ಲೇಖನಿ, ಇಂದವರನ್ನು ನೆನೆ!

ಕವಿತೆ ಓದುವ ಮುನ್ನ 

ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಇತಿಹಾಸವಾಗಿ ಇಂದು ನೆನಪಿನಲ್ಲಿ ಉಳಿದವರು ಕೆಲವರು; ಆದರೆ ಲಕ್ಷಾಂತರ ಭಾರತೀಯ ಜನಸಾಮಾನ್ಯರು ಈ ಹೋರಾಟದಲ್ಲಿ ಭಾಗವಹಿಸದಿದ್ದರೆ ಅದಕ್ಕೆ ಅರ್ಥವಿರುತ್ತಿರಲಿಲ್ಲ. ದಿನಕರ್ ತಮ್ಮ ಕವಿತೆಯಲ್ಲಿ ಇಂಥ ಸಾಮಾನ್ಯರಿಗೆ ನಮನ ಸಲ್ಲಿಸುತ್ತಾರೆ. ಗಾಂಧೀಜಿ ಸತ್ಯಾಗ್ರಹಕ್ಕೆ ಕರೆ ಕೊಟ್ಟಾಗ ಸಾಮಾನ್ಯರು ಅವರ ಮಾರ್ದನಿಯಾಗಿ ಅಲ್ಲಿರುತ್ತಿದ್ದರು. ಈ ಜನಸಾಮಾನ್ಯರ ಸ್ವಂತ ಪ್ರಭಾವಳಿ ದೊಡ್ಡದಲ್ಲದೇ ಇರಬಹುದು; ಆದರೆ ಅವರು ಲಕ್ಷಾಂತರ ಸಂಖ್ಯೆಯಲ್ಲಿ ಉರಿದು ಭಾರತದ ಸ್ವಾತಂತ್ರ್ಯಕ್ಕೆ ನಾಂದಿಯನ್ನಿಟ್ಟರು. ಗಾಂಧಿ, ನೆಹರೂ, ಲಾಜಪತ್ ರಾಯ್, ಪಟೇಲ್ ಇಂಥವರೆಲ್ಲ ಕಣ್ಣಿಗೆ ಕುಕ್ಕುವ ಬೆಳಕುಗಳು; ಹಾಗೆಂದು ಅವರನ್ನು ಮಾತ್ರ ನೆನೆದರೆ ಇತಿಹಾಸಕ್ಕೆ ಅಪಚಾರವಾಗುತ್ತದೆ ಎಂಬುದು ಕವಿತೆಯ ಆಶಯ. "ದಿನಕರ್" ಸ್ವಾತಂತ್ರ್ಯಪೂರ್ವದಲ್ಲಿ ಬರೆಯಲು ಆರಂಭಿಸಿದ ಹಿಂದಿ ಕವಿ. ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ನೋಡಿದವರು.  ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತರಾದ ಹಿಂದಿ ಕವಿ.

ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್"
ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ 




ಅದೆಷ್ಟು ಸಲ ಇಂಥವರ ಅಸ್ಥಿಗಳ ಸುಟ್ಟೆವೋ
ಎಷ್ಟು ಸಲ ಇಂಥವರ ಚಿತೆಗೆ ಕಿಡಿ ಕೊಟ್ಟೆವೋ
ಸೇರಿದರು ಹೇಗೋ ತಮ್ಮ ಕೊನೆಯ ನೆಲೆ
ಗಳಿಸಲಾರದೆ ತಮ್ಮ ನಿಜವಾದ ಬೆಲೆ -
ಲೇಖನಿ, ಇಂದವರನ್ನು ನೆನೆ!


ಲೆಕ್ಕವಿಲ್ಲದ ಎಷ್ಟು ಪುಟ್ಟ ಹಣತೆಗಳು
ಸೆಣಸಾಡಿ ಬಿರುಗಾಳಿಯಲ್ಲಿ ಕೊನೆವರೆಗೂ
ಆರಿಹೋದವು! ಉರಿದದ್ದೆ ಇವರ ಸಾರ್ಥಕತೆ
ಬಾಯ್ಬಿಟ್ಟು ಸ್ನೇಹಕ್ಕಾಗಿ ಹಾತೊರೆಯದೇ  -
ಲೇಖನಿ, ಇಂದವರನ್ನು ನೆನೆ!

ಪ್ರತಿಫಲಿಸುತ ಸೊಡರಿನ ನಸುಬೆಳಕು
ದಿಶೆ ದಿಶೆಗೂ ಹಬ್ಬಿತು ಮುಂಜಾವು!
ಮಾತೇನಿದ್ದರೂ ಮೆಲುದನಿಯಲ್ಲೇ
ಮಾರ್ದನಿಯೋ ಕೇಸರಿಯ ಗರ್ಜನೆ! -
ಲೇಖನಿ, ಇಂದವರನ್ನು ನೆನೆ!

ಕುಕ್ಕುವ ಬೆಳಕಿಗೆ ಕುರುಡಾದವನು
ಇತಿಹಾಸವನವನೇನು ಬಲ್ಲನು?
ಸೂರ್ಯ ಚಂದ್ರ ಭೂಮಿಯು ಹೇಳುತಿವೆ
ಮೌನಸಾಕ್ಷಿ ಇಂಥವರ ಮಹಿಮೆಗೆ -
ಲೇಖನಿ, ಇಂದವರನ್ನು ನೆನೆ!

Kannada translation of a Hindi poem कलम, आज उनकी जय बोल by Ramdhari Singh Dinakar

ಕಾಮೆಂಟ್‌ಗಳು

  1. कलम, आज उनकी जय बोल (Kalam Aaj Unki Jai Bol) -
    रामधारी सिंह 'दिनकर' (Ramdhari Singh 'Dinkar'),

    जला अस्थियां बारी-बारी
    चिटकाई जिनमें चिंगारी,
    जो चढ़ गये पुण्यवेदी पर
    लिए बिना गर्दन का मोल।
    कलम, आज उनकी जय बोल


    जो अगणित लघु दीप हमारे
    तूफानों में एक किनारे,
    जल-जलाकर बुझ गए किसी दिन
    मांगा नहीं स्नेह मुंह खोल।
    कलम, आज उनकी जय बोल


    पीकर जिनकी लाल शिखाएं
    उगल रही सौ लपट दिशाएं,
    जिनके सिंहनाद से सहमी
    धरती रही अभी तक डोल।
    कलम, आज उनकी जय बोल


    अंधा चकाचौंध का मारा
    क्या जाने इतिहास बेचारा,
    साखी हैं उनकी महिमा के
    सूर्य चन्द्र भूगोल खगोल।
    कलम, आज उनकी जय बोल

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)