ಗಾಂಧೀಜಿಯ ಸಾಬೂನು ಕಲ್ಲು

ಮೂಲ - ರೀಟಾ ರಾಯ್
ಕನ್ನಡ ಅನುವಾದ - ಸಿ ಪಿ ರವಿಕುಮಾರ್


Photography of Stones
ಸಾಬೂನಿನ ಬದಲು ಮೈ ಉಜ್ಜಿ ತೊಳೆಯಲು ಗಾಂಧೀಜಿ ಒಂದು ಕಲ್ಲನ್ನು ಬಳಸುತ್ತಿದ್ದರು. ಗಾಂಧೀಜಿಗೆ ಮೀರಾ ಬೆನ್ ಒಂದು ನುಣುಪಾದ ಕಲ್ಲು ಕೊಟ್ಟಿದ್ದರು.  ಇದನ್ನು ತಾವು ಹೋದ ಕಡೆಗೆಲ್ಲಾ ಗಾಂಧೀಜಿ ಕೊಂಡೊಯ್ಯುತ್ತಿದ್ದರು.

ನೌಖಾಲಿಯಲ್ಲಿ ಗಾಂಧೀಜಿ ಪಾದಯಾತ್ರೆ ಮಾಡಲು ಹೊರಟ ದಿನಗಳು. ನಾರಾಯಣಪುರ ಎಂಬ ಗ್ರಾಮದಲ್ಲಿ ಗಾಂಧೀಜಿ ಮತ್ತು ಜೊತೆಗಾರರು ರಾತ್ರಿ ತಂಗಿದರು.  ಗಾಂಧೀಜಿಯ ವಸ್ತುಗಳನ್ನು ಜೋಪಾನ ಮಾಡುವ ಹೊಣೆ ಹೊತ್ತಿದ್ದ ಮನು ಬೆನ್ ಅವರ ಸಾಬೂನು ಕಲ್ಲನ್ನು ಹಿಂದೆ ತಂಗಿದ ಸ್ಥಳದಲ್ಲೇ ಮರೆತುಬಂದಿದ್ದರು.

"ನೀನು ಈಗ ವಾಪಸು ಹೋಗಿ ಕಲ್ಲನ್ನು ಹುಡುಕಿ ತರಬೇಕು. ಆಗ ನೀನು ಮತ್ತೊಮ್ಮೆ ಮರೆಯುವುದಿಲ್ಲ," ಎಂದು ಗಾಂಧೀಜಿ ನುಡಿದುಬಿಟ್ಟರು.

"ನನ್ನ ಜೊತೆ ಒಬ್ಬ ಸ್ವಯಂಸೇವಕನನ್ನು ಕರೆದುಕೊಂಡು ಹೋಗಲೇ?"

"ಯಾಕೆ?"

ಪಾಪ, ಮನು ಬೆನ್! ತಾವು ಬಂದ ದಾರಿಯುದ್ದಕ್ಕೂ ಅಡಕೆ ಮತ್ತು ತೆಂಗಿನ ಮರಗಳ ದಟ್ಟವಾದ ಕಾಡುಗಳಿದ್ದದ್ದನ್ನು ನೆನೆದು ಅವರಿಗೆ ದಿಗಿಲಾಯಿತು. ಅಲ್ಲಿ ಅಪರಿಚಿತರು ದಾರಿ ಕಳೆದುಕೊಂಡರೆ! ಆಗ ದಂಗೆಗಳು ನಡೆಯುತ್ತಿದ್ದ ದಿನಗಳು ಬೇರೆ! ಅಂತೂ ಮನು ಬೆನ್ ಬೆಳಗ್ಗೆ ಒಂಬತ್ತೂವರೆಗೆ ಕಲ್ಲನ್ನು ಹುಡುಕಿಕೊಂಡು ನಾರಾಯಣಪುರದಿಂದ ಒಬ್ಬರೇ  ಹೊರಟರು.  ಬಾಯಲ್ಲಿ ರಾಮನ ಹೆಸರು ಹೇಳುತ್ತಾ ಕಾಡಿನ ರಸ್ತೆಯಲ್ಲಿ ನಡೆದು ಹೋದರು.  ತಾವು ತಂಗಿದ್ದ ನೇಕಾರನ  ಮನೆಯನ್ನು ತಲುಪಿದಾಗ ಅವನ ಹೆಂಡತಿ ಕಲ್ಲನ್ನು ಎಸೆದುಬಿಟ್ಟಳೆಂದು ಕೇಳಿ ಮನು ಕಂಗಾಲಾದರು.  ಮನೆಯ ಸುತ್ತಮುತ್ತ ಕಷ್ಟ ಪಟ್ಟು ಹುಡುಕಿದಾಗ ಕೊನೆಗೂ ಕಲ್ಲು ಸಿಕ್ಕಿತು! ಮನುವಿನ ಸಂತೋಷಕ್ಕೆ ಪಾರವೇ ಇಲ್ಲ!

ಅತ್ಯಮೂಲ್ಯ ಕಲ್ಲನ್ನು ಕೈಯಲ್ಲಿ ಹಿಡಿದುಕೊಂಡು ಆಕೆ ಮರಳಿ ಬಂದಾಗ ಮಧ್ಯಾಹ್ನವಾಗಿತ್ತು. ಕಲ್ಲನ್ನು ಗಾಂಧೀಜಿಯ ಕೈಗೆ ಹಾಕಿ ಆಕೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದರು.


"ಮನು, ನನಗೆ ಎಷ್ಟು ಸಂತೋಷವಾಗಿದೆ ಎಂಬುದನ್ನು ನೀನು ಊಹಿಸಲಾರೆ. ಈ ಕಲ್ಲು ಇಪ್ಪತ್ತೈದು ವರ್ಷಗಳಿಂದ  ನನ್ನ ಜೊತೆಯಾಗಿದೆ. ನಾನು ಮನೆಯಲ್ಲಿರಲಿ, ಜೈಲಿನಲ್ಲಿರಲಿ ಇದು ನನ್ನ ಜೊತೆ ಬಂದಿದೆ. ಇದು ಕಳೆದುಹೋಗಿದ್ದರೆ ನನಗೆ ಮತ್ತು ಮೀರಾ ಬೆನ್ ಇಬ್ಬರಿಗೂ ತುಂಬಾ ವ್ಯಸನವಾಗುತ್ತಿತ್ತು.  ನೋಡು, ಪ್ರಯೋಜನಕ್ಕೆ ಬರುವ ಪ್ರತಿಯೊಂದನ್ನೂ ಜೋಪಾನ ಮಾಡಬೇಕೆಂದು ನಿನಗೆ ಈಗ ಗೊತ್ತಾಯಿತು."

"ಬಾಪು, ಇವತ್ತು ನಾನು ರಾಮನ ಹೆಸರು ಹೇಳಿದಷ್ಟು ಶ್ರದ್ಧೆಯಿಂದ ಎಂದೂ ಹೇಳಿರಲಿಲ್ಲ!" ಎಂದರು ಮನು ಬೆನ್. 

ಬಾಪು ನಕ್ಕು "ಹೌದಲ್ಲವೇ! ಕಷ್ಟ ಬಂದಾಗಲೇ ನಾವು ದೇವರನ್ನು ನೆನೆಸುವುದು!" ಎಂದರು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)