವೂ ನಾನೇ, ಸಂದೇಹಿಯೂ ನಾನೇ, ನಾನು ಬ್ರಾಹ್ಮಣನುಚ್ಚರಿಸುವ ವೇದಸಾರ. ಕೊರಗುವರು ಬಲಿಷ್ಠ ದೇವತೆಗಳೂ ನನ್ನಾಲಯ ಬಯಸಿ, ಮರುಗುವರು ಬಯಸಿ ಪವಿತ್ರ ಸಪ್ತರೂ ಇದನ್ನು. ಉತ್ತಮವ ಹುಡುಕುತ್ತಿರುವ ಓ ಸೌಮ್ಯ ಅನ್ವೇಷಕ! ಕಂಡುಕೊಂಡರೆ ನನ್ನ ಮಾಡಿದಂತೆ ಸ್ವರ್ಗಕ್ಕೆ ಬೆನ್ನು .

ಸಾಮಾನ್ಯರು

ಇಮೇಜ್
 ಮೂಲ: ರಾಬರ್ಟ್ ಸರ್ವಿಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಾವು ಬಂದರೂ ಒಬ್ಬರೆದುರಿಗೆ ಒಬ್ಬರು ನೀನು ಮಾಡುವುದಿಲ್ಲ ನಮಸ್ತೆ ನಾನು ಬಂದರೂ  ನಿನ್ನ ಎದುರಿಗೆ ಹಿಡಿದು ಹೋಗಿಬಿಡುವೆ ನಿನ್ನ ರಸ್ತೆ ಕಣ್ಣೆತ್ತಿಯೂ ನೋಡುವುದಿಲ್ಲ ನನ್ನ ಕಡೆ ಕನಿಷ್ಠ ನಾಮಕೇವಾಸ್ತೆ ಏಕೆಂದರೆ ನಾನೊಬ್ಬ ಸಾಧಾರಣ ಸಾಮಾನ್ಯ ಮನುಷ್ಯ. ಯಾರಿಗೆ ಗೊತ್ತು ನೀನೂ ಕೂಡಾ ಆಗಿರಬಹುದು ಸಾಮಾನ್ಯ ಮನುಷ್ಯನೇ! ಹೇಳಿದ ಕೆಲಸ ಮಾಡಿಕೊಂಡು ತೆಪ್ಪಗೆ, ಸಂಬಳ ಹೆಂಡತಿಯ ಕೈಗೆ ಕೊಡುವೆ ತಾನೇ! ಮನೆ, ಮಕ್ಕಳು, ಮರಿ ಎನ್ನುತ್ತಾ ಲೇಖನಿಯನ್ನೋ ಪಿಕಾಸಿಯನ್ನೋ  ಎತ್ತಿಕೊಳ್ಳುವೆಯಲ್ಲವೆ ಕೈಗೆ? ಚಿಂತಿಸದಿರು ಗೆಳೆಯಾ ನಾವಿಬ್ಬರೂ ಸಾಧಾರಣ ಸಾಮಾನ್ಯ ಮನುಷ್ಯರು! ದುಡಿಯುತ್ತೇವೆ ತುಟಿ ಪಿಟುಕಿಸದೆ, ರಗಳೆ ಮಾಡದೆ, ನಮ್ಮ ಸಾಧನೆಗೆ ಯಾವುದೇ ಬಹುಮಾನವಿಲ್ಲ ಇಷ್ಟಾದರೂ ನಮ್ಮಂಥ ಸಾಮಾನ್ಯರಿಂದಲೇ ನಡೆಯುತ್ತಿದೆ ಜಗತ್ತು, ಅನುಮಾನವಿಲ್ಲ. ಇಡುತ್ತೇವೆ ನಾವು ದೃಢವಾದ ಹೆಜ್ಜೆ ದೇವರು  ಬರೆದಿರುವ ಗೆರೆ ಅನುಸರಿಸಿ ಸರ್ವಶಕ್ತರು ನಾವು, ನಮ್ಮ ಶಕ್ತಿಗೆ ಎಲ್ಲರೂ ಮುಗಿಯಲೇ ಬೇಕು ಕೈ ಜೋಡಿಸಿ  ನಾವು ಸಾಧಾರಣ ಸಾಮಾನ್ಯ ಮನುಷ್ಯರು!

ಕಾವ್ಯಕಲೆಯ ಮೇಲೊಂದು ಟಿಪ್ಪಣಿ

ಇಮೇಜ್
ಮೂಲ: ಡೈಲಾನ್ ಥಾಮಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕನಸಿನಲ್ಲೂ ನಾನು ಎಣಿಸಿರಲಿಲ್ಲ: ಪುಸ್ತಕಗಳ ಹೊದ್ದಿಕೆಗಳ ನಡುವಣ ಜಗತ್ತಿನಲ್ಲಿ  ನಡೆಯುತ್ತಿರಬಹುದು ಏನೆಲ್ಲ, ಪದಗಳ ಉಷ್ಣ-ಶೈತ್ಯ ಬಿರುಗಾಳಿಗಳು, ಅದೆಂಥ ಪರಮಶಾಂತಿ, ಅದೆಂಥ ಗಟ್ಟಿಯಾದ ನಗು, ಇನ್ನೂ ಇಂಥವೇ ಮತ್ತು ಕಣ್ಣುಕುಕ್ಕುವ ಬೆಳಕು ಪುಟಗಳ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ, ಚೂರುಚೂರಾಗಿ ಪದ, ಪದ, ಮತ್ತು ಇನ್ನಷ್ಟು ಪದಗಳಾಗಿ ಪ್ರತಿಯೊಂದೂ ಪಡೆದುಕೊಂಡು ಅಮರತ್ವ ಬಾಳುತ್ತಾ ಅನಂತಕಾಲಕ್ಕೂ, ಪ್ರತಿಯೊಂದಕ್ಕೂ ತನ್ನದೇ ಆನಂದ, ವೈಭೋಗ,ವೈಚಿತ್ರ್ಯ,ಬೆಳಕು.