ಇಬ್ಭಾಗ (ಅನುವಾದಿತ ಕವಿತೆ

ಮೂಲ ಕವಿತೆ - ಡಬ್ಲ್ಯೂ ಎಚ್. ಆಡೆನ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್ 

(ಮೂಲ ಕವಿತೆಯನ್ನು ನನ್ನೊಂದಿಗೆ ಹಂಚಿಕೊಂಡ ಶ್ರೀ ಸೀತಾರಾಮ್ ಅವರಿಗೆ ಈ ಅನುವಾದ ಅರ್ಪಣೆ)


Broken Brown Wooden Wall

ಬಂದಿಳಿದಾಗ ಅವನು ಲಂಡನ್ನಿನಿಂದ ತನ್ನ ಕಾರ್ಯ ಈಡೇರಿಸಲು 
ಬಂಡೆಯಂತಿದ್ದ ಯಾವ  ಪೂರ್ವಗ್ರಹವಿಲ್ಲದೆ; ಅವನೆಂದೂ ಕಣ್ಣಾರೆ
ಕಂಡಿರಲಿಲ್ಲ ತಾನು ಇಬ್ಭಾಗ ಮಾಡಲು ಬಂದ ಭೂಮಿಯನ್ನು
ಅಂಧಕೋಪದಿಂದ ಪರಸ್ಪರ ದ್ವೇಷಿಸುವ ಜನರ ನಡುವೆ. ನೋಡಲು 
ಒಂದೇ ರೀತಿ ಕಂಡರೂ ವಿಭಿನ್ನ ಆಹಾರ ಪದ್ಧತಿಯ ಪಂಗಡಗಳು,
ಹೊಂದಾಣಿಕೆಯಿಲ್ಲ ಅವರಿಬ್ಬರ ದೇವತೆಗಳಲ್ಲಿ.  "ಸಮಯವೇನೂ 
ಧಂಡಿಯಾಗಿಲ್ಲ!" ಎಚ್ಚರಿಕೆ ಸಿಕ್ಕಿತ್ತು ಲಂಡನ್ ನಗರದಲ್ಲಿ, "ರಮಿಸಿ 
ಒಂದಾಗಿಸಲು   ಅಥವಾ ಎರಡೂ ಪಕ್ಷಗಳ ಅಹವಾಲು ಆಲಿಸಲು.   
ತುಂಡಾಗಿಸುವುದೇ ಉಳಿದ ಏಕೈಕ ಮಾರ್ಗ; ವೈಸರಾಯ್ ಜೊತೆಗೆ 
ಕಂಡುಬರದೇ ಇರುವುದೇ ಮೇಲು - ಅವನ ಪತ್ರ ಬಂದಿದೆ ನೋಡು. 
ಒಂದೇ ಮನೆಯಲ್ಲಿ ವಾಸ್ತವ್ಯ ಬೇಡ, ಪ್ರತ್ಯೇಕವಾಗಿರಲು ಮಾಡಿದ್ದೇವೆ 
ಬಂದೋಬಸ್ತು; ನಾಲ್ವರು ನ್ಯಾಯಾಧೀಶರ ನೆರವು ನಿನಗಿರುವುದು,
ಹಿಂದೂಗಳು ಇಬ್ಬರು, ಇಬ್ಬರು ಮುಸ್ಲಿಮರು. ಅವರ ಸಲಹೆ ಕೇಳಿದರೂ 
ಸಂದಿಗ್ಧವಿಲ್ಲದ ಕೊನೆಯ ನಿರ್ಧಾರ ನಿನ್ನದೇ, ನೆನಪಿಡು." 

ಸುಂದರ ಬಂಗಲೆಯಲ್ಲಿ ವಾಸ, ಹಗಲಿರುಳೂ ರಕ್ಷೆಗೆ ಪೊಲೀಸ್ 
ಸಿಬ್ಬಂದಿಯ ಕಾವಲಿನಲ್ಲಿ ಅವನು ಕಾರ್ಯತತ್ಪರನಾದ; ಲಕ್ಷಾಂತರ  
ಮಂದಿಯ ಹಣೆಬರಹ ಬರೆಯುವ ಹೊಣೆಗಾರಿಕೆ ಹೊತ್ತು. ಕಾರಕೂನರು
ತಂದಿತ್ತ ನಕ್ಷೆಗಳೆಲ್ಲವೂ ಪುರಾತನ ಕಾಲದವು;   ತಪ್ಪು ಮಾಹಿತಿ 
ಖಂಡಿತವಾಗಿಯೂ ಇತ್ತು ಜನಗಣತಿಯ ವರದಿಗಳಲ್ಲಿ. ಸಮಯ
ಒಂದಿರಲಿಲ್ಲ ಅವುಗಳನ್ನು ಕೂಲಂಕಷವಾಗಿ ಓದಲು ಅಥವಾ 
ಗೊಂದಲಗಳಿದ್ದಾಗ ಪರಿಶೀಲಿಸಿ ತಿದ್ದಲು. ಕೆಟ್ಟ ಸೆಖೆ ಬೇರೆ;
ಉಂಡಿದ್ದು ಒಗ್ಗದೆ ಆಮಶಂಕೆಯ ಬಾಧೆ ಬೇರೆ;  ಇಷ್ಟೆಲ್ಲವೂ  
ನಿರ್ಬಂಧಗಳ ನಡುವೆಯೂ ಏಳು ವಾರಗಳಲ್ಲಿ  ಎಳೆದೇ ಬಿಟ್ಟ ಗೆರೆ,
ತುಂಡರಿಸಿ ಒಂದು ಭೂಖಂಡವನ್ನು ಎರಡಾಗಿ  ಎಳೆದುಬಿಟ್ಟ ತೆರೆ. 

ಲಂಡನ್ ನಗರಕ್ಕೆ ಹತ್ತಿದ ಹಡಗನ್ನು ಮರುದಿನವೇ;  ಮರೆತುಬಿಡಬಹುದು 
ಇಂಗ್ಲೆಂಡಿನಲ್ಲಿ ಹಳೆಯ ಕೇಸನ್ನು ಯಾವುದೇ ಉತ್ತಮ ಲಾಯರಿನ ಹಾಗೆ. 
"ಖಂಡಿತ  ಮರಳಿಹೋಗುವುದಿಲ್ಲ" ಎಂದ ಕ್ಲಬ್ಬಿನಲ್ಲಿ ಯಾರೋ ಕೇಳಿದ ಪ್ರಶ್ನೆಗೆ
"ಗುಂಡು ಹಾಕಿಬಿಡಬಹುದು ಯಾರಾದರೂ ನನಗಲ್ಲಿ ಎಂಬ ಶಂಕೆ."



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)