ಪೋಸ್ಟ್‌ಗಳು

Original Poem. Kannada poem ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಚಂದ್ರಹಾಸ

  ವಿಷಮಯ ಗಾಳಿಯನ್ನು ಉಸಿರಾಡುತ್ತ ವಿಷಮಯ ಆಹಾರ ಸೇವಿಸುತ್ತ  ಹೇಗೋ ಬದುಕಿದ್ದವನು  ವಿಷಮಯ  ವಿಚಾರ  ಓದಿ ಕೇಳಿ  ತುಂಬಿಕೊಂಡಾಗ ತಲೆಯಲ್ಲಿ  ಕಚ್ಚಿದ ತಳೆದು ಅವತಾರ ನಾಗ  ಅದಕ್ಕೇ ನೋಡಿ ಚಂದ್ರಹಾಸನಿಗೆ  ವಿಷ ಕೊಟ್ಟರೂ ಓಕೆ  ವಿಷಪೂರ್ಣ ವಿಷಯ  ಎಲ್ಲಾದರೂ  ಸಿಕ್ಕೀತು ಜೋಕೆ  ಸಿ ಪಿ ರವಿಕುಮಾರ್ 

ಕವಿಶೈಲದಲ್ಲೊಂದು ಸಂಜೆ

ಇಮೇಜ್
ಕೂಗಲು ಮೇಲೊಂದು ಒಂಟಿ ಬೆಳ್ಳಕ್ಕಿ ಮುಗಿಲಲ್ಲಿ ರಾಗವದಾವುದೋ ಕೇಳುವುದು ಕವಿಮನಕ್ಕೆ!     ಮಾಗಿಯ ಚಳಿಯಲ್ಲಿ ಕಾವ್ಯಸೃಷ್ಟಿಯ ಕಠಿಣ ತ್ಯಾಗಗಳ ತಪದಲ್ಲಿ ತೊಡಗಿದ್ದ  ರಸಋಷಿಗೆ! ರಾಗಿ-ಬತ್ತದ ಪೈರಿನ ಹಸಿರು ಪತ್ತಲವನ್ನುಟ್ಟು ಮೇಘಗಳ ಕರಿನೇರಳೆ ಬಣ್ಣದ ರವಿಕೆಯಂ ತೊಟ್ಟು ಹೂಗಳ ಚೆಲುವಿನಿಂ  ಕಂಗೊಳಿಸುವ  ಮಲೆನಾಡಿತಿ    ಜಾಗ ನೀಡಿದ್ದಾಳೆ ತನ್ನ ಮಡಿಲಲ್ಲಿ, ಕವಿಶೈಲದಲ್ಲಿ! ಈಗ ಕೇಳುವುದು ಕ್ರೌಂಚಪಕ್ಷಿಗಳ ಹರ್ಷಕಲರವ ಈಗ ಕೇಳುವುದು ನಿಷಾದನ ಬಾಣಕ್ಕೆ ಅಸು- ನೀಗಿದ ಜೊತೆಗಾತಿಗೆ ಮರುಗುವ ಒಂಟಿ ಆರ್ತನಾದ! ರಾಘವನ ಅಂತರಂಗದ ವ್ಯಥೆಯು ಕೇಳುವುದು .. ಓಗೊಡುವುದು ಎಲ್ಲಿಂದಲೋ ಸೀತೆಯ ದುಃಖವೃಷ್ಟಿ ಸಾಗುವುದು ದುಃಖದ ದೋಣಿಯಲ್ಲಿ ಕಾವ್ಯಸೃಷ್ಟಿ   - ಸಿ. ಪಿ. ರವಿಕುಮಾರ್  (c) ೨೦೧೭ 

ಹೇರಿಕೆ

ಸಿ. ಪಿ. ರವಿಕುಮಾರ್  ಹೇರುತ್ತಿರುವರು ಯಾರು ನಮ್ಮ ತಟ್ಟೆಯ ಮೇಲೆ ಆಲೂಗೋಬಿ, ರಾಜ್ಮಾ ಮತ್ತು ಛೋಲೆ ಯಾರದು ನಮ್ಮ ರಾಗಿಮುದ್ದೆ ಸಾರು ಮೆನುವಿನಿಂದ ಅಳಿಸಿ ತಂದಿದ್ದು ಕಡಾಯಿ ಪನೀರು? ನಿಂಬೆಹಣ್ಣಿನ ಚಿತ್ರಾನ್ನ, ಮೊಸರನ್ನ, ಸಾರು ಲೆಮನ್ ರೈಸ್ ಕರ್ಡ್ ರೈಸ್ ರಸಂ ಮಾಡಿದವರಾರು? ಬಾಳೆಲೆ ಮುತ್ತುಗದ ಎಲೆ ಮೇಲೆ ಊಟ ಬಿಟ್ಟು ಕೈಗೆ ಕೊಟ್ಟವರಾರು ಪ್ಲಾಸ್ಟಿಕ್ ತಟ್ಟೆ ಲೋಟ? ಕಚ್ಚೆ ಪಂಚೆ ಮತ್ತು ಮೈಸೂರು ರುಮಾಲು ಕಸಿದುಕೊಂಡವರು ನಮ್ಮಿಂದ ಯಾರು? ಸೀರೆಗೆ ಎತ್ನಿಕ್ ಡ್ರೆಸ್ ಎಂಬ ಹೆಗ್ಗಳಿಕೆ ಕೊಟ್ಟು ಹೇರಿದವರು ಯಾರು ಚೂಡಿದಾರು? ಹಳಗನ್ನಡವನ್ನು ನಮ್ಮಿಂದ ಕಿತ್ತು ಹಳಸಲು ಕಾವ್ಯವನ್ನು ನಮ್ಮ ಕೈಲಿಟ್ಟು ಓದಲೇ ಬೇಕೆಂದು 'ಪಥ್ಯ' ಪುಸ್ತಕದಲ್ಲಿ ಹಾಕಿದವರು ಯಾರು ಮಕ್ಕಳಿಗೆ ಕರಾರು? ಹೇರುತ್ತಿರುವವರು ಯಾರು ನಮ್ಮ ತಟ್ಟೆಯ ಮೇಲೆ ಆಲೂಗೋಬಿ, ರಾಜ್ಮಾ ಮತ್ತು ಛೋಲೇ ನೀನು ಹೇಳು ಬ್ರದರ್, ಸಿಸ್ಟರ್ ನೀನು ಹೇಳೇ

ಮನೆಯೊಳಗೆ ಮನೆಯೊಡೆಯ

ಇಮೇಜ್
ಸಿ. ಪಿ. ರವಿಕುಮಾರ್  ಅಪ್ಪನ ಮನೆಯನ್ನು ಹಾಗೆ  ಹೀಗೆ ಎಂದೆಲ್ಲಾ ಬೈದು ಅವನಿದ್ದಾಗಲೇ ಆಸ್ತಿ ಭಾಗ ಮಾಡಿ ಒಡೆದು ಕಟ್ಟಿದ ಮನೆಯಲ್ಲಿ ಮಜವಾಗಿ ಇರುತ್ತಾ ಕಳೆದವು ಮೂವತ್ತು ವರ್ಷ.   ಮಕ್ಕಳಿಗೂ ಬೋಧಿಸಿದ ಅಪ್ಪನ ಬಗ್ಗೆ ತಾನೇ ಕಟ್ಟಿದ ಸುಳ್ಳುಕಥೆ ಮತ್ತು ತನ್ನನ್ನು ಹೀರೋ ಎಂದು ಬಿಂಬಿಸುವ ಆದರ್ಶ.  ಈಗ ಅವನ ಮಕ್ಕಳು ಅವನ ಮನೆಯಲ್ಲಿ ಹುಡುಕಿದಾಗ ಬಿರುಕು   ಅವನಿಗೆ ಆಗುತ್ತದೆ ವಿದ್ಯುತ್ ಸ್ಪರ್ಶ.  ಸಿಟ್ಟಾಗುತ್ತಾನೆ ಕೆಂಗಣ್ಣು ಬಿಡುತ್ತಾನೆ ಕೈಗೆ ಚಪ್ಪಲಿ ಎತ್ತಿಕೊಳ್ಳುತ್ತಾನೆ ತಾಳುತ್ತಾನೆ ಕಾಲಪುರುಷನ ರೌದ್ರವೇಷ.