ಸಾವಿರಾರು ಕನಸುಗಳು



ಸಿ. ಪಿ. ರವಿಕುಮಾರ್ 

ಮಿರ್ಜಾ ಗಾಲಿಬ್ ಅವರ ಪ್ರಸಿದ್ಧ ಗಜಲ್ ಒಂದರ ಕನ್ನಡ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ.  ಮಿರ್ಜಾ ಗಾಲಿಬ್ ಉರ್ದು ಶಾಯರಿಯ ಪ್ರಪಂಚದಲ್ಲಿ ಒಂದು ಮೇರುಶಿಖರವಿದ್ದಂತೆ.  ಅವರ ಪರಿಶುದ್ಧ ಉರ್ದು  ಮತ್ತು ಅಪೂರ್ವವೆನ್ನಿಸುವ ನುಡಿಗಟ್ಟುಗಳನ್ನು ಅನುವಾದಿಸುವುದು ಸುಲಭವಲ್ಲ! ಮೊದಲೇ ಹೇಳಿದಂತೆ ಇದೊಂದು ಪ್ರಯತ್ನ.  "ಹಜಾರೋ ಖ್ವಾಹಿಷೇ ಐಸೀ"  ಈ ಗಜಲ್ ಗಾಲಿಬ್ ಅವರ ಅತ್ಯಂತ ಜನಪ್ರಿಯ ರಚನೆಗಳಲ್ಲಿ ಒಂದು. ಇಲ್ಲಿ ಪದ್ಯಗಳ (ಶೇರ್) ನಡುವೆ ಎಲ್ಲೋ ಒಂದು ಕಥೆಯ ಎಳೆ ಇದೆ ಇಂದೂ ನಿಮಗೆ ಅನ್ನಿಸಬಹುದು. ಅನುರಕ್ತನಾದವನೊಬ್ಬನ ಕಥೆ. ಈ ಅನುರಕ್ತಿ ಒಬ್ಬ ಪ್ರೇಮಿಕೆಯಲ್ಲಿರಬಹುದು ಅಥವಾ ಮನಸ್ಸನ್ನು ಸೂರೆಗೊಳ್ಳುವ (ಶಾಯರಿಯಂಥ) ಇನ್ನಾವುದೇ ಕೆಲಸವೂ ಆಗಿರಬಹುದು.  ಮುಂದೆ ಓದುವ ಮುನ್ನ ಕವಿತೆಯ ಅನುವಾದವನ್ನು ಒಮ್ಮೆ ಓದಿ.  "ನಾನು ಕಂಡದ್ದು ಸಾವಿರಾರು ಕನಸುಗಳು, ಒಂದೊಂದನ್ನು ಪೂರೈಸಲೂ ಜೀವ ತೇಯಬೇಕು" ಎಂದು ಕವಿ ಹೇಳಿದಾಗ ಅವನು ತನ್ನ ಕಾವ್ಯ ರಚನೆಯ ಬಗ್ಗೆಯೇ ಹೇಳುತ್ತಿರಬಹುದು. "ಬಹಳಷ್ಟು ಇನ್ನೂ ಅಪೂರ್ಣ" ಎನ್ನುವಾಗ  ತಾನು ಬರೆಯಬೇಕಾದದ್ದು ಇನ್ನೂ ತುಂಬಾ ಇದೆ ಎನ್ನುವ ಅರ್ಥವೂ ಹೊಮ್ಮಬಹುದು.  "ಕೈಗೆ ನೆತ್ತರು ..." ಎನ್ನುವ ಸಾಲುಗಳಲ್ಲಿ ಗಾಲಿಬ್ ತನ್ನ ವಿಮರ್ಶಕರನ್ನು ಕುರಿತು ಹೇಳುತ್ತಿರಬಹುದೇ ಎಂಬ ಅನುಮಾನವೂ ನನಗೆ ಬರುತ್ತಿದೆ.  "ಮದಿರೆಯ ಕಡೆಗೆ ಹೊರಳಿತು ..." ಎನ್ನುವಾಗ ಕವಿಯು ಮದ್ಯದ ಬಗ್ಗೆಯೇ ಹೇಳುತ್ತಿದ್ದಾನೆಂದೇನೂ ಅಲ್ಲ, ಅವನು ಕಾವ್ಯರಚನೆಯ ಬಗ್ಗೆ ಕೂಡಾ ಹೇಳುತ್ತಿರಬಹುದು.  ಹೀಗೆ ನೀವು ಕವಿತೆಯನ್ನು ವಿಭಿನ್ನ ಸ್ತರಗಳಲ್ಲಿ ಅರ್ಥೈಸಿಕೊಳ್ಳಬಹುದು. 


ಸಾವಿರಾರು ಕನಸುಗಳು, ಒಂದೊಂದೂ ಜೀವ ತಿನ್ನುವಂತಹುದು,
ಕೆಲವೊಂದು ಫಲಿಸಿದವು, ಬಹಳಷ್ಟು ಇನ್ನೂ ಅಪೂರ್ಣ 

ಕೈಗೆ ನೆತ್ತರು ಹತ್ತುವ ಭಯವೇಕೆ ನನ್ನನ್ನು ಕೊಂದವರಿಗೆ 
ನಿತ್ಯವೂ ಒದ್ದೆ ಕಣ್ಣುಗಳಿಂದ ನಾನು ಸುರಿಸಿದ್ದೇನು ದಳದಳ?

ಅವರಿಗೆ ಪತ್ರ ಬರೆಯಬೇಕೆಂದರೆ ನನಗೆ ಹೇಳಿ ಕಳಿಸಿ 
ಕಿವಿಯ ಮೇಲೆ ಇಟ್ಟುಕೊಂಡೇ ಹೊರಡುವೆನು ಲೇಖನಿಯನ್ನ 

ಮದಿರೆಯ ಕಡೆಗೆ ಹೊರಳಿಸಿದೆ ನನ್ನ ನೋಟ ಆವಾಗ 
ಮುಂದೊಮ್ಮೆ ಮದಿರೆಯೇ ತುಂಬಿಕೊಂಡಿತು ಜೀವನ 

ಕೇಳಿದ್ದೇವೆ  ಸ್ವರ್ಗದಿಂದ  ಆದಮ್ ಉಚ್ಚಾಟನೆಯಾದ ಕಥೆಯನ್ನ 
ನಿನ್ನ ಕೆಸರಿನಿಂದ ಹೊರಬಿದ್ದಾಗ ಹತ್ತಿಕೊಂಡಿತ್ತು ನನಗೂ ಅಪಮಾನ 

ಯಾರಿಂದ ಬಯಸಿದೆನೋ ನನ್ನ ಗಾಯಗಳಿಗಾಗಿ ಸಾಂತ್ವನ 
ನನಗಿಂತಲೂ ಹೆಚ್ಚು ಘಾಸಿಗೊಳಿಸಿತ್ತು ವಿಧಿಯು ಅವರನ್ನ 

ಬಯಲಾಗದಿರುವುದೇ ನಿನ್ನ ಪೀಡನೆಗಳು ಓ ಕ್ರೂರಿ,
ಬಚ್ಚಿಡದಿದ್ದರೆ ಮೇಲುವಸ್ತ್ರದೊಳಗೆ ನನ್ನ ಕುರುಳನ್ನ

ಪ್ರೇಮದಲ್ಲಿ ಬಿದ್ದವನಿಗೆ ಬದುಕೇನು ಸಾವೇನು? 
ಯಾವ ಪಾಪಿಗಾಗಿ ಸಾಯುವುದೋ ಅವರನ್ನು ನೋಡುವುದೇ ಜೀವನ 

ಪಾನಗೃಹದ ಬಾಗಿಲೆಲ್ಲಿ ಓ ಗಾಲಿಬ್, ಎಲ್ಲಿ ಧರ್ಮ ಪ್ರವಾಚಕ!
ಕಂಡದ್ದು ಮಾತ್ರ ನಿಜ ನಾನು ಹೊರಬಂದಾಗ ಅವನ ಪ್ರಸ್ಥಾನ

ಕಾಮೆಂಟ್‌ಗಳು

  1. ಮೂಲ ಗಜಲ್ : ಮಿರ್ಜಾ ಗಾಲಿಬ್

    हज़ारों ख्वाहिशें ऐसी की हर ख्वाहिश पे दम निकले
    बहुत निकले मेरे अरमान लेकिन फिर भी कम निकले

    डरे क्यों मेरा क़ातिल क्या रहेगा उसकी गर्दन पर
    वो खून, जो चश्म-ए-तर से उम्र भर यूँ दम-ब-दम निकले

    निकलना खुल्द से आदम का सुनते आये हैं लेकिन
    बहुत बेआबरू होकर तेरे कुचे से हम निकले

    हुई जिनसे तवक्को खस्तगी की दाद पाने की
    वो हमसे भी ज्यादा ख़स्त-ए-तेघ-ए-सितम निकले

    खुदा के वास्ते परदा ना काबे से उठा ज़ालिम
    कहीं ऐसा ना हो याँ भी वही काफ़िर सनम निकले

    मोहब्बत में नहीं हैं फ़र्क़ जीने और मरने का
    उसी को देख कर जीते हैं जिस काफ़िर पे दम निकले

    कहाँ मयखाने का दरवाज़ा 'ग़ालिब' और कहाँ वाइज़
    पर इतना जानते हैं कल वो जाता था के हम निकले

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)