ಅಮ್ಮಾ ನಾನು ಬಚಾವಾದೆ

ಕವಿತೆ ಓದುವ ಮುನ್ನ: ಈ ಕವಿತೆಯನ್ನು ಬರೆದ ಜೆಹ್ರಾ ನಿಗಾಹ್ ಪಾಕೀಸ್ತಾನದ ಖ್ಯಾತ ಕವಯಿತ್ರಿ.  ಉರ್ದೂ ಕಾವ್ಯ ಪರಂಪರೆಯಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಕವಯಿತ್ರಿಯರ ಸಾಲಿನಲ್ಲಿ ಇವರದ್ದು ಮುಂಚೂಣಿಯ ಸ್ಥಾನ.  ಭಾರತದ ಹೈದರಾಬಾದಿನಲ್ಲಿ ಹುಟ್ಟಿದ ಜೆಹ್ರಾ ೧೯೪೭ರ ವಿಭಜನೆಯಾದಾಗ ಪಾಕೀಸ್ತಾನಕ್ಕೆ ವಲಸೆ ಹೋಗಬೇಕಾಯಿತು. ಪ್ರಸ್ತುತ ಕವಿತೆಯಲ್ಲಿ ಒಂದು ಹೆಣ್ಣು ಭ್ರೂಣವು ತಾಯಿಯೊಂದಿಗೆ ಮಾತನಾಡುತ್ತಾ "ನಾನು ಹುಟ್ಟದೇ ಇದ್ದದ್ದೇ ಒಳ್ಳೆಯದಾಯಿತು, ಬಚಾವಾದೆ" ಎಂದು ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರಗಳತ್ತ ಗಮನ ಸೆಳೆಯುತ್ತದೆ.












ಮೂಲ ಉರ್ದೂ ಕವಯಿತ್ರಿ: ಜೆಹ್ರಾ ನಿಗಾಹ್ (ಪಾಕೀಸ್ತಾನ್) 
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ 


ನಾನು ಬಚಾವಾದೆನಮ್ಮ, ಅಮ್ಮಾ ನಾನು ಬಚಾವಾದೆ 

ನಿನ್ನ ನೆತ್ತರ ಗೋರಂಟಿಯಲ್ಲಿ ಮಿಂದು 
ಕೆಂಪಾಗಿದೆ ನನ್ನ ಕಣವು  ಪ್ರತಿಯೊಂದೂ 

ನನಗೆ ದೊರಕಿದ್ದರೂ ಒಂದು ರೂಪ-ಆಕಾರ 
ರಕ್ತ ಹರಿಯುತ್ತಿತ್ತು ನರಮಾಂಸಗಳ ಗೂಡಿಗೆ  
ಹೊಕ್ಕಿದ್ದರೆ ನನ್ನ ಕಣ್ಣುಗಳಲ್ಲಿ ಬೆಳಕು 
ಶೃಂಗಾರಕ್ಕೆ ದೊರಕುತ್ತಿತ್ತು ಆಸಿಡ್ ಕಾಡಿಗೆ

ಮಾರಿಬಿಡುತ್ತಿದ್ದರು ನನ್ನನ್ನು ಸಟ್ಟಾ ಬಜಾರಿನಲ್ಲಿ ಎಕ್ಸ್ಚೇಂಜ್ ಆಫರಿಗೆ 
ಅಥವಾ ಉಪಯುಕ್ತಳಾಗುತ್ತಿದ್ದೆನೇನೋ  ಮರ್ಯಾದಾ ಹತ್ಯೆಗೆ 
ನನ್ನ ಎಲ್ಲಾ ಕನಸುಗಳೂ ಅಪೂರ್ಣವಾಗೇ ಉಳಿದು 
ಖಂಡಿತಾ ತಗ್ಗುತ್ತಿತ್ತು ಅಪ್ಪನ ಸ್ಥಾನ ಮರ್ಯಾದೆ 

ತಲೆ ಮೇಲೆ ಹೊದ್ದ ಸೆರಗು ನಸುವೇ ಜಾರಿದರೂ 
ಕೆಳಗೆ ಉರುಳುತ್ತಿತ್ತು ಅಣ್ಣನ ಹೆಮ್ಮೆಯ ರುಮಾಲು  
ನಿನ್ನ ಜೋಗುಳದ ಹಾಡು ಕೇಳುವ ಮುನ್ನವೇ 
ಜಾರಿಹೋದೆನಮ್ಮಾ ನಾನು ಅನಂತ ನಿದ್ರೆಗೆ 

ಕಾಣದ ದೇಶದಿಂದ ಬಂದೆನಮ್ಮಾ ನಾನು 
ಕಾಣದ ಊರಿನಲ್ಲಿ ಕಳೆದುಹೋದೆ 
ಬಚಾವಾದೆನಮ್ಮಾ ನಾನು 
ಅಮ್ಮಾ ನಾನು ಬಚಾವಾದೆ 

ನಿನ್ನ ನೆತ್ತರ ಗೋರಂಟಿಯಲ್ಲಿ ಮಿಂದು 
ಕೆಂಪಾಗಿದೆ ನನ್ನ ಕಣವು  ಪ್ರತಿಯೊಂದೂ 
ಬಚಾವಾದೆನಮ್ಮಾ ನಾನು 
ಅಮ್ಮಾ ನಾನು ಬಚಾವಾದೆ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)