ಬ್ಯಾಟ್ ಮಾಡಿದ ರಾಯ

ಬ್ಯಾಟ್ ಮಾಡಿದ ರಾಯ : ಒಂದು ಹರಟೆ  


ಸಿ. ಪಿ. ರವಿಕುಮಾರ್ 


ಬ್ಯಾಟರಾಯನಪುರ ಎಂಬ ಸ್ಥಳ ಬೆಂಗಳೂರಿನಲ್ಲಿದೆ.  ಈ ಹೆಸರನ್ನು ಕೇಳಿದಾಗಲೆಲ್ಲಾ ಅದರ ಬಗ್ಗೆ ನನಗೆ ಕುತೂಹಲ ಉಂಟಾಗುತ್ತದೆ. ಜಯನಗರ, ವಿಜಯನಗರ ಇವೆಲ್ಲಾ ಸರಳವಾದ ಹೆಸರುಗಳು, ಬಿಡಿ!   ಇತಿಹಾಸ ಬಲ್ಲವರಿಗೆ ರಾಜಾಜಿನಗರ, ಇಂದಿರಾನಗರ ಮೊದಲಾದವನ್ನು ಅರ್ಥ ಮಾಡಿಕೊಳ್ಳುವುದೂ ಅಷ್ಟು ಕಷ್ಟವಲ್ಲ.  ಇಷ್ಟಾದರೂ ಕೆಲವರು ಇಂದಿರಾನಗರಕ್ಕೆ ಇಂದ್ರಾನಗರ ಎಂದು ಕರೆಯುವುದನ್ನು ನೋದಿದ್ದೇನೆ. ಸಾಕ್ಷಾತ್ ದೇವೇಂದ್ರನೇ ಇರಲು ಲಾಯಕ್ಕಾದ ಬಂಗಲೆಗಳು ಅಲ್ಲಿರುವುದರಿಂದ ಅವರಿಗೆ ಹೀಗೆ ಅನ್ನಿಸಿರಬಹುದು. ಇರಲಿ! ಈಗ ನಮಗೆ ಮುಖ್ಯವಾದದ್ದು ಬ್ಯಾಟರಾಯನಪುರವೇ ಹೊರತು ಇಂದಿರಾನಗರವಲ್ಲ. ಈ ಬ್ಯಾಟರಾಯನಪುರ ಎಂಬ ಸ್ಥಳಪುರಾಣವನ್ನು ಯಾರೂ ಬರೆದಂತೆ ಕಾಣೆ.  ನಾನು ಮತ್ತು ನನ್ನ ಮಿತ್ರ ವಿಶ್ವ ಇದನ್ನು ಕುರಿತು ಮಾತಾಡಿಕೊಳ್ಳುತ್ತಾ ಬಸ್ ಸ್ಟಾಪಿನಲ್ಲಿ ಕುಳಿತಿದ್ದೆವು. ಗರಂ ಕಡಲೇಕಾಯಿ ತಿನ್ನುತ್ತಾ ನಮ್ಮ ಚರ್ಚೆಗೆ ರಂಗೇರಿತ್ತು.

"ಈ ಜಾಗವನ್ನು ಸ್ಥಾಪಿಸಿದ ರಾಜನು ಬ್ಯಾಟ್ ಹಿಡಿದು ಆಡುತ್ತಿದ್ದನೇನೋ," ನಾನು ನನ್ನ ಥಿಯರಿಯನ್ನು ಬಿಚ್ಚಿಟ್ಟೆ. "ಸಾಮಾನ್ಯವಾಗಿ ಗದೆ ಮತ್ತು ಖಡ್ಗಗಳನ್ನು ಕೈಯಲ್ಲಿ ಹಿಡಿದು ಪ್ರತ್ಯಕ್ಷರಾಗುವ ರಾಜಮಹಾರಾಜರು ಕೈಯಲ್ಲಿ ಬ್ಯಾಟ್ ಹಿಡಿದ ಕಾರಣ ಅವರಿಗೆ ಬ್ಯಾಟರಾಯ ಎಂದು ಹೆಸರು ಬಂದಿರಬಹುದು."

ತಮ್ಮ ಮೊಬೈಲನ್ನು ಚಾರ್ಜ್ ಮಾಡುವುದರಲ್ಲೇ ತನ್ನ  ಜೀವನದ ಅರ್ಧ ಆಯುಷ್ಯ ಕಳೆಯುವ ವಿಶ್ವನಿಗೆ  ಇದು ಯಾಕೋ ಒಪ್ಪಿಗೆಯಾಗಲಿಲ್ಲ. "ಅದು ಅಷ್ಟು ಸರಿ ಅನ್ನಿಸುವುದಿಲ್ಲ!  ಬ್ಯಾಟರಿಗೂ  ಬ್ಯಾಟರಾಯನಪುರಕ್ಕೂ ಏನೋ ಸಂಬಂಧವಿರಬಹುದಾ?" ಎಂದ.

ಕೈಯಲ್ಲಿ ಬ್ಯಾಟರಿ ಹಿಡಿದು ಚಾರ್ಜ್ ಮಾಡಲು ಹೊರಟ  ರಾಜನ ಚಿತ್ರವನ್ನು ಕಲ್ಪಿಸಿಕೊಂಡು ನನಗೆ ದಿಗ್ಭ್ರಮೆಯಾಯಿತು. ಎಲಾ! ನಾವೆಷ್ಟು ಮುಂದುವರೆದಿದ್ದೆವಲ್ಲ! ಸೆಲ್ಲು-ಬ್ಯಾಟರಿಗಳೆಲ್ಲ ನಮಗೆ ಎಡಗೈ ಆಟವಾಗಿತ್ತು. ಅಮೆರಿಕಾದವರು ಈಗ ಎಚ್ಚೆತ್ತಿಕೊಳ್ಳುತ್ತಿದ್ದಾರೆ, ಅಷ್ಟೆ.

ನಾನು ಮತ್ತು ನನ್ನ ಮಿತ್ರರು ಹೀಗೆ ಹರಟೆ ಹೊಡೆಯುತ್ತಿರುವಾಗ ಅಲ್ಲಿ ನಮ್ಮ ಕನ್ನಡ ಮೇಷ್ಟ್ರು ರಾಜು ಎದುರಾದರು. ಅವರಿಗೆ ನಮ್ಮ ಹೊಸ ಐಡಿಯಾಗಳನ್ನು ನಾವು ಉತ್ಸಾಹದಿಂದ ವಿವರಿಸಿದೆವು. ರಾಜು ಮೇಷ್ಟ್ರು ನಮ್ಮ ಕಡೆ ಕನಿಕರದಿಂದ ನೋಡಿ, "ಅಯ್ಯೋ ಹಾಗಲ್ಲ!" ಎಂದರು.

ಇವರಿಗೆ ನಮ್ಮ ಉತ್ಸಾಹದ ಮೇಲೆ ತಣ್ಣೀರು ಎರಚಲು ಅದೇಕಿಷ್ಟು ಸಂತೋಷವೋ!

"ಯಾಕೆ ಸಾರ್?" ಎಂದೆವು.

"ನೋಡಿ, ಬ್ಯಾಟೆ ಅನ್ನುವ ಪದ ಬೇಟೆ ಎಂಬ ಪದದಿಂದ ಬಂದಿದೆ."

"ಓಹೋ! ನಮ್ಮ ರಾಜ ಬ್ಯಾಟ್ ಹಿಡಿದೇ ಬೇಟೆ ಮಾಡಿರಬಹುದು!"

"ಅದೇನೋ ನನಗೆ ತಿಳಿಯದು. ಬೇಟೆ ಆಡುವ ರಾಜ ಅಂದರೆ ಅಂತಿಂಥ ರಾಜನಲ್ಲ. ಅದು ಯಮರಾಜನಿಗೆ ಇರುವ ಹೆಸರು! ಜೀವಗಳನ್ನು ಬೇಟೆಯಾಡುವ ಯಮಧರ್ಮ!"

"ಅಯ್ಯೋ!"

"ಹಹ್ಹ!" ಎಂದು ರಾಜು ನಕ್ಕರು.

ನಾವು ಬ್ಯಾಟರಾಯನಪುರದ ವಿರುದ್ಧದಿಕ್ಕಿನ ಬಸ್ ಹಿಡಿದು ಹೊರಟೆವು.

ಕಾಮೆಂಟ್‌ಗಳು

  1. ಬ್ಲಾಗ್ ಓದಿದಾಗಿನಿಂದ ಬ್ಯಾಟರಾಯನಪುರ ಬಸ್ಟಾಪ್ ಕಂಡ ತಕ್ಷಣ ಬ್ಯಾಟರಿ ಚಾರ್ಜ ಮಾಡಲು ಹೊರಟಿರುವ ರಾಜನ ಚಿತ್ರ ನೆನಪಾಗಿಬಿಡುತ್ತೆ ..ನಕ್ಕು ಸುಮ್ಮನಾದೆ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)