ಫೋನ್ - ಅಂದು, ಇಂದು

 ನಾನು ಮೊದಲ ಸಲ ಅಮೆರಿಕಾಗೆ ಹೋದಾಗ ನಮ್ಮ ಮನೆಯಲ್ಲಿ ಫೋನ್ ಇರಲಿಲ್ಲ. ಆಗ ಫೋನ್ ಕನೆಕ್ಷನ್ ಸುಲಭವಾಗಿ ಸಿಕ್ಕುತ್ತಿರಲಿಲ್ಲ. ನಾಲ್ಕೈದು ಬೀದಿಗಳಲ್ಲಿ ಹುಡುಕಿದರೆ ಒಬ್ಬರ ಮನೆಯಲ್ಲಿ ಫೋನ್ ಇದ್ದರೆ ಹೆಚ್ಚು.   ನಾನು ನ್ಯೂಯಾರ್ಕ್ ತಲುಪಿದ್ದು ಸಂಜೆ. ನಮ್ಮನ್ನು ಕರೆದೊಯ್ಯಲು ಬಂದಿದ್ದ ದಿನೇಶ್ ನಮ್ಮನ್ನು ನೇರವಾಗಿ ಊಟಕ್ಕೆ ಕರೆದುಕೊಂಡು ಹೋಗಿ ನಂತರ ನಾವು ತಂಗಬೇಕಾಗಿದ್ದ ಹೋಟೆಲಿಗೆ ಕರೆದುಕೊಂಡು ಹೋಗಿ ಬಿಟ್ಟರು. ಆಗಲೇ ಕತ್ತಲಾಗಿತ್ತು.  ಆಯಾಸವಾದರೂ ನಿದ್ದೆ ಸರಿಯಾಗಿ ಬರಲಿಲ್ಲ.  ಹೊರಗೆ ಹಿಮಪಾತವಾಗುತ್ತಿತ್ತು. ಅದನ್ನು ಕಿಟಕಿಯ ಮೂಲಕ ನೋಡುತ್ತಾ ನಿಲ್ಲುವುದೇ ಒಂದು ಅಪೂರ್ವ ಅನುಭವ.  ಮರುದಿನ ಬೆಳಗ್ಗೆ  ನಾನು ಮತ್ತು ನನ್ನ ಸಹೋದ್ಯೋಗಿಗಳು ಪೋಸ್ಟ್ ಆಫೀಸ್ ಹುಡುಕಿಕೊಂಡು ಹೋಗಿ ಕ್ಷೇಮವಾಗಿ ತಲುಪಿದೆವೆಂದು ಟೆಲಿಗ್ರಾಮ್ ಕೊಟ್ಟು ಬಂದೆವು.  ಮುಂದೆ ಅಪಾರ್ಟ್ಮೆಂಟಿನಲ್ಲಿ ವಾಸ ಪ್ರಾರಂಭವಾದ ನಂತರ ಮನೆಗೆ ಪತ್ರ ಬರೆಯುವ ಸಂಪ್ರದಾಯ ಪ್ರಾರಂಭವಾಯಿತು.  


ಬೆಂಗಳೂರಿನಲ್ಲಿ ನಮ್ಮ ಪಕ್ಕದ ಮನೆಯಲ್ಲಿದ್ದ ಕೃಷ್ಣಮೂರ್ತಿ ಎನ್ನುವವರ ಮನೆಯಲ್ಲಿ ಫೋನ್ ಇತ್ತು. ಬಹುಶಃ ಅದು ಅವರ ಆಫೀಸ್ ನೀಡಿದ ಫೋನ್. ಅವರ  ಬಾಡಿಗೆ ಮನೆ ಬಹಳ ಚಿಕ್ಕದು. 30x30 ಸೈಟಿನಲ್ಲಿ ಮಾಲೀಕ ಎರಡು ಮನೆ ಕಟ್ಟಿಸಿ ಬಾಡಿಗೆ ಕೊಟ್ಟಿದ್ದ. ಮನೆಯಲ್ಲಿ ಒಂದು ಅಡುಗೆ ಮನೆ, ಒಂದು ಕೋಣೆ ಮತ್ತು ಹಾಲ್ ಎಂದು ಕರೆಸಿಕೊಳ್ಳುವ ಒಂದು ಸ್ಥಳ. ಅಲ್ಲಿ ಫೋನ್ ಇಟ್ಟಿದ್ದರು. ಅವರ ಮನೆಯ ಫೋನ್ ನಂಬರಿಗೆ ಫೋನ್ ಮಾಡಿದರೆ ಅವರು ನಮ್ಮ ತಂದೆಯನ್ನು ಕರೆಯುತ್ತಿದ್ದರು. ಅಲ್ಲಿಯವರೆಗೆ ಕಾಯುವುದು ದುಬಾರಿ ಬಾಬತ್ತು. ಏಕೆಂದರೆ ಆಗ ಅಂತರರಾಷ್ಟೀಯ ಕರೆಗಳಿಗೆ  ವಿಪರೀತ ಚಾರ್ಜ್ ಆಗುತ್ತಿತ್ತು.  ಹೀಗಾಗಿ ಒಂದು ಐದು ನಿಮಿಷ ತಡೆದು ಮತ್ತೆ ಫೋನ್ ಮಾಡುವುದು. ನಮ್ಮ ತಂದೆಗೆ ಮೂರು ರೀತಿಯ ಮುಜುಗರ. ಕೃಷ್ಣಮೂರ್ತಿಯವರ ಮೂಲಕ ಕರೆಸಿಕೊಂಡು ಅವರ ಫೋನ್ ಬಳಸುವುದು ಒಂದು. ತೀರಾ ಪುಟ್ಟ ಮನೆಯಲ್ಲಿ ನಾಲ್ಕು ಮಕ್ಕಳು, ತಂದೆ ತಾಯಿ, ಮತ್ತು ಮನೆಯಾಕೆಯೊಡನೆ ಇದ್ದ ಕೃಷ್ಣಮೂರ್ತಿಯವರ  ಸಂಸಾರದಲ್ಲಿ ತಾವೂ ಹೋಗಿ ಅವರಿಗೆ ತೊಂದರೆ ಕೊಡುವುದು ಇನ್ನೊಂದು. ಮಗ ದೂರದಿಂದ ಎರಡು ಸಲ ಫೋನ್ ಮಾಡಬೇಕು, ಅವನಿಗೆ ಖರ್ಚು ಹೆಚ್ಚಾದೀತು ಎಂಬುದು ಮೂರನೆಯದು. ನಾನು ಪರವಾಗಿಲ್ಲ ಮಾತಾಡು ಎಂದು ಎಷ್ಟೇ ಹೇಳಿದರೂ ಉಭಯ ಕುಶಲೋಪರಿಯನ್ನು ಹೊರತಾಗಿ ಏನೂ ಹೇಳುತ್ತಿರಲಿಲ್ಲ. ನನ್ನ ಧ್ವನಿ ಕೇಳಿ ಅವರಿಗೆ ಉಂಟಾದ ಸಂತೋಷವನ್ನು ನಾನು ಊಹಿಸಬಹುದಾಗಿತ್ತು.  ನಮ್ಮ ತಾಯಿಗೆ ಪಕ್ಕದ ಮನೆಗೆ ಹೋಗಿ ಫೋನಿನಲ್ಲಿ ಮಾತಾಡುವುದು ಆಗದ ಮಾತು.  ಅವರಿಗೆ ಫೋನಿನಲ್ಲಿ ಮಾತಾಡಿ ಅಭ್ಯಾಸವೇ ಇರಲಿಲ್ಲ! 


ನಾನು ಎರಡನೇ ಸಲ ಅಮೆರಿಕಕ್ಕೆ ಹೋದಾಗ ನಮ್ಮ ತಂದೆ ಮನೆಗೆ ಫೋನ್ ಹಾಕಿಸಿಕೊಂಡರು.  ಈಗ ನಾನು ನನ್ನ ತಾಯಿಯ ಜೊತೆಗೂ ಮಾತಾಡುವುದು ಸಾಧ್ಯವಾಯಿತು. ಅವರಿಗೆ ಹೆಚ್ಚು ಮಾತಾಡಲೂ ನಮ್ಮ ತಂದೆ ಬಿಡುತ್ತಿರಲಿಲ್ಲ!  ನನ್ನ ಫೋನ್ ಬಿಲ್ ಹೆಚ್ಚಾದರೆ ಎಂಬ ಮುಜುಗರ!


ನಾನು ದೆಹಲಿ ಐಐಟಿಗೆ ಬಂದಾಗ ಮತ್ತೆ ಫೋನ್ ಸಮಸ್ಯೆ. ಮನೆಯಿಂದ  ಸಾಕಷ್ಟು ದೂರದಲ್ಲಿದ್ದ ಎಸ್.ಟಿ.ಡಿ. ಬೂತಿಗೆ ಹೋಗಿ ಫೋನ್ ಮಾಡಬೇಕಾಗಿತ್ತು. ಮುಂದೆ ಐಐಟಿ ಕ್ಯಾಂಪಸಿನಲ್ಲೇ ಒಂದು ಎಸ್.ಟಿ.ಡಿ. ಬೂತ್ ಬಂದಿದ್ದು ಅನುಕೂಲವಾಯಿತು. 


ಇಂದು ಮೊಬೈಲ್ ಮೂಲಕ ಮಾತಾಡುವ ಯುವಪೀಳಿಗೆಗೆ ಇವೆಲ್ಲ ಗೊತ್ತಿರಲಿ ಎಂದು ಬರೆದೆ.  ಇವತ್ತು ಫಾದರ್ಸ್ ಡೇ ಎಂದು ನಿಮಗೆ ಕರೆ ಬಂದರೆ ಅಥವಾ ನೀವು ಕರೆ ಮಾಡಿದರೆ ಈ ದೂರಸಂವಹನ ತಂತ್ರಜ್ಞಾನಕ್ಕೆ ನಿಮ್ಮ ಕೃತಜ್ಞತೆ ಇರಲಿ.


#ನೆನಪುಗಳು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)