ಕಾವ್ಯಯುಗಾದಿ


Green and Pink Leaf Tree in Green Grass Open Field during Day Time
ಸಿ. ಪಿ. ರವಿಕುಮಾರ್

ಹೊಂಗೆ ಮರಕ್ಕೆ ಯಾರು ಓದಿ ಹೇಳಿದರು ಪಂಚಾಗ?
ಟೊಂಗೆ ಟೊಂಗೆಯಲ್ಲೂ ಹೂವು, ಗುಂಜಿಸುವ ಭೃಂಗ!
ಅಗೋ ಹಳದಿ ಹೂಗಳ ಸೆರಗು ಹೊದ್ದು  ತಲೆಯ ಮೇಲೆ
ನಗುನಗುತ್ತಾ ನಿಂತ ಸ್ವರ್ಣವರ್ಷ ಮರಗಳ ಸಾಲೇ
ರಂಗವಲ್ಲಿ ಹಾಕುತ್ತಿವೆ ನಾನು ನಡೆವ ಹಾದಿಗೆ!
ರಾಗವೊಂದು ಮೊಳೆಯುತ್ತಿದೆ ನನ್ನ ಹಳೆಯ ಹಾಡಿಗೆ!

ಸಾಗುತ್ತಿದ್ದೆನಲ್ಲ ಇದೇ ರಸ್ತೆಯಲ್ಲಿ ಪ್ರತಿದಿನ,
ಮಾಗಿ ಚಳಿಗೆ ಮುದುರಿ ಮೌನತಳೆಯುತಿತ್ತು ಕವಿಮನ -
ಅಗಣಿತವೆನ್ನಿಸತೊಡಗಿ ಚಳಿಗಾಲದ ರಾತ್ರಿ,
ದುರ್ಗಮವೆನ್ನಿಸುತ್ತಿತ್ತು ಹಿಮಕವಿದ ಧಾತ್ರಿ!
ಈಗ ಏಕಾಏಕಿ ಸ್ವರ್ಣಪುಷ್ಪಗಳ ವೃಷ್ಟಿ!
ಸಾಗುವುದೇ ಹೀಗೇನೋ ಜಗದಲ್ಲಿ  ಸೃಷ್ಟಿ!
ಯುಗಾಂತವು ಹೆರಿಗೆಯ ನೋವು, ಸಹನೆಯ ಪರೀಕ್ಷೆ, ಕಹಿ ಬೇವು
ಯುಗಾದಿ ಶಿಶುವಿನ ಕೇಕೆ, ಕವನದ ಮೊದಲ ಸಾಲು, ಮುಂಜಾವು.

(c) ಮಾರ್ಚ್ ೨೦೧೮ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)