ಲಾಟ್ ಮಹಾಶಯನ ಹೆಂಡತಿ

ಮೂಲ: ಆನಾ ಅಹ್ಮತೋವಾ  (ರಷ್ಯಾ)
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 


ಕಪ್ಪು ಪರ್ವತದ ಮೇಲೆ ಕಡುಕಷ್ಟದ ದಾರಿಯಲ್ಲಿ 
ಅವನು ಹೊರಟಿದ್ದ ದೇವಸೇವಕರನ್ನು ಹಿಂಬಾಲಿಸಿ. 
ನಿಯತ್ತಿನ ಮನುಷ್ಯ; ಆದರವನ ಹೆಂಡತಿಗೆ ಯಾಕೋ
"ಹಿಂತಿರುಗಿ ನೋಡೆಂದು" ಒಳದನಿಯ ಕಸಿವಿಸಿ. 

"ನೋಡು ಸೊಡೋಮ್ ನಗರದ ಕೆಂಪು ಮೀನಾರಗಳು,
 ಅಗೋ ನೀನು ಹಾಡುತ್ತಿದ್ದ ಸಭಾಮೈದಾನ. 
ನಿನ್ನ ಮನೆಯ ಕಿಟಕಿಗಳು ಕಾಣುತ್ತಿವೆ ಇನ್ನೂ, 
ಈ ಮನೆಯಲ್ಲೇ ಅಲ್ಲವೇ ಹಡೆದದ್ದು ನಿನ್ನೆಲ್ಲ ಮಕ್ಕಳನ್ನ?" 

ಒಮ್ಮೆ ಹಿಂದಿರುಗಿ ನೋಡಿಯೇ ಬಿಟ್ಟಳು! ಕೂಡಲೇ
ದೇಹದಲ್ಲಿ  ಎದ್ದಿತು ನೋವು, ಕಡಿಮೆಯಾಗಿತ್ತು ಕಚ್ಚಿದಂತೆ ಚೇಳು.
ಹೊಲೆದುಕೊಂಡು ಕಣ್ಣು, ಉಪ್ಪಿನ ಹೊರೆಯಾಯ್ತು ದೇಹ,
ನಿಂತಲ್ಲೇ ಮರಗಟ್ಟಿದವು ಅವಳ ಕಾಲು. 

ಈ ಹೆಂಗಸಿಗಾಗಿ ಯಾರು ಅಳುವರು ಹೇಳಿ? 
ತೀರಾ ಯಃಕಶ್ಚಿತ್ ಅನಿಸುವುದಲ್ಲವೇ ಅವಳ ಸಂಗತಿ?
ನನ್ನ ಹೃದಯದಲ್ಲಂತೂ ಅವಳಿಗೆ ಸದಾ ಇರುವುದು ಸ್ಥಾನ,
ತಿರುಗಿದ್ದಕ್ಕೆ ಪಡೆದಳಲ್ಲ ಸಾವಿನ ದುರ್ಗತಿ!

ಆನಾ ಅಹ್ಮತೋವಾ ರಷ್ಯಾ ದೇಶದ ಪ್ರಸಿದ್ಧ ಕವಯಿತ್ರಿ. ಪ್ರಸ್ತುತ ಕವಿತೆಯಲ್ಲಿ ಬೈಬಲ್ ಗ್ರಂಥದಲ್ಲಿ ಬರುವ ಒಂದು ಕಥೆಯ ಉಲ್ಲೇಖವಿದೆ. ಲಾಟ್ಸ್ ಎಂಬುವನು ಸೊಡೋಮ್ ನಗರದ ನಿವಾಸಿ. ಆ ನಗರದ ನಿವಾಸಿಗಳೆಲ್ಲರೂ ಪಾಪಕ್ಕೆ ಮುಡಿಪಾದವರು; ಇವನೊಬ್ಬನೇ ಸದಾಚಾರಿ. ಒಮ್ಮೆ ಇವನ ಮನೆಗೆ ಇಬ್ಬರು ಅಪ್ಸರೆಯರು ರಾತ್ರಿ ತಂಗಲೆಂದು ಬರುತ್ತಾರೆ. ಊರಿನವರ ಕಣ್ಣು ಈ ಅಪ್ಸರೆಯರ ಮೇಲೆ ಬೀಳುತ್ತದೆ. ಅವರನ್ನು ತಮಗೆ ಒಪ್ಪಿಸುವಂತೆ ಪೀಡಿಸುತ್ತಾರೆ. ಆದರೆ ಅವನು ತನ್ನ ಹೆಣ್ಣುಮಕ್ಕಳನ್ನು ಅವರಿಗೆ ಒಪ್ಪಿಸಿ ಮನೆಗೆ ಬಂದ ಅತಿಥಿಗಳ ಮಾನ ಕಾಪಾಡುತ್ತಾನೆ. ಇದರಿಂದ ಸಂಪ್ರೀತರಾದ ದೇವತೆಗಳು ಅವನಿಗೆ "ನೀನು ಬೆಳಗಾಗೆದ್ದು ಈ ಮಡದಿಯೊಂದಿಗೆ ಊರನ್ನು ಬಿಟ್ಟು ಹೊರಟುಬಿಡು. ಈ ಊರು ತನ್ನ ಪಾಪದ ಭಾರಕ್ಕೆ ನಾಶವಾಗುತ್ತದೆ. ಆದರೆ ತಪ್ಪಿಯೂ ಹಿಂದೆ ನೋಡಬೇಡ." ಎಂದು ಹೇಳಿಕಳಿಸುತ್ತಾರೆ. ಅವನ ಹೆಂಡತಿಯು ಮಾತ್ರ ಒಮ್ಮೆ ಹಿಂತಿರುಗಿ ನೋಡಿದ ಕಾರಣ ಶಾಪಗ್ರಸ್ತಳಾಗಿ ಉಪ್ಪಿನ ಹೊರೆಯಾಗಿಬಿಡುತ್ತಾಳೆ. ಇಂದಿಗೂ ಒಂದು ಶಿಲೆಯನ್ನು ಲಾಟ್ಸ್ ಮಡದಿಯೆಂದು ಗುರುತಿಸಲಾಗುತ್ತದೆ.   ಈ ಕಥೆಯನ್ನು ಗೌತಮ ಮತ್ತು ಅಹಲ್ಯೆಯ ಕಥೆಗೆ ಹೋಲಿಸಿ ನೋಡಿ.  ಪ್ರಸ್ತುತ ಕವಿತೆಯಲ್ಲಿ "ತಿರುಗುವುದು" ಮತ್ತು "ನೇರವಾಗಿ ಹೋಗುವುದು" ಏನನ್ನು ಪ್ರತಿನಿಧಿಸಬಹುದು ಎಂದು ಯೋಚಿಸಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)