ಬಾಗಿಲು ಮತ್ತು ಗವಾಕ್ಷಿ - ಒಂದು ನೆನಪು

ಸಿ. ಪಿ. ರವಿಕುಮಾರ್ 


ನಾನು ದೆಹಲಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದಾಗ ಮೂರು ವರ್ಷ ಹಾಸ್ಟೆಲ್ ವಾರ್ಡನ್ ಕೆಲಸವನ್ನು ನನಗೆ ಕೊಟ್ಟರು (ಹೇರಿದರು!). ಆಗ ನಡೆದ ಘಟನೆ.


ಕೇರ್ ಟೇಕರ್ : ಸರ್ ಜೀ, ಒಬ್ಬ ಹುಡುಗ ಇದ್ದಾನೆ. ಅವನು ನಮ್ಮ ಹಾಸ್ಟೆಲ್ ನಲ್ಲಿ ನ್ಯಾಯಬಾಹಿರ ರೀತಿಯಲ್ಲಿ ಉಳಿದಿದ್ದಾನೆ.
ನಾನು: ಅದು ಹೇಗೆ ಸಾಧ್ಯ? ಯಾರು ಅವನು?
ಕೇಟೇ: ಅವನು ಅನೇಕ ಸಲ ಫೇಲ್ ಆದ ವಿದ್ಯಾರ್ಥಿ. ಅವನು ಐಐಟಿಯಲ್ಲಿ ಇರಲೇ ಬಾರದು. ಅವನು ಫೀಜ್ ಕೂಡಾ ಕಟ್ಟಿಲ್ಲ.
ನಾನು: ಮತ್ತೆ?
ಕೇಟೇ: ಅವನು ತನ್ನ ಸ್ನೇಹಿತರ ರೂಮುಗಳಲ್ಲಿ ಹೇಗೋ ಬಂದಿರುತ್ತಾನೆ.
ನಾನು: ನೀವು ಅವನನ್ನು ಕರೆದುಕೊಂಡು ಬನ್ನಿ, ನಾನು ಮಾತಾಡುತ್ತೇನೆ.
ಕೇಟೇ: ಸರ್ ಜೀ, ಅವನು ನಮ್ಮ ಕೈಗೆ ಸಿಕ್ಕರೆ ತಾನೇ?
ನಾನು: ಹಾಗೆಂದರೆ ಏನ್ರೀ?
ಕೇಟೇ: ಸರ್, ಅವನು ದಿನಕ್ಕೊಂದು ರೂಮಿನಲ್ಲಿ ಇರುತ್ತಾನೆ. ಅರ್ಧ ರಾತ್ರಿ ಎಲ್ಲೋ ಇದ್ದು ಬೆಳಗಿನ ಜಾವ ಯಾವುದೋ ಮಾಯದಲ್ಲಿ ಹಾಸ್ಟೆಲಿಗೆ ಬರುತ್ತಾನೆ. ಇಲ್ಲಿ ಮಲಗಿದ್ದು ಯಾವುದೋ ಮಾಯದಲ್ಲಿ ಮಧ್ಯಾಹ್ನ ಪರಾರಿ ಆಗುತ್ತಾನೆ.
ಕೇಟೇ: ಅವನ ಸ್ನೇಹಿತರು ಯಾರು? ಅವರನ್ನು ಕಳಿಸಿ.
ಕೇಟೇ: ಸರ್ ಜೀ, ಅವರು ಅವನಿಗೆ ರೂಂ ಕೊಟ್ಟ ವಿಷಯ ಒಪ್ಪಿಕೊಳ್ಳುವುದಿಲ್ಲ. ಹೇಗೆ ಹಿಡಿಯೋದು? ಯಾರನ್ನ ಕರೆಯೋದು?
ನಾನು: ಒಳ್ಳೇ ಫಜೀತಿ ಆಯಿತಲ್ಲ. ಅವನ ವಿರುದ್ಧ ಕಂಪ್ಲೇಂಟ್ ತಂದಿದ್ದೀರಿ. ಅವನು ಇಲ್ಲಿ ಇರುತ್ತಾನೆ ಅನ್ನೋದಕ್ಕೆ ಏನಾದರೂ ಪುರಾವೆ ಬೇಕಲ್ಲ. ಅದನ್ನು ತನ್ನಿ.

ನಾನು ಅವನ ಬಗ್ಗೆ ಹುಡುಗರಲ್ಲಿ ವಿಚಾರಿಸಿದೆ. ಅವನೊಬ್ಬ ಹಿರಿಯ ವಿದ್ಯಾರ್ಥಿ. ಈಗಾಗಲೇ ಅವನು ಇಂಜಿನಿಯರ್ ಆಗಿ ಹೊರಗಿರಬೇಕಾಗಿತ್ತು. ಕೆಟ್ಟ ಹಾದಿಗೆ ಬಿದ್ದಿದ್ದ. ಯಾರನ್ನು ಕೇಳಿದರೂ "ನಮಗೆ ಗೊತ್ತಿಲ್ಲ" ಎಂದೇ ಉತ್ತರ ಕೊಟ್ಟರು. ಆದರೆ ಅವರಿಗೆ ಅವನ ವಿಷಯ ಗೊತ್ತಿದೆ ಎಂದು ಅವರ ಮುಖ ಹೇಳುತ್ತಿತ್ತು. ವಾರ್ಡನ್ ಇಂತಹವನನ್ನು ಹುಡುಕುತ್ತಿದ್ದಾರೆ ಎಂಬ ಸುದ್ದಿ ಹರಡಿತು. ನಾನು ಸೆಕ್ಯೂರಿಟಿ ಗಾರ್ಡ್ ಜೊತೆ ಮಾತಾಡಿ ಇಂಥವನು ಬಂದರೆ ನನ್ನ ಬಳಿ ಕರೆದು ತಾ ಎಂದು ಹೇಳಿದೆ. "ಅತಿಥಿಗಳಿಗೆ ರೂಮುಗಳಲ್ಲಿ ತಂಗಲು ಪ್ರವೇಶವಿಲ್ಲ. ಹಾಗೆ ಯಾರಾದರೂ ಅತಿಥಿಗಳನ್ನು ರೂಮಿನಲ್ಲಿ ಇರಿಸಿಕೊಂಡರೆ ಜುಲ್ಮಾನೆ ವಿಧಿಸಲಾಗುವುದು" ಇತ್ಯಾದಿ ಎಚ್ಚರಿಕೆಯ ನೋಟೀಸ್ ಕೂಡಾ ಅಂಟಿಸಲಾಯಿತು.

ಒಂದು ದಿನ ಒಬ್ಬ ಹುಡುಗ ಬಂದು "ಸರ್, ನಿಮ್ಮ ಜೊತೆ ಒಂದು ಗುಟ್ಟು ಹೇಳಬೇಕು," ಎಂದ. ಈ ಹಿರಿಯ ವಿದ್ಯಾರ್ಥಿಯ ಬಗ್ಗೆ ತನಗೆ ಗೊತ್ತಿದೆ, ಆದರೆ ತಾನು ಹೇಳಿದೆ ಎಂದು ಯಾರಿಗೂ ಹೇಳಬಾರದೆಂದು ಕೇಳಿಕೊಂಡ. ಈ ವಿದ್ಯಾರ್ಥಿ ಯಾರ ರೂಮುಗಳಲ್ಲಿ ಇರುತ್ತಾನೆ ಎಂದು ತಿಳಿಸಿದ.

ನಾನು: ಅಲ್ಲ, ನಾನು ನೋಟೀಸ್ ಕೊಟ್ಟ ಮೇಲೂ ಈ ಹುಡುಗರು ಅವನಿಗೆ ಸ್ಥಳ ಕೊಟ್ಟಿದ್ದಾರಾ?
ಹುಡುಗ: ಇಲ್ಲ ಸರ್! ಅವನು ಈನಡುವೆ ಹಾಸ್ಟೆಲಿಗೆ ಬರುತ್ತಿಲ್ಲ
ನಾನು: ಮತ್ತೆ ಎಲ್ಲಿರುತ್ತಾನೆ?
ಹುಡುಗ: ರಾತ್ರಿ ಎಲ್ಲಾ ಯಾವುದೋ ಲ್ಯಾಬಿನಲ್ಲಿ ಇರುತ್ತಾನೆ. ಬೆಳಗಾಗ ಬೇರೊಂದು ಹಾಸ್ಟೆಲಿಗೆ ಹೋಗುತ್ತಿದ್ದಾನೆ.
ನಾನು: ಯಾವ ಲ್ಯಾಬ್ ಗೊತ್ತಾ?
ಅವನು ತಿಳಿಸಿದ.

ಮರುದಿನ ಬೆಳಗ್ಗೆ ನಾನು ಮೊದಲ ಕ್ಲಾಸಿಗೆ ಮುಂಚೆ ಈ ಲ್ಯಾಬಿಗೆ ಹೋದೆ. ಅಲ್ಲಿ ಒಬ್ಬ ಹುಡುಗ ಕಂಪ್ಯೂಟರ್ ಮುಂದೆ ಕೂತಿದ್ದ. ನನ್ನನ್ನು ನೋಡಿದ ಕೂಡಲೇ ಅವನ ಮುಖದ ರಂಗು ಮಾಯವಾಯಿತು.

ನಾನು: ನೀನು ... ಅಲ್ಲವಾ?
ಅವನು ಸುಮ್ಮನಿದ್ದ.
ನಾನು: ಯಾಕೆ ಸುಮ್ಮನಿದ್ದೀಯಾ?
ಅವನು: ಹೌದು.
ನಾನು: ನೀನು ಈ ಲ್ಯಾಬಿಗೆ ಹೇಗೆ ಪ್ರವೇಶ ಪಡೆದುಕೊಂಡೆ? ನಿನಗೆ ಕೀ ಕೊಟ್ಟವರು ಯಾರು? ನೀನು ಇಲ್ಲಿ ವಿದ್ಯಾರ್ಥಿಯೇ?
ಅವನು ಬೆಬ್ಬೆಬ್ಬೆ ಅಂದ.
ನಾನು: ನೋಡು, ನಿನ್ನ ವಿಷಯ ನನಗೆ ಗೊತ್ತು. ನೀನು ಯಾಕೆ ಇನ್ನೂ ಐಐಟಿ ಬಿಟ್ಟು ಹೋಗಿಲ್ಲ? ನಿನಗೆ ಇಲ್ಲಿ ಈಗ ಏನು ಕೆಲಸ?

ಹೀಗೆ ಹೇಳುವುದು ನನಗೂ ಕಷ್ಟವಾಯಿತು. ಅವನು ಸುಮಾರು ಇಪ್ಪತ್ತೈದು ವರ್ಷದ ತರುಣ.

ಅವನ ಕುಟುಂಬದ ಬಗ್ಗೆ ತಿಳಿದುಕೊಳ್ಳಲು ಒಂದಷ್ಟು ಪ್ರಶ್ನೆಗಳನ್ನು ಕೇಳಿದೆ. ಅವನು ಯಾವುದಕ್ಕೂ ಸರಿಯಾಗಿ ಉತ್ತರ ಹೇಳಲಿಲ್ಲ. ಉತ್ತರಿಸುವಾಗ ಎಲ್ಲೋ ನೋಡುತ್ತಿದ್ದ. ತನ್ನ ಬಗ್ಗೆ ಅದೆಷ್ಟೋ ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡಿದ್ದ ತಂದೆತಾಯಿಯರ ನೆನಪು ಅವನಿಗೆ ಬಂದಿರಬಹುದು. ತಾನು ಮಾಡುತ್ತಿರುವುದು ತಪ್ಪು ಎಂಬ ಅರಿವು ಅವನಿಗೆ ಇಲ್ಲದೇ ಇರಲಿಲ್ಲ. ನಾನು ಅವನಿಗೆ ಒಂದೆರಡು ಧೈರ್ಯದ ಮಾತು ಹೇಳಿದೆ. "ನೋಡು, ನಿನ್ನ ಜೀವನ ಮುಗಿದೇ ಹೋಯಿತು ಎಂದೇನೂ ಇಲ್ಲ. ಇನ್ನೂ ಕಾಲ ಮಿಂಚಿಲ್ಲ. ನಿನ್ನ ತಂದೆ-ತಾಯಿಗೆ ಎಲ್ಲಾ ವಿವರಿಸು. ಅವರೇನೂ ನಿನ್ನನ್ನು ತ್ಯಾಗ ಮಾಡುವುದಿಲ್ಲ. ಹೀಗೆ ಇಲಿಯ ಹಾಗೆ ಎಷ್ಟು ದಿವಸ ಇಲ್ಲಿ ಇರುತ್ತೀಯಾ? ನೀನು ಐಐಟಿ ಜೆಈಈ ಪರೀಕ್ಷೆಯಲ್ಲಿ ಪಾಸಾಗಿ ಬಂದವನು. ಬುದ್ಧಿವಂತ. ಪ್ರಯತ್ನ ಪಟ್ಟರೆ ನಿನಗೆ ಖಂಡಿತ ಒಂದು ನೌಕರಿ ಸಿಕ್ಕುತ್ತದೆ. ನನಗೆ ಒಂದು ಉಪಕಾರ ಮಾಡು. ದಯವಿಟ್ಟು ನಮ್ಮ ಹಾಸ್ಟೆಲಿನಲ್ಲಿ ಯಾರ ರೂಮಿನಲ್ಲೂ ಇರಲು ಬರಬೇಡ. ನನಗೆ ನಿನ್ನ ಸ್ನೇಹಿತರ ಹೆಸರು ಗೊತ್ತು. ನಾನು ಅವರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಗೊತ್ತಾಯಿತೆ?"

ಅವನು ಸುಮ್ಮನಿದ್ದ. ಇನ್ನೇನೂ ಮಾತನಾಡಲು ನನಗೆ ತೋರಲಿಲ್ಲ. ನನ್ನ ಕ್ಲಾಸಿನ ಸಮಯವೂ ಆಗಿತ್ತು. ನಾನು ಹೊರಟೆ.

ಅದಾದ ನಂತರ ಒಮ್ಮೆ ಅವನ ವಿಷಯ ಕೇರ್ ಟೇಕರ್ ಬಳಿ ಕೇಳಿದೆ. ಅವನು ಈಚೆಗೆ ಹಾಸ್ಟೆಲಿನಲ್ಲಿ ಕಾಣಿಸಿಲ್ಲ ಎಂದು ಹೇಳಿದ.

ಬೇಸಿಗೆ ರಜಗಳು ಬಂದವು. ರಜಗಳು ಮುಗಿದವು. ಐಐಟಿ ಮತ್ತೆ ಪ್ರಾರಂಭವಾಯಿತು. ಹಾಸ್ಟೆಲ್ ಚುನಾವಣೆ ನಡೆಯಿತು. ಹೊಸ ಮುಖಂಡರು ಚುನಾಯಿತರಾದರು.

ಒಂದು ದಿನ ನಮ್ಮ ಹಾಸ್ಟೆಲಿನ ವಿದ್ಯಾರ್ಥಿ ಮುಖಂಡ ನಮ್ಮ ಮನೆಯ ಬಾಗಿಲು ತಟ್ಟಿದ.

"ಸರ್, ಪಾಸ್ ಆದ ಕೆಲವು ಹುಡುಗರು ನಮ್ಮ ಹಾಸ್ಟೆಲಿನಲ್ಲಿ ಇನ್ನೂ ಉಳಿದುಕೊಂಡಿದ್ದಾರೆ," ಎಂದ.

"ಅವರಿಗೆ ಇಲ್ಲೇನು ಕೆಲಸ?"

"ಸರ್, ಇದೇ ಹಾಸ್ಟಲಿನಲ್ಲಿ ಓದಿದವರು. ಫ್ರೆಂಡ್ಸ್ ಇದ್ದಾರೆ."

"ಅವರಿಗೆ ಕೆಲಸ ಸಿಕ್ಕಿಲ್ಲವೇ?"

"ಸಿಕ್ಕಿದೆ ಸರ್."

ನನಗೆ ರೇಗಿತು. ಕೈತುಂಬಾ ಸಂಪಾದಿಸಿದರೂ ಹಾಸ್ಟೆಲಿನಲ್ಲಿ ಇರುವುದು ಅಕ್ಷಮ್ಯ. ಅವರ ಸ್ನೇಹಿತರು ಅವರಿಂದ ಹಣವನ್ನೋ ಅಥವಾ ಬೇರಾವುದಾದರೂ ಬಗೆಯಲ್ಲಿ ಉಪಕಾರವನ್ನು ಪಡೆಯುತ್ತಿಲ್ಲ ಎಂದು ಹೇಗೆ ಹೇಳುವುದು?

"ನಿನಗೆ ಈ ವಿದ್ಯಾರ್ಥಿಗಳ ಬಗ್ಗೆ ಗೊತ್ತಾ? ನೀನು ಹಾಸ್ಟೆಲ್ ವಿದ್ಯಾರ್ಥಿ ಮುಖಂಡ. ಹೀಗಾಗಿ ನೀನು ಅವರ ಮೇಲೆ ಕ್ರಮ ತೊಗೊಳ್ಳಬಹುದು."

"ಸರ್, ನೀವೇ ಕ್ರಮ ತೆಗೆದುಕೊಂಡರೆ ಒಳ್ಳೆಯದು. ನಾನು ಎಷ್ಟಾದರೂ ಅವರ ಓರಗೆಯವನು."

ನಾನು ಕೇರ್ ಟೇಕರ್ ಬಳಿ ನೋಟೀಸ್ ಬರೆಸಿ ಹಾಕಿಸಿದೆ. ಅವನು ಹೇಳಿದ ವಿದ್ಯಾರ್ಥಿಗಳು ಕಾಣಿಸಿದರೆ ಅವರಿಗೆ ಸ್ಥಳ ನೀಡಿದವರಿಗೆ ಜುಲ್ಮಾನೆ ಹಾಕಬೇಕೆಂದು ತಿಳಿಸಿದೆ. ಕೊನೆಗೂ ಅವರನ್ನು ಹಾಸ್ಟೆಲ್ ಬಿಡಿಸಿದ್ದಾಯಿತು.

ಒಂದು ವರ್ಷ ಕಳೆಯಿತು. ಬೇಸಿಗೆ ರಜೆಗಳು ಬಂದವು. ರಜೆಗಳು ಮುಗಿದು ಮತ್ತೆ ಹೊಸಚಕ್ರ ಪ್ರಾರಂಭವಾಯಿತು. ಹೊಸ ಮುಖಂಡರು ಆಯ್ಕೆಯಾದರು.

ಮತ್ತೊಮ್ಮೆ ರಾತ್ರಿ ಮನೆಯ ಬಾಗಿಲನ್ನು ಯಾರೋ ತಟ್ಟಿದರು. ಹೊಸ ವಿದ್ಯಾರ್ಥಿ ಮುಖಂಡ ಹೊರಗೆ ನಿಂತಿದ್ದ.

"ಸರ್, ನಿಮ್ಮ ಜೊತೆ ಸ್ವಲ್ಪ ಗುಟ್ಟಾಗಿ ಮಾತಾಡಬೇಕಿತ್ತು."

"ಏನಾಯಿತು?"

"ಸರ್, ನಮ್ಮ ಹಾಸ್ಟೆಲಿನ ಹಳೆಯ ವಿದ್ಯಾರ್ಥಿ ಒಬ್ಬ ಮೂರು ತಿಂಗಳಿನಿಂದ ಇಲ್ಲೇ ವಾಸವಾಗಿದ್ದಾನೆ."

"ಅರೆ! ಯಾರು?"

ಅವನು ತಗ್ಗಿದ ಧ್ವನಿಯಲ್ಲಿ ಒಂದು ಹೆಸರನ್ನು ಹೇಳಿದ. ನನಗೆ ಆಘಾತವಾಯಿತು. ಕಳೆದ ವರ್ಷದ ವಿದ್ಯಾರ್ಥಿ ಮುಖಂಡನ ಹೆಸರು! ಈತನ ಜೊತೆ ನಾನು ಒಂದು ವರ್ಷ ಕೆಲಸ ಮಾಡಿದ್ದೆ.

"ಏನು? ಕಳೆದ ವರ್ಷ ಹೌಸ್ ಸೆಕ್ರೆಟರಿ ಆಗಿದ್ದನಲ್ಲ, ಅವನು ತಾನೇ?"

"ಹೌದು ಸರ್."

ಕೊನೆಗೂ ಈ ಹಳೆಯ ವಿದ್ಯಾರ್ಥಿ ಮುಖಂಡನನ್ನು ಎದುರಿಸುವ ಸಂದರ್ಭ ಬಂತು. "ಕಳೆದ ವರ್ಷ ನೀನು ಬಂದು ಬೇರೆಯವರ ಮೇಲೆ ಕಂಪ್ಲೇಂಟ್ ಹೇಳಿದೆ. ಈಗ ನೀನೇ ಈ ಕೆಲಸ ಮಾಡಬಹುದಾ?"

ಅವನು ಏನೂ ಆಗಿಲ್ಲ ಎನ್ನುವ ಹಾಗೆ ಸುಮ್ಮನಿದ್ದ. ನಾನು ಅವನಿಗೆ ಖಾರವಾಗಿ ಎಚ್ಚರಿಕೆ ಕೊಟ್ಟು "ನೋಡು, ಈಗ ನೀನು ಈ ಹಾಸ್ಟೆಲಿನ ವಿದ್ಯಾರ್ಥಿ ಅಲ್ಲ. ಬೇರೆ ಯಾರೋ ಬಂದು ಹಾಸ್ಟೆಲಿನಲ್ಲಿ ಇದ್ದಾರೆ ಎಂದರೆ ಅದು ಪೋಲೀಸ್ ಕೇಸ್ ಆಗುತ್ತೆ." (ಈಗ ನನಗೂ ಒಂದಿಷ್ಟು ಪಟ್ಟುಗಳು ಗೊತ್ತಾಗಿದ್ದವು.)

ಅವನು ಹರಳೆಣ್ಣೆ ಕುಡಿದ ಮುಖ ಮಾಡಿದ. "ನಾನು ಈ ಹಾಸ್ಟೆಲಿಗಾಗಿ ಬೇಕಾದಷ್ಟು ಕಷ್ಟ ಪಟ್ಟಿದ್ದೇನೆ," ಎಂದು ಹೇಳಲು ಹೊರಟ. ನಾನು ಅವನನ್ನು ಅಲ್ಲೇ ತಡೆದು ಇನ್ನಷ್ಟು ಬುಧ್ಧಿವಾದ ಹೇಳಿದೆ. "ನೀನೀಗ ನಮ್ಮ ಹಾಸ್ಟೆಲ್ ವಿದ್ಯಾರ್ಥಿ ಅಲ್ಲ. ನಿನ್ನ ಸ್ನೇಹಿತರ ಮೇಲೆ ಕ್ರಮ ತೆಗೆದುಕೊಂಡರೆ ನಿನಗೆ ಏನೂ ಅಭ್ಯಂತರವಿಲ್ಲ ತಾನೇ?" ಎಂದೆ.

ಕೊನೆಗೆ ತಾನು ಇನ್ನೆರಡು ದಿನದಲ್ಲಿ ಹಾಸ್ಟೆಲ್ ಖಾಲಿ ಮಾಡುತ್ತೇನೆಂದು ಹೇಳಿ ಹೋದ.

ಇದಾದ ಹಲವು ವರ್ಷಗಳ ನಂತರ ನಾನು ಅಮೆರಿಕೆಯ ಒಂದು ಪ್ರಸಿದ್ಧ ವಿಶ್ವವಿದ್ಯಾಲಯಕ್ಕೆ ಭೇಟಿ ಇತ್ತೆ. ಅಲ್ಲಿ ನನಗೆ ಪರಿಚಯವುಳ್ಳ ಒಬ್ಬ ಪ್ರೊಫೆಸರ್ ನನಗೆ ಅತಿಥೇಯರು. ಮಧ್ಯಾಹ್ನ ಭೋಜನಕ್ಕೆ ನಾವು ಹೊರಗೆ ಒಂದು ರೆಸ್ಟೊರಾಂಗೆ ಹೊರಡಬೇಕಾಗಿತ್ತು.

"ನಮ್ಮ ವಿಭಾಗದ ಕೆಲವು ಯುವಕ ಭಾರತೀಯ ಪ್ರೊಫೆಸರರಿಗೂ ಬರಲು ಹೇಳಿದ್ದೇನೆ," ಎಂದು ನನ್ನ ಅತಿಥೇಯರು ತಿಳಿಸಿದರು. ಈ ಭಾರತೀಯ ಪ್ರೊಫೆಸರ್ ಎದುರಿಗೆ ಬಂದಾಗ ನನಗೆ ಮತ್ತೊಮ್ಮೆ ಆಘಾತ! ಆತ ಬೇರಾರೂ ಅಲ್ಲ, ಬೈಸಿಕೊಂಡು ಹಾಸ್ಟೆಲ್ ಬಿಟ್ಟ ವಿದ್ಯಾರ್ಥಿ ಮುಖಂಡ!!

ಅವನು ನನ್ನನ್ನು ನೋಡಿ ಮುಗುಳಕ್ಕ. ಅವನನ್ನು ನನ್ನ ಅತಿಥೇಯರು ತುಂಬಾ ಹೊಗಳಿದರು. ನಾನು "ಇವನು ಗೊತ್ತು, ನಮ್ಮ ಹಾಸ್ಟೆಲಿನಲ್ಲೇ ಓದಿದವನು!" ಎಂದೆ.

"ನನ್ನ ಬಗ್ಗೆ ಇನ್ನೇನೂ ಹೇಳಬೇಡಿ" ಎನ್ನುವ ದೈನ್ಯದ ನೋಟದಿಂದ ಅವನು ನನ್ನ ಕಡೆ ನೋಡಿದ. ಹೇಳುವ ಇರಾದೆಯೂ ನನಗೆ ಇರಲಿಲ್ಲ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)