ನಾವು ಆಡುತ್ತೇವೆ ಅಸಹನೆಯ ಮಾತು

ಸಿ ಪಿ ರವಿಕುಮಾರ್ 


ಮಳೆ ಬಂದು ಟ್ರಾಫಿಕ್ ಜಾಮಾದರೆ ನಾನು ಸಿಟ್ಟಾಗುತ್ತೇನೆ -
ಹೊಳೆಯೇ ಹರಿದು ಬರುತ್ತಿದೆ ಚೆನ್ನೈ ನಗರದಲ್ಲಿ. 

ಅಸಾಧ್ಯ ನೋವೆಂದು ಮುಖ ಕಿವಿಚುತ್ತೇನೆ 
  ಚರ್ಮ ಕಿತ್ತರೆ ಬೆರಳಿನ ಉಗುರಿನಲ್ಲಿ.
ಬಾಂಬ್ ದಾಳಿಯಲ್ಲಿ ಇವನ ಕೈ ಕತ್ತರಿಸಿಹೋಗಿದೆ, 
  ಕಂಡಕಂಡವರನ್ನು ಸುಡುತ್ತಿದ್ದಾರೆ ಉಗ್ರರಲ್ಲಿ. 

ಮನೆಗೆ ಬರುವುದು ತಡವಾದರೆ ಸಿಟ್ಟಾಗುತ್ತೇನೆ 
  ತಡೆಯದೆ ಹಸಿವು-ಬಾಯಾರಿಕೆ.
ಅದೆಷ್ಟು ಜನರಿಗೆ ಇದು ನಿತ್ಯದ ಚಡಪಡಿಕೆ. 

ಆಫ್ರಿಕಾದಲ್ಲಿ, ಇರಾಕಿನಲ್ಲಿ, ಆಫ್ಘಾನಿಸ್ತಾನದಲ್ಲಿ,
ಸಿರಿಯಾದಲ್ಲಿ ಜಗತ್ತಿನ ಪ್ರತಿಯೊಂದು ಮೂಲೆಯಲ್ಲಿ 
ನಿರಂತರವಾಗಿ ಸಾಗಿದೆ ಮಾನವನಿಂದ ಮಾನವನ ಬೇಟೆ.

ಜನ ಕಂಗಾಲಾಗಿದ್ದಾರೆ, 
ಹಸಿದಿದ್ದಾರೆ, ನೊಂದಿದ್ದಾರೆ,
ಉಟ್ಟಬಟ್ಟೆಯಲ್ಲೇ ಓಡಿ ಬಂದಿದ್ದಾರೆ,
ಮನೆ-ಮಾರು ಕಳೆದುಕೊಂಡಿದ್ದಾರೆ. 
ಹಸಿವೆಯಿಂದ ಅಳುವ ಮಕ್ಕಳು  
ಕಡಲಿನ ಪಾಲಾಗಿವೆ. 
ಸಾಗರವೂ ತನಗೆ ಬೇಡವೆಂದು 
ದಡಕ್ಕೆ ತಂದು ಹಾಕಿದೆ. 

ಹೋದೆಡೆಗೆ ಇವರನ್ನು ಹಿಂಬಾಲಿಸುತ್ತದೆ ಸಂಶಯದ ದೃಷ್ಟಿ. 
ಹೋದೆಡೆಗೆ ಇವರ ಮೇಲೆ ಸುರಿಯುತ್ತದೆ ಬೈಗುಳದ ವೃಷ್ಟಿ. 
ಉಗ್ರರಿಂದ ಓಡಿ ಬಂದವರಿಗೇ  ಉಗ್ರರೆಂಬ ಹಣೆಪಟ್ಟಿ.

ಎದೆಯನ್ನು ಬಗೆದು ತೋರಿಸುವಂತಿದ್ದರೆ ಮನುಷ್ಯ!
ಕಾಣಿಸುವಂತಿದ್ದರೆ ಮಸ್ತಿಷ್ಕದ ಒಳಗಿನ ದೃಶ್ಯ!
ಇದೆಯೇ ಯಾವುದಾದರೂ ಅಗ್ನಿಪರೀಕ್ಷೆ,
ಕರಗಿಸಿ ಮತ್ತೊಮ್ಮೆ ಎರಕ ಹೊಯ್ಯುವ ಹಾಗೆ?

ಇಷ್ಟೆಲ್ಲಾ ನಡೆಯುತ್ತಿರುವಾಗ ಇಲ್ಲಿ ನಾವು ಆಡುತ್ತೇವೆ ಅಸಹನೆಯ ಮಾತು. 
ಕಾಫಿ ಸಾಕಷ್ಟು ಬಿಸಿಯಿಲ್ಲವೆನ್ನುತ್ತಾ ಹಪ್ಪಳ ತಿನ್ನುತ್ತಾ ಮನೆಯಲ್ಲಿ ಬೆಚ್ಚಗೆ ಕೂತು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)