ಕಬೀರನ ಹತ್ತು ದ್ವಿಪದಿಗಳು (೧-೧೦)

ಮೂಲ: ಮಹಾತ್ಮಾ ಕಬೀರ್ 
ಕನ್ನಡ ಭಾವಾನುವಾದ: ಸಿ.ಪಿ. ರವಿಕುಮಾರ್ 

ಇಸವಿ ೧೩೯೮. ಇಂದಿನ ಕಾಶಿಗೆ (ಬನಾರಸ್) ಹತ್ತಿರದಲ್ಲಿರುವ ಲಹರ್ತಾರಾ ಎಂಬ ಸ್ಥಳದಲ್ಲಿ ಒಬ್ಬ ಬ್ರಾಹ್ಮಣ ವಿಧವೆಯ ಹೊಟ್ಟೆಯಲ್ಲಿ ಒಂದು ಗಂಡು ಮಗು ಜನಿಸಿತು. ಸಮಾಜದ ನಿಂದೆಗೆ ಹೆದರಿದ ಆಕೆ ಮಗುವನ್ನು ತೊರೆದು ಹೋದಳು. ನೀರೂ ಮತ್ತು ನೀಮಾ ಎಂಬ ಬಡ, ಅನಕ್ಷರಸ್ಥ ಮುಸಲ್ಮಾನ ದಂಪತಿಗಳು ಈ ಮಗುವನ್ನು ಸಾಕಿದರು. ಈ ಮಗುವೇ ಮುಂದೆ ಮಹಾತ್ಮಾ ಕಬೀರ್ ಎಂಬ ಹೆಸರಿನಿಂದ ಪ್ರಖ್ಯಾತವಾಯಿತು. ಸಾಕು ತಂದೆ ತಾಯಿಯರು ವೃತ್ತಿಯಲ್ಲಿ ನೇಕಾರರು. ಈ ಮಗುವನ್ನು ಸಂತ ರಾಮಾನಂದರು ಶಿಷ್ಯನನ್ನಾಗಿ ಸ್ವೀಕರಿಸಿದರು. ಶ್ರೀ ರಾಮಾನಂದರು ದೇಹತ್ಯಾಗ ಮಾಡಿದಾಗ ಕಬೀರನಿಗೆ ೧೩ ವರ್ಷ ವಯಸ್ಸು. 

ಕಬೀರನಿಗೆ ದೊರೆತ ಶಿಕ್ಷಣ ಯಾವ ಬಗೆಯದು ಎಂಬುದರ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಅವನು ಸನ್ಯಾಸ ಸ್ವೀಕರಿಸಲಿಲ್ಲ. ಒಬ್ಬ ಗೃಹಸ್ಥನಾಗಿ, ನೇಕಾರನಾಗಿ, ಚಿಂತಕನಾಗಿ ಸಮನ್ವಯದ ಬದುಕನ್ನು ಜೀವಿಸಿದ.  ಭಗೋದಾಸ ಮತ್ತು ದರ್ಮದಾಸ ಎಂಬ ಅವನ ಇಬ್ಬರು ಶಿಷ್ಯರು ಅವನ ವಾಣಿಯನ್ನು ಬರೆದಿಟ್ಟರು ಎಂಬ ಪ್ರತೀತಿ ಇದೆ.  ಆದರೆ ಅವನ ದ್ವಿಪದಿಗಳು ಮತ್ತು ಭಜನೆಗಳು ಬಾಯಿಂದ ಬಾಯಿಗೆ ಸಾಗಿ ಬಂದಿದ್ದೆ ಹೆಚ್ಚು.  ಅವನ ದ್ವಿಪದಿಗಳನ್ನು ಶ್ಲೋಕಗಳೆಂದೂ, ಸಾಖಿಗಳೆಂದೂ ಕರೆಯುತ್ತಾರೆ. ಸಾಖಿ ಎಂದರೆ ಸಾಕ್ಷಿ. ಅವನ ಅನುಯಾಯಿಗಳಿಗೆ ಅವನ ವಾಣಿಯು ಸತ್ಯದ ಸಾಕ್ಷಿಯಾಗಿ ಕಂಡಿವೆ. ಕಬೀರನ ರಚನೆಗಳು - ಕಬೀರ ಗ್ರಂಥಾವಲಿ, ಸಾಖೀಗ್ರಂಥ, ಬೀಜಕ, ಮತ್ತು ಅನುರಾಗ ಸಾಗರ.  ಕಬೀರ ಪಂಥ ಎಂಬ ಒಂದು ಧಾರ್ಮಿಕ ಗುಂಪು ಇನ್ನೂ ಭಾರತದಲ್ಲಿದೆ. ಉತ್ತರಭಾರತ ಮತ್ತು ಮಧ್ಯಭಾರತದಲ್ಲಿ ಇವರು ಕಾಣಸಿಕ್ಕುತ್ತಾರೆ. ಇವರ ಸಂಖ್ಯಾಬಲ ಸುಮಾರು ಒಂದು ಕೋಟಿ.  ಕಬೀರನ ಹುಟ್ಟುಸ್ಥಾನದ ಹತ್ತಿರ ಕಬೀರಮಠ ಧಾರ್ಮಿಕ ಸ್ಥಳವಿದೆ. 


ಕಬೀರನ ಅರವತ್ತು ದ್ವಿಪದಿಗಳ ಅನುವಾದವನ್ನು ಕನ್ನಡದಲ್ಲಿ ನಾನು ಪ್ರಯತ್ನಿಸಿದ್ದೇನೆ. ಇವುಗಳನ್ನು ಆರು ಭಾಗಗಳಲ್ಲಿ ಕೊಟ್ಟಿದ್ದೇನೆ. 

ಗುರುವೂ ಗೋವಿಂದನೂ ನಿಂತಿಹರು ಮುಂದೆ; ಯಾರಿಗೆ ಮೊದಲ ಪ್ರಣಾಮ?
ಗುರುವಿನ ಕಾಲಿಗೆರಗುವೆ! ಅವನಲ್ಲವೇ ತೋರಿದ್ದು ಗೋವಿಂದನ ಧಾಮ? ॥೧॥  

ಇದು ಗುರುವಿನ ಪ್ರಾಮುಖ್ಯತೆಯನ್ನು ಕುರಿತಾದ ಕಬೀರವಾಣಿ. ಗುರು ಮತ್ತು ಗೋವಿಂದ (ದೇವರು) ಇಬ್ಬರೂ ಒಮ್ಮೆಲೇ ಎದುರಾದರೆ ಯಾರಿಗೆ ಮೊದಲು ವಂದಿಸಬೇಕು ಎಂಬ ಗೊಂದಲ ಸಹಜವೇ! ಸಾಕ್ಷಾತ್ ದೈವವೇ ಎದುರಾದರೂ "ಗುರುವಿನ ಕಾಲಿಗೆ ಮೊದಲು ಪ್ರಣಾಮ ಮಾಡುತ್ತೇನೆ" ಎನ್ನುತ್ತಾನೆ ಕವಿ. ಏಕೆಂದರೆ ಗುರುವಿನ ದೀಕ್ಷೆಯಿಂದಲೇ ಶಿಷ್ಯನಿಗೆ ದೈವದ ಸಾಕ್ಷಾತ್ಕಾರವಾಗಿದ್ದು.


ಗಂಟು ಕಟ್ಟಿಡುವುದಿಲ್ಲ ಸಾಧು! ಎಲ್ಲವೂ ಸೇರುವುದು ಹೊಟ್ಟೆ 
ಹಿಂದೆ ಮುಂದೆ ಕಾಯುವ ಹರಿಯಿಹನು; ಕೇಳಿದಾಗ ಇದೋ ಕೊಟ್ಟೆ ॥೨॥ 
ಸಾಧುವಾದವನಿಗೆ ನಾಳೆಯ ಚಿಂತೆಯಿಲ್ಲ. ಇವತ್ತಿನದು ಇವತ್ತಿಗೆ ಮಾತ್ರ! ನೆನ್ನೆ-ನಾಳೆಗಳ ಚಿಂತೆಯನ್ನು ಅವನು ಭಗವಂತನಿಗೆ ಬಿಟ್ಟುಬಿಟ್ಟಿದ್ದಾನೆ. ಕೇಳಿದಾಗ ಕೊಡುತ್ತಾನೆಂಬ ಭರವಸೆ ಸಾಧುವಿಗಿದೆ.  ಹರಿದಾಸರು ಕೂಡಾ ಇದೇ ರೀತಿ ಬದುಕುತ್ತಿದ್ದರೆಂದು ನೆನೆಯಬಹುದು.  

ಏಳು  ಸಮುದ್ರಗಳೂ ಮಸಿಯಾಗಿ ಲೇಖನಿಯಾಗಿ ಗಿಡಮರವೆಲ್ಲಾ 
ಭೂಮಂಡಲವೇ ಕಾಗದವಾದರೂ ಹರಿಗುಣ ಬರೆಯಲಾಗಲಿಲ್ಲ  ॥೩॥ 

ಭಗವಂತನ ಗುಣವರ್ಣನೆ ಮಾಡಲು ಎಷ್ಟು ಬರೆದರೂ ಸಾಲದು! ಏಳೂ ಸಮುದ್ರಗಳು ಮಸಿಯಾಗಿ ಗಿಡಮರಗಳೆಲ್ಲಾ ಲೇಖನಿಯಾಗಿ ಭೂಮಂಡಲವೆಲ್ಲಾ ಕಾಗದವಾದರೂ ಬರೆಯುವುದು ಮುಗಿಯದು ಎನ್ನುತ್ತಾನೆ ಕಬೀರ. 

ನಿನ್ನ ಮನೆಯಲ್ಲಿ ಯಾರು ಮುಳ್ಳು ಬಿತ್ತಿದರೋ ಅವರ ಮನೆಯಲ್ಲಿ ನೀನು ಬಿತ್ತು ಹೂವು 
ಅಲ್ಲಿ ಅರಳುವುದೆಲ್ಲ ನಿನ್ನ ಪಾಲಿಗೆ ಹೂವು, ಅವನ ಪಾಲಿಗೋ ತ್ರಿಶೂಲದ ಕಾವು ॥೪॥ 

ವಿಷವಿಕ್ಕಿದವಗೆ ಷಡ್ರಸವನುಣಿಸಲು ಬೇಕು ಎಂದು ಪುರಂದರದಾಸರು ಹಾಡಿದರು. ಇಲ್ಲಿ ಕಬೀರ ಹೇಳುವುದೂ ಅದನ್ನೇ. ನಿನ್ನ ಮನಸ್ಸಿನಲ್ಲಿ ದುಃಖದ ಮುಳ್ಳನ್ನು ಬಿತ್ತಿದವರ ಮನಸ್ಸಿನಲ್ಲಿ ಸಂತಸದ ಹೂವನ್ನು ಬಿತ್ತು. ಹೂವು ಅರಳಿದಾಗ ನಿನಗೆ ಸಂತೋಷವಾಗುತ್ತದೆ. ಆದರೆ ಶತ್ರುವನ್ನು ಹೂವು ತ್ರಿಶೂಲದಂತೆ ಬಾಧಿಸುತ್ತದೆ.

ದೊಡ್ಡವರಾದರೇನು ಬಂತು ದೊಡ್ಡದಾದಂತೆ ಖರ್ಜೂರದ ಮರ?
ಒಂದು ಹಕ್ಕಿಗೂ ನೆರಳಿಲ್ಲ ಒಡಲಲ್ಲಿ! ಹಣ್ಣೋ ನಿಲುಕದಷ್ಟು ದೂರ! ॥೫॥ 

ದೊಡ್ಡದಾಗುವುದು ಮುಖ್ಯ. ಆದರೆ ಖರ್ಜೂರದ ಮರದಂತೆ ದೊಡ್ಡದಾಗುವುದು ನಿಷ್ಪ್ರಯೋಜಕ. ರೆಂಬೆಕೊಂಬೆಗಳಿಲ್ಲದೆ ಎತ್ತರವಾಗಿ ಬೆಳೆದ ಖರ್ಜೂರದ ಮರದಲ್ಲಿ ಹಕ್ಕಿಗಳು ಗೂಡು ಕಟ್ಟಲಾರವು.  ಮರ ಯಾರಿಗೂ ನೆರಳು ಕೊಡದು. ಹಣ್ಣುಗಳನ್ನು ನಿಲುಕದಷ್ಟು ಎತ್ತರದಲ್ಲಿವೆ.  ಪರರಿಗೆ ಸ್ವಲ್ಪವೂ ಉಪಕಾರ ಮಾಡಲು ಸಾಧ್ಯವಾಗದ ಹಾಗೆ ಎತ್ತರಕ್ಕೆ ಬೆಳೆದರೇನು ಪ್ರಯೋಜನ?

ದುಃಖದಲ್ಲಿ ಸ್ಮರಿಸುವರೇ ಎಲ್ಲರೂ, ಸುಖದಲ್ಲಿ ಸ್ಮರಿಸರು ಯಾರೂ 
ಸುಖದಲ್ಲಿ ಯಾರು ಸ್ಮರಿಸುವರೋ ಅವರಿಗೆ ದುಃಖವು ಹೇಗಾದೀತು? ॥೬|| 

ದೇವರನ್ನು ಎಲ್ಲರೂ ಕಷ್ಟ ಬಂದಾಗ ಮಾತ್ರ ಸ್ಮರಿಸುವುದನ್ನು ಕಬೀರ ಟೀಕಿಸುತ್ತಾನೆ. "ಯಾರು ಸುಖದಲ್ಲಿ ಕೂಡಾ ದೇವರನ್ನು ಸ್ಮರಿಸುತ್ತಾರೋ ಅವರಿಗೆ ದುಃಖಗಳು ಹೇಗೆ ಉಂಟಾದಾವು?" ಎಂಬುದು ಅವನ ಪ್ರಶ್ನೆ. 

ನಿದ್ರೆಯಲ್ಲಿ ಕಳೆಯಿತು ರಾತ್ರಿ ಊಟದಲ್ಲಿ ಕಳೆಯಿತು ಹಗಲು 
ಸವಕಲು ನಾಣ್ಯದ ಬೆಲೆಗೆ ಹೋಯಿತು ವಜ್ರದ ಬೆಲೆಯ ಬಾಳು  ॥೭॥ 

"ಮಾನವ ಜನ್ಮ ದೊಡ್ಡದು, ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ" ಎಂದು ಪುರಂದರದಾಸರು ಹಾಡಿದ್ದಾರೆ.  ಇಲ್ಲಿ ಕಬೀರ ಹೇಳುತ್ತಿರುವುದೂ ಅದನ್ನೇ.  ಆಯುಷ್ಯದಲ್ಲಿ ಬಹುಭಾಗವನ್ನು ಮನುಷ್ಯ ವ್ಯರ್ಥ ಮಾಡುತ್ತಾನೆ. ರಾತ್ರಿ ನಿದ್ದೆಯಲ್ಲಿ ಕಳೆಯುತ್ತದೆ. ಹಗಲು ಊಟದ ಚಿಂತೆಯಲ್ಲಿ ಹೋಗುತ್ತದೆ.  ವಜ್ರದ ಬೆಲೆಯ ಮನುಷ್ಯನ ಜನ್ಮ ಸವಕಲು ನಾಣ್ಯದ ಬೆಲೆಗೆ ಹೋಗುವುದನ್ನು ಕಂಡು ಕಬೀರ ವ್ಯಸನ ಪಡುತ್ತಾನೆ.

ತಾಳಿಕೋ ತಾಳಿಕೋ ತಾಳಿಕೋ ಮನವೇ! ಎಲ್ಲವೂ ನಡೆಯುವುದು ಮೆಲ್ಲನೆ 
ನೂರು ಕೊಡ ನೀರು ಸುರಿದರೂ ಮಾಲಿ ಫಲವು ಋತುಮಾನ ಬಂದಾಗಲೇ ॥೮॥ 

ತಾಳಿದವನು ಬಾಳಿಯಾನು ಎಂಬ ಮಾತಿದೆ. ಕಬೀರನ ಪ್ರಕಾರ ಜೀವನದಲ್ಲಿ ಎಲ್ಲವೂ ನಿಧಾನಕ್ಕೆ ತನ್ನ ಪಾಡಿಗೆ ತಾನು ನಡೆಯುತ್ತದೆ.  ಮನುಷ್ಯ ತಾಳ್ಮೆಗೆಟ್ಟು ಹಾರಾಡುವುದರಿಂದ ಯಾವುದೂ ಬೇಗ ಆಗಲು ಸಾಧ್ಯವಿಲ್ಲ. ಮರಕ್ಕೆ ಮಾಲಿ ನೂರು ಕೊಡ ನೀರು ಸುರಿದ ಮಾತ್ರಕ್ಕೆ ಅದು ತಕ್ಷಣ ಫಲ ನೀಡುವುದಿಲ್ಲ. ಎಲ್ಲದಕ್ಕೂ ಕಾಲ ಬರಬೇಕು.  

ಕಾಲಿಗೆ ಚುಚ್ಚುವ ಹುಲ್ಲಿನ ಗರಿಕೆಯ ನಿಂದಿಸದಿರು ಎಂದೂ 


ಎಂದು ತಾಕುವುದೋ ಕಣ್ಣಿಗೆ ಬಂದು? ಬಹುಬಾಧೆಯಾಗುವುದು ಅಂದು!॥೯॥

"ಹುಲ್ಲಿನ ಗರಿಕೆಯನ್ನು ಕಡೆಗಣಿಸಬೇಡ, ಅದು ಎಂದಾದರೂ ಬಂದು ಕಣ್ಣಿಗೆ ತಾಕಿದರೆ ಬಹಳ ಬಾಧೆಯಾಗುತ್ತದೆ" ಎಂದು ಕಬೀರ ಎಚ್ಚರಿಸುತ್ತಾನೆ. ಜೀವನದಲ್ಲಿ ನಾವು ಸ್ಥಾನಮಾನಗಳನ್ನು ನೋಡಿ ಮಣೆ ಹಾಕುವುದು ರೂಢಿಯಾಗಿದೆ. ಹಿರಿಯ ಸ್ಥಾನದಲ್ಲಿರುವವರಿಗೆ ಮಣೆ; ಕಿರಿಯ ಸ್ಥಾನದಲ್ಲಿರುವವರಿಗೆ ಕಡೆಗಣ್ಣು. ಈ ಕಿರಿಯ ಸ್ಥಾನದಲ್ಲಿರುವವನ ಕೋಪಕ್ಕೆ ಸಿಕ್ಕಿದರೆ ಮುಂದೊಂದು ದಿನ ಕಷ್ಟಪಾಡಬೇಕಾದೀತು ಎಂದು ಕಬೀರ ಎಚ್ಚರಿಸುತ್ತಾನೆ.  ದ್ರೋಣನನ್ನು ಕಡೆಗಣಿಸಿದ್ದು ಮುಂದೆ ದ್ರುಪದನಿಗೆ ಕಷ್ಟ ತಂದುಕೊಟ್ಟಿತು ಎಂಬ ಕಥೆಯನ್ನು ಇಲ್ಲಿ ಸ್ಮರಿಸಬಹುದು. 


ಮಣ್ಣು ನುಡಿಯಿತು ಕುಂಬಾರನಿಗೆ, ನೀನೇನು ತುಳಿದೀಯೆ ನನ್ನ?
ತಾಳು ಬರುವುದೊಂದು ದಿನ! ತುಳಿದೇನು ನಾನು ನಿನ್ನನ್ನ! ॥೧೦॥ 

ಕುಂಬಾರ ಮಣ್ಣನ್ನು ತುಳಿದು ಹದ ಮಾಡುವುದನ್ನು ನೋಡಿದಾಗ ಕಬೀರನಿಗೆ ಹೀಗೆ ಅನ್ನಿಸುತ್ತದೆ. ತುಳಿತಕ್ಕೆ ಸಿಕ್ಕ ಮಣ್ಣು ಕುಂಬಾರನಿಗೆ ಎಚ್ಚರಿಕೆ ಹೇಳುತ್ತಿದೆ - "ಈಗ ನಿನ್ನ ಸರದಿ, ನನ್ನನ್ನು ತುಳಿಯುತ್ತಿದ್ದೀಯೆ! ಮುಂದೊಂದು ದಿನ ನಿನ್ನನ್ನು ದಫನ ಮಾಡಿದಾಗ ನಿನ್ನನ್ನು ನಾನು ತುಳಿಯುತ್ತೇನೆ."  ಮೇಲಿನ (ಒಂಬತ್ತನೇ) ದ್ವಿಪದಿಗೂ ಇದಕ್ಕೂ ಸಂಬಂಧವಿದೆ. ಮೇಲಧಿಕಾರಿಯು ಕೆಳಗಿನವರನ್ನು ಶೋಷಣೆ ಮಾಡಬಹುದು. ಆದರೆ ಮುಂದೊಮ್ಮೆ ಅವನಿಗೂ ನಿವೃತ್ತಿ ಕಾದಿದೆ!  ತನ್ನ ಕೆಲಸಕ್ಕೆಂದು ಅವನು ಮುಂದೆ ಅವರನ್ನೇ ಅವಲಂಬಿಸಬೇಕಾಗಬಹುದು. "ಎಲ್ಲರನ್ನೂ ಮರ್ಯಾದೆಯಿಂದ ನಡೆಸಿಕೋ" ಎಂಬುದು ಈ ದ್ವಿಪದಿಯ ತಾತ್ಪರ್ಯ. 



Kannada translation by C.P. Ravikumar of of ten couplets by the celebrated saint-poet Kabir.

ಕಾಮೆಂಟ್‌ಗಳು

  1. ಪ್ರತ್ಯುತ್ತರಗಳು
    1. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Dr. Khade!

      ಅಳಿಸಿ
    2. ನಿಮಗೆ ತುಂಬಾ ಧನ್ಯವಾದಗಳು ಸರ್ ಇನ್ನೂ ಹೆಚ್ಚು ಹೆಚ್ಚು ಕಬೀರ್ ದಾಸರು ಹೇಳಿದಂತ ಜೀವನಕ್ಕೆ ದಾರಿ ಆಗುವಂತಹ ಅವರು ವಚನಗಳನ್ನು ಮತ್ತು ಅವರ ದೋಹೆಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕಾಗಿ ವಿನಂತಿ 🙏🏼🙏🏼🙏🏼

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)