ಎದುರಾಯಿತು ಮೃತ್ಯು!

ಮೂಲ ಹಿಂದಿ ಕವಿತೆ - ಅಟಲ್ ಬಿಹಾರಿ ವಾಜಪೇಯಿ 
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 




(ಕಲೆ-ಮಂಜುನಾಥ್ ಭಂಡಾರಿ)


ಎದುರಾಯಿತು!
ಎದುರಾಯಿತು ಮೃತ್ಯು!

ಎದುರಿಸಿ ಸೆಣಸುವ ಇರಾದೆ ಇರಲಿಲ್ಲ ಯಾವತ್ತೂ 
ದಾರಿಯಲ್ಲಿ ಸಿಕ್ಕುವೆನೆಂದು ಕೊಟ್ಟಿರಲಿಲ್ಲ ಮಾತು 

ದಾರಿಗೆ ಅಡ್ಡ ಹಾಕಿ ನಿಂತು ಬಿಟ್ಟಿತು ಮೃತ್ಯು 

ಬದುಕಿಗಿಂತಲೂ ದೊಡ್ಡವನೆಂದು ಬೀಗುತ್ತಿತ್ತು 

ಮೃತ್ಯುವಿನ ಆಯಸ್ಸಾದರೂ ಎಷ್ಟು? ಕೇವಲ ಒಂದೆರಡು ಕ್ಷಣ!
ಹೋಲಿಸಿದರೆ ಬದುಕಿನ ಲೆಕ್ಕಾಚಾರಕ್ಕೆ ಯಃಕಶ್ಚಿತ್, ಗೌಣ!

ಮುದುಡುವುದೇ ನನ್ನ ಮನ? ಮನದುಂಬಿ ಬದುಕಿರುವೆ -

ಹಿಂದಿರುಗಿ ಬರುತ್ತೇನೆ! ನನಗೇ ಮಣ್ಣಿನ ಹೆದರಿಕೆ!  

ಹೀಗೆ ಕಳ್ಳಹೆಜ್ಜೆ ಹಾಕಿ ಮರೆಯಲ್ಲಿ ಬಾರದಿರು 

ನೇರವಾಗಿ ಎದುರಿಸು!  ಒಂದು ಕೈ ನೋಡು. 

ಮೃತ್ಯುವಿನಿಂದ ನಿಶ್ಚಿಂತನಾಗಿದೆ ಬದುಕಿನ ಪ್ರಯಾಣ 
ಪ್ರತಿ ಸಂಜೆ ಸ್ವರಮೇಳ, ಪ್ರತಿ ಇರುಳು ಕೊಳಲಿನ ಗಾನ

ಹಾಗೆಂದು ಯಾವ ದುಃಖವೂ ಇಲ್ಲವೆಂದಲ್ಲ 

ಸ್ವಂತ-ಪರಕೀಯ ನೋವುಗಳಿಗೆ ಬರವಿಲ್ಲ. 

ಹೊರಿಸಿದ್ದಾರೆ ಪರರೂ ನನಗೆ ಪ್ರೀತಿಯ ಹೊರೆ 

ನನ್ನವರಿಂದಲೂ ನನಗಿಲ್ಲ ಪ್ರೀತಿಯ ಅರೆಕೊರೆ 

ಹೋರಾಟಗಳನ್ನು ಬಿಡಲಿಲ್ಲ ನೋಡದೇ ಒಂದು ಕೈ

ಕತ್ತಲಿನಲ್ಲೂ ಉರಿಸಿದ್ದೇನೆ ನಂದಿಹೋಗುತ್ತಿದ್ದ  ಹಣತೆ 

ಇಂದು ಎದ್ದಿದೆ ಜೋರಾದ ಬಿರುಗಾಳಿ 

ಸುಳಿಗಳ ತೋಳಲ್ಲಿ  ಸಿಲುಕಿದೆ  ದೋಣಿ 

ಮನದಲ್ಲಿದೆ ಆದರೂ ಪಾರಾಗುವ ನಚ್ಚು 

ಬಿರುಗಾಳಿಯ ಕೆಚ್ಚು ನೋಡಿ ಎದೆಯಲೆದ್ದಿದೆ ಕೆಚ್ಚು  

1टिप्पणियां
ಎದುರಾಯಿತು ಮೃತ್ಯು!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)