ಬಾಪೂ ಮತ್ತು ನಯಾ ದೌರ್

ಬಾಪೂ ಮತ್ತು ನಯಾ ದೌರ್ 

ಸಿ. ಪಿ. ರವಿಕುಮಾರ್ 

ತ್ತೀಚೆಗೆ ಕೈಮಗ್ಗದ ಕೆಲಸಗಾರರ ಪರವಾಗಿ ನಾಟಕಕಾರ ಪ್ರಸನ್ನ ಉಪವಾಸ ಸತ್ಯಾಗ್ರಹ ಹೂಡಿದ್ದಾರೆ. ಇದರ ಬಗ್ಗೆ ಓದುವಾಗ ನನಗೆ ಕನ್ನಡ ಕತೆಗಾರರಾದ ಬಾಗಲೋಡಿ ದೇವರಾಯ ಅವರ "ಮಗ್ಗದ ಸಾಹೇಬ" ಕತೆ ನೆನಪಾಗಿ ಅದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದೆ. ಮಹಾತ್ಮಾ ಗಾಂಧಿ ಬೃಹತ್ ಕೈಗಾರಿಕೀಕರಣದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲದಿಂದ ಅವರ ಕೆಲವು ಲೇಖನಗಳನ್ನು ಓದಿದೆ; ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದೆ.

ಹುಡುಕಾಟದಲ್ಲಿ ನನ್ನ ಕಣ್ಣಿಗೆ ಬಿದ್ದ ಕವಿತೆ "ಬಾಪೂ." ಹಿಂದಿಯ ಪ್ರಸಿದ್ಧ ಕವಿ ಸುಮಿತ್ರಾನಂದನ್ ಪಂತ್  ಈ ಕವಿತೆಯನ್ನು ಸ್ವಾತಂತ್ರ್ಯಪೂರ್ವದಲ್ಲಿ (೧೯೩೯) ರಚಿಸಿದರು. ಇಲ್ಲಿ "ಬಾಪೂ" ಎಂದು ಅವರು ಸಂಬೋಧಿಸುವುದು ಮಹಾತ್ಮಾಗಾಂಧಿಯವರನ್ನು; ಆದರೆ "ಬಾಪೂ" ಎಂದರೆ ತಂದೆ ಎಂಬ ಅರ್ಥ ಬರುವುದರಿಂದ ರಬೀಂದ್ರನಾಥ್ ಟ್ಯಾಗೋರ್  ಗೀತಾಂಜಲಿಯಲ್ಲಿ "ತಂದೆ" ಎಂದು ಸಂಬೋಧಿಸಿದ ಭಗವಂತನ ಸ್ವರೂಪವನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ ಎಂದು ಕೂಡಾ ಅರ್ಥೈಸಬಹುದು.  ಈ ಕವಿತೆಯನ್ನು ಬರೆದಾಗ ಕೈಗಾರಿಕಾ ಕ್ರಾಂತಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇಂಗ್ಲೆಂಡ್ ನಲ್ಲಿ ಮಿಲ್ ಗಳು ಸ್ಥಾಪಿತವಾಗಿದ್ದವು; ಈ ಮಿಲ್ ಬಟ್ಟೆಗಳಿಗೆ ಭಾರತವು ಒಂದು ಮಾರುಕಟ್ಟೆಯಾಯಿತು. ನಮ್ಮ ಖಾದಿ ಗ್ರಾಮೋದ್ಯೋಗಗಳು ಈ ಕ್ರಾಂತಿಗೆ ಬಹುಪಾಲು ನಾಶವಾದವು. ಭಾರತದಂಥ ಗ್ರಾಮಪ್ರಧಾನ ರಾಷ್ಟ್ರಕ್ಕೆ ಫ್ಯಾಕ್ಟರಿ ಮತ್ತು ಮಿಲ್ ಗಳು ಎಂಥ ಅನಿಷ್ಟಗಳೆಂದು ಗಾಂಧೀಜಿ ಮನಗಂಡಿದ್ದರು; ಅವರು ಇದನ್ನು ಕುರಿತು ಬೇಕಾದಷ್ಟು ಬರೆದರು, ಮಾತಾಡಿದರು.  ಸುಮಿತ್ರಾನಂದನ್ ಪಂತ್ "ಭಾರತಮಾತೆ ಗ್ರಾಮವಾಸಿಣಿ" ಎಂಬ ಕವಿತೆಯನ್ನು ರಚಿಸಿದ್ದಾರೆ.



ಮ್ಮ ಪ್ರಗತಿಯಲ್ಲಿ ನಾವು ಹಳ್ಳಿಗಳನ್ನು ಹಿಂದೆ ಬಿಟ್ಟು ಸಾಗಿದರೆ ಅದು ಪ್ರಗತಿಯಾಗುವುದಿಲ್ಲ ಎಂದು ಗಾಂಧೀಜಿ ಎಚ್ಚರಿಸುತ್ತಲೇ ಇದ್ದರು. ಹಿಂದಿಯಲ್ಲಿ ತಯಾರಾದ "ನಯಾ ದೌರ್" ಚಿತ್ರ ಗಾಂಧೀಜಿಯ ಇದೇ ಎಚ್ಚರಿಕೆಯನ್ನು ಧ್ವನಿಸುತ್ತದೆ. ಬಿ. ಆರ್. ಚೋಪ್ರಾ ನಿರ್ದೇಶಿಸಿದ ಈ ಚಿತ್ರದಲ್ಲಿ ಒಂದು ಸಂಘರ್ಷವಾಗುತ್ತದೆ. ರೇಲ್ವೆ ನಿಲ್ದಾಣದಿಂದ ಹಳ್ಳಿಗೆ ಓಡಾಡುವ ಟಾ೦ಗಾಗಳು ಒಮ್ಮೆಲೇ ಮೋಟಾರ್ ವಾಹನದ ಆಘಾತಕ್ಕೆ ತತ್ತರಿಸಿ ಬೀಳುತ್ತವೆ. ಶ್ರೀಮಂತನೊಬ್ಬ ಮೋಟಾರ್ ವಾಹನವನ್ನು ಓಡಿಸಿ ಇವರೆಲ್ಲರ ಅನ್ನವನ್ನು ಕದಿಯುತ್ತಾನೆ. ಸಿನಿಮಾ ಕತೆಯಲ್ಲಿ ಟಾಂಗಾ ಮತ್ತು ಮೋಟಾರ್ ವಾಹನದ ನಡುವೆ ಸ್ಪರ್ಧೆ ಏರ್ಪಡುತ್ತದೆ; ಹಳ್ಳಿಯವರು ಟಾಂಗಾ ಗಾಡಿಯನ್ನು ಗೆಲ್ಲಿಸಲು ಒಂದು ಹೊಸ ರಸ್ತೆಯನ್ನೇ ನಿರ್ಮಾಣ ಮಾಡುತ್ತಾರೆ; ಎಲ್ಲರ ನಿರೀಕ್ಷೆ ಮೀರಿ ಟಾಂಗಾ ಗೆದ್ದೂ ಬಿಡುತ್ತದೆ! (ಲಗಾನ್ ಚಿತ್ರದಲ್ಲಿ ಹಳ್ಳಿಗರು ಕ್ರಿಕೆಟ್ ಪಂದ್ಯ ಗೆಲ್ಲಲಿಲ್ಲವೇ?)  ನಯಾ ದೌರ್ ಚಿತ್ರದಲ್ಲಿ ಹೊಸತು ಮತ್ತು ಹಳತುಗಳ ಸಂಘರ್ಷದ ಬಗ್ಗೆ ಯಾವ ಪರಿಹಾರಗಳಿಲ್ಲ - ಆದರೆ ಇಂಥ ಸಮಸ್ಯೆ ಇದೆ ಎಂಬುದನ್ನು ಕಥಾಕಾರ ಮತ್ತು ಚಿತ್ರ ನಿರ್ದೇಶಕರು ನಿರೂಪಿಸಿದ್ದಾರೆ.

ಬಾಪೂ ಅವರ ಮಾರ್ಗವನ್ನು ಭಾರತ ಅನುಸರಿಸಲಿಲ್ಲ. ಅಂದು ಕೈಗಾರಿಕೀಕರಣವು ಹೇಗೋ ಇಂದು ಜಾಗತೀಕರಣವು ಅದೇ ರೀತಿಯಲ್ಲಿ ನಮ್ಮ ನಡುವೆ ಸಂಘರ್ಷಗಳನ್ನು ಹುಟ್ಟುಹಾಕಿದೆ. ಹೊಸ ತಂತ್ರಜ್ಞಾನಗಳು ನಿತ್ಯವೂ ಬರುತ್ತಿವೆ; ನಮ್ಮ ಸಮಾಜವನ್ನು ಕದಡಿ ಬುಡಮೇಲು ಮಾಡುತ್ತಿವೆ. ಇತ್ತೀಚೆಗೆ ಕಪ್ಪು-ಬಿಳುಪು ನಯಾ ದೌರ್ ಚಿತ್ರ ವನ್ನು ವರ್ಣಚಿತ್ರವಾಗಿ ಬದಲಾಯಿಸಿ ಬಿಡುಗಡೆ ಮಾಡಿದ್ದು ವಿಪರ್ಯಾಸ ಎನ್ನೋಣವೇ? ಡಬ್ಬಿಂಗ್ ಬೇಕೋ ಸ್ವಂತ ತಯಾರಿಕೆಗಳು ಬೇಕೋ ಎಂಬ ಘರ್ಷಣೆ ಕೂಡಾ ತಂತ್ರಜ್ಞಾನದ ಕೊಡುಗೆಯೇ! ೧೯೩೯ ರಲ್ಲೇ ಸುಮಿತ್ರಾನಂದನ್ ಪಂತ್ "ಮಾನವನು ವಿಜ್ಞಾನದಲ್ಲಿ ವಿಜಯ ಸಾಧಿಸಿದರೂ ತನ್ನ ಆತ್ಮ-ಹೃದಯಗಳನ್ನು ಸೋತಿದ್ದಾನೆ" ಎಂದು ಪ್ರಲಾಪಿಸುತ್ತಾರೆ! ಇಂದು ಅವರು ಇದ್ದಿದ್ದರೆ ಏನು ಹೇಳುತ್ತಿದ್ದರೋ!

ಕವಿತೆಯ ಕನ್ನಡ ಅನುವಾದವನ್ನು ಈಗ ನೋಡೋಣ:


ಬಾಪೂ 

ಮೂಲ ಹಿಂದಿ ಕವಿತೆ: ಸುಮಿತ್ರಾನಂದನ್ ಪಂತ್  (೧೯೩೯)
ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ (೨೦೧೪)


ನ್ನತಿಯ ಚರಮಸ್ಥಿತಿಯಲ್ಲಿದೆ ಜಗದಲ್ಲಿ ಇಂದು ವಿಜ್ಞಾನ
ಪರಮ ವೈಭವದಲ್ಲಿ ಮೆರೆವ ಭೌತಿಕ ಸಾಧನ ಯಂತ್ರಯಾನ!
ವಿದ್ಯುತ್ತು ಬಾಷ್ಪಶಕ್ತಿಗಳು ಕಿಂಕರರಾಗಿ ಧನಬಲ ಹೆಚ್ಚುತ್ತಿದೆ ನಿತ್ಯ.
ಮತ್ತೇಕೆ ನೋವಿನಲ್ಲಿ ನರಳುವುದು ಜಗತ್ತು? ಜೀವನವೇಕೆ ಅಶಾಂತ? 
ಪಡೆದಿದ್ದಾನೆ ದೇಶಕಾಲಗಳ ಮೇಲೆ ಮಾನವ ನಿಶ್ಚಯವಾಗಿಯೂ ವಿಜಯ
ಆದರೆ ಕಳೆದುಕೊಂಡಿದ್ದಾನೆ ಈ ಗೆಲುವಿನಲ್ಲಿ ತನ್ನದೇ ಹೃದಯ!
ಚರ್ವಿತವಾಗಿದೆ ಅವನ ವಿಜ್ಞಾನದ ಅರಿವು; ಅದು ಬೆಂದಿಲ್ಲದ ಆಹಾರ;
ಭೌತಿಕ ಮದದಲ್ಲಿ ಮಾನವನ ಆತ್ಮವೇ ಇಂದು ಸೋತ ವ್ಯಾಪಾರ!
ಮೆಚ್ಚಬೇಕಾದದ್ದೇ ಭೌತಿಕ ಜ್ಞಾನಸಂಚಯಕ್ಕಾಗಿ ಈ ಪ್ರಯಾಸ!
ಆದರೆ ಇಲ್ಲಿ ಸಾಧ್ಯವೇ ಮಾನವೀ ಭಾವನೆಗಳ ವಿಕಾಸ?
ಇಂದು ಬೇಕಾಗಿರುವುದು ಭಾವನಾಬದ್ಧ ನವೋನ್ಮೇಷ,
ಮಾನವನ ಎದೆಯಲ್ಲಿ ಮತ್ತೆ ಮಾನವತೆಯ ಪ್ರವೇಶ! 
ಬಾಪೂ ನಿನ್ನ ಕಡೆಗಿದೆ ಜಗತ್ತಿನ ಯಾಚನಾಮಯ ದೃಷ್ಟಿ
ಬಿಡಿಸಲಾರೆಯಾ ಮಾನವನನ್ನು ಹಿಡಿದ ಕಪಿಮುಷ್ಟಿ?



(ನವೋನ್ಮೇಷ = ಇನ್ನೊವೇಷನ್)

(c) 2014, C.P. Ravikumar
Kannada Translation of the Hindi poem Bapu by Sumitranandan Pant

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)