ಕನ್ನಡ ಪಾಠಗಳೇಕೆ ನೀರಸವಾಗಿರುತ್ತವೆ?

ಡಾ. ಸಿ ಪಿ ರವಿಕುಮಾರ್ 



ನಾನು ಹೈಸ್ಕೂಲಿನಲ್ಲಿ ಮತ್ತು ಪ್ರಿ-ಯೂನಿವರ್ಸಿಟಿಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿತೆ. ನಮಗೆ ಹೈಸ್ಕೂಲಿನ ಕನ್ನಡ ಪಠ್ಯಗಳಲ್ಲಿ ಡೀಟೇಲ್ಡ್ ಮತ್ತು ನಾನ್  ಡೀಟೇಲ್ಡ್ ಎಂಬ ಪ್ರಭೇದಗಳಿದ್ದವು. ಅವುಗಳನ್ನು ಹಾಗೆ ಯಾಕೆ ಕರೆಯುತ್ತಿದ್ದರೋ!  ಡೀಟೇಲ್ಡ್ ಪಠ್ಯದಲ್ಲಿ ಕನ್ನಡ ಕತೆಗಳು, ಲೇಖನಗಳು, ಜೀವನಚರಿತ್ರೆಯ ಆಯ್ದ ಭಾಗಗಳು, ಹಳಗನ್ನಡ ಕಾವ್ಯದಿಂದ ಆಯ್ದ ಭಾಗಗಳು, ಹೊಸಗನ್ನಡ  ಕವಿತೆಗಳು ಇವೆಲ್ಲಾ ಇರುತ್ತಿದ್ದವು. ನಾನ್ ಡೀಟೇಲ್ಡ್ ಕನ್ನಡ ಪಠ್ಯಕ್ಕೆ ಗೊತ್ತಾಗಿದ್ದ  ಒಂದು  ಪುಸ್ತಕವನ್ನು ಬಹುಮಟ್ಟಿಗೆ ವಿದ್ಯಾರ್ಥಿಯೇ ಓದಿಕೊಳ್ಳಬೇಕಾಗಿತ್ತು.  ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದು ಈ ಪುಸ್ತಕಗಳ ಉದ್ದೇಶ.

ನಾನ್ ಡೀಟೇಲ್ಡ್ ಪಠ್ಯಗಳು 

ನಾನು ಓದಿದ ನಾನ್ ಡೀಟೇಲ್ಡ್ ಪಠ್ಯಗಳ ಪಟ್ಟಿಯನ್ನು ಕೆಳಗೆ ಕೊಟ್ಟಿದ್ದೇನೆ -

  1. ಒಂಬತ್ತನೇ ತರಗತಿ - ಗಾಂಧೀಜಿಯ ಜೀವನ ಚರಿತ್ರೆ 
  2. ಹತ್ತನೇ ತರಗತಿ - ಸರ್ ಎಂ ವಿ ಅವರ ಜೀವನ ಚರಿತ್ರೆ 
  3. ಪಿ ಯು ಸಿ - ೧ - "ನಾ ಕಂಡ ಜರ್ಮನಿ" ಎಂಬ ಪ್ರವಾಸಕಥನ ಮತ್ತು ಭಾಸ ಕಥಾ ಮಂಜರಿ
  4. ಪಿ ಯು ಸಿ - ೨ - ಟಾಲ್ಸ್ಟಾಯ್ ಅವರ ಜೀವನ ಚರಿತ್ರೆ ಮತ್ತು "ಬನದ ಮಕ್ಕಳು" ಕಾದಂಬರಿ 
ಮೇಲೆ ಹೇಳಿದ ಪುಸ್ತಕಗಳಲ್ಲಿ ನಮಗೆ ಆಸಕ್ತಿ ಹುಟ್ಟಿಸಿದ ಪುಸ್ತಕ "ಬನದ ಮಕ್ಕಳು." ಇದು Children of the New Forest ಎಂಬ ಇಂಗ್ಲಿಷ್ ಕಾದಂಬರಿಯ ಅನುವಾದ. ಕವಿ ಗೋಪಾಲಕೃಷ್ಣ ಅಡಿಗರು ಸಮರ್ಥವಾಗಿ ಭಾಷಾಂತರಿಸಿದ ಕಾದಂಬರಿ. ಇಂಗ್ಲೆಂಡ್ ನಲ್ಲಿ ಚಾರ್ಲ್ಸ್ ಮಹಾರಾಜನ ವಿರುದ್ಧ ಕ್ರಾಮ್ ವೆಲ್ ಎಂಬ ಸೇನಾಪತಿಯ ಅಧಿಪತ್ಯದಲ್ಲಿ ನಡೆದ ದಂಗೆಯ ಸಮಯದಲ್ಲಿ ರಾಜನಿಗೆ ನಿಷ್ಠನಾಗಿದ್ದ  ಅಧಿಕಾರಿಗಳನ್ನು ಹುಡುಕಿ ಬೆನ್ನಟ್ಟಿ ಕೊಲ್ಲಲಾಯಿತು. ಇಂಥ ಒಬ್ಬ ಸೇನಾಧಿಕಾರಿ ಕೊಲೆಯಾದಾಗ ಅವನ ಆಳು ಅವನ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಕಾಡಿನಲ್ಲಿ ಪರಾರಿಯಾಗುತ್ತಾನೆ. ಈ ಮಕ್ಕಳನ್ನು ಕಾಡಿನಲ್ಲೇ  ಸಾಕುತ್ತಾನೆ; ಅವರಿಗೆ ಬದುಕುಳಿಯುವ ಪಾಠ ಹೇಳಿಕೊಡುತ್ತಾನೆ. ಕಾಡಿನಲ್ಲಿ ಮೃಗಗಳು, ಕ್ರಾಮ್ ವೆಲ್ ನ ಸೇನೆ ಇವುಗಳಿಂದ ಜಾಗೃತರಾಗಿ ಬಾಳುವುದು ಸುಲಭವಲ್ಲ. ಬೇಟೆಯಾಡಿ ಆಹಾರ ಸಂಪಾದಿಸುವುದೂ ಸುಲಭವಲ್ಲ.  ಪ್ರತಿದಿನವೂ ಒಂದು ಸಾಹಸ.



ಈ ಕಥೆ ನನಗೆ ತಿಳಿದಂತೆ ನನಗೊಬ್ಬನಿಗೆ ಮಾತ್ರವಲ್ಲ ನನ್ನ ತರಗತಿಯ ಅನೇಕರಿಗೆ ಇಷ್ಟವಾಯಿತು. ಕುತೂಹಲದಿಂದ ಕತೆ ಓದಿಸಿಕೊಂಡಿತು. ಹಾಗೇ ಭಾಸ ಕಥಾಮಂಜರಿ ಎಂಬ ಪುಸ್ತಕದಲ್ಲಿ ಲೇಖಕರು (ಅವರ ಹೆಸರು ಮರೆತಿದೆ) ಭಾಸನ ನಾಟಕಗಳ  ಕತೆಗಳನ್ನು ಸರಳಗನ್ನಡದಲ್ಲಿ ಬರೆದಿದ್ದಾರೆ. ಭಾಸನ ಸ್ವಪ್ನ ವಾಸವದತ್ತ, ಮೃಚ್ಛಕಟಿಕ, ಮಧ್ಯಮವ್ಯಾಯೋಗ - ಇವೆಲ್ಲಾ ಒಂದಕ್ಕಿಂತ ಇನ್ನೊಂದು  ನಮ್ಮ ಆಸಕ್ತಿಯನ್ನು ಸೆಳೆದವು. ನಮ್ಮ ಕನ್ನಡ ಪಾಠ ಹೇಳಿದ ಕ.ನಂ. ನಾಗರಾಜು ಇವುಗಳನ್ನು ನಮಗೆ ಸ್ವಾರಸ್ಯಕರವಾಗಿ ಪಾಠ ಮಾಡಿದರು. ಅವರಿಗೆ ನಾಟಕಗಳಲ್ಲಿ ವಿಶೇಷ ಆಸಕ್ತಿಯಿತ್ತು. ಭಾಸನ ನಾಟಕಗಳ ಅನೇಕ ಸೂಕ್ಷ್ಮಗಳನ್ನು ನಮಗೆ ತೋರಿಸಿಕೊಟ್ಟು ನಮಗೆ ರಸಾನುಭವ ಉಂಟು ಮಾಡಿದರು. 

ಉಳಿದ ಪುಸ್ತಕಗಳು  ನಮ್ಮ ಆಸಕ್ತಿಯನ್ನು ಅಷ್ಟೇನೂ ಕೆದರಿಸಲಿಲ್ಲವೆಂದೇ ಹೇಳಬೇಕು. ಗಾಂಧೀಜಿಯವರ ಜೀವನಚರಿತ್ರೆಯನ್ನು ಯಾರೋ ಬಹಳ ನೀರಸವಾಗಿ ಬರೆದಿದ್ದರು. ಹಾಗೇ  ಸರ್ ಎಂವಿ ಅವರ ಜೀವನಚರಿತ್ರೆಯೂ ಉತ್ಪ್ರೇಕ್ಷೆಗಳಿಂದ ಕೂಡಿತ್ತು;  ಪ್ರತಿಯೊಂದು ಪುಟದಲ್ಲೂ ಅವರನ್ನು ಹಾಡಿ ಹೊಗಳುವುದೇ ಲೇಖಕರ ಕೆಲಸ! ನಮಗೆ ಇದನ್ನು ಪಾಠ ಮಾಡಿದ ಕೆ ಶ್ರೀಕಂಠಯ್ಯ ಮೇಷ್ಟ್ರು ಯಾವ ಭಾಗಗಳನ್ನು ನೀವು ಓದಿದರೆ ಸಾಕು ಎಂದು ಟಿಕ್ ಮಾಡಿಸುತ್ತಿದ್ದರು - ಉಳಿದದ್ದೆಲ್ಲಾ ಜೊಳ್ಳು!  ಟಾಲ್ಸ್ ಟಾಯ್ ಜೀವನ ಚರಿತ್ರೆಯಂತೂ ಅನೇಕ ಕಾರಣಗಳಿಂದ ತೀವ್ರ ಟೀಕೆಗೆ ಒಳಗಾಯಿತು. ಟಾಲ್ಸ್ ಟಾಯ್ ನ ಯೌವ್ವನದ ಜೀವನ ಸಾಕಷ್ಟು ವರ್ಣಮಯವಾದುದು! ಇದನ್ನು ಬರೆಯುವುದರಲ್ಲಿ ತಪ್ಪಿಲ್ಲವಾದರೂ ಇಂಥ ಪುಸ್ತಕವನ್ನು ಪಠ್ಯವನ್ನಾಗಿ ಆರಿಸಿದ್ದು ಚರ್ಚೆಗೆ ಕಾರಣವಾಯಿತು.

"ನಾ ಕಂಡ ಜರ್ಮನಿ" ಎಂಬ ಪ್ರವಾಸ ಕಥನ ನೀರಸವಾಗಿತ್ತು.  ಆಗೆಲ್ಲಾ ಕೆಲವೇ ದಿನಗಳ ವಿದೇಶಪ್ರವಾಸ ಕೈಗೊಂಡರೂ ನಮ್ಮ ಲೇಖಕರು ಪ್ರವಾಸಕಥನ ಬರೆದುಬಿಡುತ್ತಿದ್ದರು! ಕಂಡಿದ್ದನ್ನೆಲ್ಲಾ ಬೆರಗುಗಣ್ಣಿನಿಂದ ನೋಡುತ್ತಾ "ಆಹಾ! ನಮ್ಮಲ್ಲಿ ಇವೆಲ್ಲಾ ಯಾಕೆ ಹೀಗಿಲ್ಲ?" ಎಂಬುದೇ ಈ ಕಥನಗಳ ರಾಗ. ಕೆಲವೇ ದಿನಗಳಲ್ಲಿ ಒಂದು ದೇಶದ ಎಲ್ಲಾ ಮುಖಗಳನ್ನೂ ನೋಡಲು ಸಾಧ್ಯವಿಲ್ಲ ಎಂಬುದು ಈ ಲೇಖಕರಿಗೆ ಗೊತ್ತಿದ್ದರೂ ನಡೆದ ಸಣ್ಣ ಪುಟ್ಟ ಘಟನೆಗಳನ್ನೂ ಅತಿರಂಜಿತವಾಗಿ ಬರೆಯುತ್ತಿದ್ದರು.

ನಮ್ಮ ಡೀಟೇಲ್ಡ್ ಪಠ್ಯಗಳು 


ನನಗೆ ನೆನಪಿರುವಂತೆ ಆಗ ಡಾ ಹಾ ಮಾ ನಾಯಕ ಅವರು ಡೀಟೇಲ್ಡ್ ಪಠ್ಯಗಳ ಸಂಪಾದಕ ಸಮಿತಿಯ ಅಧ್ಯಕ್ಷರಾಗಿದ್ದರು. ಆ ಪುಸ್ತಕಗಳ ಅಚ್ಚುಕಟ್ಟನ್ನು ನೋಡಿದರೆ ಸಾಕು, ತಿಳಿಯುತ್ತಿತ್ತು. ಒಂದೂ ತಪ್ಪಿಲ್ಲದೆ ಅಚ್ಚಾಗುತ್ತಿದ್ದ ಪುಸ್ತಕಗಳು. ಇವುಗಳಲ್ಲಿ ಯಾವ ಚಿತ್ರಗಳೂ ಇರುತ್ತಿರಲಿಲ್ಲ.  ಆದರೆ ಆಯ್ಕೆಗಳು ಬಹಳ ಸ್ವಾರಸ್ಯಕರವಾಗಿರುತ್ತಿದ್ದವು.  ನನಗೆ ನೆನಪಿರುವ ಕೆಲವು ಪಾಠಗಳನ್ನು ಕೆಳಗೆ ಪಟ್ಟಿ ಮಾಡಿದ್ದೇನೆ -


  • ಕುವೆಂಪು ಅವರ "ಕರಿಸಿದ್ದ" ಕವಿತೆ
  • ಕುವೆಂಪು ಅವರು ಬರೆದ  ವಿವೇಕಾನಂದರ  ಜೀವನಚರಿತ್ರೆಯಿಂದ ಆಯ್ದ ಭಾಗ 
  • ವಿ ಸೀ ಅವರ "ಶಬರಿ" ಕವಿತೆ 
  • ಗೋಪಾಲಕೃಷ್ಣ ಅಡಿಗರ "ಕೆಂದಾವರೆ" ಕವಿತೆ 
  • ಬೇಂದ್ರೆ ಅವರ "ಕರಡಿ ಕುಣಿತ" ಕವಿತೆ 
  • ಚನ್ನವೀರ ಕಣವಿ ಅವರ "ಮಾತು" ಕವಿತೆ
  • ದಿನಕರ ದೇಸಾಯಿ ಅವರ "ನನ್ನ ದೇಹದ ಬೂದಿ" ಕವಿತೆ 
  • ಮಾಸ್ತಿ ಅವರ "ನಿಜಗಲ್ಲಿನ ರಾಣಿ" ಕಥೆ 
  • ರನ್ನ ಕವಿಯ "ಸಾಹಸಭೀಮ ವಿಜಯ"ದಿಂದ ಆರಿಸಿದ "ನೀರೊಳಗಿರ್ದುಂ ಬೆಮರ್ತನುರಗಪತಾಕಂ"
  • ಕುಮಾರವ್ಯಾಸನ ಭಾರತದಿಂದ ಆರಿಸಿದ ಭಾಗ (ಕೃಷ್ಣ ಕರ್ಣನಿಗೆ ಅವನ ಜನ್ಮರಹಸ್ಯ ತಿಳಿಸುವ ಭಾಗ) 
  • ಪಂಪ ಕವಿಯ ಪ್ರಸಿದ್ಧ "ಬನವಾಸಿ"ಯ ವರ್ಣನೆ
  • ಕೆಂಪುನಾರಾಯಣನ "ಮುದ್ರಾರಾಕ್ಷಸ"ದಲ್ಲಿ ಚಂದ್ರಗುಪ್ತನು ಪಂಜರದ ಸಿಂಹದ ಭೇದವನ್ನು ಮುರಿಯುವ ಕಥೆ 
  • ವಿ ಸೀ ಅವರ ಪಂಪಾಯಾತ್ರೆ ಪ್ರವಾಸಕಥನದಿಂದ ಆಯ್ದ ಭಾಗ 
  • ಕಾರಂತರ "ಬೆಡಗಿನ ಜಯಪುರ"ದಿಂದ ಆಯ್ದ ಭಾಗ; ಅವರದೇ ಹಳ್ಳಿಯ ಹತ್ತು ಸಮಸ್ತರು ಪುಸ್ತಕದಿಂದ ಆಯ್ದ ಭಾಗ 
  • ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ "ಗರುಡಗಂಬದ ದಾಸಯ್ಯ"
  • ಬೋರ್ಡು ಒರೆಸುವ ಬಟ್ಟೆ
  • ನಮ್ಮ ಕರುಳನ್ನು ಕಿವುಚಿದ ಕಥೆ "ಮೋಚಿ"
  • ಗಾಂಪರು ನದಿ ದಾಟಿದ ಕಥೆ

ನೀರಸ!


ಇಂದಿನ ಪಠ್ಯಪುಸ್ತಕಗಳನ್ನು ನಾನು ಗಮನಿಸಿದಾಗ ಅನೇಕ ನ್ಯೂನತೆಗಳು ನನಗೆ ಎದ್ದು ತೋರುತ್ತವೆ -
  • ಇಂಥ ವಿಷಯಗಳನ್ನು ಕುರಿತು ಇಷ್ಟು ಪಾಠಗಳು ಇರಲೇ ಬೇಕೆಂಬ ನಿಯಮ ಇದ್ದಂತೆ ತೋರುತ್ತದೆ. ಹೀಗಾಗಿ "ಪರಿಸರ ಸಂರಕ್ಷಣೆ" ಬಗ್ಗೆ ಪ್ರತಿವರ್ಷವೂ ಮಕ್ಕಳಿಗೆ ಬಲವಂತದ ಮಾಘಸ್ನಾನ!  
  • ಇಂದಿನ ಕಾಲದ ಮಕ್ಕಳು ಟಿ.ವಿ., ಕಾರ್ಟೂನ್ ನೆಟ್ ವರ್ಕ್,  ಇಂಟರ್ ನೆಟ್, ಕಂಪ್ಯೂಟರ್ ಗೇಮ್ಸ್ ಇವುಗಳ ಯುಗದವರು ಎಂಬುದನ್ನು ಅಸಡ್ಡೆ ಮಾಡಿ ತಯಾರಿಸಿದ/ಆಯ್ದ  ಪಾಠಗಳು.
  • ಅಷ್ಟೇನೂ ಪ್ರಸಿದ್ಧರಲ್ಲದವರ ಅತಿ ಸಾಧಾರಣ ಕವಿತೆಗಳನ್ನು/ಬರಹಗಳನ್ನೂ ಅದು ಯಾವ ಒತ್ತಡದಿಂದಲೋ ಆರಿಸಿರುವುದು   
  • ಕನ್ನಡವನ್ನು ಸ್ಕೋರಿಂಗ್ ಸಬ್ಜೆಕ್ಟ್ ಮಾಡಲು ಹೊರಟು ಅನೇಕ ಆಭಾಸಗಳನ್ನು ಹುಟ್ಟುಹಾಕಿರುವುದು. ಇಲ್ಲಿ ಪ್ರಶ್ನೆಗಳಲ್ಲಿ ಮೂರು ವಿಧ - "ಒಂದು ಎರಡು ವಾಕ್ಯಗಳಲ್ಲಿ ಉತ್ತರಿಸಿ," "ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ," "ಹತ್ತು ವಾಕ್ಯಗಳಲ್ಲಿ ಉತ್ತರಿಸಿ." ಒಂದು-ಎರಡು ವಾಕ್ಯಗಳ ಪ್ರಶ್ನೆಗಳನ್ನು ನೋಡಿದರೆ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ! ಪಾಠದಿಂದ ಯಾವುದೋ ವಾಕ್ಯವನ್ನು ಆರಿಸಿ ಅದರ ಮೇಲೆ ಒಂದು ಪ್ರಶ್ನೆ - ಅದಕ್ಕೆ ಆ ವಾಕ್ಯವೇ  ಉತ್ತರವಾಗಿರಬೇಕು! ಬೇರೇನು ಬರೆದರೂ ತಪ್ಪು! ಉದಾಹರಣೆಗೆ "ನಗು ಅಳು ಹೇಗೆ ಹುಟ್ಟುತ್ತವೆ?" ಎಂಬ ಪ್ರಶ್ನೆಗೆ "ನಗು ಅಳು ಮನದಲ್ಲಿ ಹುಟ್ಟುತ್ತವೆ" ಎಂಬುದಲ್ಲದೆ ಬೇರೇನಾದರೂ ಬರೆದರೆ ನಿಮಗೆ ಸೊನ್ನೆ. 
  • ಗದ್ಯ ಪಾಠಗಳ ಆಯ್ಕೆಯಲ್ಲಿ ಏನೇನೂ ಮುತುವರ್ಜಿ ತೋರದಿರುವುದು. ರೆವರೆಂಡ್ ಕಿಟ್ಟೆಲ್, ನಗು-ಅಳು, ಎಚ್ಚಮನಾಯಕ ... ಇವೆಲ್ಲಾ ಕನ್ನಡದ ಅತ್ಯುತ್ತಮ ಗದ್ಯದ ಮಾದರಿಗಳೇ? ನಗು-ಅಳು ಎಂಬ ಪಾಠದಲ್ಲಿ "ಮಕ್ಕಳಿಗೆ ನೀಗ್ರೋ ಮನುಷ್ಯನನ್ನು ಕಂಡರೆ ನಗು ... " ಇತ್ಯಾದಿ ಮುಜುಗರವಾಗುವಂಥ ವಾಕ್ಯಗಳಿವೆ! ಪ್ಯಾರಿಸ್ ನಗರಕ್ಕೆ ಭೇಟಿಯಿತ್ತ ಒಬ್ಬ ಲೇಖಕರ ಪ್ರವಾಸ ವರ್ಣನೆ ಓದಿ ಮುಜುಗರವಾಗುತ್ತದೆ. 
  • ಮುದ್ರಣವಂತೂ ಬಹಳ ಕಳಪೆ ಮಟ್ಟದ್ದು. ಬೈಂಡಿಂಗ್ ಬಹಳ ಕಳಪೆ - ಕೆಲವೇ ದಿನಗಳಲ್ಲಿ ಪುಟಗಳು ಕಿತ್ತು ಬರುವಂಥದ್ದು! ಕಲಾವಿದ ಬರೆದ ನೀರಸವಾದ ಚಿತ್ರಗಳನ್ನು ಕಪ್ಪು-ಬಿಳುಪಿನಲ್ಲಿ ಮುದ್ರಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಪಠ್ಯಗಳನ್ನು ಇವಕ್ಕೆ ಹೋಲಿಸಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಮೂರನೇ ಭಾಷೆಯಾದ ಹಿಂದಿ ಪಠ್ಯ ಪುಸ್ತಕಗಳಲ್ಲಿ ಎಷ್ಟೋ ಉತ್ತಮವಾದ ಮುದ್ರಣವನ್ನು ಕಾಣುತ್ತೀರಿ. 
  • ಇಂಗ್ಲಿಷ್ ಪಠ್ಯಗಳ ತಯಾರಿಯಲ್ಲಿ ತೋರಿಸುವ ಮುತುವರ್ಜಿಯಲ್ಲಿ ಕಾಲು ಭಾಗವೂ ನಮ್ಮ ಪುಸ್ತಕಗಳಲ್ಲಿ ಕಾಣುತ್ತಿಲ್ಲ. ಇಂಗ್ಲಿಷ್ ಪುಸ್ತಕದಲ್ಲಿ ಕಠಿಣ ಪದಗಳನ್ನು ಬೇರೆ ಫಾಂಟ್ ನಲ್ಲಿ ಮುದ್ರಿಸಿ  ಅರ್ಥವನ್ನು ಅದೇ ಪುಟದ ಕೆಳಗೆ ಫುಟ್ ನೋಟ್ ಆಗಿ ಮುದ್ರಿಸಿರುತ್ತಾರೆ. ಕವಿತೆಯ/ಕಥೆಯ ರಸಾಸ್ವಾದನೆಯನ್ನು ಕುರಿತು ಟಿಪ್ಪಣಿಗಳಿರುತ್ತವೆ. 
  • ಇಂಗ್ಲಿಷ್ ಪಠ್ಯದಲ್ಲಿ ಒಳ್ಳೆಯ ಬಣ್ಣದ ಚಿತ್ರಗಳು, ಉತ್ತಮ ಮುದ್ರಣ, ಒಳ್ಳೆಯ ಕವಿತೆಗಳು (ವರ್ಡ್ಸ್ ವರ್ತ್, ಟೆನಿಸನ್,  ಸರೋಜಿನಿ ನಾಯ್ಡು, ಉಮರ್ ಖಯ್ಯಾಮ್, ... ), ಸ್ವಾರಸ್ಯಕರ ಗದ್ಯ (ಲಿಯೋ ಟಾಲ್ಸ್ ಟಾಯ್, ರಸ್ಕಿನ್ ಬಾಂಡ್, ಸತ್ಯಜಿತ್ ರಾಯ್, ಆರ್ ಕೆ ಲಕ್ಷ್ಮಣ್, ... ). ಮಕ್ಕಳಿಗೆ ಇಷ್ಟವಾಗುವ ಸಾಹಸ, ಪತ್ತೇದಾರಿ, ಹಾಸ್ಯ ಇವುಗಳನ್ನು ಹೂರಣವಾಗಿ ಉಳ್ಳ ಕತೆಗಳು
ಕನ್ನಡದ ಬಗ್ಗೆ ಕೀಳರಿಮೆ/ತಾತ್ಸಾರ ಉಂಟಾಗಲು ಈ ಪಠ್ಯ ಪುಸ್ತಕಗಳು ಬಹಳ ಮುಖ್ಯ  ಕಾರಣ ಎಂಬುದು ನನ್ನ ಬಲವಾದ ನಂಬಿಕೆ.  ಕನ್ನಡದ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆ ತೂಗುತ್ತಿರುವಾಗ ನಮ್ಮ ಶಿಕ್ಷಕರು/ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕು. 


ವಿ.ಸೂ.: ಪ್ರಜಾವಾಣಿ ದಿನಪತ್ರಿಕೆಯಲ್ಲಿ ನಾನು ಈ ಕುರಿತು ಬರೆದ ಪತ್ರ ಇಲ್ಲಿ ಓದಬಹುದು.

ಕಾಮೆಂಟ್‌ಗಳು

  1. ಹೌದು ಸರ್ ನಾನು 1980 ರಲ್ಲಿ ಓದಿದ್ದು ಕೂಡ ಇದೆ ಪಠ್ಯಕ್ರಮ..ನಂತರ 1981 ರಲ್ಲಿ ಮುಂದೆ ಪಠ್ಯ ಬದಲಾವಣೆ ಆಯಿತು..ಅದರಲ್ಲಿ ನಿಜಗಲ್ಲಿನ ರಾಣಿ ಪಾಠ ಹೇಳುವಾಗ ತಮ್ಮನೆ ತನ್ನನ್ನು ಮೋಸ ಮಾಡುವುದು ನೋಡಿ ರಾಣಿ ಆತ್ಮಹತ್ಯೆ ಪ್ರಸಂಗ ಅಪೂರ್ವ ವಾದದ್ದು ಹಾಗು ಇಂದಿನ ಕುಟುಂಬ ಜೀವನದ ಸಮಸ್ಯೆಗಳು ಪಾಠ ಕೇಳುತ್ತಿದ್ದರೆ ಅದು ಇಂದಿಗೂ ಪ್ರಸ್ತುತ...
    ನಮ್ಮ ನೆನಪು ಮರು ಕಳಿಸುವಂತೆ ಮಾಡಿದ್ದೂ ತುಂಬಾ ಸಂತೋಷ...

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)