ಅಮ್ಮಾ ನಾನು ಬಚಾವಾದೆ
ಕವಿತೆ ಓದುವ ಮುನ್ನ: ಈ ಕವಿತೆಯನ್ನು ಬರೆದ ಜೆಹ್ರಾ ನಿಗಾಹ್ ಪಾಕೀಸ್ತಾನದ ಖ್ಯಾತ ಕವಯಿತ್ರಿ. ಉರ್ದೂ ಕಾವ್ಯ ಪರಂಪರೆಯಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಕವಯಿತ್ರಿಯರ ಸಾಲಿನಲ್ಲಿ ಇವರದ್ದು ಮುಂಚೂಣಿಯ ಸ್ಥಾನ. ಭಾರತದ ಹೈದರಾಬಾದಿನಲ್ಲಿ ಹುಟ್ಟಿದ ಜೆಹ್ರಾ ೧೯೪೭ರ ವಿಭಜನೆಯಾದಾಗ ಪಾಕೀಸ್ತಾನಕ್ಕೆ ವಲಸೆ ಹೋಗಬೇಕಾಯಿತು. ಪ್ರಸ್ತುತ ಕವಿತೆಯಲ್ಲಿ ಒಂದು ಹೆಣ್ಣು ಭ್ರೂಣವು ತಾಯಿಯೊಂದಿಗೆ ಮಾತನಾಡುತ್ತಾ "ನಾನು ಹುಟ್ಟದೇ ಇದ್ದದ್ದೇ ಒಳ್ಳೆಯದಾಯಿತು, ಬಚಾವಾದೆ" ಎಂದು ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರಗಳತ್ತ ಗಮನ ಸೆಳೆಯುತ್ತದೆ. ಮೂಲ ಉರ್ದೂ ಕವಯಿತ್ರಿ: ಜೆಹ್ರಾ ನಿಗಾಹ್ (ಪಾಕೀಸ್ತಾನ್) ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನಾನು ಬಚಾವಾದೆನಮ್ಮ, ಅಮ್ಮಾ ನಾನು ಬಚಾವಾದೆ ನಿನ್ನ ನೆತ್ತರ ಗೋರಂಟಿಯಲ್ಲಿ ಮಿಂದು ಕೆಂಪಾಗಿದೆ ನನ್ನ ಕಣವು ಪ್ರತಿಯೊಂದೂ ನನಗೆ ದೊರಕಿದ್ದರೂ ಒಂದು ರೂಪ-ಆಕಾರ ರಕ್ತ ಹರಿಯುತ್ತಿತ್ತು ನರಮಾಂಸಗಳ ಗೂಡಿಗೆ ಹೊಕ್ಕಿದ್ದರೆ ನನ್ನ ಕಣ್ಣುಗಳಲ್ಲಿ ಬೆಳಕು ಶೃಂಗಾರಕ್ಕೆ ದೊರಕುತ್ತಿತ್ತು ಆಸಿಡ್ ಕಾಡಿಗೆ ಮಾರಿಬಿಡುತ್ತಿದ್ದರು ನನ್ನನ್ನು ಸಟ್ಟಾ ಬಜಾರಿನಲ್ಲಿ ಎಕ್ಸ್ಚೇಂಜ್ ಆಫರಿಗೆ ಅಥವಾ ಉಪಯುಕ್ತಳಾಗುತ್ತಿದ್ದೆನೇನೋ ಮರ್ಯಾದಾ ಹತ್ಯೆಗೆ ನನ್ನ ಎಲ್ಲಾ ಕನಸ...