ಬೆಂಕಿ ಮತ್ತು ಪತಂಗ

 

ಅದು ಯಾರ ತಪ್ಪೂ ಆಗಿರಲಿಲ್ಲ
ಅದು ಎಲ್ಲರ ತಪ್ಪೂ ಆಗಿತ್ತು.

ಕ್ಯಾಮೆರಾ ಇದೆಯೆಂದು ಸೆಲ್ಫೀ ತೆಗೆಯುವ ಖಯಾಲಿ
ಜಲಪಾತದ ಎದುರು ಮೊಬೈಲ್ ಫೋನ್ ಹಿಡಿದು ನಿಂತವಳು
ತನ್ನನ್ನೇ ನೋಡುತ್ತಾ ನೋಡುತ್ತಾ ಹಿಂಜರಿದು ಜಲಸಮಾಧಿಯಾದಳು.

ಅಪ್ಪನ ಕಾರ್ ಕೀ ಸಿಕ್ಕ ಸಂಭ್ರಮದಲ್ಲಿ ಹುಡುಗ ಹೊರಟ 
ಸ್ನೇಹಿತರ ಜೊತೆಗೆ ಗಾಳಿಯೊಂದಿಗೆ ಮಾತಾಡುತ್ತಾ
ಗಾಳಿಯೇ ನಾನು ಚಲಿಸಬಲ್ಲೆ ನಿನಗಿಂತ ವೇಗವಾಗಿ
ಎನ್ನುತ್ತಾ ಸಾಗಿ
ಯಾವುದೋ ಕ್ಷಣದಲ್ಲಿ ಹಾರಿದ
ವಾಯುವಿನಲ್ಲೇ ವಿಲೀನವಾಗಿ.

ಹೀರೋ ಎಂದರೆ ಹೀಗಿರಬೇಕು.
ಗಾಡಿಯನ್ನು ಹತ್ತಿಸಬೇಕು ಮೆಟ್ಟಿಲುಗಳ ಮೇಲೆ
ಮೇಲಿಂದ ಹಾರಿ ಸ್ಲೋ ಮೋಷನ್ನಲ್ಲಿ
ವಿಲನ್ ಎದೆಗೆ ಒದೆಯಬೇಕು.

ಅಪ್ಪಾ ಹೇಳಬೇಡ ಹಳ್ಳಿಯನ್ನು ಉದ್ಧಾರ ಮಾಡಿದ
ಬಂಗಾರದ ಮನುಷ್ಯನ ಕತೆ.
ಅವೆಲ್ಲ ಬರೀ ಸುಳ್ಳು.

ಯಾರಿಂದಲೂ ಸಾಧ್ಯವಿಲ್ಲ ಹಳ್ಳಿಯನ್ನು 
ಉದ್ಧಾರ ಮಾಡುವುದು.
ಅಮ್ಮಾ ಹೇಳಬೇಡ ಉಪವಾಸ ಮಾಡಿ
ಸರಕಾರವನ್ನು ಬಗ್ಗಿಸಿದ ಮಹಾತ್ಮನ ಕತೆ.
ಅದೆಲ್ಲಾ ಯಾರೋ ಕಟ್ಟಿದ ಫೇಕ್ ನ್ಯೂಸ್.

ನೂರಾರು ವರ್ಷ ಬೇಕಾಯಿತಾ 
ಸ್ವಾತಂತ್ರ್ಯ ಸಂಗ್ರಾಮಕ್ಕೆ!
ಮೈ ಗಾಡ್ ಎಷ್ಟು ಬೋರಿಂಗ್.
ಏನು ಪ್ರಯೋಜನ ಹಾಗೆ ಬದುಕಿ!
ಫಾಸ್ಟ್ ಫಾರ್ವರ್ಡ್ ಮಾಡಬೇಕು.
ಫಾಸ್ಟ್ ಮಾಡುತ್ತಾ ಕೂಡುವುದು ಬ್ಯಾಕ್ವರ್ಡ್ ಥಿಂಕಿಂಗ್.
ನುಗ್ಗಬೇಕು. ಕಸಿದುಕೊಳ್ಳಬೇಕು.

ಬೆಂಕಿಯ ಹತ್ತಿರ ಹೋಗುತ್ತಿತ್ತು ಪತಂಗ.
ಬೆಂಕಿಯ ತಪ್ಪೂ ಆಗಿರಲಿಲ್ಲ.
ಸುಡುವ ಗುಣವನ್ನು ಕೊಟ್ಟದ್ದು ಪ್ರಕೃತಿ.
ಪತಂಗದ ತಪ್ಪೆಂದೂ ಹೇಳಲಾಗದು.
ಬೆಂಕಿಯ ಆಕರ್ಷಣೆ ಅದಕ್ಕೆ ಸಹಜ.
ಯಾರ ತಪ್ಪೆಂದು ಹೇಳೋಣ?
ನಡೆಯಿರಿ, ಪೋಲ್ ಮಾಡಿ ಕೇಳೋಣ.

ಸಿ ಪಿ ರವಿಕುಮಾರ್
ಜೂನ್ ೮, ೨೦೨೫

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ