ನರನಾಗಿ ಏಕೆ ನಿರಾಸೆ, ಮನವು ಅಧೀರ?
ಮೂಲ ಹಿಂದಿ ಕವಿತೆ: ಮೈಥಿಲೀಶರಣ ಗುಪ್ತ
ಕನ್ನಡಕ್ಕೆ : ಸಿ. ಪಿ. ರವಿಕುಮಾರ್

ಯಾವುದೇ ಕಾರ್ಯದಲ್ಲಿ ತೊಡಗಿಸು ನಿನ್ನುಸಿರು
ಜಗತ್ತಿನಲ್ಲಿದ್ದು ಗಳಿಸು ಒಳ್ಳೆಯ ಹೆಸರು
ನಿನ್ನ ಜನ್ಮಕ್ಕೂ ಇರುವುದೊಂದು ಅರ್ಥ:
ಏನೆಂದು ತಿಳಿದುಕೋ, ಮಾಡದಿರು ವ್ಯರ್ಥ
ನಿನ್ನ ಜನ್ಮಕ್ಕೂ ಇರುವುದೊಂದು ಅರ್ಥ:
ಏನೆಂದು ತಿಳಿದುಕೋ, ಮಾಡದಿರು ವ್ಯರ್ಥ
ಹೇಗಾದರೂ ಉಪಯೋಗವಾಗಲಿ ಶರೀರ
ನರನಾಗಿ ಏಕೆ ನಿರಾಸೆ, ಮನವು ಅಧೀರ?
ಸಾವರಿಸಿಕೋ ಸುಯೋಗ ಲುಪ್ತವಾಗುವ ಮೊದಲೇ!
ಸದುಪಾಯವು ಎಂದಾದರೂ ವ್ಯರ್ಥವಾಗಿದೆಯೇ?
ಜಗವು ಸಹಕರಿಸೀತೆಂಬ ಸ್ವಪ್ನವನು ತೊರೆದು
ನೀನೇ ಮಾರ್ಗವನ್ನು ಮಾಡಿಕೋ ಕೊರೆದು
ಅಖಿಲೇಶ್ವರನು ಇದ್ದಾನೆ ನಿನಗೆ ಆಧಾರ!
ನರನಾಗಿ ಏಕೆ ನಿರಾಸೆ, ಮನವು ಅಧೀರ?
ಎಲ್ಲಿ ಹೋಗಲು ಸಾಧ್ಯ ಹೇಳು ಆ ಸತ್ವ?
ಮಾಡು ನಿನ್ನದೇ ತತ್ತ್ವಗಳ ಸುಧಾಪಾನ
ಎದ್ದು ಅಮೃತತ್ವದ ಕಡೆಗೆ ಇಡು ಹೆಜ್ಜೆಯನ್ನ
ದಾಟಿ ಬಾ ಮುಂದಕ್ಕೆ ಭವಕಾನನ ಘೋರ
ನರನಾಗಿ ಏಕೆ ನಿರಾಸೆ, ಮನವು ಅಧೀರ?
ಆತ್ಮಗೌರವವನ್ನು ಮರೆಯದಿರು ಎಂದೂ
ಆತ್ಮಗೌರವವನ್ನು ಮರೆಯದಿರು ಎಂದೂ
ನೆನಪಿರಲಿ ಶಕ್ತಿಗಿನ್ನೂ ಬಂದಿಲ್ಲ ಕುಂದು,
ಏನು ಕಳೆದರೂ ಕಳೆಯದಿರಲೆಂದೂ ಮಾನ
ಸತ್ತ ಮೇಲೂ ಜನರು ಮಾಡಬೇಕು ಗುಣಗಾನ
ಸಾಗಲಿ ಸಾಧನೆಯತ್ತ ನಿನ್ನ ಸಂಚಾರ
ನರನಾಗಿ ಏಕೆ ನಿರಾಸೆ, ಮನವು ಅಧೀರ?
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ