ಕೊನೆಯ ಎಲೆ

 ಕೊನೆಯ ಎಲೆ



ಹೊರಗೆ ಹಿಮಪಾತ, ಕೆಟ್ಟ ಚಳಿ ;
ಬೆಳಗಿನಲ್ಲೂ ಹಾಕಿದ ಪರದೆ.
ಮಲಗಿದಲ್ಲೇ ನಿಟ್ಟಿಸುವನು ಬರಿದೇ 
ಕಿಟಕಿಯ ಹೊರಗೆ ಹಬ್ಬಿದ ಬಳ್ಳಿ

ರೋಗಿಯು ಕಲಾವಿದ; ಅವನ ಕಣ್ಣು
ಕಾಣುವುದು ಬಳ್ಳಿಯಲ್ಲಿ ಬದುಕಿನ ಸಂಕೇತ;
ಮೊನ್ನೆ ಬೀಸಿದ ಝಂಝಾವಾತ
ಅಲ್ಲಾಡಿಸಿದೆ ನಿರ್ಬಲ ಬಳ್ಳಿಯನ್ನು.

ಉದುರಿಹೋದವು ಬಹುಮಟ್ಟಿಗೆ ಎಲೆ
ತನ್ನ ಬಾಳಿನ ವರ್ಷಗಳು ಉದುರಿದಂತೆ;
ಬಾರಿಸುತ್ತಿದೆ ಅಪಾಯದ ಗಂಟೆ
ಬತ್ತಿ ಹೋಗುತ್ತಿದೆ ಬಾಳ ಬಳ್ಳಿಯಲ್ಲಿ ಸೆಲೆ.

ಕಲಾವಿದ ಮಲಗಿದ್ದಾನೆ, ತಪಿಸುವ ಜ್ವರದಲ್ಲಿ;
ಬಡಬಡಿಸುತ್ತಾನೆ ಕನವರಿಕೆಯಲ್ಲಿ
ಕೊನೆಯ ಎಲೆ ಉದುರಿಸಿದಾಗ ಬಳ್ಳಿ
ವಿಲೀನವಾಗುವುದು ಪ್ರಾಣ ಕಾಲ ನಿರಂತರದಲ್ಲಿ... 

ಹಣೆಯ ಮೇಲೆ ತಣ್ಣೀರು ಪಟ್ಟಿ ಇಟ್ಟು
ಅವನ ಶಿಷ್ಯೆ ಹೊದ್ದಿಸುತ್ತಾಳೆ ಬೆಚ್ಚನೆ ಹೊದಿಕೆ;
ಏನೂ ಆಗದು ಬಳ್ಳಿಗೆ, ಯಾತಕ್ಕೆ ಹೆದರಿಕೆ!
ಎಂದು ಶಾಂತ ಸ್ವರದಲ್ಲಿ ಆಶ್ವಾಸನೆ ಕೊಟ್ಟು.

ಬಣ್ಣ ಕುಂಚಗಳನ್ನು ಹೊತ್ತು ಕಿಟಕಿಯ ಹೊರಗಡೆ 
ಚಜ್ಜದ ಮೇಲೆ ಹತ್ತಿ ಹಿಮವಂತ ಕುಳಿರ್ಗಾಳಿಯ ರಾತ್ರಿ
ಬೆಳಕು ಬೀರುವ ಲಾಂದ್ರದ ದುರ್ಬಲ ಬತ್ತಿ:
ಬಿಡಿಸುತ್ತಾಳೆ ಹಸಿರೆಲೆ ಉದುರಿದ ಎಲೆ ಇದ್ದೆಡೆ.

ಬೆಳಕು ಹರಿದಾಗ ಕಲಾವಿದನು ಮೆಲ್ಲನೆ ತೆರೆದು ಕಣ್ಣು
ಹರಿಸುತ್ತಾನೆ ಕಿಟಕಿಯ ಕಡೆಗೆ ದೃಷ್ಟಿ:
ಉಳಿದುಕೊಂಡಿದೆ ಇನ್ನೂ! ಹಿಮವೃಷ್ಟಿ
ವಿನಾಶಗೊಳಿಸಲಿಲ್ಲ ಬಳ್ಳಿಯ ಕೊನೆಯ ಹಸಿರನ್ನು!

ಹಾಸಿಗೆಯಲ್ಲಿ ಮೆಲ್ಲನೆ ಮೇಲೆದ್ದು ಕುಳಿತ,
ಜ್ವರ ಬಿಟ್ಟಿತ್ತು, ಮೈಯಲ್ಲಿ ಲವಲವಿಕೆಯಿತ್ತು.
ಕಣ್ಣಾಡಿಸಿದ, ಎಲ್ಲಿ ತನ್ನ ಮೇಲೆ ಹದ್ದಿನ ಕಣ್ಣಿಟ್ಟು
ಉಪಚರಿಸಿದ ಶಿಷ್ಯೆ ಎಂದು ಮನದಲ್ಲೇ ಕೇಳುತ್ತ.

ಕಿಟಕಿಯ ಹೊರಗೆ ಚಜ್ಜದ ಮೇಲೆ ಎಲೆಯಿಲ್ಲದ ಬಳ್ಳಿ --
ಕೈಯಲ್ಲಿ ಕುಂಚವ ಹಿಡಿದು ಒರಗಿದ್ದಳು ಅಲ್ಲಿ:
ಕೊರೆವ ತುಟಿಗಳ ಮೇಲಿತ್ತು ಮಂದಹಾಸ;
ಅವಳ ಕಲಾಕೃತಿ ಸೃಷ್ಟಿಸಿತ್ತು ಇತಿಹಾಸ.

(ಓ ಹೆನ್ರಿ ಕಥೆ ಮತ್ತು ಚಿತ್ರದಿಂದ ಪ್ರೇರಣೆ ಪಡೆದ ಕಥನಕವನ.)


ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)