ಪೋಸ್ಟ್‌ಗಳು

ಶತಪದಿ

ಇಮೇಜ್
ಮೂಲ: ಜೂಲಿ ಹೋಲ್ಡರ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಬಹಳ ಜೋರಾಗಿ ಓಡಬಲ್ಲದು ಜರಿಹುಳು  ಏಕೆಂದರೆ ಅದಕ್ಕಿವೆ ಇನ್ನೂರು ಕಾಲು ಆದರೂ, ಇನ್ನೂರು ಕ್ಲಿಪ್ ಹೊಂದಿಸಿಕೊಂಡು  ಸಾಕ್ಸ್ ಒಣಗಿ ಹಾಕುವುದು ದೊಡ್ದ ಸವಾಲು ಉಡುಗೊರೆ ಕೊಟ್ಟರು ಯಾರೋ ಅದಕ್ಕೆ ವೆಲ್ಲಿಂಗ್ ಟನ್ ಬೂಟು ಐವತ್ತು ಜೊತೆ ಎಡಬಲ ಸಮ ಮಾಡುವ ತನಕ ಪುಟ್ಟ ಮಿದುಳು  ಪಾಪ ಮಳೆಗಾಲ ಮುಗಿದೇ ಹೋಗಿರುತ್ತೆ ನೂರು ಕಾಲಿದೆ ಜರಿಗೆ, ನನಗೆ ಎರಡೇ ಎರಡು ಹಾಗಂತ ನನಗೇನೂ ಹೊಟ್ಟೆಕಿಚ್ಚಿಲ್ಲಪ್ಪ, ಸದ್ಯಕ್ಕೆ. ಎಲ್ಲಿಗೆ ಹೋಗುತ್ತಿದ್ದೇನೆಂದು ಗೊತ್ತಾದಾಗ ಮುಂದಿನ ಕಾಲಿಗೆ ಹಿಂದಿನ ಕಾಲು ಇನ್ನೂ ಅದೇ ಸ್ಥಳದಲ್ಲಿರುತ್ತೆ.

ಪಂಡಿತರು

ಪದಾತಿ ಸೈನಿಕರು, ದೋಷಗಳ ವಿರುದ್ಧ ಸಮರದಲ್ಲಿ  ನಮ್ಮನ್ನು ನಮ್ಮಿಂದಲೇ ರಕ್ಷಿಸುವುದು ಇವರ ಗುರಿ ಸಜ್ಜಿತರಾಗಿ ಬಂದಿದ್ದಾರೆ ಇವರ ಕೈಯಲ್ಲಿದೆ ಶಸ್ತ್ರ  ಶಬ್ದಮಣಿ ರೆವರೆಂಡ್ ಕಿಟ್ಟೆಲ್ ಡಿಕ್ಷನರಿ ನಾವು ಬರೆದ ಪ್ರತಿ ಪದ ಪ್ರತಿ ಸಾಲು ಇವರ ಕೂಲಂಕಷ ಅವಗಾಹನೆಗೆ ಪಾಲು ತಿದ್ದುವರು ಅದು ಹಾಗಲ್ಲ ಹೀಗೆ ಎಂದು ಮಾಡುತ್ತ ಅವಹಾಲು ಹಲ್ಲು ಕಡಿಯುವರು, ಛೇ ಎಂದು ಹಲುಬುವರು  ನಾವು ದಾಟಿದ ಗೆರೆಯನ್ನು ಕೆಕ್ಕರಿಸಿ ನೋಡಿ  ಇನ್ನೇನು ಗತಿ ನಮ್ಮ ಭಾಷೆಗೆ ನಾಡಿಗೆ ಎಂದು ಪರೀಕ್ಷಿಸುವರು ಹಿಡಿದು ನಾಡ ನಾಡಿ. ಕನ್ನಡದ ಭಂಡಾರಕ್ಕೆ ಪಾಲಕರು ಇವರು ಅದನ್ನು ಶುದ್ಧವಾಗಿಡುವುದೇ ಇವರ ಕಾರ್ಯ. ಗರಿಷ್ಠ ಮೂರು ತಪ್ಪುಗಳ ವಿನಾಯಿತಿ ಕೊಟ್ಟಿದ್ದಾರೆ ಎಂಬುದೇ ಸಮಾಧಾನಕರ ವಿಷಯ. ತಿದ್ದುವ ಕೆಲಸದಲ್ಲಿ ಮೂಗು ಕೊಯ್ದರೂ ಓಕೆ  ಆಡಿಸುವರು ಇವರು ಚಕಚಕ ಕತ್ತರಿ ಚಾಕು. ಏನು ಹೇಳಿದ್ದೀರಿ ಲೇಖನದಲ್ಲಿ ನೋಡುವುದಿಲ್ಲ ವ್ಯಾಕರಣ ದೋಷ ಇರದಿದ್ದರೆ ಸಾಕು. ಮೂಲ : Brian Bilston  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಜನಪ್ರಿಯ ಸುದ್ದಿ

ಮ್ಯಾಥೆಮ್ಯಾಟಿಕ್ಸ್ ಪೇಪರ್ ಮೂರು ಸಲ ಕಟ್ಟಿದರೂ ಪಾಸಾಗಲಿಲ್ಲ ,ಸ್ಟ್ಯಾಟಿಸ್ಟಿಕ್ಸ್ ಹೋಗಲಿಲ್ಲ ತಲೆಗೆ ಆದರೆ ದೇವರು ಕೊಟ್ಟಿದ್ದಾನೆ ಗಟ್ಟಿ ದನಿ ಚುರುಕು ನಾಲಗೆ ಹೀಗಾಗಿ ಮೀಡಿಯಾದಲ್ಲಿ ಇವರದ್ದೇ ಜೋರು ಒಬ್ಬರನ್ನು ಇಂಟರ್ವ್ಯೂ ಮಾಡಿ ಸಾಕು ಹೆಚ್ಚೆಂದರೆ ಇಬ್ಬರ ಮುಂದೆ ಹಿಡಿ ಮೈಕು  ನಾಳೆಗೆ ಬೇಕಾದ ವರದಿ ಸಂಜೆಗೆ ಬೇಕಾದ ನ್ಯೂಸ್ಉ ಬರೆದು ಜಲ್ದಿ ಜಲ್ದಿ ಹೇಗೋ ಮುಗಿಸಿ ಕಳಿಸು ಜನ ನೋಡುತ್ತಾರೆ ಹೇಗಿದ್ದರೂ ಕಣ್ಮುಚ್ಚಿಕೊಂಡು ಅವರಿಗೆಲ್ಲಿ ಬೇಕಾಗಿದೆ ಯಾವುದು ನಿಜವೆಂದು ಮನರಂಜನೆಗೆ ತಾನೇ ನೋಡುವುದು ಜನ ಹೀಗಾಗಿ ಹುಡುಕು ಏನಾದರೂ ವಿಲಕ್ಷಣ  ಓದುವಾಗ ಕೆಟ್ಟ ಅಣಕುಧ್ವನಿಯಲ್ಲಿ ಓದು  ಮಧ್ಯೆ ಮಧ್ಯೆ ಅವರಿವರನ್ನು ಒಂದಿಷ್ಟು ಬೈದು ಎಷ್ಟು ಗಟ್ಟಿಯಾಗಿ ಹೇಳುತ್ತೀಯೋ ಅಷ್ಟು ನಂಬುತ್ತಾರೆ ಜನ ಜನಪ್ರಿಯತೆಯೇ ಅಲ್ಲವೇ ಸಂಶೋಧನೆಯ ಲಕ್ಷಣ?

ಸ್ಥಿತಪ್ರಜ್ಞೆ

  ಕೇಳಿದೆನು ಕ್ವಾಂಟಂ ಕಂಪ್ಯೂಟರನ್ನು ನಾನು ಇದೆಯೋ ಇಲ್ಲವೋ ಬಾಕ್ಸಿನಲ್ಲಿ ಬೆಕ್ಕು ಕ್ವಾಕಂ ಉತ್ತರಿಸಿತು ಗಹಗಹಿಸಿ ನಕ್ಕು  ಕೇಳಬಾರದ ಪ್ರಶ್ನೆ ಕೇಳಿದೆಯಲ್ಲ ನೀನು ಎರಡು ಕ್ವಾಂಟಂ ಸ್ಥಿತಿಗಳಿವೆ ಮಾಡಿಕೋ ಮನವರಿಕೆ ಒಂದು ಬೆಕ್ಕಿನ ಇರುವಿಕೆ ಇನ್ನೊಂದು ಇಲ್ಲದಿರುವಿಕೆ ಇರುವುದೂ ಇಲ್ಲದಿರುವುದೂ ಒಮ್ಮೆಲೇ ಸಾಧ್ಯ ಚಂಪೂ ಕಾವ್ಯದಲ್ಲಿ ಇರುವಂತೆ ಗದ್ಯ ಮತ್ತು ಪದ್ಯ ಇದೆಯೋ ಇಲ್ಲವೋ ಎಂಬ ಕುತೂಹಲ ನಿನಗೆ ಹೀಗೇ ತೆರೆದಳು ಒಮ್ಮೆ ಪಂಡೋರಾ ಪೆಟ್ಟಿಗೆ ಪೆಟ್ಟಿಗೆ ತೆರೆದು ಏನಿದೆ ಎಂದು ಹೇಳಲೇ ಬೇಕೇ? ಎರಡು ಸ್ಥಿತಿಗಳನ್ನೂ ಇಳಿಸಲೇಬೇಕಾ ಒಂದಕ್ಕೆ? ಏಕೆ ಕೊಲ್ಲುವೆ ಇದ್ದರೂ ಇಲ್ಲದಂತಿರುವ ಬೆಕ್ಕನ್ನು? ಎಂದು ಜಾರಿತು ಕ್ವಾಕಂ, ಧ್ಯಾನಕ್ಕೆ, ಅರೆಮುಚ್ಚಿ ಕಣ್ಣು ಸಿ ಪಿ ರವಿಕುಮಾರ್ (ಇದು ಕನ್ನಡ ವಿಜ್ಞಾನ ನಾಟಕಕಾರ Shashidhara Dongre M ಅವರಿಗೆ)

ಗೋಸುಂಬೆಯ ಸಮಸ್ಯೆ

ಇಮೇಜ್
  ಗೋಸುಂಬೆಗಳು ಬಣ್ಣ ಬದಲಾಯಿಸುತ್ತವೆ ಎಂದು ಕೇಳಿದ್ದೇನೆ, ನೋಡಿಲ್ಲ. ಮೊನ್ನೆ ಒಂದು ಗೋಸುಂಬೆ ಸಿಕ್ಕಿತು. ಅದು ಯಾಕೋ ಬಹಳ ಬೇಸರ ಮಾಡಿಕೊಂಡು ಒಂದು ಕಲ್ಲಿನ ಮೇಲೆ ಮುಖ ತಗ್ಗಿಸಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿತ್ತು.  ಯಾಕೆ ಹಾಗೆ ಕೂತೆ? ಅಂಥದ್ದೇನು ಆಯಿತು? ಎಂದು ಕೇಳಿದೆ. ಡಿಸ್ಟರ್ಬ್ ಮಾಡಬೇಡ, ನಾನು ಧ್ಯಾನ ಮಾಡುತ್ತಿದ್ದೇನೆ ಎಂದಿತು. ಆದರೆ ನಂತರ ಅದೇ ಮೌನ ಮುರಿದು ಮಾತಾಡಿತು. ಹೋಗಲಿ ಬಿಡು, ನನ್ನಿಂದ ಆಗೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿತು. ಏನು, ಧ್ಯಾನ ಮಾಡೋದು ಆಗೋದಿಲ್ಲವಾ? ನನಗೂ ಕಷ್ಟ. ಟಿವಿ ಮುಂದೆ ಕೂತು ಅಲ್ಲಿ ಹೇಳಿಕೊಡೋ ಧ್ಯಾನ ಮಾಡಲು ಪ್ರಯತ್ನಿಸಿದರೆ ನಡುನಡುವೆ ಜಾಹೀರಾತು ಬರುತ್ತವೆ. ಧ್ಯಾನ ಎಲ್ಲಾ ಅಲ್ಲಿಗೆ ಖಲ್ಲಾಸ್ ಎಂದು ನನ್ನ ಪದಪ್ರಯೋಗಕ್ಕೆ ನಾನೇ ಖುಷಿ ಪಟ್ಟೆ.  ಇಲ್ಲ, ನಾನು ಧ್ಯಾನ ಮಾಡುತ್ತಿರಲಿಲ್ಲ. ಬಣ್ಣ ಬದಲಾಯಿಸಲು ಪ್ರಯತ್ನ ಪಡುತ್ತಿದ್ದೆ. ಈಗ ಅದೆಲ್ಲ ನಮ್ಮ ಕೈಯಲ್ಲಿ ಆಗುತ್ತಲೇ ಇಲ್ಲ. ಮುಂಚೆ ಯಾವ ಕಲ್ಲಿನ ಮೇಲೆ ಕೂಡುತ್ತಿದ್ದೇವೋ ಅದೇ ಬಣ್ಣಕ್ಕೆ ತಿರುಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತಾ ಇದ್ದೆವು. ಈಗ ಅದೆಲ್ಲ ಸಾಧ್ಯ ಆಗುತ್ತಿಲ್ಲ.  ಓಹ್, ಇದು ಜಾಗತಿಕ ಸಮಸ್ಯೆಯಾ? ಯಾವಾಗಿನಿಂದ? ನಾನು ಬೇಕಾದರೆ ಟಿವಿ ರಿಪೋರ್ಟರಿಗೆ ಹೇಳುತ್ತೇನೆ. ಅವನು ಇದನ್ನು ಕವರ್ ಮಾಡಬಹುದು. ಬೇಡ, ಬೇಡ. ಈ ಪ್ರಚಾರದಿಂದಲೇ ನಮ್ಮ ಶಕ್ತಿ ಕುಂದಿದ್ದು.  ಏನೋ ಬಹಳ ವಿಚಿತ್ರ...

ವಿಠ್ಠಲ್ ಪದಕೋಶ

ಇಮೇಜ್
ಬೆಳೆಸಿಕೊಳ್ಳಲು, ವಿಕಸಿಸಿಕೊಳ್ಳಲು, ಹಿಗ್ಗಿಸಲು ತನ್ನ ಕನ್ನಡ ಪದಗಳ ಭಂಡಾರ, ಖಜಾನೆ, ಕೋಶ, ಕೊಂಡನು, ಖರೀದಿಸಿದನು, ಕ್ರಯಕ್ಕೆ ತಂದನು ವಿಠಲ  ಕನ್ನಡ ಕನ್ನಡ ಸಮಾನಾರ್ಥಕ ಪದಕೋಶ. ಇದಾದ ಕೆಲ ಕಾಲದಲ್ಲಿ, ನಂತರ, ತರುವಾಯ, ಅನಂತರ, ಇರಲೇ ಇಲ್ಲ ಅವನಿಗೆ ಪದಗಳಿಗೆ ದುರ್ಭಿಕ್ಷ, ಕ್ಷಾಮ, ಬರ  ಮನಸ್ಸಿಗೆ ತೋರಿದ್ದನ್ನು, ಅನ್ನಿಸಿದ್ದನ್ನು, ತೋಚಿದ್ದನ್ನು ಪ್ರಕಟಿಸಲು, ಆಡಲು, ಪ್ರದರ್ಶಿಸಲು ಪದಗಳ ತತ್ವಾರ ಇದೆಲ್ಲಾ ಸರಿಯೇ, ಒಳ್ಳೆಯದೇ, ಚೆನ್ನವೇ, ಲಾಯಕ್ಕಾದುದೇ, ಮಂಗಳವೇ, ಮೆಚ್ಚುವಂಥದ್ದೇ, ಸ್ತುತ್ಯರ್ಹವೇ, ಆದರೆ ಅವನ ಗೆಳೆಯರಿಗೆ ಪಾಪ ಬೋರಾಗತೊಡಗಿತು, ಬೈರಿಗೆಯಾಯಿತು, ಕೊರೆತ ಎನ್ನಿಸತೊಡಗಿತು ವಿಠಲನನ್ನು ಕಂಡರೆ  ನಿಮಗೆ ಇದು ಆಗಲಿ ಪಾಠ, ಒಂದು ನಿದರ್ಶನ, ಒಂದು ಕಲಿಕೆ, ಒಂದು ಉದಾಹರಣೆ, ಒಂದು ಜೀವನ ಶಿಕ್ಷಣ: ಕಲಿತದ್ದನ್ನು, ಪಡೆದ ಶಿಕ್ಷಣವನ್ನು, ಗಳಿಸಿದ ಪಾಂಡಿತ್ಯವನ್ನು  ಮೆರೆಸಬಹುದು, ತೋರಬಹುದು, ಮಾಡಬಹುದು ಪ್ರದರ್ಶನ  ಆದರೆ ದಯವಿಟ್ಟು, ಕೃಪೆ ಮಾಡಿ, ನಿಮ್ಮ ದಮ್ಮಯ್ಯ, ಕೇಳಿಸಿಕೊಳ್ಳಿ ನನ್ನದೊಂದು ಸಲಹೆ, ಕಿವಿಮಾತು, ಬುದ್ಧಿವಾದ, ಹಿತವಚನ: ಎಂದೂ ಮರೆಯದಿರಿ ಸಂಕ್ಷಿಪ್ತ, ಸಾರಾಂಶ, ರುಚಿಗೆ ತಕ್ಕಷ್ಟು, ಹೃಸ್ವ, ಅಡಕ, ಸಂಗ್ರಹ ಎಂಬ ಪದಗಳನ್ನ. .... Brian Bilston  ಅವರ Roger's Thesaurus ಎಂಬ ಕವಿತೆಯ ಕನ್ನಡ ರೂಪ,  ಭಾವಾನುವಾದ, ರೂಪಾಂತರ. ಇದನ್ನು ಮಾಡಿದ್ದು ನಾನು, ನಿಮ್ಮ ವಿಶ್...

ಪರಿಚಿತೆ (ಕಥೆ)

ಇಮೇಜ್
 ‘ಸಂಯುಕ್ತ ಕರ್ನಾಟಕ’ ‘ಸಾಪ್ತಾಹಿಕ ಸೌರಭ’ದಲ್ಲಿ 17 ಆಗಸ್ಟ್‌ 2025 ಪ್ರಕಟವಾದ ಕಥೆ ( ಸಿ. ಪಿ. ರವಿಕುಮಾರ್) https://epaper.samyukthakarnataka.com/editionname/Bangalore/SMYK_BANG/page/9/article/SMYK_BANG_20250817_09_6 ಅವಳು ಮೇಕಪ್ ಮಾಡಿಕೊಳ್ಳದೆ ಮನೆಯಿಂದ ಹೊರಟುನಿಂತಳು. ಇದು ಬಹಳ ದಿಟ್ಟ ನಿರ್ಧಾರವಾಯಿತೇನೋ ಎಂಬ ಅಳುಕು ಮನಸ್ಸನ್ನು ಕಾಡಿತು. ಬಾಗಿಲ ಹತ್ತಿರ ಇದ್ದ ಚಪ್ಪಲಿ ಕಪಾಟಿನಲ್ಲಿ ಇಣುಕಿದಳು. ಹೈಹೀಲ್ಡ್ ಶೂಗಳನ್ನು ಬಿಟ್ಟು ಹಗುರವಾದ ಚಪ್ಪಲಿಯನ್ನು ಆರಿಸಿಕೊಂಡು ಬಾಗಿಲು ತೆರೆದು ಹೊರಟಾಗ ಎದುರು ದಿಕ್ಕಿನಿಂದ ಬಂದವಳನ್ನು ಕಂಡು ಅವಾಕ್ಕಾಗಿ ನಿಂತಳು. ಕೊನೆಗೂ ಸಾವರಿಸಿಕೊಂಡು ‘ಓಹ್! ನೀನು!’ ಎಂದು ಕರೆದಳು. ಅವಳ ಧ್ವನಿಯಲ್ಲಿ ಸಂಭ್ರಮವಿತ್ತು. ಬಂದವಳು ನಕ್ಕಳು. ಅವಳ ನಗುವಿನಲ್ಲೂ ಸಂಭ್ರಮವಿತ್ತು. ಇವಳು ಬಂದವಳನ್ನು ಆಲಂಗಿಸಿಕೊಂಡು ಒಳಗೆ ಕರೆದೊಯ್ದಳು. ಒಳಗೆ ಬಂದ ಅತಿಥಿಯೇ ಇವಳನ್ನು ಒಳಗೆ ಕರೆದುಕೊಂಡು ಹೋದಂತೆ ಇವಳಿಗೆ ಭಾಸವಾಯಿತು. ತನ್ನ ಮನೆಯ ಪರಿಚಯ ಅವಳಿಗೆ ಇಷ್ಟು ಚೆನ್ನಾಗಿರುವುದು ಹೇಗೆಂದು ಇವಳು ಯೋಚಿಸಿದಳು. ‘ಇಲ್ಲಿ ಕೂತುಕೋ!’ ಎಂದು ಇವಳು ಹೇಳಿದಾಗ ಅವಳೂ ಅದೇ ಮಾತನ್ನು ಹೇಳಿದ್ದು ಕೇಳಿ ಇವಳಿಗೆ ನಗು ಬಂತು. ಇಬ್ಬರೂ ನಕ್ಕರು. ‘ನಿನ್ನ ಸೀರೆ ಚೆನ್ನಾಗಿದೆ. ನಾವಿಬ್ಬರೂ ಅದನ್ನು ಒಂದೇ ಅಂಗಡಿಯಿಂದ ಖರೀದಿ ಮಾಡಿರಬೇಕು. ಲಾವಣ್ಯ ಸಿಲ್ಕ್ಸ್ ತಾನೇ?’ ಅವಳು ಹೌದೆಂದು ತಲೆಯಾಡಿಸಿದಳು. ‘ತಾ...