ಸಂಪಾದಕನ ಸ್ವಗತ

ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ 
ವರದಿ ತಲುಪಿದೆ 
ಬ್ರಿಟನ್ ಸುದ್ದಿಪತ್ರಿಕೆಯ ಸಂಪಾದಕನಿಗೆ. 
ಕನ್ನಡಕದ ಕಣ್ಣು ಓದುತ್ತಿದೆ ವರ್ತಮಾನ. 

ಅಮೃತ ಸರೋವರದ ದಡದಲ್ಲಿ
ಮೃತ್ಯುವಿಗೆಲ್ಲಿದೆ ಸ್ಥಾನ?
ಸತ್ತವರ ಸಂಖ್ಯೆ ನೂರೂ ಚಿಲ್ಲರೆ
ಅದಕ್ಕೇಕೆ ದೊಡ್ಡಕ್ಷರದ ಬಿಗುಮಾನ?

ಬೇಡ ಇದಕ್ಕೆ ಸಲ್ಲದು
ಮೊದಲ ಪುಟದ ಸ್ಥಾನಮಾನ
ಒಳಗಿನ ಪುಟದ ಮೂಲೆಯಲ್ಲಿರಲಿ ಸಾಕು
ಜಲಿಯಾನ್ ವಾಲಾ ಉದ್ಯಾನ!

ಮೊದಲ ಪುಟ ಸುದ್ದಿಯೆಂದರೆ
ರಾಣಿಯ ಹೊಸಬೆಕ್ಕು ಜೊಹಾನಾ.

ನಗರದಲ್ಲಿದ್ದಾಗ ರೌಲಟ್ ಕಾಯಿದೆ
ಅಷ್ಟೊಂದು ಜನ ಸೇರಿದ್ದೇ ಅಪಮಾನ!
ಡಯರ್ ಮಾಡಿದ್ದು ಒಳ್ಳೆಯದೇ
ಹೆಚ್ಚಿಕೊಳ್ಳುತ್ತಿದ್ದಾರೆ ಕಂದುಜನ ದಿನದಿನಾ!

ನೆನ್ನೆ ಖಜಾನೆಗೆ ಲಗ್ಗೆ ಇಡುವಷ್ಟು ಧಾರ್ಷ್ಟ್ಯ!
ಒಬ್ಬ ಬ್ರಿಟಿಷ್ ಹೊಂದಿದ್ದಾನೆ ಅವಸಾನ!
ಗಾಯಗೊಂಡಿದ್ದಾರೆ ರಾಣಿಯ ಇಬ್ಬರು ಸೇವಕರು!
ಈ ಗಾಂಧಿ ಆಗಿಕೂತಿದ್ದಾನೆ ದೊಡ್ಡ ಯಜಮಾನ!!

ಲೋ ಯಾರಲ್ಲಿ! ತೊಗೊಳ್ಳಿ ಎಂಟನೇ ಪುಟಕ್ಕೆ
ಅಳವಡಿಸಿ ಈ ಜುಜುಬಿ ವರದಿಯನ್ನ


(c) ಸಿ. ಪಿ. ರವಿಕುಮಾರ್, ಏಪ್ರಿಲ್ ೨೦೨೧





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)