ಪೋಸ್ಟ್‌ಗಳು

ಮೇ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧೂಳು

ಇಮೇಜ್
 ಮೂಲ: ಡೋರಿಯನ್ ಲಾ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಯಾರೋ ನೆನ್ನೆ ರಾತ್ರಿ ಆಡಿದ ಮಾತು ತಟ್ಟಿತು.  ಆಡಿದ್ದು ಒಂದೆರಡೇ ಆದರೂ ನಿಜ ಹೇಳುತ್ತಿದ್ದರು ಎಂದು ನಾನು ಗುರುತಿಸಿದೆ. ಕೂಡಲೇ ಮೇಲೆದ್ದು ಬರೆದಿಟ್ಟುಕೊಳ್ಳಬೇಕು ಎನ್ನಿಸಿತು ಆದರೆ ತುಂಬಾ ತಡವಾಗಿತ್ತು, ದಣಿವಾಗಿತ್ತು ದುಡಿದು ಇಡೀ ದಿವಸ ತೋಟದಲ್ಲಿ ಕಲ್ಲುಗಳನ್ನು ಜರುಗಿಸುತ್ತಾ. ಈಗ ನನಗೆ ನೆನಪಿರುವುದು ಅದರ ಘಮ ಮಾತ್ರ ಇಲ್ಲ, ಊಟದ ವ್ಯಂಜನದಂತಲ್ಲ,  ಘಾಟು ಅಥವಾ ಸಿಹಿಯಲ್ಲ, ಸಣ್ಣ ಪುಡಿಯಂತೆ, ಧೂಳಿನ ಹಾಗೆ. ಕೇಳಿ ನಾನೇನೂ ಉಬ್ಬಲಿಲ್ಲ ಅಥವಾ ಹೆದರಿ ಕೊಳ್ಳಲಿಲ್ಲ. ನಾನು ಸಂಪೂರ್ಣ ಎಚ್ಚೆತ್ತುಕೊಂಡು  ಗಮನವಿಟ್ಟು ಕೇಳುತ್ತಿದ್ದೆ. ಕೆಲವು ಸಲ ಹಾಗೇ. ದೇವರು ಕಪ್ಪು ರೆಕ್ಕೆಯನ್ನು ತೊಟ್ಟು, ಬೆಳಕಿನಂತೆ ಜಗಜಗಿಸುತ್ತಾ ನಿಮ್ಮ ಕಿಟಕಿಯ ಎದುರು ಬಂದು ನಿಲ್ಲುತ್ತಾನೆ. ಆದರೆ ತೆರೆಯಲು ನಿಮಗೆ ವಿಪರೀತ ದಣಿವು.

ಟೆಲಿಫೋನ್

ಇಮೇಜ್
ಮೂಲ: ಮೆಲ್ ಮೆಕ್ ಮಾಒನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ೧ ಬೆಳ್ಳಗೆ, ಬೃಹದಾಕಾರ, ಆನೆಯೊಂದು ನಿಲ್ಲಬಹುದಾದಷ್ಟು ದೊಡ್ಡ ಸಂಖ್ಯೆಗಳುಳ್ಳ ಅಪ್ಪನ ಕಡೆಯ ಫೋನ್. ಅದನ್ನು ಅವನು ಬಳಸಿದ್ದು ಅಷ್ಟಕ್ಕಷ್ಟೇ ತಾನು ಮಾತಾಡಬೇಕಾದಾಗ ಮನೆಗೇ ಹೋಗಿ ಮಾತಾಡುವುದು ಅವನ ಪದ್ಧತಿ. ಯಾರೋ ಫೋನ್ ಮಾಡಿದಾಗ ಟಿವಿ ಮೇಲೆ ಕುದುರೆ ರೇಸ್ ನೋಡುತ್ತಾ ಕುಳಿತಿರುತ್ತಿದ್ದ.  ಅಥವಾ ಹೊರಗೆ ಹೊರಡಲು ನಡೆಸುತ್ತಿದ್ದ ಸಿದ್ಧತೆ. ಫ್ರಾನ್ಸ್ ನಲ್ಲಿ ಒಂದು ಸಂಜೆ  ಇದೇ ಫೋನ್ ಬಳಸಿ ಒಮ್ಮೆಲೇ ಕರೆ ಮಾಡಿದ ಸಾಯುವ ಮೂರು ದಿವಸಗಳ ಮುನ್ನ. ನಾನು ಬೇಸಗೆ ರಜಕ್ಕೆ ಬಂದಾಗ ಎಲ್ಲೆಲ್ಲಿ ಹೋಗಬಹುದು ಎಂದೆಲ್ಲಾ ಮಾತಾಡಿದ, ಮುಚ್ಚಿಡಲಾಗದೆ ಉತ್ಸಾಹವನ್ನ. ಈಗ ಅದೇ ಫೋನಿನ ರಿಸೀವರ್ ಹಿಡಿದು ಕೇಳಿಸಿಕೊಂಡಾಗ: ಸ್ಮಶಾನ ಮೌನ. ಅವನು ಕೇಳಿಸಿಕೊಳ್ಳುತ್ತಿರಬಹುದೆಂಬ ಕಲ್ಪನಾಯಾನ.  ನಾನು ಕಲ್ಪಿಸಿಕೊಳ್ಳುತ್ತೇನೆ ಸಂಖ್ಯೆಗಳ ಸರಣಿ. ನೀವು ಕರೆ ಮಾಡಿದ ವ್ಯಕ್ತಿ ವ್ಯಾಪ್ತಿಯ ಹೊರಗಿದ್ದಾರೆ ಎನ್ನುತ್ತದೆ ಅಶರೀರವಾಣಿ. ೨ ಎರಡು ನಿಮಿಷಕ್ಕಿಂತಲೂ ಹೆಚ್ಚು ಮಾತಾಡುವುದಿದ್ದರೆ  ಪತ್ರ ಬರೆಯುವುದೇ ಸರಿ ಎಂದು ಸಿಡಿಮಿಡಿಗೊಳ್ಳುತ್ತಿದ್ದ. ನಾವು ಹದಿಹರೆಯದಲ್ಲಿದ್ದಾಗ ಅವನ ಸಿಡಿಮಿಡಿಗೆ ಹೆದರಿ ಜಗಳವೇತಕ್ಕೆ ವ್ಯರ್ಥ ಎಂದು ನಮ್ಮ ಫೋನ್ ಕರೆಗಳು  ಎಷ್ಟು ಬೇಕೋ ಅಷ್ಟು, ಸಂಕ್ಷಿಪ್ತ. ಈಗ ಅವನೊಂದಿಗೆ ಮಾತಾಡಬೇಕೆಂಬ ಹಂಬಲವಾದಾಗ ಟೆಲಿಪೋನ್ ಕಡೆಗೆ ದಿಟ್ಟಿಸಿ ನೋಡಿ  ಬ...

ಕಾಡುಜೀವಿಗಳ ಶಾಂತಿ

ಇಮೇಜ್
  ಮೂಲ: ವೆಂಡೆಲ್ ಬೆರಿ  ಕನ್ನಡ ಅನುವಾದ: ಸಿ ಪಿ ರವಿಕುಮಾರ್  ಜಗತ್ತಿಗಾಗಿ ಹತಾಶೆ ಬೆಳೆಬೆಳೆದು ಆಕ್ರಮಿಸಿಕೊಂಡಾಗ ಮನವನ್ನು ಏನಾದೀತೋ ನನ್ನ ಬದುಕು, ಮಕ್ಕಳ ಬದುಕೆಂಬ ಭಯಕ್ಕೆ ಇರುಳಿನಲ್ಲಿ ಸಣ್ಣ ಸದ್ದಿಗೂ ಎಚ್ಚರವಾದಾಗ ನಾನು ಮೇಲೆದ್ದು ಹೋಗಿ ಅಡ್ಡಾಗುತ್ತೇನೆ  ಕಾಡು ಬಾತುಕೋಳಿ ತನ್ನ ಚೆಲುವನ್ನು ಹೊದ್ದು ಮಲಗಿರುತ್ತದಲ್ಲ ನೀರಿನಲ್ಲಿ ಮತ್ತು  ಕೊಕ್ಕರೆ ಮೀನು ಹಿಡಿಯುತ್ತದಲ್ಲ, ಅಲ್ಲಿ. ಅಲ್ಲಿ ನಾನು ಅನುಭವಿಸುತ್ತೇನೆ ಕಾಡುಜೀವಿಗಳ ಶಾಂತಿ. ಮುಂಬರುವ ಶೋಕವನ್ನು ನೆನೆದು  ತಳಮಳಗೊಳ್ಳದ ಅವುಗಳ ಸ್ಥಿತಿ. ಸ್ತಬ್ಧ ನೀರಿನ ಉಪಸ್ಥಿತಿಯಲ್ಲಿ ಅರಿವಾಗುತ್ತದೆ ಹಗಲುಗುರುಡು ನಕ್ಷತ್ರಗಳು ಬೆಳಕು ಹಿಡಿದು ಕಾಯುತ್ತಿರುವುದು. ಒಂದಿಷ್ಟು ಹೊತ್ತು  ಜಗತ್ತಿನ ಕೃಪೆಯಲ್ಲಿ ವಿಶ್ರಮಿಸಿದಾಗ ನನಗೆ ದೊರೆಯುತ್ತದೆ ಮುಕ್ತಿ. (ಮುಂದಿನ ಕ್ಷಣವೇ  ಹುಲಿ ಸಿಂಹ ತೋಳ ನರಿ ಮುಂತಾದ ಯಾವುದೋ ಪ್ರಾಣಿ ತನ್ನನ್ನು ಕೊಂದು ತಿನ್ನಬಹುದೆಂಬ ಅರಿವಿದ್ದರೂ ಶಾಂತಿಯಿಂದ ಬದುಕುವ ಜಿಂಕೆ ಮುಂತಾದ ಪ್ರಾಣಿಗಳಿಗೆ ಯಾವ ಆತಂಕವೂ ಇಲ್ಲ. ಅದನ್ನೇ ಕವಿ ಕಾಡು ಜೀವಿಗಳ ಶಾಂತಿ ಎನ್ನುತ್ತಾನೆ.)

ಭರವಸೆ

ಇಮೇಜ್
 ಮೂಲ: ರೋಸ್ ಮೆರಿ ವಾಹ್ತೋಲಾ ಟ್ರಾಮರ್ ಅನುವಾದ: ಸಿ ಪಿ ರವಿಕುಮಾರ್  ಭರವಸೆಯ ಕಿಸೆಗಳಲ್ಲಿವೆ ಸಣ್ಣ ರಂಧ್ರಗಳು ಕೆಳಗೆ ಉದುರುವ  ತುಣುಕುಗಳು ಮೂಡಿಸುತ್ತವೆ ನಮಗೆ ಆತಂಕವಾದಾಗ ಅನುಸರಿಸಲು ದಾರಿ. ಭರವಸೆಯ ಗುಟ್ಟು ಏನೆಂದರೆ ಅದಕ್ಕೆ ಗೊತ್ತೇ ಇಲ್ಲ ಯಾವುದು ಗುರಿ. ಅದಕ್ಕೆ ಗೊತ್ತಿರುವುದು ಇಷ್ಟೇ, ಪ್ರತಿಯೊಂದು ದಾರಿಯ ಪ್ರಾರಂಭವೂ ಒಂದು ಹೆಜ್ಜೆಯ ಮುಂದೆ  ಇನ್ನೊಂದನ್ನು ಇಟ್ಟಾಗ ಎಂದಷ್ಟೇ.

ಹೂರಣದ ಹೋಳಿಗೆ

ಇಮೇಜ್
  ಮೂಲ: ಪಾದ್ರಾಗ್ ಡ್ಯಾಲಿ ಭಾವಾನುವಾದ: ಸಿ ಪಿ ರವಿಕುಮಾರ್ ನಾವು ಏಳುವ ಮುನ್ನವೇ ನೀನು  ಕೆಳಗೆ ತಯಾರಿ ನಡೆಸುತ್ತಿದ್ದದ್ದು ಕೇಳಿಸುತ್ತಿತ್ತು. ಇಡೀ ಬೆಳಗ್ಗೆ  ನಾವು ನೋಡಿದೆವು ನೀನು ಕಣಕ ನಾದುವುದನ್ನು  ಅದರೊಂದಿಗೆ ಪಿಸುಗುಟ್ಟುತ್ತಾ ಮಾತಾಡುವುದನ್ನು. ನಾವು ಕೆಳಗೆ ಇಳಿದು ಬಂದಾಗ ಎಲ್ಲಿ  ನಿನ್ನ ಏಕಾಗ್ರತೆಗೆ ಭಂಗವಾದೀತೋ ಎಂದು ಮೆಲ್ಲನೆ ನಡೆದು ಬಂದೆವು. ನಂತರ ನೀನು ಹೂರಣ ತುಂಬಿದ ಉಂಡೆಗಳನ್ನು ಲಟ್ಟಿಸುವುದು ಕಂಡಿತು ಕಪ್ಪು ಕಲ್ಲಿನ ಮೇಲೆ ತೆಳ್ಳಗೆ. ಅಂಚು ಬರಬಾರದು,  ತೆಳ್ಳಗೆ ಇರಬೇಕು ಹರಿಯಬಾರದು, ನಾಜೂಕು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಸಿದ್ಧವಾಯಿತು. ತುಪ್ಪ, ಹಾಲು, ಸೀಕರಣೆ ಇತ್ಯಾದಿ ಮೊದಲೇ ತಯಾರಾಗಿ ಕಾದಿದ್ದವು. ನಿನ್ನ ಹೊಳೆಯುವ ಕಣ್ಣುಗಳ  ಬೆಳಕಿನಲ್ಲಿ ನಾವು ಮೌನವಾಗಿ ತಿನ್ನುತ್ತಾ ಕುಳಿತೆವು ಎಲ್ಲೋ ಮಣ್ಣಿನಲ್ಲಿ ನೀರು ತೊಟ್ಟಿಕ್ಕುತ್ತಿರುವಾಗ.

ಕೆಲವರಿಗೆ ಇಷ್ಟ ಕವಿತೆ

ಇಮೇಜ್
ಮೂಲ: ವಿಸ್ಲವಾ ಸಿಂಬೋರ್ಸ್ಕಾ ಅನುವಾದ: ಸಿ ಪಿ ರವಿಕುಮಾರ್  ಕೆಲವರಿಗೆ - ಅರ್ಥಾತ್ ಎಲ್ಲರಿಗೂ ಅಲ್ಲ,  ಬಹುಜನರಿಗೂ ಅಲ್ಲ, ಅಲ್ಪ ಸಂಖ್ಯಾತರು. ಶಾಲಾ ಮಕ್ಕಳನ್ನು ಹೊರತು ಪಡಿಸಿ ಏಕೆಂದರೆ ಅವರಿಗೆ ಅದು ಕಡ್ಡಾಯ ಕವಿಗಳನ್ನು ಎಣಿಸಬೇಡಿ, ಹೆಚ್ಚೆಂದರೆ ಸಾವಿರದಲ್ಲಿ ಇಬ್ಬರು. ಇಷ್ಟ - ಇಷ್ಟವೆಂದರೆ ಹೆಚ್ಚೇನೂ ಹೇಳಿದಂತಲ್ಲ ಇಷ್ಟವಾಗುತ್ತದೆ ದಾಳಿಂಬೆ ಹಾಕಿದ ಮೊಸರನ್ನ ಇಷ್ಟವಾಗುವುದು ಹೊಗಳಿಕೆ ಮತ್ತು ನೀಲಿ ಬಣ್ಣ ಇಷ್ಟವಾಗುತ್ತದೆ ಹಳೆಯ ಕಾಲದ ಆಭರಣ ಇಷ್ಟ ಪಡುತ್ತೇವೆ ಮೇಲುಗೈ ಪಡೆದ ಕ್ಷಣ ಮತ್ತು ನಾಯಿಯ ತಲೆಯನ್ನು ನೇವರಿಸುವುದನ್ನ. ಕವಿತೆ - ಆದರೆ ಕವಿತೆ ಎಂದರೆ ಏನು? ಈ ಪ್ರಶ್ನೆಗೆ ಸಿಕ್ಕಿವೆ ಅನೇಕ ಅರೆಬೆಂದ ಉತ್ತರಗಳು ನನಗೂ ಗೊತ್ತಿಲ್ಲ ಸರಿಯಾಗಿ ಗೊತ್ತಿಲ್ಲ ಆದರೂ ಹಿಡಿದುಕೊಂಡಿದ್ದೇನೆ ಹಿಡಿದುಕೊಳ್ಳುವರಲ್ಲ ಮುಗ್ಗರಿಸದ ಹಾಗೆ ಕೈಪಿಡಿಯನ್ನು ಆಸರೆಯಾಗಿ, ಹಾಗೆ.

ಇಷ್ಟರ ನಡುವೆ

ಇಮೇಜ್
 ಇಷ್ಟರ ನಡುವೆ ಮೂಲ: ಟಾಮ್ ಹಿರಾನ್ಸ್ ಇಷ್ಟರ ನಡುವೆ ಅರಳುತ್ತವೆ ಹೂ ಯಥಾಪ್ರಕಾರ ಚಂದ್ರೋದಯ ಸೂರ್ಯೋದಯಕ್ಕಿಲ್ಲ ಸಂಚಕಾರ ಮಕ್ಕಳು ಮುಗುಳ್ನಗುತ್ತವೆ ದೊಡ್ಡದಾಗಿ ನಿಷ್ಕಾರಣ ಮತ್ತು ಅಸಂಭವ ದಾಟಿ ಎರಡು ಹೃದಯಗಳ ಮಿಲನ ಅಪರಿಚಿತರು ಹಂಚಿಕೊಳ್ಳುತ್ತಾರೆ ಕಡ್ಡಿಪೆಟ್ಟಿಗೆ, ನಗೆ  ನೀರಿನ ಮೇಲೆ ಆಡುತ್ತವೆ ಬೆಳಕಿನ ಕೋಲುಗಳು ಮೆಲ್ಲಗೆ ಅನಿರೀಕ್ಷಿತ ಬೀದಿಗಳಲ್ಲಿ ಅರಳುತ್ತದೆ ಔದಾರ್ಯ  ನೆರೆ, ಭೂಕಂಪನಗಳ ನಡುವೆ  ಪುನರ್ವಸತಿ ಕಾರ್ಯ ಬದುಕಿನ ಕಡೆಗೆ ವಾಲುತ್ತದೆ ಜೀವನ ಎಲ್ಲವನ್ನೂ ಸಾವು ತೆಗೆದುಕೊಂಡರೂ ಆಫೋಷನ ನಡುವೆ ಇದ್ದವು ಎಷ್ಟೊಂದು ಅಮೂಲ್ಯ ಕ್ಷಣ ಎಲ್ಲವೂ ಪ್ರಕಾಶಮಾನವಾಗಿ ಜಗಮಗ ನಾವು ಮತ್ತೊಮ್ಮೆ  ನಮ್ಮ ಈ ಜಗ ವನ್ನು ಪ್ರೀತಿಸುವಂತೆ ಇತ್ತು ಜೀವನ.

ಆಲೋಚನೆಗಳು

ಇಮೇಜ್
 ಆಲೋಚನೆಗಳು ಮೂಲ ಕವಿತೆ: ಹೆನ್ರಿ ವಾನ್ ಡೈಕ್  ಅನುವಾದ: ಸಿ ಪಿ ರವಿಕುಮಾರ್ ನಮ್ಮ  ಆಲೋಚನೆಗಳಿಗಿದೆ ಶರೀರ, ರೆಕ್ಕೆ ಮತ್ತು ಶ್ವಾಸ ಅವು ವಸ್ತುಗಳೇ ಎಂಬುದು ನನ್ನ ವಿಶ್ವಾಸ ಕಳಿಸಿದಾಗ ಆಲೋಚನೆಗಳನ್ನು ಜಗತ್ತಿಗೆ ನಾವು ಪರಿಣಾಮಗಳು ಎರಡು: ನಲಿವು ಇಲ್ಲವೆ ನೋವು. ನಮ್ಮ ಮನದಾಳದಲ್ಲಿ ಹುಟ್ಟಿದ ರಹಸ್ಯ ಆಲೋಚನೆ ಹೋಗಿ ಮುಟ್ಟುವುದು ಜಗತ್ತಿನ ದೂರದ ಕೊನೆ ಹೋದ ಕಡೆಗೆಲ್ಲಾ ಅದರ ಹೆಜ್ಜೆ ಗುರುತಿನ ಹಾಗೆ ಶುಭೇಚ್ಛೆಯ ವೃಷ್ಟಿ  ಅಥವಾ ಶಾಪದ ಸುಡುಬೇಗೆ. ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತೇವೆ ಅರಿವಿಲ್ಲದೆ ಇಡುತ್ತಾ ಒಂದೊಂದೇ ಆಲೋಚನೆಯ ಇಟ್ಟಿಗೆ ವಿಶ್ವದ ನಿರ್ಮಾಣವಾಗಿದ್ದೂ  ಹೀಗೇ  ವಿಧಿ ಎಂಬುದು ಇನ್ನೊಂದು ಹೆಸರು ಆಲೋಚನೆಗೆ. ನಿನ್ನ ಭವಿಷ್ಯವನ್ನು ಆಯ್ದುಕೋ. ಅನಂತರ ನಿರೀಕ್ಷಿಸುವುದಷ್ಟೇ ಕೆಲಸ. ಪ್ರೇಮ ಕರೆತರುವುದು ಪ್ರೇಮ, ಕರೆತರುವುದು ದ್ವೇಷವನ್ನು ದ್ವೇಷ