ಸಾಹಿರ್ ಲುಧಿಯಾನವಿ ಅವರ ಗಜಲ್

ಗಜಲ್ - ಸಾಹಿರ್ ಲುಧಿಯಾನವಿ 
ಕನ್ನಡಕ್ಕೆ: ಸಿ.ಪಿ. ರವಿಕುಮಾರ್ 

ಭಾಷಾಂತರಕಾರನಿಗೆ ಅತ್ಯಂತ ಕಷ್ಟದ ಕೆಲಸವೆಂದರೆ ಗಜಲ್ ಅನುವಾದ! ಉರ್ದುವಿನ ಹೆಸರಾಂತ ಕವಿ ಸಾಹಿರ್ ಲುಧಿಯಾನವಿ ಅವರ ಕೆಲವು ಗಜಲ್ ಗಳ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ.

ಹಿಂದಿ ಚಿತ್ರಗೀತೆಗಳಿಗೆ ಸಾಹಿರ್ ಅವರ ಕೊಡುಗೆ ಅಪಾರವಾದದ್ದು. ಅವರ ಹೆಸರೇ ಹೇಳುವಂತೆ ಅವರು ಪಂಜಾಬಿನ ಲುಧಿಯಾನಾ ಪ್ರಾಂತದವರು (ಜನನ - ೮ ಮಾರ್ಚ್ ೧೯೨೧). ಸಾಹಿರ್ ಹದಿಮೂರು ವರ್ಷದ ಹುಡುಗನಾಗಿದ್ದಾಗ ಅವರ ತಂದೆ ಎರಡನೇ ಮದುವೆ ಮಾಡಿಕೊಂಡರು. ಈ ಪ್ರಕರಣಕ್ಕೆ ಆಗಿನ ಕಾಲಕ್ಕೆ ಸಾಹಿರ್ ನ ತಾಯಿಯ ಪ್ರತಿಕ್ರಿಯೆ ತೀಕ್ಷ್ಣವಾದುದಾಗಿತ್ತು. ಅವರು ತಮ್ಮ ಪತಿಯನ್ನು ಬಿಟ್ಟು ಬೇರೆ  ಮನೆ ಮಾಡಿದರು. ಮಗು ಸಾಹಿರ್ ತಾಯಿಯ ಜೊತೆ ಇರಲು ಇಷ್ಟ ಪಟ್ಟ. ಶ್ರೀಮಂತ ತಂದೆಯ ಆಸ್ತಿಯನ್ನು ತೊರೆಯಬೇಕಾಯಿತು. ಅಷ್ಟೇ ಅಲ್ಲ, ಸೇಡಿನ ಮನೋಭಾವದ ತಂದೆಯ ಕ್ರೌರ್ಯವನ್ನೂ ಎದುರಿಸಬೇಕಾಯಿತು.  ತಾಯಿಯನ್ನು ಹೀಗೆ ಹಚ್ಚಿಕೊಂಡ ಸಾಹಿರ್ ಮುಂದೆ ವಿವಾಹ ಕೂಡಾ ಮಾಡಿಕೊಳ್ಳಲಿಲ್ಲ.

ಬಡತನದಲ್ಲಿ ಬಾಲ್ಯ ಕಳೆಯಿತು. ಯುವಕ ಸಾಹಿರ್ ತನ್ನನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡ. ಅವನ ಬರಹಗಳು ಪ್ರಚೋದನಕಾರಿ ಎಂಬ ಕಾರಣಕ್ಕೆ ಬ್ರಿಟಿಷ್ ಸರಕಾರ ಅವನ ಮೇಲೆ ನಿಗಾ ಇಟ್ಟಿತು.  ಹೀಗಾಗಿ ಸಾಹಿರ್ ದೆಹಲಿಗೆ ಓಡಿ ಹೋಗಬೇಕಾಯಿತು. ಮುಂಬೈ ನಗರಿಯಲ್ಲಿ ಚಲನಚಿತ್ರಗಳಿಗೆ ಬರೆಯುವುದರಿಂದ ಬಡತನವನ್ನು ನೀಗಬಹುದು ಎಂಬ ಯಾರದೋ ಸಲಹೆಯ ಮೇರೆಗೆ ಅವನು ಚಿತ್ರ ನಗರಿ ಮುಂಬೈಗೆ ತಾಯಿಯೊಂದಿಗೆ ಬಂದಿಳಿದ.  ಅಲ್ಲಿ ಚಿತ್ರಗಳಿಗೆ ಗೀತೆಗಳನ್ನು ಬರೆಯುವ ಜೊತೆಗೇ ತನ್ನ ಕಾವ್ಯರಚನೆಯನ್ನೂ ಮುಂದುವರೆಸಿದ. ಸಾಹಿರ್ ಅವರ ಗೀತೆಗಳು ಅಪಾರ ಜನಪ್ರಿಯತೆ ಗಳಿಸಿದವು. ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು.

ಪಂಜಾಬಿ ಲೇಖಕಿ ಅಮೃತಾ ಪ್ರೀತಮ್ ಮತ್ತು ಯುವಕ ಸಾಹಿರ್ ನಡುವೆ ಪ್ರೇಮಾಂಕುರವಾಗಿ ಅದು ಸುದ್ದಿಯೂ ಆಯಿತು. ಕಾರಣಾಂತರಗಳಿಂದ ಅದು ವಿವಾಹದಲ್ಲಿ ಕೊನೆಗಾಣಲಿಲ್ಲ.

ಸಾಹಿರ್ ಅವರ ಚಿತ್ರಗೀತೆಗಳಲ್ಲಿ ಸಾಹಿತ್ಯಕ ಗುಣಗಳಿವೆ. ಉರ್ದೂ ಭಾಷೆಯ ಅತ್ಯುತ್ತಮ ಪ್ರಯೋಗವನ್ನು ಅವರ ಗೀತೆಗಳಲ್ಲಿ ನಾವು ನೋಡಬಹುದು.


(1)
ಕಂಬನಿಗರೆದೆ

ಕಂಬನಿಗರೆದೆ ನನ್ನ ಸ್ಥಿತಿಗಾಗಿ, ಕೆಲವೊಮ್ಮೆ ನನ್ನನ್ನೇ ನೋಡಿ   
ಬಾಯಿ ತೆರೆದರೆ ಪ್ರತಿಯೊಂದು ಮಾತಿಗೂ ಕಂಬನಿಗರೆದೆ 

ಅವರನ್ನು ಮರೆತೆನೆಂದೇ ನಂಬಿತ್ತು  ಹೃದಯ 
ಏನಾಯಿತೋ ಇಂದು  ಯಾವುದೋ ಮಾತಿಗೆ ಕಂಬನಿಗರೆದೆ 

ಯಾಕೆ ಜೀವಿಸುತಿರುವೆ ಯಾರಿಗಾಗಿ  ಜೀವಿಸುತಿರುವೆ 
ಕೇಳಿ ಇಂತಹ ಹತ್ತು ಪ್ರಶ್ನೆ ಕಂಬನಿಗರೆದೆ 

ಪರರಿಗಾಗಿ ಹೇಳು ಯಾರು ಅಳುವರು ಗೆಳೆಯ
ತಮ್ಮದಕ್ಕೇ ಅಳುವಂತೆ ಎಲ್ಲರೂ ನಾನೂ ಕಂಬನಿಗರೆದೆ 

(ಹಮ್ ದೋನೋ ಚಿತ್ರದಲ್ಲಿ ಮೊಹಮ್ಮದ್ ರಫಿ ಅವರು ಹಾಡಿರುವ ಈ ಗಜಲ್ ಬಹಳ ಜನಪ್ರಿಯವಾಗಿದೆ.)


(2)


ನಡೆ,ನಾವು ಅಪರಿಚಿತರಾಗಿ ಬಿಡೋಣ ಮತ್ತೊಮ್ಮೆ 


ನಡೆ,ನಾವು ಅಪರಿಚಿತರಾಗಿ ಬಿಡೋಣ ಮತ್ತೊಮ್ಮೆ 


ನಿನ್ನಿಂದ ನಾನು ಅಪೇಕ್ಷಿಸುವುದಿಲ್ಲ ಹೃದಯಾರಾಧನೆ 
ನಿನ್ನ ನೋಟದಲ್ಲೂ ಕಾಣದಿರಲಿ  ನನ್ನನ್ನು ಕುರಿತು ಅನ್ಯಥಾ ಭಾವನೆ 
ನನ್ನ ಮಾತುಗಳಲ್ಲಿ ತೋರದಿರಲಿ ನನ್ನೆದೆಯ ಮುಗ್ಗರಿಸುವ ನಡೆ 
ನಿನ್ನ ನೋಟದಲ್ಲೂ ಇಣುಕದಿರಲಿ ನಿನ್ನೆದೆಯ ಯಾತನೆ 

ಮುಂಬರಿಯದಂತೆ ತಡೆಯುತ್ತಿದೆ ನಿನ್ನನ್ನು ಯಾವುದೋ ಗೊಂದಲ 
ನನ್ನ ಯೌವ್ವನೋತ್ಕರ್ಷಕ್ಕೂ ಬೇರೆ ಹೆಸರಿಡುತ್ತಿದ್ದಾರೆ ಜನ 
ಗಾಳಿಮಾತುಗಳಾಗಿ ಹೆಜ್ಜೆ ಹಾಕುತ್ತಿವೆ ನನ್ನ ಜೊತೆ  ಹಳೆಯ ಸವಿನೆನಪು 
ನಿನ್ನನ್ನು ಹಿಂಬಾಲಿಸುತ್ತಿವೆ ಕಳೆದ ಇರುಳುಗಳ ಕಪ್ಪುನೆರಳುಗಳು 

ಪರಿಚಯವು ರೋಗಕ್ಕೆ ತಿರುಗಿದರೆ ಅದನ್ನು ಮರೆಯುವುದೇ ಕ್ಷೇಮ 
ಹೊರೆಯಾದರೆ ಸಂಬಂಧವು  ಅದನ್ನು ಮುರಿಯುವುದು ಜಾಣತನ 
ತಾರಲಾಗದೆ ಹೋದರೆ ಪ್ರಕರಣಕ್ಕೆ ಪರಿಣಾಮವೆಂಬ ಅಂತ 
ನೀಡಿ ಅದಕ್ಕೊಂದು ಸುಂದರ ತಿರುವು ಕೊನೆಗೊಳಿಸುವುದು ಉಚಿತ 

(ಮಹೇಂದ್ರ ಕಪೂರ್ ಅವರು ಹಾಡಿರುವ  "ಚಲೋ ಏಕ್ ಬಾರ್ ಫಿರ್ ಸೆ ಅಜನಬಿ ಬನ್ ಜಾಯೇನ್ ಹಮ್ ದೋನೋ" ಚಿತ್ರಗೀತೆ ಬಹಳ ಜನಪ್ರಿಯವಾಗಿದೆ)

(3)

ಕ್ಷಣ ಒಂದೆರಡು ಕ್ಷಣಗಳ ಕವಿ ನಾನು

ಕ್ಷಣ ಒಂದೆರಡು ಕ್ಷಣಗಳ ಕವಿ ನಾನು, 
ಕ್ಷಣ ಒಂದೆರಡು ಕ್ಷಣಗಳಷ್ಟೆ ನನ್ನ ಕಥೆ
ಒಂದೆರಡು ಕ್ಷಣಗಳ ಮಾಯೆಯಷ್ಟೇ ನಾನು, 
ಕ್ಷಣಗಳದು ನನ್ನ ಯೌವ್ವನ ಮಾದಕತೆ 

ನಾನೇನು ಮೊದಲಿಗನಲ್ಲ,  ಅದೆಷ್ಟೋ ಕವಿಗಳು 
ಆಗಿಹೋದರು ನನಗೂ ಪೂರ್ವದಲ್ಲಿ 
ನಿಟ್ಟುಸಿರು ಬಿಟ್ಟವರು ಕೆಲವರು, ಕೆಲವರು 
ಬಿಡಿಸಿದರು ಹಾಡುಗಳ ರಂಗವಲ್ಲಿ. 
ಒಂದೆರಡು ಕ್ಷಣಗಳಷ್ಟೆ ಅವರ ಪ್ರಕರಣ, 
ಹಾಗೇ ನನ್ನ ಪ್ರಕರಣವೂ ಒಂದೆರಡು ಕ್ಷಣಗಳದ್ದೇ 
ಬೇರಾಗುತ್ತೇನೆ ನಾನೂ ಮುಂದೊಂದು ದಿನ, 
ಇಂದು ನಿಮ್ಮ ಜೊತೆ ಲೀನವಾಗಿರುವೆ  

ನಾಳೆ ಹುಟ್ಟುತ್ತಾರೆ ನಿಸ್ಸಂಶಯವಾಗಿಯೂ  
ಕವಿತೆಗಳ ನಗೆಮೊಗ್ಗು ಆಯ್ದು ಬಿಡಿಸುವರು  
ನನಗಿಂತಲೂ ಚೆನ್ನಾಗಿ ಹಾಡುವವರು, 
ನಿಮಗಿಂತಲೂ ಒಳ್ಳೆಯ ಶ್ರೋತೃವೃಂದಗಳು 
ನಾಳೆ ಯಾರಾದರೂ ನೆನೆಯುವರೆ ನನ್ನನ್ನು, 
ಯಾಕೆ ನೆನೆದಾರು ನನ್ನನ್ನು ನಾಳೆ?
ನನಗಾಗಿ ಸಮಯವನು ವ್ಯಯಗೊಳಿಸುವರು ಯಾಕೆ? 
ಅವರವರ ಕೆಲಸವಿದೆ  ಅವರವರಿಗೆ

(ಮುಖೇಶ್ ಹಾಡಿರುವ ಕಭೀ ಕಭೀ ಚಿತ್ರದ ಈ ಗೀತೆ ಬಹಳ ಜನಪ್ರಿಯವಾಗಿದೆ.)


(Gazals by Sahir Ludhianvi, translated by C.P. Ravikumar).

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)