ಕಾವ್ಯ ಪರಿಚಯ
ಮೂಲ: ಬಿಲ್ಲಿ ಕಾಲಿನ್ಸ್ (ಅಮೆರಿಕಾ ಸಂಸ್ಥಾನ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್ (ಚಿತ್ರಕೃಪೆ - ವಿಕಿಪೀಡಿಯಾ) ನಾನು ಅವರಿಗೆ ಹೇಳಿದೆ: ಬಣ್ಣದ ಸ್ಲೈಡ್ ನೋಡಿದ ಹಾಗೆ ಕವಿತೆಯನ್ನು ತೊಗೊಂಡು ಬೆಳಕಿಗೆ ಹಿಡಿದು ನೋಡಿರಪ್ಪಾ ಅಂತ. ಅಥವಾ ಅದರ ಗೂಡಿಗೆ ಕಿವಿ ಹಚ್ಚಿ ಕೇಳಿ. ಇಲ್ಲವೇ ಕವಿತೆಯೊಳಗೆ ಒಂದು ಇಲಿಯನ್ನು ಇಳಿಬಿಟ್ಟು ಅದು ಹೇಗೆ ಹೊರಬರುತ್ತದೋ ಗಮನಿಸಿ. ಇಲ್ಲವೇ ಕವಿತೆಯ ಕೋಣೆಯನ್ನು ಹೊಕ್ಕು ಅದರ ಗೋಡೆಗಳನ್ನು ಸವರುತ್ತಾ ಲೈಟ್ ಸ್ವಿಚ್ ಏನಾದರೂ ಕೈಗೆ ಹತ್ತುತ್ತದೋ ನೋಡಿ. ಕವಿತೆಯ ತರಂಗಗಳ ಮೇಲೆ ವಾಟರ್-ಸ್ಕೀ ಮಾಡುತ್ತಾ ದಡದಲ್ಲಿರುವ ಕವಿಯ ಹೆಸರಿನತ್ತ ಕೈ ಬೀಸಿ. ಆದರೆ ಅವರೋ ಕವಿತೆಯನ್ನು ಹಗ್ಗದಿಂದ ಕಟ್ಟಿ ಒಂದು ಕುರ್ಚಿಗೆ ಅದಕ್ಕೆ ಚಿತ್ರಹಿಂಸೆ ಕೊಟ್ಟು ಅದರ ಬಾಯಿಂದ ಹೇಳಿಸಲು ಹೊರಟಿದ್ದಾರೆ ತಪ್ಪೊಪ್ಪಿಗೆ. ಒಂದು ಪೈಪ್ ತೊಗೊಂಡು ಹೊಡೆಯುತ್ತಿದ್ದಾರೆ ಕವಿತೆಗೆ ರಪರಪ ಏನೆಂದು ಬಗೆಯಲು ಅದರ ನಿಜವಾದ ಅರ್ಥ. ಕವಿತೆಯ ಸ್ವಾರಸ್ಯ: ಕವಿತೆಯಲ್ಲಿ ನಿಮಗೆ ಬೇಕಾದದ್ದು ಹುಡುಕಬಹುದು! ನಿಜವಾದ ಅರ್ಥಕ್ಕಾಗಿ ವ್ಯರ್ಥ ಹಿಂಸೆ ಕೊಡುವುದು (ಅಥವಾ ಕೊಟ್ಟುಕೊಳ್ಳುವುದು) ಬೇಡ ಎಂಬುದನ್ನು ಕವಿ ಹಾಸ್ಯಮಯವಾಗಿ ನಿರೂಪಿಸಿದ್ದಾನೆ. ಇದೊಂದು ಮಕ್ಕಳಿಗಾಗಿ ಬರೆದ ಕವಿತೆ.