ಪರಸ್ಪರರಿಗೆ ಓದಬೇಕಾದ ಸಂಪ್ರದಾಯದ ಓಲೆ

 ಮೂಲ ಕವಿತೆ: ವಿಲಿಯಂ ಸ್ಟಾಫರ್ಡ್
ಅನುವಾದ: ಸಿ. ಪಿ. ರವಿಕುಮಾರ್


ನಾನೆಂಥ ವ್ಯಕ್ತಿಯೆಂದು ಗೊತ್ತಿಲ್ಲದಿದ್ದರೆ ನಿನಗೆ
ಮತ್ತು ನನಗೆ ಗೊತ್ತಿಲ್ಲದಿದ್ದರೆ ನೀನೆಂಥ ವ್ಯಕ್ತಿ ಎಂದು
ತೋರುತ್ತವೆ ದಾರಿಯನ್ನು ಬೇರೆ ಯಾರೋ ಹಾಕಿದ ಗೆರೆ,
ಹಾಗಾಗಿ ತಪ್ಪು ದೇವರನ್ನು ನಂಬಿಕೊಂಡು ನಾವು ಕಳೆದುಕೊಳ್ಳಬಹುದು ನಮ್ಮ ತಾರೆ.

ಏಕೆಂದರೆ ಮನದಾಳದಲ್ಲಿ ಇರುತ್ತವೆ ಸಣ್ಣಪುಟ್ಟ ಮೋಸಗಳು,
ಭುಜ ಕುಣಿಸಿದರೂ ಮುರಿಯುತ್ತದೆ ನಾಜೂಕು ಎಳೆ;
ಬಾಲ್ಯದ ತಪ್ಪುಗಳು ಚೀತ್ಕರಿಸುತ್ತಾ ಹೊರನುಗ್ಗುತ್ತವೆ
ಓಡಿಬಿಡುತ್ತೇವೆ ಭದ್ರಕೋಟೆಯ ಶಿಥಿಲ ಬಾಗಿಲಿನ ಆಚೆ.

ಸಾಗುತ್ತವಲ್ಲ ಮೆರವಣಿಗೆ ಆನೆಗಳು ಒಂದರ ಬಾಲವನ್ನು ಇನ್ನೊಂದು ಹಿಡಿದು
ತಪ್ಪಿದರೂ ಒಂದು ಹೋಗಿ ಮುಟ್ಟಲಾರವು ಸರ್ಕಸ್ ಡೇರೆ.
ಏನು ನಡೆಯುತ್ತಿದೆ ಎಂದಷ್ಟೇ ಹೇಳಿ ಸರಿಸದಿರುವುದು ಏಕೆನ್ನುವ ತೆರೆ
ನನಗೆ ಕ್ರೌರ್ಯ ಎನ್ನಿಸುತ್ತದೆ, ಎಲ್ಲಾ ಕ್ರೌರ್ಯದ ತಾಯಿಬೇರು ಅದೇ.

ಹೀಗಾಗಿ ವಾಕ್ಕಿಗೆ ನನ್ನದೊಂದು ಕೋರಿಕೆ, ಅಸ್ಪಷ್ಟ ನೆರಳಿನಂಥ ಆ ವಸ್ತುವಿಗೆ,
ಮಾತಾಡುವ ಎಲ್ಲರಲ್ಲೂ ಇರುವ ಆ ಮುಖ್ಯ ಪ್ರದೇಶಕ್ಕೆ:
ಮರುಳು ಮಾಡುವುದೇನು ದೊಡ್ದದಲ್ಲ ಪರಸ್ಪರರನ್ನು, ಆದರೂ ವಹಿಸಿ ಜಾಗರೂಕತೆ
ಇಲ್ಲದಿದ್ದರೆ ಕತ್ತಲಲ್ಲಿ ಕಳೆದುಹೋದೀತು ನಮ್ಮ ಸಹಬಾಳ್ವೆ ಎಂಬ ಮೆರವಣಿಗೆ.

ಏಕೆಂದರೆ ಎಚ್ಚರವಾಗಿರುವುದು ಮುಖ್ಯ ಎಚ್ಚರವಿರುವ ಮಂದಿ,
ಸಾಲು ಮುರಿದರೆ ಅವರು ನಿದ್ದೆಗೆ ಜಾರಬಹುದು ಅಧೀರರಾಗಿ;
ನಾವು ನೀಡುವ ಸಂಕೇತಗಳು - ಹೌದು, ಇಲ್ಲ, ಬಹುಶಃ - 
ಸ್ಪಷ್ಟವಾಗಿರಬೇಕು, ಏಕೆಂದರೆ ನಮ್ಮ ಸುತ್ತಲೂ ಇರುವ ಕತ್ತಲು ಬಹು ಗಾಢ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)