ಕಾವ್ಯಾಸ್ವಾದನೆ

ಸಿ ಪಿ ರವಿಕುಮಾರ್

ಅವತ್ತು ಭಾನುವಾರ ಜಿಆರ್ ಸಭೆಗೆ ಬಂದಾಗ
ಎಂದಿನಂತೆ  ಅವರದ್ದು ಅಚ್ಚಬಿಳಿ ಉಡುಪು.
ಸಭಿಕರು: ಈಗ ನಿಜವಾಗಲೂ ಹಳಬರಾದ
ಅವರ ಹಳೇ ವಿದ್ಯಾರ್ಥಿಗಳ ಗುಂಪು.

ವಿಶೇಷ ಇಷ್ಟೇ: ಜಿಆರ್ ಒಬ್ಬರೇ ಬರಲಿಲ್ಲ;
ಜಾನ್ ಕೀಟ್ಸ್ ಬಂದಿದ್ದ ಅವರ ಜೊತೆಗೆ.
ವಿಲಿಯಮ್ ಬ್ಲೇಕ್ ಅಲ್ಲೇ ಪಕ್ಕದಲ್ಲಿ ಕೂತಿದ್ದ
ಮುಖದಲ್ಲಿ ಸೂಸುತ್ತಾ  ಸ್ನಿಗ್ಧ ನಸುನಗೆ.

ಜಾನ್, ಇಪ್ಪತ್ತಾರರ ತರುಣ, ಕ್ಷಯರೋಗಿ,
ಕೈಯಲ್ಲಿ ಕಾಸಿಲ್ಲದಿದ್ದರೂ ಕವಿತೆ ಬರೆಯುವ ಖಯಾಲಿ;
ಅಸುನೀಗಿದ ತಮ್ಮನ ದುಃಖದ ನಡುವೆ ತ್ಯಜಿಸಿ ಹೋಗಿದ್ದಾಳೆ
ಪ್ರೀತಿಸಿದ ಗೆಳತಿ ಬ್ರಾನ್! ಮನೆ-ಮನಗಳೆಲ್ಲಾ ಖಾಲಿ-ಖಾಲಿ.

ವಿಷಾದದ ನೋಟ ಬೀರುತ್ತಿದ್ದಾನೆ  ಜಾನ್
ಅಮೃತಶಿಲೆ ಭರಣಿ ಮೇಲೆ ಅಂದದ ಕಲೆ-ಕುಸುರಿ.
ಕಿವಿಗೆ ಕೇಳುತ್ತಿದೆ ನಿಶ್ಶಬ್ದ ಮೋಹನ ಮುರಳಿ; ಗೌತಮದೃಷ್ಟಿ
ನೋಡುತ್ತಿದೆ ಹಬ್ಬಕ್ಕೆ ತಂದ ಕೊಬ್ಬಿದ ಹರಕೆಯ ಕುರಿ.

ಹೊಂಚು ಹಾಕುತ್ತಿದೆ ಮೆಕ್ಯಾನಿಕಲ್ ಹುಲಿಯೊಂದು
(ಫ್ರೆಂಚ್ ಸೇನೆ ಟಿಪ್ಪುವಿಗಿತ್ತ ಉಡುಗೊರೆಯಂಥದೇ.)
ಕಣ್ಣುಗಳಲ್ಲಿ ಕಾಡುಗತ್ತಲು ಕಿಚ್ಚಾಗಿ ಉರಿಯುತ್ತಿದೆ!
ಸುರಿಯುತ್ತಿದೆ ದಾರ್ಶನಿಕ ಬ್ಲೇಕ್  ಕಣ್ಣುಗಳಲ್ಲಿ ಹೆದರಿಕೆ.

 ನಡುನಡುವೆ ಬಂದು ಹೋಗುತ್ತಾರೆ ಜಿಆರ್ ಕರೆದಾಗ
 ಆಡೆನ್, ಶೇಕ್ಸ್ ಪಿಯರ್, ರಾಮಾನುಜ, ವಾಲ್ಮೀಕಿ!
 ಬೀಗುತ್ತಾರೆ ತಮ್ಮ ಸಾಲುಗಳನ್ನು ಜಿಆರ್ ಉದ್ಧರಿಸಿದಾಗ
 ಎಪ್ಪತ್ತಾರು ವರ್ಷಗಳ ಸುದೀರ್ಘ ಸ್ಮೃತಿಯನ್ನು ಕೆದಕಿ

 ಮುಕ್ತಾಯವಾದಾಗ ಕೊನೆಗೂ ಕಾವ್ಯಾಸ್ವಾದ
 ಕೋಣೆ ತುಂಬಾ ಹಾರಾಡುತ್ತಿದ್ದ ಭಾವಸೂಚಕ ಚಿಹ್ನೆ
 ಕೊನೆಗೂ ವಿಶ್ರಮಿಸುತ್ತವೆ ಅಲ್ಲೇ ಜಿಆರ್ ಪಕ್ಕ
 ಇಗರ್ಜಿಯ ಸ್ತಂಭದ ಮೇಲೆ ಪಾರಿವಾಳಗಳಂತೆ

 ಜೋರಾಗಿ ಚಪ್ಪಾಳೆ ತಟ್ಟುವುದಿಲ್ಲ ಯಾರೂ
 ರಸಾಸ್ವಾದನೆಗೆ ಭಂಗ ಬರಬಹುದು.
 ಕೀಟ್ಸ್ ಹೇಳಿಲ್ಲವೇ -  ಕೇಳಿಸುವ ಕೊಳಲದನಿಗಿಂತ
 ಕೇಳಿಸದ ಮುರಳೀನಾದ ಮಧುರವೆಂದು!






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)