ಮುಳುಗುತ್ತಿದೆ ವ್ರಜ ...

ಮುಳುಗುತ್ತಿದೆ ವ್ರಜ ... 

ಮೂಲ : ಸೂರದಾಸ್ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 

ಇದು ಸೂರದಾಸರು ಬರೆದ ಒಂದು ಗೀತೆಯ ಅನುವಾದ. ಇದನ್ನು ಲತಾ ಮಂಗೇಶ್ಕರ್ ಅವರ ಸುಮಧುರ ಕಂಠದಲ್ಲಿ ನೀವು ಇಲ್ಲಿ  ಕೇಳಬಹುದು.  ಕೃಷ್ಣನು ಮಥುರಾ-ಬೃಂದಾವನಗಳನ್ನು ತೊರೆದು ದ್ವಾರಕೆಗೆ ತೆರಳಿದಾಗ ದುಃಖ ತಡೆಯಲಾರದೇ ಅತ್ತ ಜೀವವೊಂದರ ಅಳಲು ಈ ಗೀತೆಯಲ್ಲಿದೆ.  ತನ್ನ ಕಣ್ಣುಗಳಿಂದ ಸದಾ ಕಾಲ ಹರಿಯುವ ಕಂಬನಿಧಾರೆಯನ್ನು ತಡೆಯುವುದು ಈ ದುಃಖಿಗೆ ಸಾಧ್ಯವಾಗುತ್ತಿಲ್ಲ. ಕಣ್ಣೀರು ಕಾಡಿಗೆಯನ್ನು ಕೆಡಿಸುತ್ತಿದೆ. ಒರೆಸಿಕೊಂಡಾಗ ಮುಖ-ಕೈಗಳೆಲ್ಲ ಕಪ್ಪಾಗುತ್ತಿವೆ. ಸೆರಗಿನ ತುದಿ ಒಣಗುವುದೇ ಇಲ್ಲ.  ಸುರಿದ ಕಂಬನಿ ಕಡಲಾಗಿದೆ. ಕಾಲು ಅಧೈರ್ಯದಿಂದ ಕುಸಿಯುತ್ತಿದೆ. ದಿಕ್ಕುತೋರುವ ತಾರೆಯೇ ಹರಿದುಹೋಗುತ್ತಿದೆ. ಇಡೀ ವ್ರಜಭೂಮಿಯಲ್ಲಿ ಪ್ರಳಯವಾದಂತಿದೆ. ತಮ್ಮನ್ನು  ಕಾಪಾಡಬಲ್ಲವನು ಕೃಷ್ಣ ಮಾತ್ರ - ಅವನೇಕೆ ಇನ್ನೂ ಬಂದಿಲ್ಲ? 

ಹಗಲೂ ಇರುಳೂ ಕಂಬನಿಧಾರೆ   |
ಸದಾ ಕವಿದ ಕಾರ್ಮೋಡವು ಕಣ್ಣಲ್ಲಿ  ಶ್ಯಾಮನು ತ್ಯಜಿಸಿದ ಮೇಲೆ |
ಕಾಡಿಗೆ ನಿಲ್ಲದು ಕಣ್ಣಾಲಿಯಲಿ,  ಕೆನ್ನೆ ಕೈಗಳೆಲ್ಲವು ಕಲೆಯಾಗಿ 
ಒಣಗದು ಸೆರಗಿನ ತುದಿ ಎಂದೂ, ಎದೆಗಿಳಿವುದು ಅಸುಧಾರೆ||
ಕಂಬನಿ ಕಡಲು, ಕುಸಿಯುವ ಕಾಲು, ಕಳೆದುಹೋದ ಧ್ರುವತಾರೆ|  
ಸೂರದಾಸ! ವ್ರಜ ಮುಳುಗುತ್ತಲಿದೆ! ಪೊರೆಯದೆ ಕೃಷ್ಣನ ಲೀಲೆ ?

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)