ಬೂರ್ಶ್ವಾ
ಬ್ರೆಡ್ ಕದ್ದನೆಂಬ ಅಪರಾಧಕ್ಕಾಗಿ ಜಾನ್ ವಾಲ್ಜಾನ್ ಅನುಭವಿಸಿದ ವರ್ಷಗಟ್ಟಲೆ ಸೆರೆವಾಸ ಮತ್ತು ತಪ್ಪಿಸಿಕೊಂಡಾಗ ಬೆಂಬಿಡದ ಪೊಲೀಸ್ ಅಧಿಕಾರಿ ಜಾವೇ ಕಣ್ತಪ್ಪಿಸಿ ಓಡಾಡುವ ದುಸ್ಸಾಹಸ. ಮಂದಿಗೆ ಬ್ರೆಡ್ ಸಿಕ್ಕದ ಕಾಲದಲ್ಲೂ ಬೂರ್ಶ್ವಾ ಶ್ರೀಮಂತರು ನಡೆಸುತ್ತಿದ್ದರು ಕೇಕ್ ಮತ್ತು ವೈನ್ ಗಮ್ಮತ್ತು. ಮೇರಿ ಅಂಟಾಯ್ನೇ ಕೇಳಿದ ಪ್ರಶ್ನೆಯಿಂದ ಉದ್ರಿಕ್ತ ಜನ ಗಿಲೊಟಿನ್ ಗರಗಸಕ್ಕೆ ದೂಡಿದರು ಅವಳ ನಾಜೂಕು ಕತ್ತು. ಯಾರೋ ಅನ್ನುತ್ತಾರೆ ದಿನಗೂಲಿ ಜನರಿಗೆ ತಿನ್ನಲು ಗತಿಯಿಲ್ಲ. ಇನ್ನೊಬ್ಬರು ಶೇರ್ ಮಾಡುತ್ತಾರೆ ಇದು ನಾನೇ ಮನೆಯಲ್ಲಿ ಮಾಡಿದ ರಸಗುಲ್ಲ. ಸಮೋಸಾ ವಡೆ ಕಾಶಿ ಹಲ್ವಾ. ನಾವೆಲ್ಲರೂ ಹೀಗೆ ಬೂರ್ಶ್ವಾ ಆಗಿಬಿಟ್ಟಿದ್ದೇವಲ್ವಾ. ಇರಲಾರದು ನಮಗೆ ಗಿಲೊಟಿನ್ ಆಪತ್ತು ಆದರೆ ಹೇಗಿದ್ದೀತು ಕತ್ತರಿಸಿದರೆ ನಮ್ಮೆಲ್ಲರ ನೆಟ್ಟು. ಸಿ. ಪಿ. ರವಿಕುಮಾರ್