ಶರತ್ಕಾಲದ ಸಂವಾದ

 ಈ ಕವಿತೆಗೆ ಪ್ರೇರಣೆ ನೀಡಿದ್ದು  ರೀನ್ಹೋಲ್ಡ್ ಲಜೆಂಗ್ರೆನ್ ಎಂಬ ಕಲಾವಿದ ಬರೆದ ಚಿತ್ರ. ಕೆಳಗೆ ತೋರಿಸಿದ ಚಿತ್ರ ಬರೆದದ್ದು ಏಐ

#ಚಿತ್ರಕವಿತೆ: ಸಿ. ಪಿ. ರವಿಕುಮಾರ್ 



ಶರತ್ಕಾಲದ ಬೆಳಗು ನಡೆದು ಹೊರಟಾಗ ನೋಡಿದೆನು
ತರಗೆಲೆ ಉದುರಿಸಿ ನಿಂತ ಹೆಮ್ಮರಗಳ ಸಾಲು -
ಹೀಗೇಕೆ ಎಲ್ಲ ಬರಿದಾಗಿ ನಿಂತಿರುವಿರಿ
ತಪೋನಿರತ ಸಾಧುಗಳ ಹಾಗೆ ನೀವು?

ಉತ್ತರಿಸಿತು ಒಂದು ಮರ ಗಂಭೀರ ದನಿಯಲ್ಲಿ:
ಶಿಶಿರದಲ್ಲೂ ನಾವು ಹಸಿರೆಲೆ ಛತ್ರಿಯ ಹೊತ್ತು
ನಿಂತಿದ್ದರೆ ಓ ಮಗೂ ಯೋಚಿಸಿ ನೋಡು
ಸೂರ್ಯನ ಮಂದಾಗ್ನಿ ಹೇಗೆ ಬರುತ್ತಿತ್ತು?

ಮರಳಿ ಬರುವಾಗ ಅದೇ ದಾರಿಯಲ್ಲಿ ನೋಡಿದೆನು
ಮರಗಳು ಅಲ್ಲೇ ನಿಂತಿದ್ದವು ಇನ್ನೂ.
ಎಲ್ಲರೂ ಕೈ ಎತ್ತಿ ಪ್ರಾರ್ಥಿಸುವ ಹಾಗಿದೆಯಲ್ಲ
ಹೇಳಿ ದೇವನಲ್ಲಿ ಸಲ್ಲಿಸುವ ಕೋರಿಕೆ ಏನು?

ಉತ್ತರಿಸಿತು ಒಂದು ಮರ ಗಂಭೀರ ದನಿಯಲ್ಲಿ:
ಪ್ರಾರ್ಥಿಸುತ್ತಿದ್ದೇವೆ ಹೊಸಚಿಗುರು ಬರಲಿ ನಮಗೆ!
ಮುಂಬರುವ ಗ್ರೀಷ್ಮ ನೀನು ನಡೆದು ಬರುವಾಗ ಈ ದಾರಿ
ತಂಪಾಗಿಸಲು ಮರಳಿ ಕೊಡು ಹಸಿರೆಲೆಯ ಕಾಣ್ಕೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)