ಪೋಸ್ಟ್‌ಗಳು

Sriram ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ

ಮೂಲ: ಅವಧಿ ಜಾನಪದ ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ತಲೆಯ ಮೇಲೆ ರೇಷ್ಮೆಯ ಸೆರಗಿನೊಳು  ಸೀತೆಯ ಮುಖಕಮಲವು ಅರಳುತಿದೆ! ಹಣೆಯ ಮೇಲೆ ಮಾಣಿಕ್ಯದ ತಿಲಕ  ತಾರಗೆಯಂತೆ ಬೆಳಗುತಿದೆ! ಅರಳದೆ ಏನು, ಬೆಳಗದೆ ಏನು ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ಕೈಗಳಲ್ಲಿ ಕಿಂಕಿಣಿಸುವ ಬಳೆ ಕೆಂಪು ಏನೋ ಗುಣುಗುಣು ಗುನುಗುತಿದೆ ತೋಳಬಂದಿಯೊಳು ಚಿನ್ನದ ನಡುವೆ ವಜ್ರವು ಫಳಫಳ ಮಿನುಗುತಿದೆ! ಗುನುಗದೆ ಏನು ಮಿನುಗದೆ ಏನು  ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ಬಂಗಾರದ ಹೊಳೆಹೊಳೆಯುವ ಡಾಬು ಸೀತೆಯ ಸೊಂಟವ ಬಳಸುತಿದೆ! ಕಿವಿಗಳಲ್ಲಿ ತೂಗುವ ಬಿಳಿಮುತ್ತು ಏನೋ ಹೇಳಲು ಬಯಸುತಿದೆ! ಬಳಸದೆ ಏನು, ಬಯಸದೆ ಏನು, ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ! ಕಾಲಿನಲ್ಲಿ ಘಲುಘಲು ಎಂದು ನೂಪುರ ಹರುಷದಿ ನುಡಿಯುತಿದೆ ಪದ್ಮಪಾದಗಳ ಕಾಲಂದುಗೆಯೋ ಸಿಹಿನೋವಿನಲಿ ಮಿಡಿಯುತಿದೆ! ನುಡಿಯದೆ ಏನು, ಮಿಡಿಯದೆ ಏನು ಸೀತೆಯು ರಘುರಾಮನ ಪ್ರೇಮಲತೆ! ಮೇಲೇಳು ಸಿಂಗರಿಸಿಕೋ ಸೀತೆ, ಶಿವನ ಬಿಲ್ಲನ್ನು ಶ್ರೀರಾಮ ಮುರಿದನಂತೆ!

ತಪ್ಪು ಹೆಜ್ಜೆ ಇಟ್ಟು ನಡೆದ ಬಾಲ ರಾಮಚಂದ್ರ!

ಇಮೇಜ್
ಕವಿತೆ ಓದುವ ಮುನ್ನ ... ಕನ್ನಡದಲ್ಲಿ ಪುರಂದರದಾಸರು ಹೇಗೆ ಕೃಷ್ಣನ ಬಾಲ್ಯವನ್ನು ನವಿರು ಹಾಸ್ಯದಿಂದ ಚಿತ್ರಿಸಿದ್ದಾರೋ ಅದೇ ಬಗೆಯ ನವಿರು ಹಾಸ್ಯವನ್ನು ತುಲಸೀದಾಸರ ಈ ಗೀತೆಯಲ್ಲಿ ಕಾಣಬಹುದು. ರಾಮನ ಬಾಲ್ಯವನ್ನು ಕವಿ ವರ್ಣಿಸುತ್ತಿದ್ದಾನೆ. ಕವಿಯ ಒಳಗಣ್ಣಿಗೆ ಮಗು ಶ್ರೀರಾಮನು ತಪ್ಪು ಹೆಜ್ಜೆ ಇಡುತ್ತಾ ನಡೆಯಲು ಕಲಿಯುವ ಚಿತ್ರ ಗೋಚರಿಸುತ್ತಿದೆ. ಹಾಗೆ ನಡೆಯುವಾಗ ಅವನ ಪುಟ್ಟ ಕಾಲಿಗೆ ಕಟ್ಟಿದ ಗೆಜ್ಜೆಯ ಘಲ್ ಘಲ್ ಸದ್ದು ಕವಿಯ ಕಿವಿಗೆ ಕೇಳುತ್ತಿದೆ. ನಡೆಯುವ ರಭಸದಲ್ಲಿ ರಾಮ ಧೊಪ್ಪನೆ ಬಿದ್ದಾಗ ಅವನತ್ತ ತಾಯಿ-ತಂದೆಯರು ಧಾವಿಸಿ ಬರುತ್ತಾರೆ. ರಾಮನು ಪುತ್ರಕಾಮೇಷ್ಟಿ ಯಾಗವನ್ನೇ ಮಾಡಿ ಪಡೆದ ಪುತ್ರ! ಅಯ್ಯೋ, ಮಗುವಿಗೆ ಏನಾಯಿತೋ ಎಂದು ದಶರಥ ಪರಿತಪಿಸುತ್ತಾನೆ! ತಂದೆ ತಾಯಿ ಹೀಗೆ ಕಂಗಾಲಾದಾಗ ಮಗುವೂ ಪೆಚ್ಚಾಗಿ ಅಳುತ್ತದೆ! ಕವಿಯ ಕಲ್ಪನೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನೇ ಅಳುತ್ತಿದ್ದಾನೆ! ತಂದೆ ತನ್ನ ಉತ್ತರೀಯದ ಸೆರಗಿನಿಂದಲೇ ಧೂಳನ್ನು ಝಾಡಿಸಿ ಒರೆಸಿ ಮಗುವಿಗೆ ಪರಿಪರಿಯಾಗಿ ಸಮಾಧಾನ ಮಾಡುತ್ತಿದ್ದಾನೆ! ಗಲ್ಲ ನೇವರಿಸಿ ಕೂದಲು ಸರಿಮಾಡಿ ಅಳಬಾರದೆಂದು ಗೋಗರೆಯುತ್ತಿದ್ದಾನೆ! ಈ ಬಗೆಯ ಕಕ್ಕುಲತೆಯಿಂದ ಸಮಾಧಾನಗೊಂಡ ಮಗುವಿನ ತುಟಿಯಲ್ಲಿ ಕೊನೆಗೂ ನಗು ಅರಳುತ್ತದೆ. ಜೇನು ಸುರಿಯುವಂತೆ ತೋರುವ ಹವಳದಂಥ ತುಟಿಗಳಿಂದ ಜೇನಿನಷ್ಟೇ ಸವಿಯಾದ ತೊದಲು ಮಾತುಗಳನ್ನು ಕೇಳಿ ದಶರಥ-ಕೌಸಲ್ಯೆ ಮುಗ್ಧರಾಗಿದ...