ರಹಸ್ಯ
ಮೂಲ: ಜಾನ್ ಬಾಯ್ಲ್ ಒರೇಲಿ
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಯಾವ ಪದದಲ್ಲಿದೆ ಹೇಳಿ ನಿಜವಾದ ಒಳಿತು
ಎಂದು ಕೇಳಿದೆ ನಾನು, ಯೋಚಿಸುತ್ತಾ ಕುಳಿತು.
ಸುವ್ಯವಸ್ಥೆಯಲ್ಲಿ, ಎಂದಿತು ನ್ಯಾಯಾಲಯ;
ಜ್ಞಾನಾರ್ಜನೆಯಲ್ಲಿ, ಎಂದಿತು ವಿದ್ಯಾಲಯ;
ಸತ್ಯದಲ್ಲಿ, ಎಂದನು ಒಬ್ಬ ವಿವೇಕಿ;
ಲೋಲುಪ್ತತೆಯಲ್ಲಿ, ಎಂದನೊಬ್ಬ ಅವಿವೇಕಿ;
ಪ್ರೇಮದಲ್ಲಿ, ಎಂದಳು ಒಬ್ಬ ನವಯುವತಿ;
ಚೆಲುವಿನಲ್ಲಿ, ಎಂದನು ಒಬ್ಬ ಯುವಕ, ಅಲ್ಪಮತಿ;
ಸ್ವಾತಂತ್ರ್ಯದಲ್ಲಿ, ಎಂದನು ಒಬ್ಬ ಕನಸಿಗ;
ಮನೆಯಲ್ಲಿ, ಎಂದ ಒಬ್ಬ ಋಷ್ಯಶೃಂಗ;
ಪ್ರಸಿದ್ಧಿಯಲ್ಲಿ, ಎಂದನು ಒಬ್ಬ ಸೈನಿಕ;
ಸಮಾನತೆಯಲ್ಲಿ, ಎಂದನು ದಾರ್ಶನಿಕ.
ಅನ್ನಿಸಿತು ಇದಾವುದೂ ಸರಿಯಾದ ಉತ್ತರ ಅಲ್ಲವೆಂದು
ಮತ್ತು ಎದೆಯಾಳದಲ್ಲಿ ಎಲ್ಲೋ ಕೇಳಿಸಿತು ದನಿಯೊಂದು
ಹೊಳೆಯಿತು ನನಗೊಂದು ಉತ್ತರ: ಪ್ರತಿಯೊಂದು
ಹೃದಯದಲ್ಲೂ ಅಡಗಿರುವ ಗುಪ್ತಪದವೆಂದು
ಇಗೋ ಹೇಳಿಬಿಡುವೆನು ಈ ರಹಸ್ಯವನ್ನು ನಾನೇ.
ಆ ಪದದ ಹೆಸರು ಏನೆಂದರೆ : ಕರುಣೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ