ತಂತ್ರಜ್ಞಾನದ ನಡುವೆಯೂ ಒಂದು ಕರ್ನಾಟಕ ರಾಜ್ಯೋತ್ಸವ
ಸಿ ಪಿ ರವಿಕುಮಾರ್ ಸೆಪ್ಟೆಂಬರ್ ತಿಂಗಳಲ್ಲಿ ನಾನು ಬಿ. ಆರ್. ಲಕ್ಷ್ಮಣರಾವ್ ಅವರ "ಸಂವಾದ" ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರನ್ನು ನಮ್ಮ ಕಚೇರಿಯಲ್ಲಿ ನಡೆಯುವ ರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನಿಸಬೇಕು ಎಂಬ ಉತ್ಸಾಹ ಉಂಟಾಯಿತು. ನನ್ನ ಸಹೋದ್ಯೋಗಿಗಳ ಬೆಂಬಲದಿಂದ ಇದು ಸಾಧ್ಯವಾಯಿತು. ನಮ್ಮ ಆಹ್ವಾನಕ್ಕೆ ಒಪ್ಪಿ ಕವಿ ಲಕ್ಷ್ಮಣರಾವ್ ನಮ್ಮ ಕಚೇರಿಗೆ ಬಂದು ನಮ್ಮೊಂದಿಗೆ ಎರಡೂವರೆ ಗಂಟೆ ಕಾಲ ಕಳೆದದ್ದು ನಮಗೆಲ್ಲಾ ಸಂತೋಷದ ವಿಷಯವಾಯಿತು. ನಮ್ಮ ಕಚೇರಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ ವೇರ್ ಪರಿಭಾಷೆಯೇ ಹೆಚ್ಚು ರೂಢಿಯಲ್ಲಿರುವ ಸ್ಥಿತಿ ಇದ್ದರೂ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ನಡೆಸುವ ರೂಢಿ ನಡೆದುಕೊಂಡು ಬಂದಿದೆ. ಹಿಂದೆ ಚಿತ್ರ ನಿರ್ದೇಶಕ ನಾಗಾಭರಣ, ಸಮಾಜ ಕಾರ್ಯಕರ್ತ ಎಚ್ ಸುದರ್ಶನ್, ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಂದಿದ್ದಾರೆ. ಈ ಸಲದ ರಾಜ್ಯೋತ್ಸವ ನವೆಂಬರ್ ಐದನೇ ತಾರೀಕು ಸಂಪನ್ನವಾಯಿತು. ನಮ್ಮ ಕಚೇರಿಯಲ್ಲಿ ರಾಜ್ಯೋತ್ಸವದ ಹಿಂದಿನ ವಾರ ಮತ್ತು ಆಚರಣೆಯ ದಿವಸ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಕನ್ನಡೇತರರಿಗಾಗಿ ಕನ್ನಡ ಮಾತಾಡುವ ಸ್ಪರ್ಧೆ, ಛಾಯಾಚಿತ್ರ ಗ್ರಹಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಜನಪ್ರಿಯವಾಗಿವೆ. ಅದರಲ್ಲೂ ಕನ್ನಡೇತರರು ಭಾಗವಹಿಸುವ "ಸಂಭಾಷಣಾ ಸ್ಪರ್ಧ...