ಪೋಸ್ಟ್‌ಗಳು

2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಳಿಗಾಲದ ಕೋಟ್

ಇಮೇಜ್
  ಮೂಲ: ರೋಸಿತಾ ಬೋಲ್ಯಾಂಡ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಎಸೆಯಲು ಮನಸ್ಸಿಲ್ಲದೆ ಎಷ್ಟೋ ವರ್ಷಗಳಿಂದ ಅಮ್ಮ ಅಡಗಿಸಿ ಇಟ್ಟಿದ್ದ ಅವಳ ಹಳೆಯ ಬಟ್ಟೆಬರೆ  ಒಂದು ದಿನ ಸಿಕ್ಕಿಬಿದ್ದವು ನನ್ನ ಕೈಗೆ. ನಾನೀಗ ಧರಿಸುತ್ತೇನೆ ಅವಳ ಕಾಟನ್ ಉಡುಪು ಅದರ ಒಡಲಿನ ತುಂಬಾ ಗುಲಾಬಿ ಹಳದಿಕೆಂಪು; ಗಟ್ಟಿನಾರಿನ ಬಟ್ಟೆಯ ಹಳೇ ಮಾದರಿಯ ಸೂಟ್, ಮತ್ತು ನನ್ನ ಅಚ್ಚುಮೆಚ್ಚಿನ  ಕಾಶ್ಮೀರದ ಮೇಕೆ ತುಪ್ಪುಟದ  ಕೋಟ್  ಆಪ್ಯಾಯವಾಗಿದೆ ಈ ಚಳಿಗೆ. ಪ್ರತಿವರ್ಷ ಈ ಕೋಟ್ ಹೋಗಿಬರುತ್ತದೆ ಡ್ರೈ ಕ್ಲೀನ್ ಅಂಗಡಿಗೆ ಹುಡುಕಾಡುತ್ತೇನೆ ಅದರ ಬಿದ್ದುಹೋದ ಗುಂಡಿಗೆ ಆಸ್ಥೆಯಿಂದ ಪೋಣಿಸಿ ಸೂಜಿ ದಾರ  ಸರಿಪಡಿಸುತ್ತೇನೆ ಬಿಚ್ಚಿಹೋದ ಹೊಲಿಗೆ. ಪಕ್ಕೆಗಳ ಹತ್ತಿರ ಬಿಟ್ಟುಕೊಳ್ಳುತ್ತಿರುವ ಬಾಯಿ ಮತ್ತು ಒಳಗಿಂದ ಇಣುಕುತ್ತಿರುವ ಸ್ಯಾಟಿನ್ ಒಳಪದರ: ನನ್ನ ದಿವ್ಯ ನಿರ್ಲಕ್ಷ್ಯ ನೋಟ ಇವುಗಳ ಕಡೆಗೆ.  ಈಚೆಗಷ್ಟೇ ಅಮ್ಮ ಬಿಟ್ಟುಕೊಟ್ಟಳು ಗುಟ್ಟು ಈ ಕೋಟ್ ಅವಳು ಕೊಂಡದ್ದು  ನನ್ನನ್ನು ಗರ್ಭದಲ್ಲಿ ಧರಿಸಿದ್ದ ಶರತ್ಕಾಲದಲ್ಲಂತೆ. ಅಂದಿನಿಂದಲಾಗಾಯ್ತು ಬೆಳಗಿನ ಕುಳಿರ್ಗಾಳಿಯಲ್ಲಿ ಇನ್ನಷ್ಟು ಬಲವಾಗಿ ಅಪ್ಪಿಕೊಂಡು ಕೋಟನ್ನು  ಬೀಗುತ್ತೇನೆ ಹೆಣೆಯುತ್ತಾ ಮನದಲ್ಲಿ ಹೊಸ ಸಾಧ್ಯತೆ. ಥೇಟ್ ಹಾಗೇ, ಹೇಗೆ ಅಮ್ಮ ಆ ವರ್ಷ ಇದನ್ನು ಧರಿಸಿ ಓಡಾಡುತ್ತಾ ಕಂಡಿರಬಹುದೋ ಹಾಗೆ ಈ ಕೋಟ್ ಒಳಗೆ ಹುದುಗಿದ್ದಾಗ  ನಮ್ಮಿಬ್ಬರದ್ದೂ ರೂಪುರೇಷೆ.

ಪುಸ್ತಕಪ್ರೇಮ

ಇಮೇಜ್
 ಎಲ್ಲ ಸಂಪುಟಗಳ ಬೆನ್ನೆಲುಬುಗಳೂ ಬಿರುಕು ಬಿಟ್ಟು ಬಯಲಾಗಿ ಎಲ್ಲ ಕಥನಕುತೂಹಲಗಳ ಗುಟ್ಟು ವಿದಾಯ ಹೇಳಿದವು  ಸುಪರಿಚಿತ ಪಾತ್ರಗಳೆಲ್ಲ ಮತ್ತು ನಸುಕಿನವರೆಗೂ ಮೌನವೇ ಮರುನುಡಿಯುತ್ತಿತ್ತು. ಆಗ ನಡುಗುವ ಕೈಗಳನ್ನು ಮೇಲೆತ್ತಿ ಪಣ ತೊಟ್ಟು ನಿರ್ಧರಿಸಿದೆ ಊರಿಗೆ ಹೋಗಲೇ ಬೇಕು ಇವತ್ತು ಕನಿಷ್ಠ ಪುಸ್ತಕದಂಗಡಿಯ ಬಾಗಿಲಿನವರೆಗಾದರೂ ಸಾಗಿ ವ್ಯಯಿಸಬೇಕು ಕೂಡಿಟ್ಟ ಅಷ್ಟಿಷ್ಟು ಸಂಪತ್ತು. ಖಂಡಿತ ಯಾವ ಖಾಲಿ ಕಪಾಟಿಗೂ ಇರದು ನನ್ನ ಪಾಡನ್ನು ನೋಡಿ ನಗುವ ಗಮ್ಮತ್ತು ಯಾವ ಅನಾಥ ಮೂಲೆಗೂ ಇರದು ಮಂದ ಬೆಳಕಿನ ನಸೀಬು, ಕತ್ತಲೆಯ ನೌಬತ್ತು. ಮೂಲ: ಶರ್ಲೀನ್ ಸೈಲಡನ್  ಕನ್ನಡಕ್ಕೆ : ಸಿ ಪಿ ರವಿಕುಮಾರ್

ಕಾಗೆ ಮತ್ತು ಗೂಗೆ

 ನಾನು ನರ್ತಿಸಲೇ ಎಂದು ಕೇಳಿತು ಕಾಗೆ ಕೆಳಗೆ ನೋಡುತ್ತಿತ್ತು ಮರದಲ್ಲಿದ್ದ ಗೂಗೆ  ಬೇಕೆನ್ನಿಸಿದ್ದು ಮಾಡು ಎಂದು ಉತ್ತರಿಸಿದಾಗ ಗೂಗೆ  ಏನೂ ತೋರದೆ ಮುಖ ಗಂಟಿಕ್ಕಿತು ಕಾಗೆ ನಾನು ಕೇಳಿದ್ದು ನಿನ್ನ ಅನುಮತಿಯನ್ನು ಎಂದು ಕಾಗೆಯು ಕಾಲಿಂದ ಕೆದರಿತು ಮಣ್ಣು ನೀನು ಹಾರಬಲ್ಲೆ, ನೆನಪಿರಲಿ, ನೀನು ಹಕ್ಕಿ, ಪದಗಳ ಬಲೆಯಲ್ಲಿ ಕೊಳ್ಳದಿರು ಸಿಕ್ಕಿ. ಮೂಲ: ಮಾರ್ಟಿನ್ ಹಿಚ್  ಕನ್ನಡಕ್ಕೆ - ಸಿ ಪಿ ರವಿಕುಮಾರ್ 

ರಹಸ್ಯ

ಇಮೇಜ್
ಮೂಲ: ಜಾನ್ ಬಾಯ್ಲ್ ಒರೇಲಿ  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಯಾವ ಪದದಲ್ಲಿದೆ ಹೇಳಿ ನಿಜವಾದ ಒಳಿತು ಎಂದು ಕೇಳಿದೆ ನಾನು, ಯೋಚಿಸುತ್ತಾ ಕುಳಿತು. ಸುವ್ಯವಸ್ಥೆಯಲ್ಲಿ, ಎಂದಿತು ನ್ಯಾಯಾಲಯ; ಜ್ಞಾನಾರ್ಜನೆಯಲ್ಲಿ, ಎಂದಿತು ವಿದ್ಯಾಲಯ; ಸತ್ಯದಲ್ಲಿ, ಎಂದನು ಒಬ್ಬ ವಿವೇಕಿ; ಲೋಲುಪ್ತತೆಯಲ್ಲಿ, ಎಂದನೊಬ್ಬ ಅವಿವೇಕಿ; ಪ್ರೇಮದಲ್ಲಿ, ಎಂದಳು ಒಬ್ಬ ನವಯುವತಿ; ಚೆಲುವಿನಲ್ಲಿ, ಎಂದನು ಒಬ್ಬ ಯುವಕ, ಅಲ್ಪಮತಿ; ಸ್ವಾತಂತ್ರ್ಯದಲ್ಲಿ, ಎಂದನು ಒಬ್ಬ ಕನಸಿಗ; ಮನೆಯಲ್ಲಿ, ಎಂದ ಒಬ್ಬ ಋಷ್ಯಶೃಂಗ; ಪ್ರಸಿದ್ಧಿಯಲ್ಲಿ, ಎಂದನು ಒಬ್ಬ ಸೈನಿಕ; ಸಮಾನತೆಯಲ್ಲಿ, ಎಂದನು ದಾರ್ಶನಿಕ. ಅನ್ನಿಸಿತು ಇದಾವುದೂ ಸರಿಯಾದ ಉತ್ತರ ಅಲ್ಲವೆಂದು ಮತ್ತು ಎದೆಯಾಳದಲ್ಲಿ ಎಲ್ಲೋ ಕೇಳಿಸಿತು ದನಿಯೊಂದು  ಹೊಳೆಯಿತು ನನಗೊಂದು ಉತ್ತರ:  ಪ್ರತಿಯೊಂದು  ಹೃದಯದಲ್ಲೂ  ಅಡಗಿರುವ ಗುಪ್ತಪದವೆಂದು  ಇಗೋ ಹೇಳಿಬಿಡುವೆನು ಈ ರಹಸ್ಯವನ್ನು ನಾನೇ. ಆ ಪದದ ಹೆಸರು ಏನೆಂದರೆ : ಕರುಣೆ.

ಪ್ರಾರ್ಥನಾಮಂದಿರ

ಇಮೇಜ್
 ಮೂಲ: ಜೆರ್ರಿ ಆಸ್ಬಾರ್ನ್  ಅನುವಾದ: ಸಿ ಪಿ ರವಿಕುಮಾರ್  ಕರೆದೊಯ್ಯಿರಿ ನನ್ನನ್ನು ಚರ್ಚ್ ಒಂದಕ್ಕೆ ಇಲ್ಲ, ಕಲ್ಲಿನಲ್ಲಿ ಕಟ್ಟಿದ ಕತೀಡ್ರಲಿಗಲ್ಲ ಹತ್ತಾಳು ಎತ್ತರದ ಗೋಪುರದ ಗುಡಿಗಲ್ಲ ಜನರು ಕಿಕ್ಕಿರಿದ ಮಂದಿರಕ್ಕಲ್ಲ  ಕರೆದೊಯ್ಯಿರಿ ನನ್ನನ್ನು ಚರ್ಚ್ ಒಂದಕ್ಕೆ ಆದರೆ ಬೆಂಚುಗಳ ಸಾಲಿನಿಂದ ದೂರಕ್ಕೆ  ಬೋಧಕರಿಂದ ಆದಷ್ಟೂ ದೂರ ಸುದ್ದಿಪುಕಾರುಗಳಿಂದ ದೂರ ಕರೆದೊಯ್ಯಿರಿ ನನ್ನನ್ನು ಚರ್ಚ್ ಒಂದಕ್ಕೆ ಎಲ್ಲಿ ಹಸಿರು ಹುಲ್ಲು ಬೆಳೆಯುವುದೋ ಅಲ್ಲಿಗೆ ಎಲ್ಲಿ ಹರಿವ ನದಿಯ ದಡದಲ್ಲಿ ಅತ್ತಿತ್ತ ಮೊಲಗಳು ಓಡುತ್ತಾ ನಲಿಯುತ್ತವೋ ಮುಕ್ತ ಎಲ್ಲಿ ಕಂಚಿನ ಗಂಟೆ ಇಲ್ಲವೋ ಬಾಜಿಸಲು ಎಲ್ಲಿ ಉಲಿಯುತ್ತವೋ ಹಕ್ಕಿಗಳ ಕೊರಳು ಎಲ್ಲಿ ಮೇಲೆದ್ದು ಇಂಚರಗಳ ಸ್ವರಮೇಳ ಸಂಭ್ರಮಿಸುವುದೋ ಕೆಂಪಾದಾಗ ಮೂಡಣದಿ ಮುಗಿಲು

ವಸಂತಾಗಮನ

ಇಮೇಜ್
ಮೂಲ: ಷಾನ್ ಕಾರ್ಲ್ಸನ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಕಿವಿಗೊಟ್ಟು ಕೇಳಿದರೆ ಬೆಳಗಿನ ಜಾವದ ಮಂಪರಿನಲ್ಲಿ ಕೇಳುವುದು  ಅವಳ ತಂದೆ ಸ್ಕೈತ್ ಹಿಡಿದು ದಿವಸದ  ಮೊದಲ ಹೊರೆಗಾಗಿ ಹುಲ್ಲು ಕೀಳುವ ಸದ್ದು. ಕೆಳಗಿಂದ ಮೇಲೆ ಮತ್ತೆ ಮೇಲಿನಿಂದ ಕೆಳಗೆ ಏಕತಾನದಲ್ಲಿ  ಚಲಿಸುವ  ಕತ್ತಿಯ ಕೂರಲಗಿಗೆ ಬೆದರಿ ಮೊಲ ಕಾಡುಕೋಳಿಗಳು  ಓಡಿ ಹುದುಗಿಕೊಳ್ಳುವುದು ಹೊಲದ ಬದಿಯ ಪೊದೆಗಳಲ್ಲಿ. ಅವನ ತೋಳುಗಳು ಬೀಸುವವು ಇಡೀ ದಿವಸ ರಭಸ ಗಸಗಸ. ದಿಕ್ಕಾಪಾಲಾಗಿ ಚೆದುರುವ ಹೊಲದ ಹೆಗ್ಗಣಗಳ ಓಡಾಟದ ಸದ್ದು ಕೇಳುವುದು. ಕಣ್ಣಿಗೆ ಕಾಣದಂತೆ ಎಲ್ಲೋ ಹುದುಗಿದ  ಒಂದು ಕೋಗಿಲೆಯು ಆಗಾಗ ಕೂಗಿ ಕರೆಯುವುದು. ಇನ್ನೂ ತೇವವಿರುವ ಮಣ್ಣಿನಲ್ಲಿ ಕಾಣುವುವು ಅಲ್ಲಲ್ಲಿ ಕೋಗಿಲೆ ಹೂಗಳು. ನಸುಗೆಂಪು ಬಣ್ಣದ ಪುಟ್ಟ ದಳಗಳ ಮೇಲೆ ಚಿನ್ನದ ಹುಡಿ ಮಿಂಚುವುದು.  ಹೂವಿನ ನಾಜೂಕು ಕಡ್ಡಿಗಳನ್ನು ಕಿತ್ತು ಸಿಕ್ಕಿಸಿಕೊಳ್ಳುವಳು ಮುಡಿಗೆ ಚಿನ್ನದ ಕಿರೀಟದಂತೆ ದಿನವಿಡೀ. ರಾತ್ರಿಯ ಕನಸಿನಲ್ಲೂ  ಸುಳಿಯದು ಕ್ಷೀಣಿಸುತ್ತಾ ಈ ಹಾಡುಗಳೆಲ್ಲ ಒಂದು ದಿನ  ಸ್ತಬ್ಧವಾಗಿಬಿಡುವವು ಎಂಬ ಯಾವ ಆಲೋಚನೆ. (ಕೋಗಿಲೆ ಹೂ ಎಂಬುದು ಹೊಲಗಳಲ್ಲಿ ಬೆಳೆಸಿಕೊಳ್ಳುವ ಒಂದು ಬಗೆಯ ಹೂವಿನ ಸಸ್ಯ. ಈ ಹೂವುಗಳು ವಸಂತಾಗಮನದ ಸಮಯಕ್ಕೆ ಅರಳುವ ಕಾರಣ ಅವುಗಳಿಗೆ ಕೋಗಿಲೆ ಹೂಗಳು ಎಂಬ ಹೆಸರಿದೆ.)

ಗರಿ ಮೂಡಿದ ಕ್ಷಣ

ಇಮೇಜ್
ಹೊಸದಾಗಿ ಪಟ್ಟಾಪಟ್ಟೆ ಸುಣ್ಣಬಣ್ಣ ಬಳಿದ ಹೊಗೆಕೊಳವೆಗಳು ನಮ್ಮ ಹಿರಿಯರು ವಂಶಜರಿಗಾಗಿ ಬಿಟ್ಟುಹೋದ ರಚನೆಗಳು ಮಾತ್ರವಲ್ಲ. ಇವುಗಳಲ್ಲಿ ಗೂಡು ಕಟ್ಟುವ ಸಾಹಸ ತೋರಿದ ಪೆರಿಗ್ರೀನ್ ಗಿಡುಗಗಳಿಗೆ ವಾಸಸ್ಥಾನ ಕೂಡಾ. ಗಂಟೆಗೆ ಇನ್ನೂರು ಮೈಲಿ ಕ್ರಮಿಸುತ್ತಾ ಹಾರಿ ಬಂದಿವೆ, ಯಾವ ಮಿಕವೂ ತಪ್ಪಿಸಿಕೊಳ್ಳಲಾರದು ಅಂಥ ವೇಗ, ಶಕ್ತಿ. ಇಲ್ಲಿ ಗೂಡು ಕಟ್ಟಿ ಪ್ರಾರಂಭಿಸಿವೆ ವಂಶಾಭಿವೃದ್ಧಿಯ ಕೆಲಸ. ನಿಶ್ಚಯ ನಂಬಿಕೆಗಳ ಕೂಟವೆಂದರೆ ಆಗದು ಅತಿಶಯೋಕ್ತಿ. ನೀವಿಬ್ಬರೂ ಅಲ್ಲೇ ಎದೆಯೆತ್ತಿ ನಿಂತು ಗಮನಿಸುತ್ತಿದ್ದಿರಿ  ಹಾರಲು ಕಲಿತಾಗ ನಾವು ರೆಕ್ಕೆಗಳಲ್ಲಿ ಒಗ್ಗೂಡಿಸಿಕೊಂಡು ಧೈರ್ಯ.  ಮೊದಲ ಸಲ ನಾವು ಬೇಟೆಯ ಮೇಲೆ ಎಗರಿದಾಗಲೂ ಮತ್ತು ಹುಡುಕಿಕೊಂಡಾಗ ಒಡನಾಡಿಗಳನ್ನು ಮಾಡುತ್ತಾ ಪ್ರಣಯರವ. ಪಾಲಕರು ನೀವು, ಎಲ್ಲೇ ಇರಲಿ, ನಮ್ಮ ಮೇಲೆ ಇಟ್ಟಿದ್ದಿರಿ ಹದ್ದಿನ ಕಣ್ಣು ನಾವು ಗರಿಬಿಚ್ಚಿ ಹಾರಿ ಅಳೆಯುವವರೆಗೂ ಆಕಾಶದ ಎತ್ತರವನ್ನು. ಮೇವ್ ಓ ಸಲೈವನ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ 

ಜಗತ್ತಿನ ಕೊನೆಯ ಪ್ರೇಮಕವಿತೆ

ಇಮೇಜ್
ಜಗತ್ತಿನ ಕೊನೆಯ ಪ್ರೇಮಕವಿತೆ ಮೂಲ: ಜೋಸೆಫ್ ಫಸಾನೋ  ಕನ್ನಡಕ್ಕೆ : ಸಿ ಪಿ ರವಿಕುಮಾರ್  ಜಗತ್ತಿನ ಕೊನೆಯ ಪ್ರೇಮಕವಿತೆಯಲ್ಲಿ ಒಬ್ಬ ತಾಯಿ ಮತ್ತು ಒಂದು ಮಗು ನೆಲಮಾಳಿಗೆಯಲ್ಲಿ ಬಚ್ಚಿಟ್ಟುಕೊಂಡು ಕುಳಿತಿದ್ದಾರೆ ಆಕಾಶ ಕಳಚಿ ಬೀಳುವ ಹೊತ್ತು. (ಅವರು ಕುಳಿತಿದ್ದ ಸ್ಥಳದಲ್ಲಿ  ಏನು ಸಿಕ್ಕಿದೆ ನೋಡು, ಒಂದು ದಿನಚರಿ, ಒಂದು ರೊಟ್ಟಿಯ ತುಣುಕು, ಒಂದು ಆಟಿಕೆ.) ಬೂಟುಗಳ ಸಪ್ಪಳ ಸನಿಹವಾದಾಗ ತಾಯಿ ಮಗುವಿನ ಬಾಯಿಗೆ ನೀರು ಹಾಕುತ್ತಾ ಹೇಳುತ್ತಾಳೆ ಬಹಳ ಮೆಲ್ಲನೆ ಧ್ವನಿಯಲ್ಲಿ: ನಿನ್ನ ಅಪ್ಪ ನನ್ನ ಬಾಳಿನಲ್ಲಿ ಹೇಗಿದ್ದರು ಎಂದರೆ ಕಿತ್ತಳೆ ಮರಗಳ ಮೇಲೆ ಹೊಯ್ಯುವ ಸಣ್ಣ ಮಳೆಯ ವೃಷ್ಟಿ ಮರೆಯಬೇಡ ಎಂದೂ ಅಮಿತ ಆನಂದದಲ್ಲಿ  ಉಂಟಾಯಿತೆಂದು ನಿನ್ನ ಸೃಷ್ಟಿ.

ಹೊಂದಿಕೆ

ಇಮೇಜ್
 ಮೂಲ: ಡೊರೀನ್ ನಿ ಘ್ರಿಯೋಫಾ ಕನ್ನಡಕ್ಕೆ: ಸಿ ಪಿ ರವಿಕುಮಾರ್   ತಿಂಗಳಾನುಗಟ್ಟಲೆ ಕಲ್ಪಿಸಿಕೊಂಡೆ ಹೇಗಿರಬಹುದು ಎಂದು ನನ್ನ ತೊಗಲಿನ ಕೆಳಗೆ ಕೈಕಾಲುಗಳ ಗಂಟಿನಲ್ಲಿ ಕಾಣಿಸಿದ್ದು  ಹರಿದಾಡುವ ನೆರಳುಗಳು ಮಾತ್ರ. ಭಾಷಾಂತರಿಸಿ ಹೇಳಲು ಅಸಾಧ್ಯ: ಉಬ್ಬಿದ ಹೊಟ್ಟೆಯ ನಡುವೆ ಅಲ್ಲಲ್ಲಿ ವಿರಾಮಚಿಹ್ನೆಗಳ ಹಾಗೆ ಮಂಡಿ ಮೊಳಕಾಲು; ಗೋಲಿಯಂತೆ ಜಾರಿ ಹೋಗಿದ್ದೇನು ಅದು  ಬಿಗಿಯಾಗಿ ಕಟ್ಟಿದ ಮುಷ್ಟಿ ಇರಬಹುದೇ  ಅಥವಾ ಪೃಷ್ಠದ ಅಥವಾ ಪಾದದ ನಿಗೂಢ ಹೊರಳಾಟವೆ? ಆದರೆ ನಸುಕು ಹೊರಗೆ ತಂದಾಗ ನಿನ್ನನ್ನು ಕತ್ತಲಲೋಕದಿಂದ ಮೇಲೆತ್ತಿ  ಹಲವಾರು ತಿಂಗಳು ಪ್ರಯತ್ನಿಸಿದೆ ಚಿತ್ರದ ಹಲವು ಚೂರುಗಳನ್ನು ಒಟ್ಟುಗೂಡಿಸಲು : ನಿನ್ನ ಪಾದದ ಕಮಾನು  ನನ್ನ  ಅಂಗೈಯ ಹಳ್ಳದಲ್ಲಿ  ಹೊಂದಿಕೊಳ್ಳುವುದು ಯಥಾವತ್ತು ಮತ್ತು ನನ್ನ ಕುತ್ತಿಗೆಯ ಸಂದಿಯಲ್ಲಿ ನೀನು ನಿನ್ನ ತಲೆಯನ್ನು ತೂರಿಸಿಕೊಂಡು ಮಲಗುತ್ತಿ ಇದನ್ನೆಲ್ಲ ಕಂಡಾಗ ನನಗೆ ಉಂಟಾಯಿತು  ನಾವಿಬ್ಬರೂ ಹೊಂದಿಕೊಳ್ಳುತ್ತೇವೆ  ಹೇಳಿ ಮಾಡಿಸಿದಂತೆ ಎಂಬ ಜ್ಞಾನೋದಯ. ಅನಂತರ ನೀನು ಬೆಳೆದೆ, ಪುಟ್ಟ ಅಪರಿಚಿತ, ಮತ್ತು ನಿನ್ನನ್ನು ಅರಿಯಲು ನಾನು ಬೆಳೆದೆ.

ನೀನು ಬಂದರೆ ಮೆತ್ತಗೆ

ಇಮೇಜ್
 ನೀನು ಬಂದರೆ ಮೆತ್ತಗೆ ಮೂಲ : ಆಡ್ರೆ ಲಾರ್ಡ್ ಕನ್ನಡಕ್ಕೆ : ಸಿ ಪಿ ರವಿಕುಮಾರ್ ನೀನು ಬಂದರೆ ಹೆಜ್ಜೆ ಇಡುತ್ತ ಮೆತ್ತಗೆ ಮರದಲ್ಲಿ ಗಾಳಿ ನುಸುಳಿ ಬರುವ ಹಾಗೆ ನನಗೆ ಕೇಳುವುದೆಲ್ಲ ನಿನಗೂ ಕೇಳಿಸೀತು  ಶೋಕವು ಕಂಡಿದ್ದೆಲ್ಲ ನಿನಗೂ ಕಂಡೀತು. ನೀನು ಬಂದರೆ ಹೆಜ್ಜೆ ಇಡುತ್ತ ಹಗುರವಾಗಿ ಹುಲ್ಲಿನ ಮೇಲೆ ಸುರಿವ ಮಂಜಿನ ಹಾಗೆ ನಿನ್ನನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಕೇಳದೇ ನಿನ್ನನ್ನು ಬೇರೇನೂ ಪ್ರಶ್ನೆ. ಕೂಡಬಹುದು ನನ್ನ ಬಳಿ ನೀನು ಉಸಿರಿನಂತೆ ನಿಶ್ಶಬ್ದವಾಗಿ. ಸತ್ತು ಬಿದ್ದವರಿಗೆ ಮಾತ್ರ ಉಂಟು ಸಾವನ್ನು ನೆನೆಸಿಕೊಳ್ಳುವ ಶಕ್ತಿ. ನಾನು ಮೌನ ವಹಿಸುತ್ತೇನೆ ನೀನು ಬಂದಾಗ ನಿನಗೆ ಚುಚ್ಚುವುದಿಲ್ಲ ಮಾತಿನ ಕಟಕಿ. ಏಕೆ ಹೇಗೆಂದೆಲ್ಲ ಪ್ರಶ್ನಿಸುವುದಿಲ್ಲ ಈಗ. ಏನು ಮಾಡುವೆಯೆಂದು ಕೇಳುವುದಿಲ್ಲ. ನಾವು ಕುಳಿತಿರೋಣ  ಇಲ್ಲಿ ಮೌನವಾಗಿ ಎರಡು ವಿಭಿನ್ನ ಸಂವತ್ಸರಗಳ ಕೆಳಗೆ. ನಮ್ಮ ನಡುವಣ ಈ ಫಲವತ್ತಾದ ಮಣ್ಣು ನಮ್ಮ ಕಣ್ಣೀರನ್ನು ಹೀರುವುದು ಒಳಗೆ.

ಮುಖಾಮುಖಿ

ಇಮೇಜ್
 ಮುಖಾಮುಖಿ ನಾವು ಹಿಂದೆ ಹೋಗಲು ಸಿದ್ಧರಿಲ್ಲ ಮತ್ತು ಅವರು ಮುಂದೆ ಸಾಗುತ್ತಿಲ್ಲ ಎಂದಾದರೆ ಕಾಲದ ಗುಳ್ಳೆಯನ್ನು ಆದಷ್ಟೂ ಎಳೆಯೋಣ ಎರಡೂ ಕಡೆ ಅದು ಒಡೆದುಹೋಗುವವರೆಗೆ ಅನಂತರ ಸಂಧಿಸೋಣ  ರೂಮಿ ವಿವರಿಸುವ ಹೊಲದಲ್ಲಿ ವಿರಮಿಸಿ ನೆನಪಿಸಿಕೊಳ್ಳೋಣ ಬಂಧುರವೆಂದರೆ ಏನೆಂಬುದನ್ನು. ಕೇಟ್ಲಿನ್ ಕರ್ಟಿಸ್ ಅನುವಾದ: ಸಿ. ಪಿ. ರವಿಕುಮಾರ್ If we're not going back  And they're not moving Forward then we will Stretch the bubble of time In both directions until  It bursts, and then we  Will meet in that field  That Rumi talks about,  Lay down in it, and try  To remember what it  Always meant to be kin. ~ Kaitlin B Curtice

ನಾವು

ಇಮೇಜ್
ಮೂಲ: ಕ್ಯಾಥರೀನ್ ಕ್ಯಾಂಪ್ ಬೆಲ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಕಪ್ಪು, ಕಂದು, ಬಿಳುಪು,  ಬಣ್ಣ ಯಾವುದಾದರೇನು,  ಮೈಮೇಲಿನ ತೊಗಲು, ಅಷ್ಟೇ  ಒಳಗೆ ಹರಿವ ನೆತ್ತರು ಕೆಂಪು. ಅವಳು ಅವನು ಅವರು ಇವರು ಸರ್ವನಾಮ ಪದಗಳಷ್ಟೇ ನನ್ನದೇ ವಿಭಿನ್ನ ರೂಪ ಒಳಗೆ ನನ್ನದೇ ಸ್ವರೂಪ. ಬಣ್ಣ ಗಾತ್ರ ಬೇರೆ ಅಷ್ಟೇ ಕರೆಯಲೊಂದು ಹೆಸರು, ಅಷ್ಟೇ ಚುಚ್ಚಿದರೆ ನೋವು ಒಂದೇ  ತಬ್ಬಿದರೆ ನಲಿವು ಒಂದೇ. ಹೆಸರು ಬೇರೆ ಬಣ್ಣ ಬೇರೆ  ಆದರೂ ನಾವೆಲ್ಲ ನಾವೇ ಎಲ್ಲರೂ ಮಾನಸರು ಎಲ್ಲರೂ ಸಮಾನರು

ಎಲ್ಲವೂ ಸರಿಯಾಗುವುದು

ಇಮೇಜ್
 ಎಲ್ಲವೂ ಸರಿಯಾಗುವುದು ಮೂಲ: ಡೆರೆಕ್ ಮೇಹನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಇಳಿಜಾರು ಚಾವಣಿಗೆ ಹೊಂದಿಸಿದ ಕಿಟಕಿಯ ಆಚೆ  ಕಾಣುವುದು ಮೋಡಗಳು ಚೆದುರುವ ನೋಟ ಮತ್ತು ತಾರಸಿಯ ಮೇಲೆ ಹೊಯ್ದಾಡುವುದು  ಸಾಗರವು ಉಕ್ಕಿ ಮೇಲೇಳುವ ದೃಶ್ಯದ ಪ್ರತಿಬಿಂಬ. ಸಾವುಗಳು ಸಂಭವಿಸುತ್ತವೆ, ಅದರಲ್ಲೇನು ಅನುಮಾನ, ಆದರೆ ಅದರ ಆಲೋಚನೆ ಈಗ ಏತಕ್ಕೆ, ಬದಿಗಿಡು. ಕೇಳಿಕೊಳ್ಳದಿದ್ದರೂ ಬರೆಯುತ್ತದೆ ಸಾಲುಗಳನ್ನು ಕಾಣದ ಕೈ ಮೌನವಾಗಿ ಗಮನಿಸುವ ಹೃದಯದ ಮೇಲೆ. ಏನೇ ಆಗಲಿ ಸೂರ್ಯ ಉದಿಸಿ ಬಂದನು  ಮೇಲೆ; ಉಜ್ವಲವಾಗಿ ಹೊಳೆಯುತ್ತಿವೆ ದೂರದ ಪಟ್ಟಣ, ಪೇಟೆ. ಬೆಳ್ಳನೆಯ ಬೆಳಕಿನಲ್ಲಿ ನಾನು ಮಲಗಿದ್ದೇನೆ  ನೋಡುತ್ತಾ ಕಾರ್ಮೋಡಗಳು ಕರಗಿ ಬೆಳಕು ಹರಿಸುವ ದಿವೋದಯ ಎಲ್ಲವೂ ಸರಿಯಾಗುವುದು ಎನ್ನುತ್ತಿದೆ ಹೃದಯ.

ಪದಗಳು ಮಾಂತ್ರಿಕ ದಂಡಗಳು

ಇಮೇಜ್
  ಮೂಲ: ವಾಲ್ಟ್ ವ್ಹಿಟ್ಮನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ನಾವು ಪದ್ಯ ಬರೆಯುವುದು ಮತ್ತು ಓದುವುದು  ಅದೊಂದು ಆಕರ್ಷಕ ಕೆಲಸ ಎಂದಲ್ಲ. ನಾವು ಪದ್ಯ ಬರೆಯುವುದು ಮತ್ತು ಓದುವುದು  ನಾವು ಮನುಷ್ಯವರ್ಗಕ್ಕೆ ಸೇರಿದ ಕಾರಣ. ಭಾವೋದ್ರೇಕ ಮನುಷ್ಯನಿಗೆ ಸಹಜ ಗುಣ. ವೈದ್ಯಕೀಯ, ಇಂಜಿನಿಯರಿಂಗ್, ಲಾಯರಿ ಇವೆಲ್ಲ ಶ್ರೇಷ್ಠ ಕೆಲಸಗಳೇ, ನಿಸ್ಸಂದೇಹ, ಮತ್ತು ಮನುಷ್ಯ ಬದುಕಿರಲು ಇವೆಲ್ಲ ಬೇಕು. ಆದರೆ ಪದ್ಯ, ಪ್ರೇಮ, ಸೌಂದರ್ಯ ಇವೆಲ್ಲ ಮನುಷ್ಯ ಬದುಕಿರಲು ಕಾರಣ.

ಶಾಲೆಗೆ ಏಕೆ ತಡವಾಯಿತು

ಇಮೇಜ್
ಮೂಲ: ಸ್ಟೀವ್ ಟರ್ನರ್ ಬೆಳಗ್ಗೆ ಏಳುವುದು ತಡವಾಯಿತು ಏಕೆಂದರೆ ವಿಪರೀತ ಸುಸ್ತಾಗಿತ್ತು. ಯಾಕೆ ಸುಸ್ತಾಯಿತು ಅಂದರೆ  ರಾತ್ರಿ ಮಲಗುವುದು ತಡವಾಗಿತ್ತು  ಮಲಗಿದ್ದು ತಡವಾಯ್ತೇಕೆ ಎಂದರೆ  ಹೋಂವರ್ಕ್ ಮಾಡುತ್ತಿದ್ದೆ ಹೋಂವರ್ಕ್ ಮಾಡುತ್ತಿದ್ದದ್ದು ಯಾಕೆಂದರೆ ನಮ್ಮ ಟೀಚರ್ ಕೊಟ್ಟರು, ಅದಕ್ಕೇ. ಅವರು ಯಾಕೆ ಹೋಂ ವರ್ಕ್ ಕೊಟ್ಟರು ಅಂದರೆ ನನಗೆ ಶಾಲೆಯಲ್ಲಿ ಅರ್ಥ ಆಗಲಿಲ್ಲ. ಯಾಕೆ ಅರ್ಥ ಆಗಲಿಲ್ಲ ಅಂದರೆ ನಾನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ. ಯಾಕೆ ಕೇಳಿಸಿಕೊಳ್ಳಲಿಲ್ಲ ಅಂದರೆ ನಾನು ಕಿಟಕಿಯ ಹೊರಗೆ ನೋಡ್ತಿದ್ದೆ ಯಾಕೆ ನೋಡ್ತಿದ್ದೆ ಅಂದರೆ  ಅಲ್ಲಿ ಮೋಡ ಕಾಣಿಸಿತು ಹೀಗಾಗಿ ಸರ್ ನಾನು ಲೇಟಾಗಲು  ಒಂದು ಮೋಡ ಕಾರಣ.

ಕನಸುಗಳ ಕಾವಲುಗಾರ

ಇಮೇಜ್
 ಕನಸುಗಳ ಕಾವಲುಗಾರ ಮೂಲ: ಲ್ಯಾಂಗ್ಸ್ಟನ್ ಹ್ಯೂಸ್ ಅನುವಾದ: ಸಿ ಪಿ ರವಿಕುಮಾರ್  ತಂದು ಹಾಕಿ ನಿಮ್ಮೆಲ್ಲ ಕನಸುಗಳನ್ನು ಓ ಕನಸುಗಾರರೇ ತಂದು ಹಾಕಿ ನಿಮ್ಮ ಹೃದಯದ ರಾಗಗಳನ್ನು ಅವನ್ನು ನಾನು ಮಾಡುತ್ತೇನೆ  ಜೋಪಾನ ಮೋಡದ ನೀಲಿ ಬಟ್ಟೆಯಲ್ಲಿ ಕಟ್ಟಿ ಕಾಪಿಡುತ್ತೇನೆ ಜಗತ್ತಿನ  ತೀರಾ ಒರಟು ಬೆರಳುಗಳಿಂದ.

ಬಿಡುವು

ಇಮೇಜ್
 ಬಿಡುವು ಮೂಲ: ವಿಲಿಯಂ ಹೆನ್ರಿ ಡೇವಿಸ್ ಕನ್ನಡ ರೂಪಾಂತರ: ಸಿ.ಪಿ. ರವಿಕುಮಾರ್ ಏನಿದ್ದರೇನು ಬಂತು ಜೀವನದಲ್ಲಿ, ನಿಂತು ದಿಟ್ಟಿಸಲು ಇಲ್ಲದಿದ್ದರೆ ಒಂದಷ್ಟು ಹೊತ್ತು ? ಹೊಂಗೆಯಲ್ಲಿ ಭೃಂಗದ ಸಂಗೀತ ಕೇಳಿಬರುತ್ತಿದೆ- ಯಾದರೂ ನಿಂತು ಕೇಳಲು ಇಲ್ಲ ಪುರುಸೊತ್ತು; ಬೆಟ್ಟಕಾನುಗಳಲ್ಲಿ ಅಲೆದಾಡಿ ಬಲಾಕ ಪಂಕ್ತಿಯೊಳು  ಕಾಣದಿದ್ದರೆ ದೇವರ ಸ್ಪಷ್ಟ ರುಜುವಾತು? ಇಲ್ಲದಿದ್ದರೆ ಸಮಯ ಹಾಡುಹಗಲಲ್ಲಿ ನೋಡಲು ಹರಿವ ತೊರೆಯಲ್ಲಿ ಹೊಳೆವ ನಕ್ಷತ್ರಗಳ ಹೊನಲು! ಹೊಳೆಯು ತೊಳೆಯುವ ನುಣುಪುಗಲ್ಲಿನಲಿ ದೃಷ್ಟಿ ನೆಟ್ಟು ಕಲ್ಪಿಸದಿದ್ದರೆ ಶಿಲಾಬಾಲಿಕೆಯ ಚೆಲುವು, ಅವಳ ಗೆಜ್ಜೆಯ ಸದ್ದು, ಕೊಳಲು, ಡಮರುಗ, ಡೋಲು, ಕೇಳುತ್ತಾ ಏರದಿದ್ದರೆ ಮಾಯಾ ಸಂಗೀತದ ಅಮಲು - ಏನಿದ್ದರೇನು ಬಂತು ಜೀವನದಲ್ಲಿ ಅಷ್ಟೈಶ್ವರ್ಯ ಇಲ್ಲದಿದ್ದರೆ ಸಮಯ ಸವಿಯಲು ಸೌಂದರ್ಯ

ಪ್ರಾಸವಿಲ್ಲದ ಕವಿತೆ

ಇಮೇಜ್
  ಇದು ಕೂಡಾ ಅಂಥದ್ದೊಂದು ಕವಿತೆ ಯಾವ ಕವಿತೆಗಳಲ್ಲಿ ಇರುವುದಿಲ್ಲವೋ ಪ್ರಾಸ ಪ್ರಸಿದ್ಧ ಸಾಹಿತ್ಯಕ ಪತ್ರಿಕೆಯಲ್ಲಿ  ಪ್ರಕಟವಾಗುತ್ತವಲ್ಲ ಪ್ರತಿ ಮಾಸ ತಿಂಗಳು. ಇದು ಕೂಡಾ ಅಂಥದೊಂದು ಸಾಚಾ ಕವನ ಅಂಥ ಕವನಗಳಲ್ಲಿ ಪ್ರಾಸವು ತುತ್ತಿನಲ್ಲಿ ಸಿಕ್ಕ ಕಲ್ಲು ಗಂಭೀರವಾದದ್ದನ್ನು ಹೇಳುತ್ತಿರುವಾಗ ಪ್ರಾಸಪದ ಕಟಂ ಎಂದು ಎದುರಾಗಿ ಹೆದರುವುದು ಹಲ್ಲು ದಂತ. ನೋಡಿ ಪ್ರಾಸವು ಬಹಳ ಅಗ್ಗದ ಸರಕು ಪ್ರಾಸಬದ್ಧ ಕವಿತೆಗಳಿಗೆ ಸ್ವಲ್ಪ ತೂಕ ಕಡಿಮೆ. ಪ್ರಾಸಕ್ಕೆ ಕಟ್ಟುಬಿದ್ದರೆ ಕವಿತೆಯಲ್ಲಿ ಹೇಗಿದ್ದೀತು ಸ್ವೋಪಜ್ಞತೆ, ಅಸ್ಮಿತೆ ಮತ್ತು ಪ್ರೌಢಿಮೆ ಕಲಾತ್ಮಕ ಅಭಿವ್ಯಕ್ತಿ. ಇದು ಕೂಡಾ ಅಂಥದೊಂದು ಕವಿತೆ, ಯಾವುದು ಮನುಷ್ಯನ ಸ್ಥಿತಿಯನ್ನು ಕುರಿತು ಏನಾದರೂ ಗಂಭೀರವಾದವನ್ನು ಹೇಳಲು ಹೊರಟು ಒಮ್ಮೆಲೇ ಏಕಾಏಕಿ ಕೊನೆಗೊಳ್ಳುತ್ತದಲ್ಲ, ಅಂಥದ್ದು. ಮೂಲ : ಬ್ರಯಾನ್  ಬಿಲ್ಸ್ಟನ್  ಕನ್ನಡಕ್ಕೆ : ಸಿ ಪಿ ರವಿಕುಮಾರ್ 

ಎವರ್ ಗ್ಲೇಡ್ ದಾರಿಯಲ್ಲಿ

ಇಮೇಜ್
  ಮೂಲ: ಗ್ರೇಸ್ ವೈಲೆನ್ಜ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಎಷ್ಟು ಕಾದಿದೆ ಎಂದರೆ ರಸ್ತೆ ನೆಂದಂತೆ ತೋರುತ್ತದೆ  ಮರೀಚಿಕೆಯಂತೆ ಹೊಳೆಯುತ್ತದೆ. ಸೂರ್ಯ ಕಂತುತ್ತಾ ಕ್ಷೀಣ ನೀಲ ಬೆಳಕು ಆವರಿಸುತ್ತಿದೆ. ನಾವು ಒಂದು ಕಡೆ ಪಾರ್ಕ್ ಮಾಡುತ್ತೇವೆ ಕೆಂಪು ಮಾಂಸದ ತುಂಡುಗಳಂತೆ ಕಾಣುವ ಟೊಮೆಟೋ ಹಣ್ಣುಗಳು ಯಾರದೋ ಟ್ರಕ್ ನಿಂದ ಉದುರಿ ಅಪ್ಪಚ್ಚಿಯಾಗಿವೆ. ಎದುರಿಗೆ ಇರುವ ವಿಶ್ರಾಂತಿ ಗೃಹ ವಿಮಾನತಲದಷ್ಟು ವಿಶಾಲವಾಗಿದೆ. ತಟ್ಟೆಗಳಲ್ಲಿ ನಮ್ಮ ಮೇಜುವಾನಿಗೆ ಬರುತ್ತವೆ ಹುರಿದ ಬೆಂಡೆಕಾಯಿ  ಕಾಲರ್ಡ್ ಎಲೆಗಳ ಕೋಸಂಬರಿ ಮತ್ತು ಕುಂಬಳದ ಜಾತಿಯ ಕಾಯಿಗಳ ಕಟ್ಲೆಟ್. ಬಿಲ್ ತೆರಲು ಹೋದಾಗ ಗಲ್ಲಾಪೆಟ್ಟಿಗೆಯಲ್ಲಿದ್ದಾಕೆ ಕೇಳುತ್ತಾಳೆ ರಸ್ತೆಯ ಅಂಚಿನ ಉದ್ದಕ್ಕೂ ಮಲಗಿದ್ದ ನೆರಳುಗಳು  ನೋಡಿದಿರಾ? ಅವು ಏನು ಹೇಳಿ ಮೊಸಳೆಗಳು. ನಾವು ನೋಡಿದ್ದೆವು. ಹದಿನೆಂಟು ಚಕ್ರಗಳ ಟ್ರಕ್ ಗಳ ಟೈರುಗಳು ಸ್ಫೋಟಿಸಿ ಎಗರಿ ಬಿದ್ದಿವೆ ಎಂದು ಮಾತಾಡಿಕೊಂಡಿದ್ದೆವು. ಅವಳು ಬೆರಳನ್ನು ಬಾಯೆಂಜಲು ಮಾಡಿ ಒಂದು ಪುಟ ಹರಿಯುತ್ತಾಳೆ ನಾವು ತೆತ್ತು ಹೊರಡುತ್ತೇವೆ. ಅವು ಬಿಸಿಲಿಗೆ ಹಾಕಿದ ವಂಕಿ ಅಂಚುಗಳ ರಬ್ಬರ್ ತುಂಡುಗಳಂತೆ ತೋರುತ್ತವೆ. ನಮ್ಮ ಪ್ರಯಾಣ ಮುಂದುವರೆಯುತ್ತದೆ ಸಂಜೆ ಬೆಳಕಿನಲ್ಲಿ ಎಲ್ಲಾದರೂ ಕಾಣುವುದೇನೋ ಅರೆಮುಚ್ಚಿದ ಕಣ್ಣು ಅಥವಾ ತೊಗಲಿನ ಚಿಪ್ಪುಗಳು ಅಥವಾ ಬೆನ್ನು ಎಂದು ನಾವು ಹುಡುಕುತ್ತೇವೆ. ಅವು ಬಹುಮೆಲ್ಲಗೆ  ಸ್ತಬ್ಧತೆಯ ವೇಗದಲ್ಲಿ ಚ...

ಇಡ್ಲಿಗೆ ಡೂಡಲ್

ಇಮೇಜ್
ಎಲೆ ಇಡ್ಲಿ ಎಲೆಯ ಮೇಲಿಂದ ಯಾವಾಗ ಹಾರಿ ಕಲೆಯಾಗಿಹೋದೆ ಗೂಗಲ್ ಡೂಡಲ್ ಸೇರಿ ಬಿಳಿಯನ್ನೇ ಉಟ್ಟು ಸರಳವಾಗಿದ್ದೆ  ನೆನ್ನೆಯವರೆಗೆ ತಲೆಯೇ ನಿಲ್ಲುತ್ತಿಲ್ಲವಲ್ಲ ಉತ್ತರವೇ ಇಲ್ಲ ಕರೆಗೆ! ದೋಸೆಗೆ ತಡೆಯಲಾಗುತ್ತಿಲ್ಲ ಈ ಆಘಾತ! ಅವಾರ್ಡು ಮೋಸದಿಂದ ಗೆದ್ದುಕೊಂಡದ್ದೆಂದು ಬಯಸುತ್ತಿದೆ ಸೇಡು ಇನ್ನು ಉಪ್ಪಿಟ್ಟಿಗಂತೂ ಡಿಪ್ರೆಶನ್ ಆಗುವುದು ಬಾಕಿ ಸುಮ್ಮನೆ ಹಾರಿಸುವರು ಎಲ್ಲ ಉಪಮಾತೀತ ಚಟಾಕಿ ಎಷ್ಟೇ ಬಗೆಯಲ್ಲಿ ರೂಪ ತಾಳಿ ಬಂದರೂ ಉಪ್ಪಿಟ್ಟು ಅಷ್ಟೇಕೆ ಎಲ್ಲರಿಗೂ ಅದರ ಮೇಲೆ ತಾತ್ಸಾರ ಸಿಟ್ಟು! ಇನ್ನು ಅವಲಕ್ಕಿಗೆ ಬೇಕಾಗಿಲ್ಲ ಈ ಯಾವ ಊಹಾ-ಪೋಹ ಕೃಷ್ಣನೇ ನನ್ನನ್ನು ಮೆಚ್ಚಿದನೆಂದು ಕಣ್ಮುಚ್ಚಿದೆ ಆಹಾ! ಕೋಪಿಸಿಕೊಂಡು ಕುದಿಯುತ್ತಿವೆ ಚಟ್ನಿ ಸಾಂಬಾರು ಸಪ್ಪೆ ಇಡ್ಲಿಗೆ ರುಚಿ ನಮ್ಮಿಂದಲೇ ಎಂದು ತಕರಾರು. ಸಿ ಪಿ ರವಿಕುಮಾರ್

ಶತಪದಿ

ಇಮೇಜ್
ಮೂಲ: ಜೂಲಿ ಹೋಲ್ಡರ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಬಹಳ ಜೋರಾಗಿ ಓಡಬಲ್ಲದು ಜರಿಹುಳು  ಏಕೆಂದರೆ ಅದಕ್ಕಿವೆ ಇನ್ನೂರು ಕಾಲು ಆದರೂ, ಇನ್ನೂರು ಕ್ಲಿಪ್ ಹೊಂದಿಸಿಕೊಂಡು  ಸಾಕ್ಸ್ ಒಣಗಿ ಹಾಕುವುದು ದೊಡ್ದ ಸವಾಲು ಉಡುಗೊರೆ ಕೊಟ್ಟರು ಯಾರೋ ಅದಕ್ಕೆ ವೆಲ್ಲಿಂಗ್ ಟನ್ ಬೂಟು ಐವತ್ತು ಜೊತೆ ಎಡಬಲ ಸಮ ಮಾಡುವ ತನಕ ಪುಟ್ಟ ಮಿದುಳು  ಪಾಪ ಮಳೆಗಾಲ ಮುಗಿದೇ ಹೋಗಿರುತ್ತೆ ನೂರು ಕಾಲಿದೆ ಜರಿಗೆ, ನನಗೆ ಎರಡೇ ಎರಡು ಹಾಗಂತ ನನಗೇನೂ ಹೊಟ್ಟೆಕಿಚ್ಚಿಲ್ಲಪ್ಪ, ಸದ್ಯಕ್ಕೆ. ಎಲ್ಲಿಗೆ ಹೋಗುತ್ತಿದ್ದೇನೆಂದು ಗೊತ್ತಾದಾಗ ಮುಂದಿನ ಕಾಲಿಗೆ ಹಿಂದಿನ ಕಾಲು ಇನ್ನೂ ಅದೇ ಸ್ಥಳದಲ್ಲಿರುತ್ತೆ.

ಪಂಡಿತರು

ಪದಾತಿ ಸೈನಿಕರು, ದೋಷಗಳ ವಿರುದ್ಧ ಸಮರದಲ್ಲಿ  ನಮ್ಮನ್ನು ನಮ್ಮಿಂದಲೇ ರಕ್ಷಿಸುವುದು ಇವರ ಗುರಿ ಸಜ್ಜಿತರಾಗಿ ಬಂದಿದ್ದಾರೆ ಇವರ ಕೈಯಲ್ಲಿದೆ ಶಸ್ತ್ರ  ಶಬ್ದಮಣಿ ರೆವರೆಂಡ್ ಕಿಟ್ಟೆಲ್ ಡಿಕ್ಷನರಿ ನಾವು ಬರೆದ ಪ್ರತಿ ಪದ ಪ್ರತಿ ಸಾಲು ಇವರ ಕೂಲಂಕಷ ಅವಗಾಹನೆಗೆ ಪಾಲು ತಿದ್ದುವರು ಅದು ಹಾಗಲ್ಲ ಹೀಗೆ ಎಂದು ಮಾಡುತ್ತ ಅವಹಾಲು ಹಲ್ಲು ಕಡಿಯುವರು, ಛೇ ಎಂದು ಹಲುಬುವರು  ನಾವು ದಾಟಿದ ಗೆರೆಯನ್ನು ಕೆಕ್ಕರಿಸಿ ನೋಡಿ  ಇನ್ನೇನು ಗತಿ ನಮ್ಮ ಭಾಷೆಗೆ ನಾಡಿಗೆ ಎಂದು ಪರೀಕ್ಷಿಸುವರು ಹಿಡಿದು ನಾಡ ನಾಡಿ. ಕನ್ನಡದ ಭಂಡಾರಕ್ಕೆ ಪಾಲಕರು ಇವರು ಅದನ್ನು ಶುದ್ಧವಾಗಿಡುವುದೇ ಇವರ ಕಾರ್ಯ. ಗರಿಷ್ಠ ಮೂರು ತಪ್ಪುಗಳ ವಿನಾಯಿತಿ ಕೊಟ್ಟಿದ್ದಾರೆ ಎಂಬುದೇ ಸಮಾಧಾನಕರ ವಿಷಯ. ತಿದ್ದುವ ಕೆಲಸದಲ್ಲಿ ಮೂಗು ಕೊಯ್ದರೂ ಓಕೆ  ಆಡಿಸುವರು ಇವರು ಚಕಚಕ ಕತ್ತರಿ ಚಾಕು. ಏನು ಹೇಳಿದ್ದೀರಿ ಲೇಖನದಲ್ಲಿ ನೋಡುವುದಿಲ್ಲ ವ್ಯಾಕರಣ ದೋಷ ಇರದಿದ್ದರೆ ಸಾಕು. ಮೂಲ : Brian Bilston  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಜನಪ್ರಿಯ ಸುದ್ದಿ

ಮ್ಯಾಥೆಮ್ಯಾಟಿಕ್ಸ್ ಪೇಪರ್ ಮೂರು ಸಲ ಕಟ್ಟಿದರೂ ಪಾಸಾಗಲಿಲ್ಲ ,ಸ್ಟ್ಯಾಟಿಸ್ಟಿಕ್ಸ್ ಹೋಗಲಿಲ್ಲ ತಲೆಗೆ ಆದರೆ ದೇವರು ಕೊಟ್ಟಿದ್ದಾನೆ ಗಟ್ಟಿ ದನಿ ಚುರುಕು ನಾಲಗೆ ಹೀಗಾಗಿ ಮೀಡಿಯಾದಲ್ಲಿ ಇವರದ್ದೇ ಜೋರು ಒಬ್ಬರನ್ನು ಇಂಟರ್ವ್ಯೂ ಮಾಡಿ ಸಾಕು ಹೆಚ್ಚೆಂದರೆ ಇಬ್ಬರ ಮುಂದೆ ಹಿಡಿ ಮೈಕು  ನಾಳೆಗೆ ಬೇಕಾದ ವರದಿ ಸಂಜೆಗೆ ಬೇಕಾದ ನ್ಯೂಸ್ಉ ಬರೆದು ಜಲ್ದಿ ಜಲ್ದಿ ಹೇಗೋ ಮುಗಿಸಿ ಕಳಿಸು ಜನ ನೋಡುತ್ತಾರೆ ಹೇಗಿದ್ದರೂ ಕಣ್ಮುಚ್ಚಿಕೊಂಡು ಅವರಿಗೆಲ್ಲಿ ಬೇಕಾಗಿದೆ ಯಾವುದು ನಿಜವೆಂದು ಮನರಂಜನೆಗೆ ತಾನೇ ನೋಡುವುದು ಜನ ಹೀಗಾಗಿ ಹುಡುಕು ಏನಾದರೂ ವಿಲಕ್ಷಣ  ಓದುವಾಗ ಕೆಟ್ಟ ಅಣಕುಧ್ವನಿಯಲ್ಲಿ ಓದು  ಮಧ್ಯೆ ಮಧ್ಯೆ ಅವರಿವರನ್ನು ಒಂದಿಷ್ಟು ಬೈದು ಎಷ್ಟು ಗಟ್ಟಿಯಾಗಿ ಹೇಳುತ್ತೀಯೋ ಅಷ್ಟು ನಂಬುತ್ತಾರೆ ಜನ ಜನಪ್ರಿಯತೆಯೇ ಅಲ್ಲವೇ ಸಂಶೋಧನೆಯ ಲಕ್ಷಣ?

ಸ್ಥಿತಪ್ರಜ್ಞೆ

  ಕೇಳಿದೆನು ಕ್ವಾಂಟಂ ಕಂಪ್ಯೂಟರನ್ನು ನಾನು ಇದೆಯೋ ಇಲ್ಲವೋ ಬಾಕ್ಸಿನಲ್ಲಿ ಬೆಕ್ಕು ಕ್ವಾಕಂ ಉತ್ತರಿಸಿತು ಗಹಗಹಿಸಿ ನಕ್ಕು  ಕೇಳಬಾರದ ಪ್ರಶ್ನೆ ಕೇಳಿದೆಯಲ್ಲ ನೀನು ಎರಡು ಕ್ವಾಂಟಂ ಸ್ಥಿತಿಗಳಿವೆ ಮಾಡಿಕೋ ಮನವರಿಕೆ ಒಂದು ಬೆಕ್ಕಿನ ಇರುವಿಕೆ ಇನ್ನೊಂದು ಇಲ್ಲದಿರುವಿಕೆ ಇರುವುದೂ ಇಲ್ಲದಿರುವುದೂ ಒಮ್ಮೆಲೇ ಸಾಧ್ಯ ಚಂಪೂ ಕಾವ್ಯದಲ್ಲಿ ಇರುವಂತೆ ಗದ್ಯ ಮತ್ತು ಪದ್ಯ ಇದೆಯೋ ಇಲ್ಲವೋ ಎಂಬ ಕುತೂಹಲ ನಿನಗೆ ಹೀಗೇ ತೆರೆದಳು ಒಮ್ಮೆ ಪಂಡೋರಾ ಪೆಟ್ಟಿಗೆ ಪೆಟ್ಟಿಗೆ ತೆರೆದು ಏನಿದೆ ಎಂದು ಹೇಳಲೇ ಬೇಕೇ? ಎರಡು ಸ್ಥಿತಿಗಳನ್ನೂ ಇಳಿಸಲೇಬೇಕಾ ಒಂದಕ್ಕೆ? ಏಕೆ ಕೊಲ್ಲುವೆ ಇದ್ದರೂ ಇಲ್ಲದಂತಿರುವ ಬೆಕ್ಕನ್ನು? ಎಂದು ಜಾರಿತು ಕ್ವಾಕಂ, ಧ್ಯಾನಕ್ಕೆ, ಅರೆಮುಚ್ಚಿ ಕಣ್ಣು ಸಿ ಪಿ ರವಿಕುಮಾರ್ (ಇದು ಕನ್ನಡ ವಿಜ್ಞಾನ ನಾಟಕಕಾರ Shashidhara Dongre M ಅವರಿಗೆ)

ಗೋಸುಂಬೆಯ ಸಮಸ್ಯೆ

ಇಮೇಜ್
  ಗೋಸುಂಬೆಗಳು ಬಣ್ಣ ಬದಲಾಯಿಸುತ್ತವೆ ಎಂದು ಕೇಳಿದ್ದೇನೆ, ನೋಡಿಲ್ಲ. ಮೊನ್ನೆ ಒಂದು ಗೋಸುಂಬೆ ಸಿಕ್ಕಿತು. ಅದು ಯಾಕೋ ಬಹಳ ಬೇಸರ ಮಾಡಿಕೊಂಡು ಒಂದು ಕಲ್ಲಿನ ಮೇಲೆ ಮುಖ ತಗ್ಗಿಸಿಕೊಂಡು ಪಿಳಿಪಿಳಿ ಕಣ್ಣು ಬಿಡುತ್ತಾ ಕೂತಿತ್ತು.  ಯಾಕೆ ಹಾಗೆ ಕೂತೆ? ಅಂಥದ್ದೇನು ಆಯಿತು? ಎಂದು ಕೇಳಿದೆ. ಡಿಸ್ಟರ್ಬ್ ಮಾಡಬೇಡ, ನಾನು ಧ್ಯಾನ ಮಾಡುತ್ತಿದ್ದೇನೆ ಎಂದಿತು. ಆದರೆ ನಂತರ ಅದೇ ಮೌನ ಮುರಿದು ಮಾತಾಡಿತು. ಹೋಗಲಿ ಬಿಡು, ನನ್ನಿಂದ ಆಗೋದಿಲ್ಲ ಎಂದು ನಿಟ್ಟುಸಿರು ಬಿಟ್ಟಿತು. ಏನು, ಧ್ಯಾನ ಮಾಡೋದು ಆಗೋದಿಲ್ಲವಾ? ನನಗೂ ಕಷ್ಟ. ಟಿವಿ ಮುಂದೆ ಕೂತು ಅಲ್ಲಿ ಹೇಳಿಕೊಡೋ ಧ್ಯಾನ ಮಾಡಲು ಪ್ರಯತ್ನಿಸಿದರೆ ನಡುನಡುವೆ ಜಾಹೀರಾತು ಬರುತ್ತವೆ. ಧ್ಯಾನ ಎಲ್ಲಾ ಅಲ್ಲಿಗೆ ಖಲ್ಲಾಸ್ ಎಂದು ನನ್ನ ಪದಪ್ರಯೋಗಕ್ಕೆ ನಾನೇ ಖುಷಿ ಪಟ್ಟೆ.  ಇಲ್ಲ, ನಾನು ಧ್ಯಾನ ಮಾಡುತ್ತಿರಲಿಲ್ಲ. ಬಣ್ಣ ಬದಲಾಯಿಸಲು ಪ್ರಯತ್ನ ಪಡುತ್ತಿದ್ದೆ. ಈಗ ಅದೆಲ್ಲ ನಮ್ಮ ಕೈಯಲ್ಲಿ ಆಗುತ್ತಲೇ ಇಲ್ಲ. ಮುಂಚೆ ಯಾವ ಕಲ್ಲಿನ ಮೇಲೆ ಕೂಡುತ್ತಿದ್ದೇವೋ ಅದೇ ಬಣ್ಣಕ್ಕೆ ತಿರುಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುತ್ತಾ ಇದ್ದೆವು. ಈಗ ಅದೆಲ್ಲ ಸಾಧ್ಯ ಆಗುತ್ತಿಲ್ಲ.  ಓಹ್, ಇದು ಜಾಗತಿಕ ಸಮಸ್ಯೆಯಾ? ಯಾವಾಗಿನಿಂದ? ನಾನು ಬೇಕಾದರೆ ಟಿವಿ ರಿಪೋರ್ಟರಿಗೆ ಹೇಳುತ್ತೇನೆ. ಅವನು ಇದನ್ನು ಕವರ್ ಮಾಡಬಹುದು. ಬೇಡ, ಬೇಡ. ಈ ಪ್ರಚಾರದಿಂದಲೇ ನಮ್ಮ ಶಕ್ತಿ ಕುಂದಿದ್ದು.  ಏನೋ ಬಹಳ ವಿಚಿತ್ರ...

ವಿಠ್ಠಲ್ ಪದಕೋಶ

ಇಮೇಜ್
ಬೆಳೆಸಿಕೊಳ್ಳಲು, ವಿಕಸಿಸಿಕೊಳ್ಳಲು, ಹಿಗ್ಗಿಸಲು ತನ್ನ ಕನ್ನಡ ಪದಗಳ ಭಂಡಾರ, ಖಜಾನೆ, ಕೋಶ, ಕೊಂಡನು, ಖರೀದಿಸಿದನು, ಕ್ರಯಕ್ಕೆ ತಂದನು ವಿಠಲ  ಕನ್ನಡ ಕನ್ನಡ ಸಮಾನಾರ್ಥಕ ಪದಕೋಶ. ಇದಾದ ಕೆಲ ಕಾಲದಲ್ಲಿ, ನಂತರ, ತರುವಾಯ, ಅನಂತರ, ಇರಲೇ ಇಲ್ಲ ಅವನಿಗೆ ಪದಗಳಿಗೆ ದುರ್ಭಿಕ್ಷ, ಕ್ಷಾಮ, ಬರ  ಮನಸ್ಸಿಗೆ ತೋರಿದ್ದನ್ನು, ಅನ್ನಿಸಿದ್ದನ್ನು, ತೋಚಿದ್ದನ್ನು ಪ್ರಕಟಿಸಲು, ಆಡಲು, ಪ್ರದರ್ಶಿಸಲು ಪದಗಳ ತತ್ವಾರ ಇದೆಲ್ಲಾ ಸರಿಯೇ, ಒಳ್ಳೆಯದೇ, ಚೆನ್ನವೇ, ಲಾಯಕ್ಕಾದುದೇ, ಮಂಗಳವೇ, ಮೆಚ್ಚುವಂಥದ್ದೇ, ಸ್ತುತ್ಯರ್ಹವೇ, ಆದರೆ ಅವನ ಗೆಳೆಯರಿಗೆ ಪಾಪ ಬೋರಾಗತೊಡಗಿತು, ಬೈರಿಗೆಯಾಯಿತು, ಕೊರೆತ ಎನ್ನಿಸತೊಡಗಿತು ವಿಠಲನನ್ನು ಕಂಡರೆ  ನಿಮಗೆ ಇದು ಆಗಲಿ ಪಾಠ, ಒಂದು ನಿದರ್ಶನ, ಒಂದು ಕಲಿಕೆ, ಒಂದು ಉದಾಹರಣೆ, ಒಂದು ಜೀವನ ಶಿಕ್ಷಣ: ಕಲಿತದ್ದನ್ನು, ಪಡೆದ ಶಿಕ್ಷಣವನ್ನು, ಗಳಿಸಿದ ಪಾಂಡಿತ್ಯವನ್ನು  ಮೆರೆಸಬಹುದು, ತೋರಬಹುದು, ಮಾಡಬಹುದು ಪ್ರದರ್ಶನ  ಆದರೆ ದಯವಿಟ್ಟು, ಕೃಪೆ ಮಾಡಿ, ನಿಮ್ಮ ದಮ್ಮಯ್ಯ, ಕೇಳಿಸಿಕೊಳ್ಳಿ ನನ್ನದೊಂದು ಸಲಹೆ, ಕಿವಿಮಾತು, ಬುದ್ಧಿವಾದ, ಹಿತವಚನ: ಎಂದೂ ಮರೆಯದಿರಿ ಸಂಕ್ಷಿಪ್ತ, ಸಾರಾಂಶ, ರುಚಿಗೆ ತಕ್ಕಷ್ಟು, ಹೃಸ್ವ, ಅಡಕ, ಸಂಗ್ರಹ ಎಂಬ ಪದಗಳನ್ನ. .... Brian Bilston  ಅವರ Roger's Thesaurus ಎಂಬ ಕವಿತೆಯ ಕನ್ನಡ ರೂಪ,  ಭಾವಾನುವಾದ, ರೂಪಾಂತರ. ಇದನ್ನು ಮಾಡಿದ್ದು ನಾನು, ನಿಮ್ಮ ವಿಶ್...

ಪರಿಚಿತೆ (ಕಥೆ)

ಇಮೇಜ್
 ‘ಸಂಯುಕ್ತ ಕರ್ನಾಟಕ’ ‘ಸಾಪ್ತಾಹಿಕ ಸೌರಭ’ದಲ್ಲಿ 17 ಆಗಸ್ಟ್‌ 2025 ಪ್ರಕಟವಾದ ಕಥೆ ( ಸಿ. ಪಿ. ರವಿಕುಮಾರ್) https://epaper.samyukthakarnataka.com/editionname/Bangalore/SMYK_BANG/page/9/article/SMYK_BANG_20250817_09_6 ಅವಳು ಮೇಕಪ್ ಮಾಡಿಕೊಳ್ಳದೆ ಮನೆಯಿಂದ ಹೊರಟುನಿಂತಳು. ಇದು ಬಹಳ ದಿಟ್ಟ ನಿರ್ಧಾರವಾಯಿತೇನೋ ಎಂಬ ಅಳುಕು ಮನಸ್ಸನ್ನು ಕಾಡಿತು. ಬಾಗಿಲ ಹತ್ತಿರ ಇದ್ದ ಚಪ್ಪಲಿ ಕಪಾಟಿನಲ್ಲಿ ಇಣುಕಿದಳು. ಹೈಹೀಲ್ಡ್ ಶೂಗಳನ್ನು ಬಿಟ್ಟು ಹಗುರವಾದ ಚಪ್ಪಲಿಯನ್ನು ಆರಿಸಿಕೊಂಡು ಬಾಗಿಲು ತೆರೆದು ಹೊರಟಾಗ ಎದುರು ದಿಕ್ಕಿನಿಂದ ಬಂದವಳನ್ನು ಕಂಡು ಅವಾಕ್ಕಾಗಿ ನಿಂತಳು. ಕೊನೆಗೂ ಸಾವರಿಸಿಕೊಂಡು ‘ಓಹ್! ನೀನು!’ ಎಂದು ಕರೆದಳು. ಅವಳ ಧ್ವನಿಯಲ್ಲಿ ಸಂಭ್ರಮವಿತ್ತು. ಬಂದವಳು ನಕ್ಕಳು. ಅವಳ ನಗುವಿನಲ್ಲೂ ಸಂಭ್ರಮವಿತ್ತು. ಇವಳು ಬಂದವಳನ್ನು ಆಲಂಗಿಸಿಕೊಂಡು ಒಳಗೆ ಕರೆದೊಯ್ದಳು. ಒಳಗೆ ಬಂದ ಅತಿಥಿಯೇ ಇವಳನ್ನು ಒಳಗೆ ಕರೆದುಕೊಂಡು ಹೋದಂತೆ ಇವಳಿಗೆ ಭಾಸವಾಯಿತು. ತನ್ನ ಮನೆಯ ಪರಿಚಯ ಅವಳಿಗೆ ಇಷ್ಟು ಚೆನ್ನಾಗಿರುವುದು ಹೇಗೆಂದು ಇವಳು ಯೋಚಿಸಿದಳು. ‘ಇಲ್ಲಿ ಕೂತುಕೋ!’ ಎಂದು ಇವಳು ಹೇಳಿದಾಗ ಅವಳೂ ಅದೇ ಮಾತನ್ನು ಹೇಳಿದ್ದು ಕೇಳಿ ಇವಳಿಗೆ ನಗು ಬಂತು. ಇಬ್ಬರೂ ನಕ್ಕರು. ‘ನಿನ್ನ ಸೀರೆ ಚೆನ್ನಾಗಿದೆ. ನಾವಿಬ್ಬರೂ ಅದನ್ನು ಒಂದೇ ಅಂಗಡಿಯಿಂದ ಖರೀದಿ ಮಾಡಿರಬೇಕು. ಲಾವಣ್ಯ ಸಿಲ್ಕ್ಸ್ ತಾನೇ?’ ಅವಳು ಹೌದೆಂದು ತಲೆಯಾಡಿಸಿದಳು. ‘ತಾ...

ಭಜಿಸುತಿರು ಕೃಷ್ಣನಾಮ!

ಇಮೇಜ್
ಓ ಮನ! ಭಜಿಸುತಿರು ಕೃಷ್ಣನಾಮ! ದಾಟದಿರು ಗುರುವು ಹಾಕಿದ ಗೆರೆ, ಸಲ್ಲಿಸು ಸಂತರಿಗೆ ಪ್ರಣಾಮ! ಓದಿ ಅರ್ಥೈಸು ಭಾಗವತದ ಕಥೆ, ಪಡೆದುಕೋ ಪುಣ್ಯಾರಾಮ! ಏಕೆ ಕೃಷ್ಣನ ನಾಮದ ಸ್ಮರಣೆ ಇಲ್ಲದೇ, ವ್ಯರ್ಥಗೊಳಿಸುವೆ ಜನುಮ! ಹರಿದುಹೋಗುತಿದೆ ಕೃಷ್ಣನಾಮಸುಧೆ,  ತೃಷೆ ಇದ್ದವರಿಗೆ  ಸೂರದಾಸ ಶ್ರೀಹರಿಯ ಚರಣವೇ ಸಾಫಲ್ಯ ಪರಂಧಾಮ! रे मन कृष्ण नाम कहि लीजै गुरु के बचन अटल करि मानहिं, साधु समागम कीजै पढिए गुनिए भगति भागवत, और कथा कहि लीजै कृष्ण नाम बिनु जनम बादिही, बिरथा काहे जीजै कृष्ण नाम रस बह्यो जात है, तृषावंत है पीजै सूरदास हरिसरन ताकिए, जन्म सफल करी लीजै

ಬೆಳಗಿನ ಹಾಡು

ಇಮೇಜ್
  ಮೂಲ: ಸಾರಾ ಟೀಸ್‌ಡೇಲ್ ಅನುವಾದ: ಸಿ ಪಿ ರವಿಕುಮಾರ್ ವಜ್ರದಂತಹ ಬೆಳಗು ಕೂಗಿ ಎಬ್ಬಿಸಿತು ನನ್ನನ್ನು ಏಕೋ ಒಂದು ಗಂಟೆ ಮುಂಚೆಯೇ ಇಂದು. ನಸುಕು ಕೊಂಡೊಯ್ದಿತ್ತು ತಾರೆಗಳನ್ನು ತನ್ನೊಂದಿಗೆ ಬಿಟ್ಟು ಹೋಗಿತ್ತು ಬಾನಲ್ಲಿ ಬೆಳ್ಳನೆಯ ಬಿಂದು. ಓಹ್ ಇಂದು! ನೀನು ಏಕಾಂಗಿನಿ! ಇರಲಿ ಬಿಡು, ನಿನ್ನಂತೆಯೇ ಒಂಟಿ ನಾನು ಕೂಡಾ. ಆದರೆ ನಮಗಿದೆ ಸುತ್ತಾಡಲು ಇಡೀ ಜಗತ್ತು, ಒಂಟಿಯಾದವರಿಗೆ ಮಾತ್ರ ಈ ಸ್ವಾತಂತ್ರ್ಯ.

ಏಕಾಕಿ

ಇಮೇಜ್
 ಮೂಲ ಕವಿತೆ: ಎಲ್ಲಾ ವ್ಹೀಲರ್ ವಿಲ್ ಕಾಕ್ಸ್ ಅನುವಾದ: ಸಿ ಪಿ ರವಿಕುಮಾರ್  ನೀನು ನಕ್ಕರೆ ನಗುವುದು ಜೊತೆಗೆ ಜಗತ್ತು, ಅತ್ತರೆ ನೀನು ಅಳಬೇಕು ಏಕಾಂಗಿಯಾಗಿ. ಕಷ್ಟಗಳು ಸಾಕಷ್ಟಿವೆ ಜಗತ್ತಿನಲ್ಲಿ ಹೀಗಾಗಿ ಹೀರುವುದದು ಸಂತಸವನ್ನು ಬಿಡದೆ ತೊಟ್ಟೂ. ನೀನು ಹಾಡಿದರೆ ಬೆಟ್ಟಗಳೂ ಹಾಡುತ್ತವೆ ಜೊತೆಗೆ, ಗಾಳಿಯಲ್ಲಿ ಕಳೆದುಹೋಗುವುದು ನಿನ್ನ ನಿಟ್ಟುಸಿರು. ಪ್ರತಿಧ್ವನಿ ಉಕ್ಕುವುದು ನಗುಮೊಗದ ಕತೆಗೆ, ಗೋಳುಕತೆಗೆ ಮೌನವೇ ಏಕೈಕ ಶ್ರೋತೃ. ಸಂಭ್ರಮಿಸಿದಾಗ ಜನ ಬರುವರು ಹುಡುಕುತ್ತ, ಮರಳುವರು ನೀನು ಬಿಕ್ಕಿದರೆ ಅತ್ತು. ಬೇಕು ಎಲ್ಲರಿಗೂ ನಿನ್ನ ಸುಖದ ಪೂರ್ಣ ಮೊತ್ತ, ಯಾರಿಗೂ ಬೇಡ ನಿನ್ನ ದುಃಖ ಕಿಂಚಿತ್ತೂ. ನಗುತ್ತಿದ್ದರೆ ನಿನಗೆ ನೂರಾರು ಗೆಳೆಯರು, ಅತ್ತಾಗ ನಿಲ್ಲುವುದಿಲ್ಲ ಯಾರೂ ಒಂದು ನಿಮಿಷ. ಬೇಡ ಎನ್ನುವುದಿಲ್ಲ ನೀನಿತ್ತ ಸಿಹಿ ಜೇನು ಯಾರೂ, ನೀನೇ ಕುಡಿಯಬೇಕು ಜೀವನದ ಕಹಿವಿಷ. ಜನ ಹುಡುಕಿ ಬರುವರು ಏರ್ಪಡಿಸಿದರೆ ಔತಣಕೂಟ, ಯಾರೂ ನೋಡುವುದಿಲ್ಲ ಹಿಡಿದಾಗ ಉಪವಾಸ ವೃತ.  ವಿಜಯಿಯಾಗಿ ನೀಡು ಕೊಡುಗೆ, ಜೀವಿಸಲು ಇದು ಮಾರ್ಗ, ಯಾರೂ ಜೊತೆ ಬರುವುದಿಲ್ಲ ನೀನು ಎಲ್ಲಾ ಬಿಟ್ಟು ಹೊರಟಾಗ. ಬೃಹತ್ ಬಂಡಿಯೂ ಸಾಗುವಷ್ಟು ಸುಖದ ಹಾದಿಯ ಗಾತ್ರ, ನೋವಿನ ಇಕ್ಕಟ್ಟು ಓಣಿಯಲ್ಲಿ ಸಾಗಲು ಒಬ್ಬರಿಗೆ ಮಾತ್ರ 

ರೊಟ್ಟಿ ಮತ್ತು ತೊವ್ವೆ

ಇಮೇಜ್
 ರೊಟ್ಟಿ ಮತ್ತು ತೊವ್ವೆ ಮೂಲ: ಡೇವಿಡ್ ವೈಟ್ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಯಾರೆಂದರು ಇದು ಮಾಹಿತಿ ಯುಗವೆಂದು ಇದು ಮಾಹಿತಿ ಯುಗವಲ್ಲ. ಬಿಡಿ ಸುದ್ದಿವಾಹಿನಿ ಪತ್ರಿಕೆ  ಮತ್ತು ಸ್ಕ್ರೀನ್ ತುಂಬ  ಕೆಂಪು ಬಣ್ಣದ ಬ್ರೇಕಿಂಗ್ ನ್ಯೂಸ್. ಇದು ರೊಟ್ಟಿ ಮತ್ತು ತೊವ್ವೆಯ ಯುಗ. ಜನ ಹಸಿದಿದ್ದಾರೆ  ಮತ್ತು ಒಂದು ಒಳ್ಳೆಯ ಮಾತು ತಣಿಸಬಲ್ಲದು ಸಾವಿರ ಮಂದಿಯ ಹಸಿವು.

ಸೂರ್ಯಾಸ್ತ

ಇಮೇಜ್
   ಮೂಲ: ಎಲ್ಲಿಸ್ ನೈಟಿಂಗೇಲ್  ಕನ್ನಡಕ್ಕೆ : ಸಿ ಪಿ ರವಿಕುಮಾರ್ ಕುಳಿತಿರುವೆ ಒಂದು ಹಳೆಯ ಕಲ್ಲುಗೋಡೆಯ ಮೇಲೆ ನೀವು ಅಂದುಕೊಂಡಷ್ಟೇನೂ ಕೊರೆಯುತ್ತಿಲ್ಲ ತಣ್ಣಗೆ ಇಲ್ಲಿಂದ ಕಾಣುತ್ತಿದೆ ಗುಲಾಬಿ ಬಣ್ಣದ ಗಗನ ಮತ್ತು ಅಲ್ಲಿ ಸೂರ್ಯನು ಮುಳುಗುತ್ತಿರುವುದು ಮೆಲ್ಲಗೆ. ಶಾಂತ ಸಾಗರದಂತೆ ಗಾಳಿ ತೊನೆಯುತ್ತಿದೆ ಮೆಲ್ಲಗೆ ತುಂಬಿಕೊಂಡು ತನ್ನಲ್ಲಿ ಮೃದುವಾದ ಕಲಕಲ ನನಗಂತೂ ಹೊಳೆಯುತ್ತಿಲ್ಲ ಇದಕ್ಕಿಂತ ಉತ್ತಮ ಮಾರ್ಗ ವ್ಯರ್ಥಗೊಳಿಸಲು ನನಗೆ ಸಿಕ್ಕ ಕಾಲ.

ಬೆಂಕಿ ಮತ್ತು ಪತಂಗ

ಇಮೇಜ್
  ಅದು ಯಾರ ತಪ್ಪೂ ಆಗಿರಲಿಲ್ಲ ಅದು ಎಲ್ಲರ ತಪ್ಪೂ ಆಗಿತ್ತು. ಕ್ಯಾಮೆರಾ ಇದೆಯೆಂದು ಸೆಲ್ಫೀ ತೆಗೆಯುವ ಖಯಾಲಿ ಜಲಪಾತದ ಎದುರು ಮೊಬೈಲ್ ಫೋನ್ ಹಿಡಿದು ನಿಂತವಳು ತನ್ನನ್ನೇ ನೋಡುತ್ತಾ ನೋಡುತ್ತಾ ಹಿಂಜರಿದು ಜಲಸಮಾಧಿಯಾದಳು. ಅಪ್ಪನ ಕಾರ್ ಕೀ ಸಿಕ್ಕ ಸಂಭ್ರಮದಲ್ಲಿ ಹುಡುಗ ಹೊರಟ  ಸ್ನೇಹಿತರ ಜೊತೆಗೆ ಗಾಳಿಯೊಂದಿಗೆ ಮಾತಾಡುತ್ತಾ ಗಾಳಿಯೇ ನಾನು ಚಲಿಸಬಲ್ಲೆ ನಿನಗಿಂತ ವೇಗವಾಗಿ ಎನ್ನುತ್ತಾ ಸಾಗಿ ಯಾವುದೋ ಕ್ಷಣದಲ್ಲಿ ಹಾರಿದ ವಾಯುವಿನಲ್ಲೇ ವಿಲೀನವಾಗಿ. ಹೀರೋ ಎಂದರೆ ಹೀಗಿರಬೇಕು. ಗಾಡಿಯನ್ನು ಹತ್ತಿಸಬೇಕು ಮೆಟ್ಟಿಲುಗಳ ಮೇಲೆ ಮೇಲಿಂದ ಹಾರಿ ಸ್ಲೋ ಮೋಷನ್ನಲ್ಲಿ ವಿಲನ್ ಎದೆಗೆ ಒದೆಯಬೇಕು. ಅಪ್ಪಾ ಹೇಳಬೇಡ ಹಳ್ಳಿಯನ್ನು ಉದ್ಧಾರ ಮಾಡಿದ ಬಂಗಾರದ ಮನುಷ್ಯನ ಕತೆ. ಅವೆಲ್ಲ ಬರೀ ಸುಳ್ಳು. ಯಾರಿಂದಲೂ ಸಾಧ್ಯವಿಲ್ಲ ಹಳ್ಳಿಯನ್ನು  ಉದ್ಧಾರ ಮಾಡುವುದು. ಅಮ್ಮಾ ಹೇಳಬೇಡ ಉಪವಾಸ ಮಾಡಿ ಸರಕಾರವನ್ನು ಬಗ್ಗಿಸಿದ ಮಹಾತ್ಮನ ಕತೆ. ಅದೆಲ್ಲಾ ಯಾರೋ ಕಟ್ಟಿದ ಫೇಕ್ ನ್ಯೂಸ್. ನೂರಾರು ವರ್ಷ ಬೇಕಾಯಿತಾ  ಸ್ವಾತಂತ್ರ್ಯ ಸಂಗ್ರಾಮಕ್ಕೆ! ಮೈ ಗಾಡ್ ಎಷ್ಟು ಬೋರಿಂಗ್. ಏನು ಪ್ರಯೋಜನ ಹಾಗೆ ಬದುಕಿ! ಫಾಸ್ಟ್ ಫಾರ್ವರ್ಡ್ ಮಾಡಬೇಕು. ಫಾಸ್ಟ್ ಮಾಡುತ್ತಾ ಕೂಡುವುದು ಬ್ಯಾಕ್ವರ್ಡ್ ಥಿಂಕಿಂಗ್. ನುಗ್ಗಬೇಕು. ಕಸಿದುಕೊಳ್ಳಬೇಕು. ಬೆಂಕಿಯ ಹತ್ತಿರ ಹೋಗುತ್ತಿತ್ತು ಪತಂಗ. ಬೆಂಕಿಯ ತಪ್ಪೂ ಆಗಿರಲಿಲ್ಲ. ಸುಡುವ ಗುಣವನ್ನು ಕೊಟ್ಟದ್ದು ಪ್ರಕೃತಿ. ಪತಂಗದ ತಪ್ಪ...

ಧೂಳು

ಇಮೇಜ್
 ಮೂಲ: ಡೋರಿಯನ್ ಲಾ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಯಾರೋ ನೆನ್ನೆ ರಾತ್ರಿ ಆಡಿದ ಮಾತು ತಟ್ಟಿತು.  ಆಡಿದ್ದು ಒಂದೆರಡೇ ಆದರೂ ನಿಜ ಹೇಳುತ್ತಿದ್ದರು ಎಂದು ನಾನು ಗುರುತಿಸಿದೆ. ಕೂಡಲೇ ಮೇಲೆದ್ದು ಬರೆದಿಟ್ಟುಕೊಳ್ಳಬೇಕು ಎನ್ನಿಸಿತು ಆದರೆ ತುಂಬಾ ತಡವಾಗಿತ್ತು, ದಣಿವಾಗಿತ್ತು ದುಡಿದು ಇಡೀ ದಿವಸ ತೋಟದಲ್ಲಿ ಕಲ್ಲುಗಳನ್ನು ಜರುಗಿಸುತ್ತಾ. ಈಗ ನನಗೆ ನೆನಪಿರುವುದು ಅದರ ಘಮ ಮಾತ್ರ ಇಲ್ಲ, ಊಟದ ವ್ಯಂಜನದಂತಲ್ಲ,  ಘಾಟು ಅಥವಾ ಸಿಹಿಯಲ್ಲ, ಸಣ್ಣ ಪುಡಿಯಂತೆ, ಧೂಳಿನ ಹಾಗೆ. ಕೇಳಿ ನಾನೇನೂ ಉಬ್ಬಲಿಲ್ಲ ಅಥವಾ ಹೆದರಿ ಕೊಳ್ಳಲಿಲ್ಲ. ನಾನು ಸಂಪೂರ್ಣ ಎಚ್ಚೆತ್ತುಕೊಂಡು  ಗಮನವಿಟ್ಟು ಕೇಳುತ್ತಿದ್ದೆ. ಕೆಲವು ಸಲ ಹಾಗೇ. ದೇವರು ಕಪ್ಪು ರೆಕ್ಕೆಯನ್ನು ತೊಟ್ಟು, ಬೆಳಕಿನಂತೆ ಜಗಜಗಿಸುತ್ತಾ ನಿಮ್ಮ ಕಿಟಕಿಯ ಎದುರು ಬಂದು ನಿಲ್ಲುತ್ತಾನೆ. ಆದರೆ ತೆರೆಯಲು ನಿಮಗೆ ವಿಪರೀತ ದಣಿವು.

ಟೆಲಿಫೋನ್

ಇಮೇಜ್
ಮೂಲ: ಮೆಲ್ ಮೆಕ್ ಮಾಒನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ೧ ಬೆಳ್ಳಗೆ, ಬೃಹದಾಕಾರ, ಆನೆಯೊಂದು ನಿಲ್ಲಬಹುದಾದಷ್ಟು ದೊಡ್ಡ ಸಂಖ್ಯೆಗಳುಳ್ಳ ಅಪ್ಪನ ಕಡೆಯ ಫೋನ್. ಅದನ್ನು ಅವನು ಬಳಸಿದ್ದು ಅಷ್ಟಕ್ಕಷ್ಟೇ ತಾನು ಮಾತಾಡಬೇಕಾದಾಗ ಮನೆಗೇ ಹೋಗಿ ಮಾತಾಡುವುದು ಅವನ ಪದ್ಧತಿ. ಯಾರೋ ಫೋನ್ ಮಾಡಿದಾಗ ಟಿವಿ ಪರದೆ ಮೇಲೆ ಕುದುರೆ ರೇಸ್ ನೋಡುತ್ತಾ ಕುಳಿತಿರುತ್ತಿದ್ದ.  ಅಥವಾ ಹೊರಗೆ ಹೊರಡಲು ನಡೆಸುತ್ತಿದ್ದ ಸಿದ್ಧತೆ. ಫ್ರಾನ್ಸ್ ನಲ್ಲಿ ಒಂದು ಸಂಜೆ  ಇದೇ ಫೋನ್ ಬಳಸಿ ಒಮ್ಮೆಲೇ ಕರೆ ಮಾಡಿದ ಸಾಯುವ ಮೂರು ದಿವಸಗಳ ಮುನ್ನ. ನಾನು ಬೇಸಗೆ ರಜಕ್ಕೆ ಬಂದಾಗ ಎಲ್ಲೆಲ್ಲಿ ಹೋಗಬಹುದು ಎಂದೆಲ್ಲಾ ಮಾತಾಡಿದ, ಬಚ್ಚಿಡಲಾಗದೆ ಉತ್ಸಾಹವನ್ನ. ಈಗ ಅದೇ ಫೋನಿನ ರಿಸೀವರ್ ಹಿಡಿದು ಕೇಳಿಸಿಕೊಂಡಾಗ: ಸ್ಮಶಾನ ಮೌನ. ಅವನು ಕೇಳಿಸಿಕೊಳ್ಳುತ್ತಿರಬಹುದೆಂಬ ಕಲ್ಪನಾಯಾನ.  ನಾನು ಕಲ್ಪಿಸಿಕೊಳ್ಳುತ್ತೇನೆ ಸಂಖ್ಯೆಗಳ ಸರಣಿ. ನೀವು ಕರೆ ಮಾಡಿದ ವ್ಯಕ್ತಿ ವ್ಯಾಪ್ತಿಯ ಹೊರಗಿದ್ದಾರೆ ಎನ್ನುತ್ತದೆ ಅಶರೀರವಾಣಿ. ೨ ಎರಡು ನಿಮಿಷಕ್ಕಿಂತಲೂ ಹೆಚ್ಚು ಮಾತಾಡುವುದಿದ್ದರೆ  ಪತ್ರ ಬರೆಯುವುದೇ ಸರಿ ಎಂದು ಸಿಡಿಮಿಡಿಗೊಳ್ಳುತ್ತಿದ್ದ. ನಾವು ಹದಿಹರೆಯದಲ್ಲಿದ್ದಾಗ ಅವನ ಸಿಡಿಮಿಡಿಗೆ ಹೆದರಿ ಜಗಳವೇತಕ್ಕೆ ವ್ಯರ್ಥ ಎಂದು ನಮ್ಮ ಫೋನ್ ಕರೆಗಳು  ಎಷ್ಟು ಬೇಕೋ ಅಷ್ಟು, ಸಂಕ್ಷಿಪ್ತ. ಈಗ ಅವನೊಂದಿಗೆ ಮಾತಾಡಬೇಕೆಂಬ ಹಂಬಲವಾದಾಗ ಟೆಲಿಪೋನ್ ಕಡೆಗೆ ದಿಟ್ಟಿಸಿ ನೋಡಿ...

ಕಾಡುಜೀವಿಗಳ ಶಾಂತಿ

ಇಮೇಜ್
  ಮೂಲ: ವೆಂಡೆಲ್ ಬೆರಿ  ಕನ್ನಡ ಅನುವಾದ: ಸಿ ಪಿ ರವಿಕುಮಾರ್  ಜಗತ್ತಿಗಾಗಿ ಹತಾಶೆ ಬೆಳೆಬೆಳೆದು ಆಕ್ರಮಿಸಿಕೊಂಡಾಗ ಮನವನ್ನು ಏನಾದೀತೋ ನನ್ನ ಬದುಕು, ಮಕ್ಕಳ ಬದುಕೆಂಬ ಭಯಕ್ಕೆ ಇರುಳಿನಲ್ಲಿ ಸಣ್ಣ ಸದ್ದಿಗೂ ಎಚ್ಚರವಾದಾಗ ನಾನು ಮೇಲೆದ್ದು ಹೋಗಿ ಅಡ್ಡಾಗುತ್ತೇನೆ  ಕಾಡು ಬಾತುಕೋಳಿ ತನ್ನ ಚೆಲುವನ್ನು ಹೊದ್ದು ಮಲಗಿರುತ್ತದಲ್ಲ ನೀರಿನಲ್ಲಿ ಮತ್ತು  ಕೊಕ್ಕರೆ ಮೀನು ಹಿಡಿಯುತ್ತದಲ್ಲ, ಅಲ್ಲಿ. ಅಲ್ಲಿ ನಾನು ಅನುಭವಿಸುತ್ತೇನೆ ಕಾಡುಜೀವಿಗಳ ಶಾಂತಿ. ಮುಂಬರುವ ಶೋಕವನ್ನು ನೆನೆದು  ತಳಮಳಗೊಳ್ಳದ ಅವುಗಳ ಸ್ಥಿತಿ. ಸ್ತಬ್ಧ ನೀರಿನ ಉಪಸ್ಥಿತಿಯಲ್ಲಿ ಅರಿವಾಗುತ್ತದೆ ಹಗಲುಗುರುಡು ನಕ್ಷತ್ರಗಳು ಬೆಳಕು ಹಿಡಿದು ಕಾಯುತ್ತಿರುವುದು. ಒಂದಿಷ್ಟು ಹೊತ್ತು  ಜಗತ್ತಿನ ಕೃಪೆಯಲ್ಲಿ ವಿಶ್ರಮಿಸಿದಾಗ ನನಗೆ ದೊರೆಯುತ್ತದೆ ಮುಕ್ತಿ. (ಮುಂದಿನ ಕ್ಷಣವೇ  ಹುಲಿ ಸಿಂಹ ತೋಳ ನರಿ ಮುಂತಾದ ಯಾವುದೋ ಪ್ರಾಣಿ ತನ್ನನ್ನು ಕೊಂದು ತಿನ್ನಬಹುದೆಂಬ ಅರಿವಿದ್ದರೂ ಶಾಂತಿಯಿಂದ ಬದುಕುವ ಜಿಂಕೆ ಮುಂತಾದ ಪ್ರಾಣಿಗಳಿಗೆ ಯಾವ ಆತಂಕವೂ ಇಲ್ಲ. ಅದನ್ನೇ ಕವಿ ಕಾಡು ಜೀವಿಗಳ ಶಾಂತಿ ಎನ್ನುತ್ತಾನೆ.)

ಭರವಸೆ

ಇಮೇಜ್
 ಮೂಲ: ರೋಸ್ ಮೆರಿ ವಾಹ್ತೋಲಾ ಟ್ರಾಮರ್ ಅನುವಾದ: ಸಿ ಪಿ ರವಿಕುಮಾರ್  ಭರವಸೆಯ ಕಿಸೆಗಳಲ್ಲಿವೆ ಸಣ್ಣ ರಂಧ್ರಗಳು ಕೆಳಗೆ ಉದುರುವ  ತುಣುಕುಗಳು ಮೂಡಿಸುತ್ತವೆ ನಮಗೆ ಆತಂಕವಾದಾಗ ಅನುಸರಿಸಲು ದಾರಿ. ಭರವಸೆಯ ಗುಟ್ಟು ಏನೆಂದರೆ ಅದಕ್ಕೆ ಗೊತ್ತೇ ಇಲ್ಲ ಯಾವುದು ಗುರಿ. ಅದಕ್ಕೆ ಗೊತ್ತಿರುವುದು ಇಷ್ಟೇ, ಪ್ರತಿಯೊಂದು ದಾರಿಯ ಪ್ರಾರಂಭವೂ ಒಂದು ಹೆಜ್ಜೆಯ ಮುಂದೆ  ಇನ್ನೊಂದನ್ನು ಇಟ್ಟಾಗ ಎಂದಷ್ಟೇ.

ಹೂರಣದ ಹೋಳಿಗೆ

ಇಮೇಜ್
  ಮೂಲ: ಪಾದ್ರಾಗ್ ಡ್ಯಾಲಿ ಭಾವಾನುವಾದ: ಸಿ ಪಿ ರವಿಕುಮಾರ್ ನಾವು ಏಳುವ ಮುನ್ನವೇ ನೀನು  ಕೆಳಗೆ ತಯಾರಿ ನಡೆಸುತ್ತಿದ್ದದ್ದು ಕೇಳಿಸುತ್ತಿತ್ತು. ಇಡೀ ಬೆಳಗ್ಗೆ  ನಾವು ನೋಡಿದೆವು ನೀನು ಕಣಕ ನಾದುವುದನ್ನು  ಅದರೊಂದಿಗೆ ಪಿಸುಗುಟ್ಟುತ್ತಾ ಮಾತಾಡುವುದನ್ನು. ನಾವು ಕೆಳಗೆ ಇಳಿದು ಬಂದಾಗ ಎಲ್ಲಿ  ನಿನ್ನ ಏಕಾಗ್ರತೆಗೆ ಭಂಗವಾದೀತೋ ಎಂದು ಮೆಲ್ಲನೆ ನಡೆದು ಬಂದೆವು. ನಂತರ ನೀನು ಹೂರಣ ತುಂಬಿದ ಉಂಡೆಗಳನ್ನು ಲಟ್ಟಿಸುವುದು ಕಂಡಿತು ಕಪ್ಪು ಕಲ್ಲಿನ ಮೇಲೆ ತೆಳ್ಳಗೆ. ಅಂಚು ಬರಬಾರದು,  ತೆಳ್ಳಗೆ ಇರಬೇಕು ಹರಿಯಬಾರದು, ನಾಜೂಕು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಸಿದ್ಧವಾಯಿತು. ತುಪ್ಪ, ಹಾಲು, ಸೀಕರಣೆ ಇತ್ಯಾದಿ ಮೊದಲೇ ತಯಾರಾಗಿ ಕಾದಿದ್ದವು. ನಿನ್ನ ಹೊಳೆಯುವ ಕಣ್ಣುಗಳ  ಬೆಳಕಿನಲ್ಲಿ ನಾವು ಮೌನವಾಗಿ ತಿನ್ನುತ್ತಾ ಕುಳಿತೆವು ಎಲ್ಲೋ ಮಣ್ಣಿನಲ್ಲಿ ನೀರು ತೊಟ್ಟಿಕ್ಕುತ್ತಿರುವಾಗ.

ಕೆಲವರಿಗೆ ಇಷ್ಟ ಕವಿತೆ

ಇಮೇಜ್
ಮೂಲ: ವಿಸ್ಲವಾ ಸಿಂಬೋರ್ಸ್ಕಾ ಅನುವಾದ: ಸಿ ಪಿ ರವಿಕುಮಾರ್  ಕೆಲವರಿಗೆ - ಅರ್ಥಾತ್ ಎಲ್ಲರಿಗೂ ಅಲ್ಲ,  ಬಹುಜನರಿಗೂ ಅಲ್ಲ, ಅಲ್ಪ ಸಂಖ್ಯಾತರು. ಶಾಲಾ ಮಕ್ಕಳನ್ನು ಹೊರತು ಪಡಿಸಿ ಏಕೆಂದರೆ ಅವರಿಗೆ ಅದು ಕಡ್ಡಾಯ ಕವಿಗಳನ್ನು ಎಣಿಸಬೇಡಿ, ಹೆಚ್ಚೆಂದರೆ ಸಾವಿರದಲ್ಲಿ ಇಬ್ಬರು. ಇಷ್ಟ - ಇಷ್ಟವೆಂದರೆ ಹೆಚ್ಚೇನೂ ಹೇಳಿದಂತಲ್ಲ ಇಷ್ಟವಾಗುತ್ತದೆ ದಾಳಿಂಬೆ ಹಾಕಿದ ಮೊಸರನ್ನ ಇಷ್ಟವಾಗುವುದು ಹೊಗಳಿಕೆ ಮತ್ತು ನೀಲಿ ಬಣ್ಣ ಇಷ್ಟವಾಗುತ್ತದೆ ಹಳೆಯ ಕಾಲದ ಆಭರಣ ಇಷ್ಟ ಪಡುತ್ತೇವೆ ಮೇಲುಗೈ ಪಡೆದ ಕ್ಷಣ ಮತ್ತು ನಾಯಿಯ ತಲೆಯನ್ನು ನೇವರಿಸುವುದನ್ನ. ಕವಿತೆ - ಆದರೆ ಕವಿತೆ ಎಂದರೆ ಏನು? ಈ ಪ್ರಶ್ನೆಗೆ ಸಿಕ್ಕಿವೆ ಅನೇಕ ಅರೆಬೆಂದ ಉತ್ತರಗಳು ನನಗೂ ಗೊತ್ತಿಲ್ಲ ಸರಿಯಾಗಿ ಗೊತ್ತಿಲ್ಲ ಆದರೂ ಹಿಡಿದುಕೊಂಡಿದ್ದೇನೆ ಹಿಡಿದುಕೊಳ್ಳುವರಲ್ಲ ಮುಗ್ಗರಿಸದ ಹಾಗೆ ಕೈಪಿಡಿಯನ್ನು ಆಸರೆಯಾಗಿ, ಹಾಗೆ.

ಇಷ್ಟರ ನಡುವೆ

ಇಮೇಜ್
 ಇಷ್ಟರ ನಡುವೆ ಮೂಲ: ಟಾಮ್ ಹಿರಾನ್ಸ್ ಇಷ್ಟರ ನಡುವೆ ಅರಳುತ್ತವೆ ಹೂ ಯಥಾಪ್ರಕಾರ ಚಂದ್ರೋದಯ ಸೂರ್ಯೋದಯಕ್ಕಿಲ್ಲ ಸಂಚಕಾರ ಮಕ್ಕಳು ಮುಗುಳ್ನಗುತ್ತವೆ ದೊಡ್ಡದಾಗಿ ನಿಷ್ಕಾರಣ ಮತ್ತು ಅಸಂಭವ ದಾಟಿ ಎರಡು ಹೃದಯಗಳ ಮಿಲನ ಅಪರಿಚಿತರು ಹಂಚಿಕೊಳ್ಳುತ್ತಾರೆ ಕಡ್ಡಿಪೆಟ್ಟಿಗೆ, ನಗೆ  ನೀರಿನ ಮೇಲೆ ಆಡುತ್ತವೆ ಬೆಳಕಿನ ಕೋಲುಗಳು ಮೆಲ್ಲಗೆ ಅನಿರೀಕ್ಷಿತ ಬೀದಿಗಳಲ್ಲಿ ಅರಳುತ್ತದೆ ಔದಾರ್ಯ  ನೆರೆ, ಭೂಕಂಪನಗಳ ನಡುವೆ  ಪುನರ್ವಸತಿ ಕಾರ್ಯ ಬದುಕಿನ ಕಡೆಗೆ ವಾಲುತ್ತದೆ ಜೀವನ ಎಲ್ಲವನ್ನೂ ಸಾವು ತೆಗೆದುಕೊಂಡರೂ ಆಫೋಷನ ನಡುವೆ ಇದ್ದವು ಎಷ್ಟೊಂದು ಅಮೂಲ್ಯ ಕ್ಷಣ ಎಲ್ಲವೂ ಪ್ರಕಾಶಮಾನವಾಗಿ ಜಗಮಗ ನಾವು ಮತ್ತೊಮ್ಮೆ  ನಮ್ಮ ಈ ಜಗ ವನ್ನು ಪ್ರೀತಿಸುವಂತೆ ಇತ್ತು ಜೀವನ.

ಆಲೋಚನೆಗಳು

ಇಮೇಜ್
 ಆಲೋಚನೆಗಳು ಮೂಲ ಕವಿತೆ: ಹೆನ್ರಿ ವಾನ್ ಡೈಕ್  ಅನುವಾದ: ಸಿ ಪಿ ರವಿಕುಮಾರ್ ನಮ್ಮ  ಆಲೋಚನೆಗಳಿಗಿದೆ ಶರೀರ, ರೆಕ್ಕೆ ಮತ್ತು ಶ್ವಾಸ ಅವು ವಸ್ತುಗಳೇ ಎಂಬುದು ನನ್ನ ವಿಶ್ವಾಸ ಕಳಿಸಿದಾಗ ಆಲೋಚನೆಗಳನ್ನು ಜಗತ್ತಿಗೆ ನಾವು ಪರಿಣಾಮಗಳು ಎರಡು: ನಲಿವು ಇಲ್ಲವೆ ನೋವು. ನಮ್ಮ ಮನದಾಳದಲ್ಲಿ ಹುಟ್ಟಿದ ರಹಸ್ಯ ಆಲೋಚನೆ ಹೋಗಿ ಮುಟ್ಟುವುದು ಜಗತ್ತಿನ ದೂರದ ಕೊನೆ ಹೋದ ಕಡೆಗೆಲ್ಲಾ ಅದರ ಹೆಜ್ಜೆ ಗುರುತಿನ ಹಾಗೆ ಶುಭೇಚ್ಛೆಯ ವೃಷ್ಟಿ  ಅಥವಾ ಶಾಪದ ಸುಡುಬೇಗೆ. ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತೇವೆ ಅರಿವಿಲ್ಲದೆ ಇಡುತ್ತಾ ಒಂದೊಂದೇ ಆಲೋಚನೆಯ ಇಟ್ಟಿಗೆ ವಿಶ್ವದ ನಿರ್ಮಾಣವಾಗಿದ್ದೂ  ಹೀಗೇ  ವಿಧಿ ಎಂಬುದು ಇನ್ನೊಂದು ಹೆಸರು ಆಲೋಚನೆಗೆ. ನಿನ್ನ ಭವಿಷ್ಯವನ್ನು ಆಯ್ದುಕೋ. ಅನಂತರ ನಿರೀಕ್ಷಿಸುವುದಷ್ಟೇ ಕೆಲಸ. ಪ್ರೇಮ ಕರೆತರುವುದು ಪ್ರೇಮ, ಕರೆತರುವುದು ದ್ವೇಷವನ್ನು ದ್ವೇಷ 

ಕೃತಕ ಬುದ್ಧಿಮತ್ತೆ ಬಳಸಿ ಲೇಖನ ಬರೆದ ವಿದ್ಯಾರ್ಥಿಗೆ

 ಕೃತಕ ಬುದ್ಧಿಮತ್ತೆ ಬಳಸಿ ಲೇಖನ ಬರೆದ ವಿದ್ಯಾರ್ಥಿಗೆ ಮೂಲ: ಜೋಸೆಫ್ ಫಸಾನೋ ಅನುವಾದ: ಸಿ ಪಿ ರವಿಕುಮಾರ್ ಇಗೋ ನಿನಗೆ ವಾಪಸು ಕಳಿಸುತ್ತಿರುವೆ ನಿನ್ನ ಲೇಖನ. ನನಗೆ ಕೇಳಿಸುತ್ತಿದೆ ನಿನ್ನ ಒದ್ದಾಟ. ಜೀವನ ನಿನಗೆ ಬಹಳ ಕಷ್ಟವಾಗಿರಬೇಕು. ಅಮೂಲ್ಯವಾಗಿದೆ ನಿನಗೆ ಭೂಮಿಯ ಮೇಲಿನ ಒಂದೊಂದೂ ಕ್ಷಣ. ಆದರೆ ನಿನಗೆ ಮುಕ್ತಿ ಬೇಕಾಗಿರುವುದು  ಯಾವುದರಿಂದ ಹೇಳು.  ಜೀವಿಸುವುದರಿಂದಲೇ? ಬದುಕೆಂಬ ಪವಾಡದಿಂದಲೇ? ನೆನಪಿಡು. ಯಾರು ಕೆಲಸವನ್ನು ಪ್ರೀತಿಸುತ್ತಾರೋ ಅವರು ಮಾತ್ರ ಪ್ರೀತಿಗೆ ಅರ್ಹರು.

ಆಂಟಿ ಕಾಗೆ

ಇಮೇಜ್
 ಆಂಟಿ ಕಾಗೆ ಸಿ. ಪಿ. ರವಿಕುಮಾರ್ ಕಾಗಕ್ಕ ಕಾಗಕ್ಕ, ಏನು ತಿನ್ನುತ್ತಿರುವೆ ಕಾಣುತ್ತಿಲ್ಲವೇ, ಕೆಂಪಿರುವೆ. ಕೆಂಪಿರುವೆ ತಿನ್ನುತ್ತಿರುವೆ ಏತಕ್ಕೆ? ಮೈಯಲ್ಲಿ ಹುಷಾರಿಲ್ಲ ಅದಕ್ಕೇ. ಕೆಂಪಿರುವೆ ಏನು ನಿನಗೆ ಔಷಧವೆ?  ನಮಗೆ "ಆಂಟ್" ಇ ಬಯಾಟಿಕ್ ಇದುವೆ. ಏನೋ ತುಂಬಾ ರಹಸ್ಯಮಯವಾಗಿದೆಯಲ್ಲ! ರಹಸ್ಯ: ಇರುವೆಯಲ್ಲಿರುವ ಫಾರ್ಮಿಕ್ ಆಮ್ಲ. ಏನಾಗುತ್ತದೆ ಆಮ್ಲ ಸೇರಿದರೆ ಹೊಟ್ಟೆಯೊಳಗೆ? ಕ್ರಿಮಿ ನಾಶವಾಗಿ ನನಗೆ ಪುನಃ ಚೇತರಿಕೆ. ಕಾಗಕ್ಕ "ಆಂಟಿ" ಅನ್ನಬಹುದೇ ನಿನಗೆ? ನಿನ್ನ ಜೋಕಿಗೆ ನಗು ಬರಲಿಲ್ಲ ನನಗೆ. (ಚಿತ್ರ ಮತ್ತು ಮಾಹಿತಿ ಎರಡೂ ಫೇಸ್ಬುಕ್ ಕೃಪೆ. ಇದನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡಬಹುದು. ಐದು ನಿಮಿಷದ ನಾಟಕ ಕೂಡಾ ಮಾಡಬಹುದು.)

ನಮ್ಮ ಮಕ್ಕಳು

ಇಮೇಜ್
ನಮ್ಮ ಮಕ್ಕಳು ಮೂಲ: ನಿಕೊಲೆಟ್ ಸೌಡರ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಹೇಗಿರಲಿ ನಮ್ಮ ಮಕ್ಕಳ ಪಾಲನೆ  ಅಂದರೆ ಅವರು ಪ್ರೀತಿಸಲಿ ಯಾರೂ ಪ್ರೀತಿಸದ ವಸ್ತುಗಳನ್ನು ಕೂಡಾ. ಉದಾಹರಣೆಗೆ ಕಾಡು ಸೇವಂತಿಗೆ ಹೂವುಗಳು, ಹರಿದಾಡುವ ಹುಳಹುಪ್ಪಟೆ ಮತ್ತು ಜೇಡ. ಅವರಿಗಿರಲಿ ಗುಲಾಬಿಗೆ ಮುಳ್ಳಿನ ಅಗತ್ಯವಿದೆ ಎಂಬ ಪರಿಜ್ಞಾನ, ಮಳೆಗಾಲದ ದಿನಗಳನ್ನೂ ಬೇಸಗೆಯ ದಿನಗಳಷ್ಟೇ ಆನಂದದಿಂದ ಸ್ವೀಕರಿಸುವ ಸ್ವಭಾವ. ಬೆಳೆದು ದೊಡ್ದವರಾದ ನಂತರ  ಬಂದಾಗ ಒಂದು ದಿನ ಧ್ವನಿ ಇಲ್ಲದವರ ಪರವಾಗಿ ಮಾರಾಡುವ ಸರದಿ ಬರಲಿ ಅವರಿಗೆ ಎಳೆಯ ವಸ್ತುಗಳನ್ನು  ಕಾಪಾಡಿದ ನೆನಪು ಮತ್ತು ಮಾತಾಡಲು ತಾವೇ ತೆರೆಯಲಿ ತುಟಿ.

ಹಕ್ಕುಗಳು

 ಹಕ್ಕುಗಳು  ಮೂಲ: ನಿಕ್ಕಿ ಜಿಯೋವನಿ ಕನ್ನಡಕ್ಕೆ: ಸಿ ಪಿ ರವಿಕುಮಾರ್ ನಾನೊಂದು ಜೇಡವನ್ನು ಕೊಂದುಹಾಕಿದೆ. ಅದೇನೂ ಕಂದುಬಣ್ಣದ ವಿಷಮಯ ಜೇಡವಾಗಿರಲಿಲ್ಲ ಅಥವಾ ಕಪ್ಪು ಬಣ್ಣದ ಬ್ಲಾಕ್ ವಿಡೋ ಕೂಡಾ ಆಗಿರಲಿಲ್ಲ. ನಿಜ ಹೇಳಬೇಕೆಂದರೆ ಅದೊಂದು  ಯಕಶ್ಚಿತ್  ಕಾಗದದಂಥ ಜೇಡವಾಗಿತ್ತು. ನಾನು ಕೈಯಲ್ಲಿ ಪುಸ್ತಕ ಎತ್ತಿಕೊಂಡಾಗ ಅದು ಓಡಿಹೋಗಬೇಕಾಗಿತ್ತು. ಹಾಗೆ ಅವಳು ಓಡಲಿಲ್ಲ  ಹೀಗಾಗಿ ನನಗೆ ಗಾಬರಿಯಾಗಿ ಅವಳನ್ನು ಅಪ್ಪಚ್ಚಿ ಮಾಡಿದೆ. ನನಗೆ ಭಯವಾಯ್ತೆಂದು ಜೀವಿಯೊಂದನ್ನು ಹೊಸಕಿ ಹಾಕುವ ಹಕ್ಕು ನನಗಿಲ್ಲ ಎಂದು ತೋರುತ್ತದೆ.

ಹಿಂದೆ ಬಂದರೆ ಹಾಯಬೇಡಿ

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ  ಅಂತೆಲ್ಲಾ ಹಾಡುಗಳು ಪ್ರಸಾರವಾಗುತ್ತಿದ್ದವು ಹಿಂದೆ. ಅದನ್ನೆಲ್ಲ ಕೇಳಿ ಜನರಿಗೆ  ಮುಂದೆ ಹೋಗೋಣ ಅನ್ನಿಸುತ್ತಿತ್ತು.  ಬಹಳ ಜನರಿಗೆ ಸಿನಿಮಾದಲ್ಲಿ ಮುಂದಿನ ಸೀಟ್  ಆಪ್ಯಾಯವಾಗಿತ್ತು. ಉಳಿದ ದುಡ್ಡಿನಲ್ಲಿ ಗಾಂಧಿಯಂತೆ ಕಳ್ಳೇಕಾಯಿ  ತಿನ್ನಬಹುದಾಗಿತ್ತು. ಬಸ್ಸುಗಳಲ್ಲಿ ತುಂಬಿರುತ್ತಿದ್ದರು ಜನ ಗಿಜಿಗಿಜಿ. ಕಂಡಕ್ಟರ್  ರೇಗುತ್ತಿದ್ದ ಮುಂದೆ ಹೋಗ್ರೀ! ಅವನಿಗೂ ಇತ್ತು ನೀವು ಮುಂದೆ ಬರಬೇಕೆಂಬ ಕಾಳಜಿ. ಈಗ ಮುಂದೆ ಬರಲು ಹಿಂದೇಟು. ಮಕ್ಕಳು ಹಿಡಿಯುತ್ತಾರೆ ಹಿಂದಿನ ಸೀಟು. ಹಿಂದಿದ್ದವರಿಗೆ ಕಾಣುತ್ತಿದೆ ಗಿಲೀಟು. ದಾಟಲು ಹೆದರುತ್ತಿದ್ದಾರೆ ಗೀಟು. ಹಿಂದಿದ್ದುಕೊಂಡು ಮುಂದೆ ಬಂದವರು ಮಾಡಿಕೊಳ್ಳುತ್ತಿದ್ದಾರೆ ತಮ್ಮ ಮಕ್ಕಳಿಗೂ  ಮೊಮ್ಮಕ್ಕಳಿಗೂ  ಮರಿಮಕ್ಕಳಿಗೂ ಹಿಂದಿನ ಸೀಟು ಪರ್ಮನೆಂಟು. ಸಿ ಪಿ ರವಿಕುಮಾರ್

ಶೋಧ

ಇಮೇಜ್
 ಶೋಧ  ಮೂಲ: ವ್ಯಾಲೆರಿ  ವೇಟ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಕಾಣೆಯಾದಳು ಅಜ್ಜಿ ಕಂಪ್ಯೂಟರ್ ಒಳಗೆ ಸುಳ್ಳು ಹೇಳುತ್ತೇನಾ ನಿಜವಾಗಿ, ನನ್ನಾಣೆ, ಕಂಟ್ರೋಲ್ ಎಂಟರ್ ಒತ್ತಿದಳು ನೋಡಿ ಒಮ್ಮೆಲೇ ಕಣ್ನೋಟಕ್ಕೆ ಆಗಿಬಿಟ್ಟಳು ಕಾಣೆ ನುಂಗಿಬಿಟ್ಟಿತು ಇಡಿಇಡಿಯಾಗಿ ಸಂಪೂರ್ಣ ನೆನೆಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಅಂಟಿಕೊಂಡಿರಬಹುದು ಒಳಗಿರುವ ವೈರಸ್ ಅಥವಾ ವರ್ಮ್ ಯಾವುದಾದರು, ಕೆಡುಕ ಹುಡುಕಿ ನೋಡಿದೆ ರೀಸೈಕಲ್ ಬಿನ್ ಒಳಗೆ ಮತ್ತು ಜಾಲಾಡಿದೆ ಎಲ್ಲಾ ಬಗೆಯ ಕಡತ ಇಂಟರ್ ನೆಟ್ ಕೂಡಾ ಬಳಸಿ ನೋಡಿದ್ದೇನೆ ಕಣ್ಣಿಗೆ ಬೀಳಲಿಲ್ಲ, ಬರೀ ನಿರರ್ಥಕ ದುಡಿತ. ವಿಹ್ವಲ ಸ್ಥಿತಿಯಲ್ಲಿ ನೆನಪಾದನು ಜೀವ್ಸ್  ಇಮೇಲ್ ಕಳಿಸಿದೆ ತಕ್ಷಣ : ಹೇಳು ಮಹರಾಯ ಹೇಗೆ ಶೋಧಿಸಿದರೆ ಸಿಕ್ಕಬಹುದೆಂದು ಆದರೆ ಅವನೂ ತಲೆ ಕೊಡವಿದನು, ಏನು ಅನ್ಯಾಯ ಆನ್ಲೈನ್ ಎಲ್ಲೂ ಕಾಣುತ್ತಿಲ್ಲವೆ? ಹಾಗಾದರೆ  ನೋಡು ಇನ್ ಬಾಕ್ಸ್ ಒಳಗೆ ಇರುವಳೇ ಅಜ್ಜಿ ಕಂಡರೆ ಕಂಟ್ರೋಲ್ ಸಿ ಕಂಟ್ರೋಲ್ ವಿ ಮಾಡಿ  ಕಳಿಸಿಬಿಡು ಮಾರೋಲೆ  ಆಟಾಚ್ಮೆಂಟ್ ಹಚ್ಚಿ.

ಬೆರಳೆಣಿಕೆಯಷ್ಟು

ಇಮೇಜ್
 ಬೆರಳೆಣಿಕೆಯಷ್ಟು ಮೂಲ: ಎಡ್ಗರ್ ಆಲ್ಬರ್ಟ್ ಗೆಸ್ಟ್  ಕನ್ನಡ ಅನುವಾದ : ಸಿ ಪಿ ರವಿಕುಮಾರ್  ಕಿಕ್ಕಿರಿದಿವೆ ಸುಲಭಮಾರ್ಗಗಳೆಲ್ಲ ಸಾಫಾದ ದಾರಿಗಳು ಜನನಿಬಿಡವಾಗಿವೆ ಆಳವಿಲ್ಲದ ಸಣ್ಣಪುಟ್ಟತೊರೆಗಳೆಲ್ಲ  ಕೊಡಮಡಕೆಕುಡಿಕೆ ತುಂಬಿ ಬಡವಾಗಿವೆ  ದೂರದಲ್ಲಿದೆಯಲ್ಲ ಕಲ್ಲು ಬಂಡೆಯದಾರಿ ಏರಿದರೆ ಕಾಣುವುದಲ್ಲ ದೂರದೂರದ ನೋಟ ಅಲ್ಲಿ ಹೋಗುವ ಜನರು ಬೆರಳೆಣಿಕೆಯಷ್ಟು  ಸಿಕ್ಕಲಾರದು ದಾರಿ ಶೋಧಿಸಿದರೂ ಭೂಪಟ. ಸುಗಮವಾಗಿದೆಯೋ ಎಲ್ಲಿ ನಡೆಯುವ ದಾರಿ ಅಲ್ಲಿಗೇ ಮುಗಿಬೀಳುವುದು ಜನತೆ ಸುಲಭ ಒಬ್ಬರ ಹಿಂದಿನ್ನೊಬ್ಬರು  ಸಾಗುವುದು ಜನಪ್ರಿಯ ಹಾದಿಗೆ ಇನ್ನಷ್ಟು ಜನಪ್ರಿಯತೆ. ದಾರಿ ದುರ್ಗಮ ಅಲ್ಲಿ ಹೆಜ್ಜೆ ಇಡಲೂ ಧೈರ್ಯ ಬೇಕೋ ಮಾಡಲು ಕಷ್ಟವೋ ಯಾವ ಕಾರ್ಯ ಪೂರೈಸಿದಾಗ ಅದುವೇ ತಂದುಕೊಡುವುದು ಕೀರ್ತಿ ಯಾರಿಗಿದೆಯೋ ಹಿಂಜರಿಯದೆ ಮುನ್ನಡೆವ ಸ್ಥೈರ್ಯ

ಮರಗಳು

ಇಮೇಜ್
ಮರಗಳು ಮೂಲ: ಫಿಲಿಪ್ ಲಾರ್ಕಿನ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಮರಗಳಲ್ಲಿ ಮತ್ತೆ ಒಡೆಯುತ್ತಿವೆ ಎಲೆ ಏನೋ ಹೇಳಲು ಬಾಯ್ತೆರೆದಂತೆ ತರು. ಕಣ್ತೆರೆದು ಅರಳುತ್ತವೆ ಹೊಸಚಿಗುರು ಅವುಗಳ ಹಸಿರಿನಲ್ಲಿದೆ ನೋವಿನ ಸೆಲೆ  ಮರುವುಟ್ಟು ಪಡೆದು ಅಮರವಾಗುವವೇ ವೃಕ್ಷ? ಜರೆ ಮತ್ತು ಸಾವು ನಮಗೆ ಮಾತ್ರವೇ? ಇಲ್ಲ, ಅವೂ ಸಾಯುತ್ತವೆ! ಬೇಕೇ ಪುರಾವೆ? ಮರದ ಉಂಗುರಗಳಲ್ಲಿದೆ ಅದರ ಆಯುಷ್ಯ ರಹಸ್ಯ. ಇಷ್ಟಾದರೂ ವೈಶಾಖ ಕಾಲಿಟ್ಟಾಗ ಮೈತುಂಬಾ ಹಸಿರು ಹೊದ್ದು ಸಂಭ್ರಮಿಸುವಳು ವೃಕ್ಷಸ್ತ್ರೀ ಪ್ರತಿವರ್ಷ "ಸತ್ತುಹೋಯಿತು ಹಳೆಯ ಸಂವತ್ಸರ!" ಅವಳ ಸಂದೇಶ, "ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿ ಮಾಡಿ ಶುರು!" (ಫಿಲಿಪ್ ಲಾರ್ಕಿನ್ ಒಬ್ಬ ಇಂಗ್ಲಿಷ್ ಕವಿ (೧೯೨೨-೨೦೦೧). ಇವನ ಕವಿತೆಗೂ ಬೇಂದ್ರೆ ಅವರ ಯುಗಾದಿ ಕವಿತೆಗೂ ಇರುವ ಸಾಮ್ಯ ಗಮನಿಸಿ. ಹೊಂಗೆ ಹೂವಿನ ಟೊಂಗೆಯಲ್ಲಿ ಪ್ರತಿವರ್ಷವೂ ವಸಂತದಲ್ಲಿ ಕೇಳಿ ಬರುವ ಸಂಗೀತವನ್ನು ಕೇಳಿದಾಗ, ಬೇವಿನ ಮರದಲ್ಲೂ ಹೂಗಳು ಚಿಗುರಿದಾಗ ಕವಿಯ ಮನಸ್ಸು ಯುಗಾದಿಯ ಚಮತ್ಕಾರದ ಕಡೆಗೆ ಹೊರಳುತ್ತದೆ. ಮರಗಳು ಹೀಗೆ ಮರುವುಟ್ಟು  ಪಡೆದುಕೊಳ್ಳುವುದು ಕವಿಗೆ ಆಶ್ಚರ್ಯ ಎನ್ನಿಸುತ್ತದೆ.  ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ! ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೆ? ಎಂಬ ಬೇಂದ್ರೆ ಅವರ ಪ್ರಶ್ನೆ ಮತ್ತು ಫಿಲಿಪ್ ಲಾರ್ಕಿನ್ ಅವರ "ಮರಗಳು ಹೀಗೆ ಪ್ರತಿವರ್...

ವೃದ್ಧ ನಿರುದ್ವೇಗಿಯ ಪ್ರಾರ್ಥನೆ

ಇಮೇಜ್
  ಮೂಲ: ಎಮಿಲಿ ಬ್ರಾಂಟಿ ಕನ್ನಡಕ್ಕೆ:  ಸಿ ಪಿ ರವಿಕುಮಾರ್  ಸಂಪತ್ತನ್ನು ಕಂಡರೆ ನನಗೆ ಅಷ್ಟಕ್ಕಷ್ಟೇ ಪ್ರೇಮವೆಂದರೆ ನಗುವೆ ತಿರಸ್ಕಾರದ ನಗೆ ಕೀರ್ತಿಗಾಗಿ ಕಾಮಿಸಿದೆನಾದರೂ ಅದು  ಬೆಳಗಾಗ ಲಯವಾಗುವ ಕನಸಿನ ಹಾಗೆ ಈಗ ನಾನು ಪ್ರಾರ್ಥಿಸಲೆಂದು ಬಾಯ್ತೆರೆದರೆ ಆಗ ತುಟಿಗಳ ಮೇಲೆ ಬರುವ ಮಾತೊಂದೇ : ನನಗೀಗ ಕೇಳುವುದೋ ಯಾವ ಹೃದಯದ ತುಡಿತ ಅದನ್ನು ಹಾಗೇ ಉಳಿಸಿ ನೀಡು ಮುಕ್ತಿ ನನಗೆ! ಬಿರುಸಾಗಿ ಉರುಳುತ್ತ ನನ್ನ ದಿನಗಳು ತಮ್ಮ ಗುರಿಯತ್ತ ಧಾವಿಸುತ್ತಿರಲು ನಾನು ಬೇಡುವುದು ಇಷ್ಟೇ ಬದುಕು ಸಾವುಗಳಲ್ಲಿ ನಾನು ಮುಕ್ತಳಾಗಿರುವಂತೆ ಮತ್ತು ಸಹಿಸುವ ಶಕ್ತಿ ನನಗೆ ನೀಡು ಎಂದಷ್ಟೇ.

ಅವರಂತೆ

ಇಮೇಜ್
ಮೂಲ: ಜೆನ್ನಿ ಆಸ್ಬಾರ್ನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಇದೆ ನನ್ನಾತ್ಮದ ಒಳಗೆ ಎಲ್ಲೋ ಒಂದು ಕಡೆ ನಾನು ತುಂಬಲಾರದ ಖಾಲೀ ಸ್ಥಳವೊಂದು ಕಿಟಕಿ ಪಕ್ಕದಲ್ಲಿಟ್ಟ ಖಾಲಿ ಹೂದಾನಿಯ ಹಾಗೆ ಸುಂದರ, ಆದರೆ ತುಂಬಲಾಗದು ಅಲ್ಲಿ ಹೂವನೆಂದೂ ನಾನು ಕಾಯುತ್ತೇನೆ ಕುಳಿತಲ್ಲೇ ಗಮನಿಸುತ್ತಾ ಹಾದುಹೋಗುವ ಪ್ರತಿಯೊಬ್ಬರ ತೂಕ ನನ್ನ ಮನದಲ್ಲಿದೆ ಅವರನ್ನು ಸೇರಿಕೊಳ್ಳುವ ಆಸೆ ತಡೆಯುವುದು ಅವರಂತೆ ಆಗಿಬಿಡುವ ಆತಂಕ

ಫ್ರೊ ಮೆಲ್ವಿನ್ ಬ್ರೂವರ್

 ನಾನು ಪಿಎಚ್ ಡಿ ಮಾಡುತ್ತಿದ್ದಾಗ ಅನೇಕ ಶ್ರೇಷ್ಠ ಅಧ್ಯಾಪಕರ ಪಾಠ ಕೇಳುವ ಮತ್ತು ಕೆಲವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ವಿದ್ಯಾರ್ಥಿಯಾಗಿ ಸೇರಿದ್ದು ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸಿಸ್ಟಮ್ಸ್ ವಿಭಾಗದಲ್ಲಿ ಮತ್ತು  ಕಂಪ್ಯೂಟರ್ ಇಂಜಿನಿಯರಿಂಗ್ ಎಂಬ ಶಾಖೆಯಲ್ಲಿ.  ಶಾಖೆಯಲ್ಲಿದ್ದ ಎಲ್ಲ ಪ್ರಾಧ್ಯಾಪಕರೂ ತಮ್ಮ ತಮ್ಮ ಸಂಶೋಧನಾ ರಂಗಗಳಲ್ಲಿ ಪ್ರಸಿದ್ಧರು. ಪ್ರೊ ಮೆಲ್ವಿನ್ ಬ್ರೂವರ್ ಅವರ ಸಂಶೋಧನಾ ಲೇಖನಗಳನ್ನು ನಾನು ಎಂ ಈ ಅಧ್ಯಯನದ ಸಂದರ್ಭದಲ್ಲಿ ಓದಿಕೊಂಡಿದ್ದೆ. ಅವರ ಜೊತೆಗೆ ಕೆಲಸ ಮಾಡಬೇಕೆಂಬ ಇಚ್ಛೆ ನನ್ನಲ್ಲಿತ್ತು. ನಾನು ಅವರಿಗೆ ಪತ್ರ ಬರೆದು ವಿನಂತಿಸಿಕೊಂಡೆ. ಆಗ ಇಂಟರ್ನೆಟ್ ಇರಲಿಲ್ಲ. ಹೀಗಾಗಿ ಪ್ರಾಧ್ಯಾಪಕರು ಸದ್ಯ ಯಾವ ರಂಗದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದು ಸುಲಭವಾಗಿರಲಿಲ್ಲ. ಪ್ರೊ.ಬ್ರೂವರ್ ವಿಎಲ್ ಎಸ್ ಐ ರಂಗದಲ್ಲಿ ಫಿಸಿಕಲ್ ಡಿಸೈನ್ ಎಂಬ ಕ್ಷೇತ್ರದಲ್ಲಿ ಮಾಡಿದ್ದ ಕೆಲಸ ನನಗೆ ತಿಳಿದಿತ್ತು. ಆದರೆ ನಾನು ಅವರಿಗೆ ಪತ್ರ ಬರೆದಾಗ ಅವರು ಈ ಕ್ಷೇತ್ರದಿಂದ ಮುಂದುವರಿದು ಟೆಸ್ಟಿಂಗ್ ಎಂಬ ಕ್ಷೇತ್ರವನ್ನು  ಪ್ರವೇಶಿಸಿ ಅಲ್ಲಿ ಸಕ್ರಿಯರಾಗಿದ್ದರು! ಹೀಗಾಗಿ ಅವರು ನನಗೆ ಮಾರೋಲೆ ಕಳಿಸಿ "ನಾನು ಈಗ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಕ್ರಿಯನಾಗಿಲ್ಲ.  ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶರ್ಮಾ ಶಾಸ್ತ್ರಿ ಎಂಬುವರಿಗೆ ನಿಮ್ಮ...