ಪೋಸ್ಟ್‌ಗಳು

2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೆಂಕಿ ಮತ್ತು ಪತಂಗ

  ಅದು ಯಾರ ತಪ್ಪೂ ಆಗಿರಲಿಲ್ಲ ಅದು ಎಲ್ಲರ ತಪ್ಪೂ ಆಗಿತ್ತು. ಕ್ಯಾಮೆರಾ ಇದೆಯೆಂದು ಸೆಲ್ಫೀ ತೆಗೆಯುವ ಖಯಾಲಿ ಜಲಪಾತದ ಎದುರು ಮೊಬೈಲ್ ಫೋನ್ ಹಿಡಿದು ನಿಂತವಳು ತನ್ನನ್ನೇ ನೋಡುತ್ತಾ ನೋಡುತ್ತಾ ಹಿಂಜರಿದು ಜಲಸಮಾಧಿಯಾದಳು. ಅಪ್ಪನ ಕಾರ್ ಕೀ ಸಿಕ್ಕ ಸಂಭ್ರಮದಲ್ಲಿ ಹುಡುಗ ಹೊರಟ  ಸ್ನೇಹಿತರ ಜೊತೆಗೆ ಗಾಳಿಯೊಂದಿಗೆ ಮಾತಾಡುತ್ತಾ ಗಾಳಿಯೇ ನಾನು ಚಲಿಸಬಲ್ಲೆ ನಿನಗಿಂತ ವೇಗವಾಗಿ ಎನ್ನುತ್ತಾ ಸಾಗಿ ಯಾವುದೋ ಕ್ಷಣದಲ್ಲಿ ಹಾರಿದ ವಾಯುವಿನಲ್ಲೇ ವಿಲೀನವಾಗಿ. ಹೀರೋ ಎಂದರೆ ಹೀಗಿರಬೇಕು. ಗಾಡಿಯನ್ನು ಹತ್ತಿಸಬೇಕು ಮೆಟ್ಟಿಲುಗಳ ಮೇಲೆ ಮೇಲಿಂದ ಹಾರಿ ಸ್ಲೋ ಮೋಷನ್ನಲ್ಲಿ ವಿಲನ್ ಎದೆಗೆ ಒದೆಯಬೇಕು. ಅಪ್ಪಾ ಹೇಳಬೇಡ ಹಳ್ಳಿಯನ್ನು ಉದ್ಧಾರ ಮಾಡಿದ ಬಂಗಾರದ ಮನುಷ್ಯನ ಕತೆ. ಅವೆಲ್ಲ ಬರೀ ಸುಳ್ಳು. ಯಾರಿಂದಲೂ ಸಾಧ್ಯವಿಲ್ಲ ಹಳ್ಳಿಯನ್ನು  ಉದ್ಧಾರ ಮಾಡುವುದು. ಅಮ್ಮಾ ಹೇಳಬೇಡ ಉಪವಾಸ ಮಾಡಿ ಸರಕಾರವನ್ನು ಬಗ್ಗಿಸಿದ ಮಹಾತ್ಮನ ಕತೆ. ಅದೆಲ್ಲಾ ಯಾರೋ ಕಟ್ಟಿದ ಫೇಕ್ ನ್ಯೂಸ್. ನೂರಾರು ವರ್ಷ ಬೇಕಾಯಿತಾ  ಸ್ವಾತಂತ್ರ್ಯ ಸಂಗ್ರಾಮಕ್ಕೆ! ಮೈ ಗಾಡ್ ಎಷ್ಟು ಬೋರಿಂಗ್. ಏನು ಪ್ರಯೋಜನ ಹಾಗೆ ಬದುಕಿ! ಫಾಸ್ಟ್ ಫಾರ್ವರ್ಡ್ ಮಾಡಬೇಕು. ಫಾಸ್ಟ್ ಮಾಡುತ್ತಾ ಕೂಡುವುದು ಬ್ಯಾಕ್ವರ್ಡ್ ಥಿಂಕಿಂಗ್. ನುಗ್ಗಬೇಕು. ಕಸಿದುಕೊಳ್ಳಬೇಕು. ಬೆಂಕಿಯ ಹತ್ತಿರ ಹೋಗುತ್ತಿತ್ತು ಪತಂಗ. ಬೆಂಕಿಯ ತಪ್ಪೂ ಆಗಿರಲಿಲ್ಲ. ಸುಡುವ ಗುಣವನ್ನು ಕೊಟ್ಟದ್ದು ಪ್ರಕೃತಿ. ಪತಂಗದ ತಪ್ಪ...

ಧೂಳು

ಇಮೇಜ್
 ಮೂಲ: ಡೋರಿಯನ್ ಲಾ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಯಾರೋ ನೆನ್ನೆ ರಾತ್ರಿ ಆಡಿದ ಮಾತು ತಟ್ಟಿತು.  ಆಡಿದ್ದು ಒಂದೆರಡೇ ಆದರೂ ನಿಜ ಹೇಳುತ್ತಿದ್ದರು ಎಂದು ನಾನು ಗುರುತಿಸಿದೆ. ಕೂಡಲೇ ಮೇಲೆದ್ದು ಬರೆದಿಟ್ಟುಕೊಳ್ಳಬೇಕು ಎನ್ನಿಸಿತು ಆದರೆ ತುಂಬಾ ತಡವಾಗಿತ್ತು, ದಣಿವಾಗಿತ್ತು ದುಡಿದು ಇಡೀ ದಿವಸ ತೋಟದಲ್ಲಿ ಕಲ್ಲುಗಳನ್ನು ಜರುಗಿಸುತ್ತಾ. ಈಗ ನನಗೆ ನೆನಪಿರುವುದು ಅದರ ಘಮ ಮಾತ್ರ ಇಲ್ಲ, ಊಟದ ವ್ಯಂಜನದಂತಲ್ಲ,  ಘಾಟು ಅಥವಾ ಸಿಹಿಯಲ್ಲ, ಸಣ್ಣ ಪುಡಿಯಂತೆ, ಧೂಳಿನ ಹಾಗೆ. ಕೇಳಿ ನಾನೇನೂ ಉಬ್ಬಲಿಲ್ಲ ಅಥವಾ ಹೆದರಿ ಕೊಳ್ಳಲಿಲ್ಲ. ನಾನು ಸಂಪೂರ್ಣ ಎಚ್ಚೆತ್ತುಕೊಂಡು  ಗಮನವಿಟ್ಟು ಕೇಳುತ್ತಿದ್ದೆ. ಕೆಲವು ಸಲ ಹಾಗೇ. ದೇವರು ಕಪ್ಪು ರೆಕ್ಕೆಯನ್ನು ತೊಟ್ಟು, ಬೆಳಕಿನಂತೆ ಜಗಜಗಿಸುತ್ತಾ ನಿಮ್ಮ ಕಿಟಕಿಯ ಎದುರು ಬಂದು ನಿಲ್ಲುತ್ತಾನೆ. ಆದರೆ ತೆರೆಯಲು ನಿಮಗೆ ವಿಪರೀತ ದಣಿವು.

ಟೆಲಿಫೋನ್

ಇಮೇಜ್
ಮೂಲ: ಮೆಲ್ ಮೆಕ್ ಮಾಒನ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ೧ ಬೆಳ್ಳಗೆ, ಬೃಹದಾಕಾರ, ಆನೆಯೊಂದು ನಿಲ್ಲಬಹುದಾದಷ್ಟು ದೊಡ್ಡ ಸಂಖ್ಯೆಗಳುಳ್ಳ ಅಪ್ಪನ ಕಡೆಯ ಫೋನ್. ಅದನ್ನು ಅವನು ಬಳಸಿದ್ದು ಅಷ್ಟಕ್ಕಷ್ಟೇ ತಾನು ಮಾತಾಡಬೇಕಾದಾಗ ಮನೆಗೇ ಹೋಗಿ ಮಾತಾಡುವುದು ಅವನ ಪದ್ಧತಿ. ಯಾರೋ ಫೋನ್ ಮಾಡಿದಾಗ ಟಿವಿ ಮೇಲೆ ಕುದುರೆ ರೇಸ್ ನೋಡುತ್ತಾ ಕುಳಿತಿರುತ್ತಿದ್ದ.  ಅಥವಾ ಹೊರಗೆ ಹೊರಡಲು ನಡೆಸುತ್ತಿದ್ದ ಸಿದ್ಧತೆ. ಫ್ರಾನ್ಸ್ ನಲ್ಲಿ ಒಂದು ಸಂಜೆ  ಇದೇ ಫೋನ್ ಬಳಸಿ ಒಮ್ಮೆಲೇ ಕರೆ ಮಾಡಿದ ಸಾಯುವ ಮೂರು ದಿವಸಗಳ ಮುನ್ನ. ನಾನು ಬೇಸಗೆ ರಜಕ್ಕೆ ಬಂದಾಗ ಎಲ್ಲೆಲ್ಲಿ ಹೋಗಬಹುದು ಎಂದೆಲ್ಲಾ ಮಾತಾಡಿದ, ಮುಚ್ಚಿಡಲಾಗದೆ ಉತ್ಸಾಹವನ್ನ. ಈಗ ಅದೇ ಫೋನಿನ ರಿಸೀವರ್ ಹಿಡಿದು ಕೇಳಿಸಿಕೊಂಡಾಗ: ಸ್ಮಶಾನ ಮೌನ. ಅವನು ಕೇಳಿಸಿಕೊಳ್ಳುತ್ತಿರಬಹುದೆಂಬ ಕಲ್ಪನಾಯಾನ.  ನಾನು ಕಲ್ಪಿಸಿಕೊಳ್ಳುತ್ತೇನೆ ಸಂಖ್ಯೆಗಳ ಸರಣಿ. ನೀವು ಕರೆ ಮಾಡಿದ ವ್ಯಕ್ತಿ ವ್ಯಾಪ್ತಿಯ ಹೊರಗಿದ್ದಾರೆ ಎನ್ನುತ್ತದೆ ಅಶರೀರವಾಣಿ. ೨ ಎರಡು ನಿಮಿಷಕ್ಕಿಂತಲೂ ಹೆಚ್ಚು ಮಾತಾಡುವುದಿದ್ದರೆ  ಪತ್ರ ಬರೆಯುವುದೇ ಸರಿ ಎಂದು ಸಿಡಿಮಿಡಿಗೊಳ್ಳುತ್ತಿದ್ದ. ನಾವು ಹದಿಹರೆಯದಲ್ಲಿದ್ದಾಗ ಅವನ ಸಿಡಿಮಿಡಿಗೆ ಹೆದರಿ ಜಗಳವೇತಕ್ಕೆ ವ್ಯರ್ಥ ಎಂದು ನಮ್ಮ ಫೋನ್ ಕರೆಗಳು  ಎಷ್ಟು ಬೇಕೋ ಅಷ್ಟು, ಸಂಕ್ಷಿಪ್ತ. ಈಗ ಅವನೊಂದಿಗೆ ಮಾತಾಡಬೇಕೆಂಬ ಹಂಬಲವಾದಾಗ ಟೆಲಿಪೋನ್ ಕಡೆಗೆ ದಿಟ್ಟಿಸಿ ನೋಡಿ  ಬ...

ಕಾಡುಜೀವಿಗಳ ಶಾಂತಿ

ಇಮೇಜ್
  ಮೂಲ: ವೆಂಡೆಲ್ ಬೆರಿ  ಕನ್ನಡ ಅನುವಾದ: ಸಿ ಪಿ ರವಿಕುಮಾರ್  ಜಗತ್ತಿಗಾಗಿ ಹತಾಶೆ ಬೆಳೆಬೆಳೆದು ಆಕ್ರಮಿಸಿಕೊಂಡಾಗ ಮನವನ್ನು ಏನಾದೀತೋ ನನ್ನ ಬದುಕು, ಮಕ್ಕಳ ಬದುಕೆಂಬ ಭಯಕ್ಕೆ ಇರುಳಿನಲ್ಲಿ ಸಣ್ಣ ಸದ್ದಿಗೂ ಎಚ್ಚರವಾದಾಗ ನಾನು ಮೇಲೆದ್ದು ಹೋಗಿ ಅಡ್ಡಾಗುತ್ತೇನೆ  ಕಾಡು ಬಾತುಕೋಳಿ ತನ್ನ ಚೆಲುವನ್ನು ಹೊದ್ದು ಮಲಗಿರುತ್ತದಲ್ಲ ನೀರಿನಲ್ಲಿ ಮತ್ತು  ಕೊಕ್ಕರೆ ಮೀನು ಹಿಡಿಯುತ್ತದಲ್ಲ, ಅಲ್ಲಿ. ಅಲ್ಲಿ ನಾನು ಅನುಭವಿಸುತ್ತೇನೆ ಕಾಡುಜೀವಿಗಳ ಶಾಂತಿ. ಮುಂಬರುವ ಶೋಕವನ್ನು ನೆನೆದು  ತಳಮಳಗೊಳ್ಳದ ಅವುಗಳ ಸ್ಥಿತಿ. ಸ್ತಬ್ಧ ನೀರಿನ ಉಪಸ್ಥಿತಿಯಲ್ಲಿ ಅರಿವಾಗುತ್ತದೆ ಹಗಲುಗುರುಡು ನಕ್ಷತ್ರಗಳು ಬೆಳಕು ಹಿಡಿದು ಕಾಯುತ್ತಿರುವುದು. ಒಂದಿಷ್ಟು ಹೊತ್ತು  ಜಗತ್ತಿನ ಕೃಪೆಯಲ್ಲಿ ವಿಶ್ರಮಿಸಿದಾಗ ನನಗೆ ದೊರೆಯುತ್ತದೆ ಮುಕ್ತಿ. (ಮುಂದಿನ ಕ್ಷಣವೇ  ಹುಲಿ ಸಿಂಹ ತೋಳ ನರಿ ಮುಂತಾದ ಯಾವುದೋ ಪ್ರಾಣಿ ತನ್ನನ್ನು ಕೊಂದು ತಿನ್ನಬಹುದೆಂಬ ಅರಿವಿದ್ದರೂ ಶಾಂತಿಯಿಂದ ಬದುಕುವ ಜಿಂಕೆ ಮುಂತಾದ ಪ್ರಾಣಿಗಳಿಗೆ ಯಾವ ಆತಂಕವೂ ಇಲ್ಲ. ಅದನ್ನೇ ಕವಿ ಕಾಡು ಜೀವಿಗಳ ಶಾಂತಿ ಎನ್ನುತ್ತಾನೆ.)

ಭರವಸೆ

ಇಮೇಜ್
 ಮೂಲ: ರೋಸ್ ಮೆರಿ ವಾಹ್ತೋಲಾ ಟ್ರಾಮರ್ ಅನುವಾದ: ಸಿ ಪಿ ರವಿಕುಮಾರ್  ಭರವಸೆಯ ಕಿಸೆಗಳಲ್ಲಿವೆ ಸಣ್ಣ ರಂಧ್ರಗಳು ಕೆಳಗೆ ಉದುರುವ  ತುಣುಕುಗಳು ಮೂಡಿಸುತ್ತವೆ ನಮಗೆ ಆತಂಕವಾದಾಗ ಅನುಸರಿಸಲು ದಾರಿ. ಭರವಸೆಯ ಗುಟ್ಟು ಏನೆಂದರೆ ಅದಕ್ಕೆ ಗೊತ್ತೇ ಇಲ್ಲ ಯಾವುದು ಗುರಿ. ಅದಕ್ಕೆ ಗೊತ್ತಿರುವುದು ಇಷ್ಟೇ, ಪ್ರತಿಯೊಂದು ದಾರಿಯ ಪ್ರಾರಂಭವೂ ಒಂದು ಹೆಜ್ಜೆಯ ಮುಂದೆ  ಇನ್ನೊಂದನ್ನು ಇಟ್ಟಾಗ ಎಂದಷ್ಟೇ.

ಹೂರಣದ ಹೋಳಿಗೆ

ಇಮೇಜ್
  ಮೂಲ: ಪಾದ್ರಾಗ್ ಡ್ಯಾಲಿ ಭಾವಾನುವಾದ: ಸಿ ಪಿ ರವಿಕುಮಾರ್ ನಾವು ಏಳುವ ಮುನ್ನವೇ ನೀನು  ಕೆಳಗೆ ತಯಾರಿ ನಡೆಸುತ್ತಿದ್ದದ್ದು ಕೇಳಿಸುತ್ತಿತ್ತು. ಇಡೀ ಬೆಳಗ್ಗೆ  ನಾವು ನೋಡಿದೆವು ನೀನು ಕಣಕ ನಾದುವುದನ್ನು  ಅದರೊಂದಿಗೆ ಪಿಸುಗುಟ್ಟುತ್ತಾ ಮಾತಾಡುವುದನ್ನು. ನಾವು ಕೆಳಗೆ ಇಳಿದು ಬಂದಾಗ ಎಲ್ಲಿ  ನಿನ್ನ ಏಕಾಗ್ರತೆಗೆ ಭಂಗವಾದೀತೋ ಎಂದು ಮೆಲ್ಲನೆ ನಡೆದು ಬಂದೆವು. ನಂತರ ನೀನು ಹೂರಣ ತುಂಬಿದ ಉಂಡೆಗಳನ್ನು ಲಟ್ಟಿಸುವುದು ಕಂಡಿತು ಕಪ್ಪು ಕಲ್ಲಿನ ಮೇಲೆ ತೆಳ್ಳಗೆ. ಅಂಚು ಬರಬಾರದು,  ತೆಳ್ಳಗೆ ಇರಬೇಕು ಹರಿಯಬಾರದು, ನಾಜೂಕು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಸಿದ್ಧವಾಯಿತು. ತುಪ್ಪ, ಹಾಲು, ಸೀಕರಣೆ ಇತ್ಯಾದಿ ಮೊದಲೇ ತಯಾರಾಗಿ ಕಾದಿದ್ದವು. ನಿನ್ನ ಹೊಳೆಯುವ ಕಣ್ಣುಗಳ  ಬೆಳಕಿನಲ್ಲಿ ನಾವು ಮೌನವಾಗಿ ತಿನ್ನುತ್ತಾ ಕುಳಿತೆವು ಎಲ್ಲೋ ಮಣ್ಣಿನಲ್ಲಿ ನೀರು ತೊಟ್ಟಿಕ್ಕುತ್ತಿರುವಾಗ.

ಕೆಲವರಿಗೆ ಇಷ್ಟ ಕವಿತೆ

ಇಮೇಜ್
ಮೂಲ: ವಿಸ್ಲವಾ ಸಿಂಬೋರ್ಸ್ಕಾ ಅನುವಾದ: ಸಿ ಪಿ ರವಿಕುಮಾರ್  ಕೆಲವರಿಗೆ - ಅರ್ಥಾತ್ ಎಲ್ಲರಿಗೂ ಅಲ್ಲ,  ಬಹುಜನರಿಗೂ ಅಲ್ಲ, ಅಲ್ಪ ಸಂಖ್ಯಾತರು. ಶಾಲಾ ಮಕ್ಕಳನ್ನು ಹೊರತು ಪಡಿಸಿ ಏಕೆಂದರೆ ಅವರಿಗೆ ಅದು ಕಡ್ಡಾಯ ಕವಿಗಳನ್ನು ಎಣಿಸಬೇಡಿ, ಹೆಚ್ಚೆಂದರೆ ಸಾವಿರದಲ್ಲಿ ಇಬ್ಬರು. ಇಷ್ಟ - ಇಷ್ಟವೆಂದರೆ ಹೆಚ್ಚೇನೂ ಹೇಳಿದಂತಲ್ಲ ಇಷ್ಟವಾಗುತ್ತದೆ ದಾಳಿಂಬೆ ಹಾಕಿದ ಮೊಸರನ್ನ ಇಷ್ಟವಾಗುವುದು ಹೊಗಳಿಕೆ ಮತ್ತು ನೀಲಿ ಬಣ್ಣ ಇಷ್ಟವಾಗುತ್ತದೆ ಹಳೆಯ ಕಾಲದ ಆಭರಣ ಇಷ್ಟ ಪಡುತ್ತೇವೆ ಮೇಲುಗೈ ಪಡೆದ ಕ್ಷಣ ಮತ್ತು ನಾಯಿಯ ತಲೆಯನ್ನು ನೇವರಿಸುವುದನ್ನ. ಕವಿತೆ - ಆದರೆ ಕವಿತೆ ಎಂದರೆ ಏನು? ಈ ಪ್ರಶ್ನೆಗೆ ಸಿಕ್ಕಿವೆ ಅನೇಕ ಅರೆಬೆಂದ ಉತ್ತರಗಳು ನನಗೂ ಗೊತ್ತಿಲ್ಲ ಸರಿಯಾಗಿ ಗೊತ್ತಿಲ್ಲ ಆದರೂ ಹಿಡಿದುಕೊಂಡಿದ್ದೇನೆ ಹಿಡಿದುಕೊಳ್ಳುವರಲ್ಲ ಮುಗ್ಗರಿಸದ ಹಾಗೆ ಕೈಪಿಡಿಯನ್ನು ಆಸರೆಯಾಗಿ, ಹಾಗೆ.

ಇಷ್ಟರ ನಡುವೆ

ಇಮೇಜ್
 ಇಷ್ಟರ ನಡುವೆ ಮೂಲ: ಟಾಮ್ ಹಿರಾನ್ಸ್ ಇಷ್ಟರ ನಡುವೆ ಅರಳುತ್ತವೆ ಹೂ ಯಥಾಪ್ರಕಾರ ಚಂದ್ರೋದಯ ಸೂರ್ಯೋದಯಕ್ಕಿಲ್ಲ ಸಂಚಕಾರ ಮಕ್ಕಳು ಮುಗುಳ್ನಗುತ್ತವೆ ದೊಡ್ಡದಾಗಿ ನಿಷ್ಕಾರಣ ಮತ್ತು ಅಸಂಭವ ದಾಟಿ ಎರಡು ಹೃದಯಗಳ ಮಿಲನ ಅಪರಿಚಿತರು ಹಂಚಿಕೊಳ್ಳುತ್ತಾರೆ ಕಡ್ಡಿಪೆಟ್ಟಿಗೆ, ನಗೆ  ನೀರಿನ ಮೇಲೆ ಆಡುತ್ತವೆ ಬೆಳಕಿನ ಕೋಲುಗಳು ಮೆಲ್ಲಗೆ ಅನಿರೀಕ್ಷಿತ ಬೀದಿಗಳಲ್ಲಿ ಅರಳುತ್ತದೆ ಔದಾರ್ಯ  ನೆರೆ, ಭೂಕಂಪನಗಳ ನಡುವೆ  ಪುನರ್ವಸತಿ ಕಾರ್ಯ ಬದುಕಿನ ಕಡೆಗೆ ವಾಲುತ್ತದೆ ಜೀವನ ಎಲ್ಲವನ್ನೂ ಸಾವು ತೆಗೆದುಕೊಂಡರೂ ಆಫೋಷನ ನಡುವೆ ಇದ್ದವು ಎಷ್ಟೊಂದು ಅಮೂಲ್ಯ ಕ್ಷಣ ಎಲ್ಲವೂ ಪ್ರಕಾಶಮಾನವಾಗಿ ಜಗಮಗ ನಾವು ಮತ್ತೊಮ್ಮೆ  ನಮ್ಮ ಈ ಜಗ ವನ್ನು ಪ್ರೀತಿಸುವಂತೆ ಇತ್ತು ಜೀವನ.

ಆಲೋಚನೆಗಳು

ಇಮೇಜ್
 ಆಲೋಚನೆಗಳು ಮೂಲ ಕವಿತೆ: ಹೆನ್ರಿ ವಾನ್ ಡೈಕ್  ಅನುವಾದ: ಸಿ ಪಿ ರವಿಕುಮಾರ್ ನಮ್ಮ  ಆಲೋಚನೆಗಳಿಗಿದೆ ಶರೀರ, ರೆಕ್ಕೆ ಮತ್ತು ಶ್ವಾಸ ಅವು ವಸ್ತುಗಳೇ ಎಂಬುದು ನನ್ನ ವಿಶ್ವಾಸ ಕಳಿಸಿದಾಗ ಆಲೋಚನೆಗಳನ್ನು ಜಗತ್ತಿಗೆ ನಾವು ಪರಿಣಾಮಗಳು ಎರಡು: ನಲಿವು ಇಲ್ಲವೆ ನೋವು. ನಮ್ಮ ಮನದಾಳದಲ್ಲಿ ಹುಟ್ಟಿದ ರಹಸ್ಯ ಆಲೋಚನೆ ಹೋಗಿ ಮುಟ್ಟುವುದು ಜಗತ್ತಿನ ದೂರದ ಕೊನೆ ಹೋದ ಕಡೆಗೆಲ್ಲಾ ಅದರ ಹೆಜ್ಜೆ ಗುರುತಿನ ಹಾಗೆ ಶುಭೇಚ್ಛೆಯ ವೃಷ್ಟಿ  ಅಥವಾ ಶಾಪದ ಸುಡುಬೇಗೆ. ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳುತ್ತೇವೆ ಅರಿವಿಲ್ಲದೆ ಇಡುತ್ತಾ ಒಂದೊಂದೇ ಆಲೋಚನೆಯ ಇಟ್ಟಿಗೆ ವಿಶ್ವದ ನಿರ್ಮಾಣವಾಗಿದ್ದೂ  ಹೀಗೇ  ವಿಧಿ ಎಂಬುದು ಇನ್ನೊಂದು ಹೆಸರು ಆಲೋಚನೆಗೆ. ನಿನ್ನ ಭವಿಷ್ಯವನ್ನು ಆಯ್ದುಕೋ. ಅನಂತರ ನಿರೀಕ್ಷಿಸುವುದಷ್ಟೇ ಕೆಲಸ. ಪ್ರೇಮ ಕರೆತರುವುದು ಪ್ರೇಮ, ಕರೆತರುವುದು ದ್ವೇಷವನ್ನು ದ್ವೇಷ 

ಕೃತಕ ಬುದ್ಧಿಮತ್ತೆ ಬಳಸಿ ಲೇಖನ ಬರೆದ ವಿದ್ಯಾರ್ಥಿಗೆ

 ಕೃತಕ ಬುದ್ಧಿಮತ್ತೆ ಬಳಸಿ ಲೇಖನ ಬರೆದ ವಿದ್ಯಾರ್ಥಿಗೆ ಮೂಲ: ಜೋಸೆಫ್ ಫಸಾನೋ ಅನುವಾದ: ಸಿ ಪಿ ರವಿಕುಮಾರ್ ಇಗೋ ನಿನಗೆ ವಾಪಸು ಕಳಿಸುತ್ತಿರುವೆ ನಿನ್ನ ಲೇಖನ. ನನಗೆ ಕೇಳಿಸುತ್ತಿದೆ ನಿನ್ನ ಒದ್ದಾಟ. ಜೀವನ ನಿನಗೆ ಬಹಳ ಕಷ್ಟವಾಗಿರಬೇಕು. ಅಮೂಲ್ಯವಾಗಿದೆ ನಿನಗೆ ಭೂಮಿಯ ಮೇಲಿನ ಒಂದೊಂದೂ ಕ್ಷಣ. ಆದರೆ ನಿನಗೆ ಮುಕ್ತಿ ಬೇಕಾಗಿರುವುದು  ಯಾವುದರಿಂದ ಹೇಳು.  ಜೀವಿಸುವುದರಿಂದಲೇ? ಬದುಕೆಂಬ ಪವಾಡದಿಂದಲೇ? ನೆನಪಿಡು. ಯಾರು ಕೆಲಸವನ್ನು ಪ್ರೀತಿಸುತ್ತಾರೋ ಅವರು ಮಾತ್ರ ಪ್ರೀತಿಗೆ ಅರ್ಹರು.

ಆಂಟಿ ಕಾಗೆ

ಇಮೇಜ್
 ಆಂಟಿ ಕಾಗೆ ಸಿ. ಪಿ. ರವಿಕುಮಾರ್ ಕಾಗಕ್ಕ ಕಾಗಕ್ಕ, ಏನು ತಿನ್ನುತ್ತಿರುವೆ ಕಾಣುತ್ತಿಲ್ಲವೇ, ಕೆಂಪಿರುವೆ. ಕೆಂಪಿರುವೆ ತಿನ್ನುತ್ತಿರುವೆ ಏತಕ್ಕೆ? ಮೈಯಲ್ಲಿ ಹುಷಾರಿಲ್ಲ ಅದಕ್ಕೇ. ಕೆಂಪಿರುವೆ ಏನು ನಿನಗೆ ಔಷಧವೆ?  ನಮಗೆ "ಆಂಟ್" ಇ ಬಯಾಟಿಕ್ ಇದುವೆ. ಏನೋ ತುಂಬಾ ರಹಸ್ಯಮಯವಾಗಿದೆಯಲ್ಲ! ರಹಸ್ಯ: ಇರುವೆಯಲ್ಲಿರುವ ಫಾರ್ಮಿಕ್ ಆಮ್ಲ. ಏನಾಗುತ್ತದೆ ಆಮ್ಲ ಸೇರಿದರೆ ಹೊಟ್ಟೆಯೊಳಗೆ? ಕ್ರಿಮಿ ನಾಶವಾಗಿ ನನಗೆ ಪುನಃ ಚೇತರಿಕೆ. ಕಾಗಕ್ಕ "ಆಂಟಿ" ಅನ್ನಬಹುದೇ ನಿನಗೆ? ನಿನ್ನ ಜೋಕಿಗೆ ನಗು ಬರಲಿಲ್ಲ ನನಗೆ. (ಚಿತ್ರ ಮತ್ತು ಮಾಹಿತಿ ಎರಡೂ ಫೇಸ್ಬುಕ್ ಕೃಪೆ. ಇದನ್ನು ಪುಟ್ಟ ಮಕ್ಕಳಿಗೆ ಹೇಳಿಕೊಡಬಹುದು. ಐದು ನಿಮಿಷದ ನಾಟಕ ಕೂಡಾ ಮಾಡಬಹುದು.)

ನಮ್ಮ ಮಕ್ಕಳು

ನಮ್ಮ ಮಕ್ಕಳು ಮೂಲ: ನಿಕೊಲೆಟ್ ಸೌಡರ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಹೇಗಿರಲಿ ನಮ್ಮ ಮಕ್ಕಳ ಪಾಲನೆ  ಅಂದರೆ ಅವರು ಪ್ರೀತಿಸಲಿ ಯಾರೂ ಪ್ರೀತಿಸದ ವಸ್ತುಗಳನ್ನು ಕೂಡಾ. ಉದಾಹರಣೆಗೆ ಕಾಡು ಸೇವಂತಿಗೆ ಹೂವುಗಳು, ಹರಿದಾಡುವ ಹುಳಹುಪ್ಪಟೆ ಮತ್ತು ಜೇಡ. ಅವರಿಗಿರಲಿ ಗುಲಾಬಿಗೆ ಮುಳ್ಳಿನ ಅಗತ್ಯವಿದೆ ಎಂಬ ಪರಿಜ್ಞಾನ, ಮಳೆಗಾಲದ ದಿನಗಳನ್ನೂ ಬೇಸಗೆಯ ದಿನಗಳಷ್ಟೇ ಆನಂದದಿಂದ ಸ್ವೀಕರಿಸುವ ಸ್ವಭಾವ. ಬೆಳೆದು ದೊಡ್ದವರಾದ ನಂತರ  ಬಂದಾಗ ಒಂದು ದಿನ ಧ್ವನಿ ಇಲ್ಲದವರ ಪರವಾಗಿ ಮಾರಾಡುವ ಸರದಿ ಬರಲಿ ಅವರಿಗೆ ಎಳೆಯ ವಸ್ತುಗಳನ್ನು  ಕಾಪಾಡಿದ ನೆನಪು ಮತ್ತು ಮಾತಾಡಲು ತಾವೇ ತೆರೆಯಲಿ ತುಟಿ.

ಹಕ್ಕುಗಳು

 ಹಕ್ಕುಗಳು  ಮೂಲ: ನಿಕ್ಕಿ ಜಿಯೋವನಿ ಕನ್ನಡಕ್ಕೆ: ಸಿ ಪಿ ರವಿಕುಮಾರ್ ನಾನೊಂದು ಜೇಡವನ್ನು ಕೊಂದುಹಾಕಿದೆ. ಅದೇನೂ ಕಂದುಬಣ್ಣದ ವಿಷಮಯ ಜೇಡವಾಗಿರಲಿಲ್ಲ ಅಥವಾ ಕಪ್ಪು ಬಣ್ಣದ ಬ್ಲಾಕ್ ವಿಡೋ ಕೂಡಾ ಆಗಿರಲಿಲ್ಲ. ನಿಜ ಹೇಳಬೇಕೆಂದರೆ ಅದೊಂದು  ಯಕಶ್ಚಿತ್  ಕಾಗದದಂಥ ಜೇಡವಾಗಿತ್ತು. ನಾನು ಕೈಯಲ್ಲಿ ಪುಸ್ತಕ ಎತ್ತಿಕೊಂಡಾಗ ಅದು ಓಡಿಹೋಗಬೇಕಾಗಿತ್ತು. ಹಾಗೆ ಅವಳು ಓಡಲಿಲ್ಲ  ಹೀಗಾಗಿ ನನಗೆ ಗಾಬರಿಯಾಗಿ ಅವಳನ್ನು ಅಪ್ಪಚ್ಚಿ ಮಾಡಿದೆ. ನನಗೆ ಭಯವಾಯ್ತೆಂದು ಜೀವಿಯೊಂದನ್ನು ಹೊಸಕಿ ಹಾಕುವ ಹಕ್ಕು ನನಗಿಲ್ಲ ಎಂದು ತೋರುತ್ತದೆ.

ಹಿಂದೆ ಬಂದರೆ ಹಾಯಬೇಡಿ

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ  ಅಂತೆಲ್ಲಾ ಹಾಡುಗಳು ಪ್ರಸಾರವಾಗುತ್ತಿದ್ದವು ಹಿಂದೆ. ಅದನ್ನೆಲ್ಲ ಕೇಳಿ ಜನರಿಗೆ  ಮುಂದೆ ಹೋಗೋಣ ಅನ್ನಿಸುತ್ತಿತ್ತು.  ಬಹಳ ಜನರಿಗೆ ಸಿನಿಮಾದಲ್ಲಿ ಮುಂದಿನ ಸೀಟ್  ಆಪ್ಯಾಯವಾಗಿತ್ತು. ಉಳಿದ ದುಡ್ಡಿನಲ್ಲಿ ಗಾಂಧಿಯಂತೆ ಕಳ್ಳೇಕಾಯಿ  ತಿನ್ನಬಹುದಾಗಿತ್ತು. ಬಸ್ಸುಗಳಲ್ಲಿ ತುಂಬಿರುತ್ತಿದ್ದರು ಜನ ಗಿಜಿಗಿಜಿ. ಕಂಡಕ್ಟರ್  ರೇಗುತ್ತಿದ್ದ ಮುಂದೆ ಹೋಗ್ರೀ! ಅವನಿಗೂ ಇತ್ತು ನೀವು ಮುಂದೆ ಬರಬೇಕೆಂಬ ಕಾಳಜಿ. ಈಗ ಮುಂದೆ ಬರಲು ಹಿಂದೇಟು. ಮಕ್ಕಳು ಹಿಡಿಯುತ್ತಾರೆ ಹಿಂದಿನ ಸೀಟು. ಹಿಂದಿದ್ದವರಿಗೆ ಕಾಣುತ್ತಿದೆ ಗಿಲೀಟು. ದಾಟಲು ಹೆದರುತ್ತಿದ್ದಾರೆ ಗೀಟು. ಹಿಂದಿದ್ದುಕೊಂಡು ಮುಂದೆ ಬಂದವರು ಮಾಡಿಕೊಳ್ಳುತ್ತಿದ್ದಾರೆ ತಮ್ಮ ಮಕ್ಕಳಿಗೂ  ಮೊಮ್ಮಕ್ಕಳಿಗೂ  ಮರಿಮಕ್ಕಳಿಗೂ ಹಿಂದಿನ ಸೀಟು ಪರ್ಮನೆಂಟು. ಸಿ ಪಿ ರವಿಕುಮಾರ್

ಶೋಧ

ಇಮೇಜ್
 ಶೋಧ  ಮೂಲ: ವ್ಯಾಲೆರಿ  ವೇಟ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಕಾಣೆಯಾದಳು ಅಜ್ಜಿ ಕಂಪ್ಯೂಟರ್ ಒಳಗೆ ಸುಳ್ಳು ಹೇಳುತ್ತೇನಾ ನಿಜವಾಗಿ, ನನ್ನಾಣೆ, ಕಂಟ್ರೋಲ್ ಎಂಟರ್ ಒತ್ತಿದಳು ನೋಡಿ ಒಮ್ಮೆಲೇ ಕಣ್ನೋಟಕ್ಕೆ ಆಗಿಬಿಟ್ಟಳು ಕಾಣೆ ನುಂಗಿಬಿಟ್ಟಿತು ಇಡಿಇಡಿಯಾಗಿ ಸಂಪೂರ್ಣ ನೆನೆಸಿಕೊಂಡರೆ ಈಗಲೂ ಮೈಯಲ್ಲಿ ನಡುಕ ಅಂಟಿಕೊಂಡಿರಬಹುದು ಒಳಗಿರುವ ವೈರಸ್ ಅಥವಾ ವರ್ಮ್ ಯಾವುದಾದರು, ಕೆಡುಕ ಹುಡುಕಿ ನೋಡಿದೆ ರೀಸೈಕಲ್ ಬಿನ್ ಒಳಗೆ ಮತ್ತು ಜಾಲಾಡಿದೆ ಎಲ್ಲಾ ಬಗೆಯ ಕಡತ ಇಂಟರ್ ನೆಟ್ ಕೂಡಾ ಬಳಸಿ ನೋಡಿದ್ದೇನೆ ಕಣ್ಣಿಗೆ ಬೀಳಲಿಲ್ಲ, ಬರೀ ನಿರರ್ಥಕ ದುಡಿತ. ವಿಹ್ವಲ ಸ್ಥಿತಿಯಲ್ಲಿ ನೆನಪಾದನು ಜೀವ್ಸ್  ಇಮೇಲ್ ಕಳಿಸಿದೆ ತಕ್ಷಣ : ಹೇಳು ಮಹರಾಯ ಹೇಗೆ ಶೋಧಿಸಿದರೆ ಸಿಕ್ಕಬಹುದೆಂದು ಆದರೆ ಅವನೂ ತಲೆ ಕೊಡವಿದನು, ಏನು ಅನ್ಯಾಯ ಆನ್ಲೈನ್ ಎಲ್ಲೂ ಕಾಣುತ್ತಿಲ್ಲವೆ? ಹಾಗಾದರೆ  ನೋಡು ಇನ್ ಬಾಕ್ಸ್ ಒಳಗೆ ಇರುವಳೇ ಅಜ್ಜಿ ಕಂಡರೆ ಕಂಟ್ರೋಲ್ ಸಿ ಕಂಟ್ರೋಲ್ ವಿ ಮಾಡಿ  ಕಳಿಸಿಬಿಡು ಮಾರೋಲೆ  ಆಟಾಚ್ಮೆಂಟ್ ಹಚ್ಚಿ.

ಬೆರಳೆಣಿಕೆಯಷ್ಟು

ಇಮೇಜ್
 ಬೆರಳೆಣಿಕೆಯಷ್ಟು ಮೂಲ: ಎಡ್ಗರ್ ಆಲ್ಬರ್ಟ್ ಗೆಸ್ಟ್  ಕನ್ನಡ ಅನುವಾದ : ಸಿ ಪಿ ರವಿಕುಮಾರ್  ಕಿಕ್ಕಿರಿದಿವೆ ಸುಲಭಮಾರ್ಗಗಳೆಲ್ಲ ಸಾಫಾದ ದಾರಿಗಳು ಜನನಿಬಿಡವಾಗಿವೆ ಆಳವಿಲ್ಲದ ಸಣ್ಣಪುಟ್ಟತೊರೆಗಳೆಲ್ಲ  ಕೊಡಮಡಕೆಕುಡಿಕೆ ತುಂಬಿ ಬಡವಾಗಿವೆ  ದೂರದಲ್ಲಿದೆಯಲ್ಲ ಕಲ್ಲು ಬಂಡೆಯದಾರಿ ಏರಿದರೆ ಕಾಣುವುದಲ್ಲ ದೂರದೂರದ ನೋಟ ಅಲ್ಲಿ ಹೋಗುವ ಜನರು ಬೆರಳೆಣಿಕೆಯಷ್ಟು  ಸಿಕ್ಕಲಾರದು ದಾರಿ ಶೋಧಿಸಿದರೂ ಭೂಪಟ. ಸುಗಮವಾಗಿದೆಯೋ ಎಲ್ಲಿ ನಡೆಯುವ ದಾರಿ ಅಲ್ಲಿಗೇ ಮುಗಿಬೀಳುವುದು ಜನತೆ ಸುಲಭ ಒಬ್ಬರ ಹಿಂದಿನ್ನೊಬ್ಬರು  ಸಾಗುವುದು ಜನಪ್ರಿಯ ಹಾದಿಗೆ ಇನ್ನಷ್ಟು ಜನಪ್ರಿಯತೆ. ದಾರಿ ದುರ್ಗಮ ಅಲ್ಲಿ ಹೆಜ್ಜೆ ಇಡಲೂ ಧೈರ್ಯ ಬೇಕೋ ಮಾಡಲು ಕಷ್ಟವೋ ಯಾವ ಕಾರ್ಯ ಪೂರೈಸಿದಾಗ ಅದುವೇ ತಂದುಕೊಡುವುದು ಕೀರ್ತಿ ಯಾರಿಗಿದೆಯೋ ಹಿಂಜರಿಯದೆ ಮುನ್ನಡೆವ ಸ್ಥೈರ್ಯ

ಮರಗಳು

ಇಮೇಜ್
ಮರಗಳು ಮೂಲ: ಫಿಲಿಪ್ ಲಾರ್ಕಿನ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಮರಗಳಲ್ಲಿ ಮತ್ತೆ ಒಡೆಯುತ್ತಿವೆ ಎಲೆ ಏನೋ ಹೇಳಲು ಬಾಯ್ತೆರೆದಂತೆ ತರು. ಕಣ್ತೆರೆದು ಅರಳುತ್ತವೆ ಹೊಸಚಿಗುರು ಅವುಗಳ ಹಸಿರಿನಲ್ಲಿದೆ ನೋವಿನ ಸೆಲೆ  ಮರುವುಟ್ಟು ಪಡೆದು ಅಮರವಾಗುವವೇ ವೃಕ್ಷ? ಜರೆ ಮತ್ತು ಸಾವು ನಮಗೆ ಮಾತ್ರವೇ? ಇಲ್ಲ, ಅವೂ ಸಾಯುತ್ತವೆ! ಬೇಕೇ ಪುರಾವೆ? ಮರದ ಉಂಗುರಗಳಲ್ಲಿದೆ ಅದರ ಆಯುಷ್ಯ ರಹಸ್ಯ. ಇಷ್ಟಾದರೂ ವೈಶಾಖ ಕಾಲಿಟ್ಟಾಗ ಮೈತುಂಬಾ ಹಸಿರು ಹೊದ್ದು ಸಂಭ್ರಮಿಸುವಳು ವೃಕ್ಷಸ್ತ್ರೀ ಪ್ರತಿವರ್ಷ "ಸತ್ತುಹೋಯಿತು ಹಳೆಯ ಸಂವತ್ಸರ!" ಅವಳ ಸಂದೇಶ, "ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿ ಮಾಡಿ ಶುರು!" (ಫಿಲಿಪ್ ಲಾರ್ಕಿನ್ ಒಬ್ಬ ಇಂಗ್ಲಿಷ್ ಕವಿ (೧೯೨೨-೨೦೦೧). ಇವನ ಕವಿತೆಗೂ ಬೇಂದ್ರೆ ಅವರ ಯುಗಾದಿ ಕವಿತೆಗೂ ಇರುವ ಸಾಮ್ಯ ಗಮನಿಸಿ. ಹೊಂಗೆ ಹೂವಿನ ಟೊಂಗೆಯಲ್ಲಿ ಪ್ರತಿವರ್ಷವೂ ವಸಂತದಲ್ಲಿ ಕೇಳಿ ಬರುವ ಸಂಗೀತವನ್ನು ಕೇಳಿದಾಗ, ಬೇವಿನ ಮರದಲ್ಲೂ ಹೂಗಳು ಚಿಗುರಿದಾಗ ಕವಿಯ ಮನಸ್ಸು ಯುಗಾದಿಯ ಚಮತ್ಕಾರದ ಕಡೆಗೆ ಹೊರಳುತ್ತದೆ. ಮರಗಳು ಹೀಗೆ ಮರುವುಟ್ಟು  ಪಡೆದುಕೊಳ್ಳುವುದು ಕವಿಗೆ ಆಶ್ಚರ್ಯ ಎನ್ನಿಸುತ್ತದೆ.  ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾಲಕೆ! ಒಂದೆ ಒಂದು ಜನ್ಮದಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೆ? ಎಂಬ ಬೇಂದ್ರೆ ಅವರ ಪ್ರಶ್ನೆ ಮತ್ತು ಫಿಲಿಪ್ ಲಾರ್ಕಿನ್ ಅವರ "ಮರಗಳು ಹೀಗೆ ಪ್ರತಿವರ್...

ವೃದ್ಧ ನಿರುದ್ವೇಗಿಯ ಪ್ರಾರ್ಥನೆ

ಇಮೇಜ್
  ಮೂಲ: ಎಮಿಲಿ ಬ್ರಾಂಟಿ ಕನ್ನಡಕ್ಕೆ:  ಸಿ ಪಿ ರವಿಕುಮಾರ್  ಸಂಪತ್ತನ್ನು ಕಂಡರೆ ನನಗೆ ಅಷ್ಟಕ್ಕಷ್ಟೇ ಪ್ರೇಮವೆಂದರೆ ನಗುವೆ ತಿರಸ್ಕಾರದ ನಗೆ ಕೀರ್ತಿಗಾಗಿ ಕಾಮಿಸಿದೆನಾದರೂ ಅದು  ಬೆಳಗಾಗ ಲಯವಾಗುವ ಕನಸಿನ ಹಾಗೆ ಈಗ ನಾನು ಪ್ರಾರ್ಥಿಸಲೆಂದು ಬಾಯ್ತೆರೆದರೆ ಆಗ ತುಟಿಗಳ ಮೇಲೆ ಬರುವ ಮಾತೊಂದೇ : ನನಗೀಗ ಕೇಳುವುದೋ ಯಾವ ಹೃದಯದ ತುಡಿತ ಅದನ್ನು ಹಾಗೇ ಉಳಿಸಿ ನೀಡು ಮುಕ್ತಿ ನನಗೆ! ಬಿರುಸಾಗಿ ಉರುಳುತ್ತ ನನ್ನ ದಿನಗಳು ತಮ್ಮ ಗುರಿಯತ್ತ ಧಾವಿಸುತ್ತಿರಲು ನಾನು ಬೇಡುವುದು ಇಷ್ಟೇ ಬದುಕು ಸಾವುಗಳಲ್ಲಿ ನಾನು ಮುಕ್ತಳಾಗಿರುವಂತೆ ಮತ್ತು ಸಹಿಸುವ ಶಕ್ತಿ ನನಗೆ ನೀಡು ಎಂದಷ್ಟೇ.

ಅವರಂತೆ

ಇಮೇಜ್
ಮೂಲ: ಜೆನ್ನಿ ಆಸ್ಬಾರ್ನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಇದೆ ನನ್ನಾತ್ಮದ ಒಳಗೆ ಎಲ್ಲೋ ಒಂದು ಕಡೆ ನಾನು ತುಂಬಲಾರದ ಖಾಲೀ ಸ್ಥಳವೊಂದು ಕಿಟಕಿ ಪಕ್ಕದಲ್ಲಿಟ್ಟ ಖಾಲಿ ಹೂದಾನಿಯ ಹಾಗೆ ಸುಂದರ, ಆದರೆ ತುಂಬಲಾಗದು ಅಲ್ಲಿ ಹೂವನೆಂದೂ ನಾನು ಕಾಯುತ್ತೇನೆ ಕುಳಿತಲ್ಲೇ ಗಮನಿಸುತ್ತಾ ಹಾದುಹೋಗುವ ಪ್ರತಿಯೊಬ್ಬರ ತೂಕ ನನ್ನ ಮನದಲ್ಲಿದೆ ಅವರನ್ನು ಸೇರಿಕೊಳ್ಳುವ ಆಸೆ ತಡೆಯುವುದು ಅವರಂತೆ ಆಗಿಬಿಡುವ ಆತಂಕ

ಫ್ರೊ ಮೆಲ್ವಿನ್ ಬ್ರೂವರ್

 ನಾನು ಪಿಎಚ್ ಡಿ ಮಾಡುತ್ತಿದ್ದಾಗ ಅನೇಕ ಶ್ರೇಷ್ಠ ಅಧ್ಯಾಪಕರ ಪಾಠ ಕೇಳುವ ಮತ್ತು ಕೆಲವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ನಾನು ವಿದ್ಯಾರ್ಥಿಯಾಗಿ ಸೇರಿದ್ದು ಡಿಪಾರ್ಟ್ಮೆಂಟ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸಿಸ್ಟಮ್ಸ್ ವಿಭಾಗದಲ್ಲಿ ಮತ್ತು  ಕಂಪ್ಯೂಟರ್ ಇಂಜಿನಿಯರಿಂಗ್ ಎಂಬ ಶಾಖೆಯಲ್ಲಿ.  ಶಾಖೆಯಲ್ಲಿದ್ದ ಎಲ್ಲ ಪ್ರಾಧ್ಯಾಪಕರೂ ತಮ್ಮ ತಮ್ಮ ಸಂಶೋಧನಾ ರಂಗಗಳಲ್ಲಿ ಪ್ರಸಿದ್ಧರು. ಪ್ರೊ ಮೆಲ್ವಿನ್ ಬ್ರೂವರ್ ಅವರ ಸಂಶೋಧನಾ ಲೇಖನಗಳನ್ನು ನಾನು ಎಂ ಈ ಅಧ್ಯಯನದ ಸಂದರ್ಭದಲ್ಲಿ ಓದಿಕೊಂಡಿದ್ದೆ. ಅವರ ಜೊತೆಗೆ ಕೆಲಸ ಮಾಡಬೇಕೆಂಬ ಇಚ್ಛೆ ನನ್ನಲ್ಲಿತ್ತು. ನಾನು ಅವರಿಗೆ ಪತ್ರ ಬರೆದು ವಿನಂತಿಸಿಕೊಂಡೆ. ಆಗ ಇಂಟರ್ನೆಟ್ ಇರಲಿಲ್ಲ. ಹೀಗಾಗಿ ಪ್ರಾಧ್ಯಾಪಕರು ಸದ್ಯ ಯಾವ ರಂಗದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯುವುದು ಸುಲಭವಾಗಿರಲಿಲ್ಲ. ಪ್ರೊ.ಬ್ರೂವರ್ ವಿಎಲ್ ಎಸ್ ಐ ರಂಗದಲ್ಲಿ ಫಿಸಿಕಲ್ ಡಿಸೈನ್ ಎಂಬ ಕ್ಷೇತ್ರದಲ್ಲಿ ಮಾಡಿದ್ದ ಕೆಲಸ ನನಗೆ ತಿಳಿದಿತ್ತು. ಆದರೆ ನಾನು ಅವರಿಗೆ ಪತ್ರ ಬರೆದಾಗ ಅವರು ಈ ಕ್ಷೇತ್ರದಿಂದ ಮುಂದುವರಿದು ಟೆಸ್ಟಿಂಗ್ ಎಂಬ ಕ್ಷೇತ್ರವನ್ನು  ಪ್ರವೇಶಿಸಿ ಅಲ್ಲಿ ಸಕ್ರಿಯರಾಗಿದ್ದರು! ಹೀಗಾಗಿ ಅವರು ನನಗೆ ಮಾರೋಲೆ ಕಳಿಸಿ "ನಾನು ಈಗ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಕ್ರಿಯನಾಗಿಲ್ಲ.  ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶರ್ಮಾ ಶಾಸ್ತ್ರಿ ಎಂಬುವರಿಗೆ ನಿಮ್ಮ...

ಭಜಿಸೋ ಮನುಜ, ರಾಮ ಗೋವಿಂದ ಹರಿ

ಮೂಲ - ಸಂತ ಕಬೀರ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಭಜಿಸು ಮನುಜ, ರಾಮ ಗೋವಿಂದ ಹರಿ ಜಪ ತಪ ಸಾಧನ ಏನೂ ಬೇಡದು, ಬೇಡದು ನಿನ್ನ ಸಿರಿ ಸಂತತಿ ಸಂಪದ ಲೋಲುಪನಾಗಿ ಮರೆತು ಹೋದೆ ಗುರಿ ಸ್ಮರಿಸು ರಾಮನನ್ನು ಬರುವ ಮುನ್ನ ಮೃತ್ಯು ಹಾರಿ ಕೇಳಿ ಹೇಳುತಿಹನು ಸಂತ ಕಬೀರ ಸಾರಿ ಸಾರಿ ರಾಮನಾಮ ಹೇಳದ ನಾಲಗೆಗೆ ಮಣ್ಣುಧೂಳೆ ದಾರಿ

ಪುಟ್ಟ ಪುಟ್ಟ ವಸ್ತು

ಇಮೇಜ್
 ಮೂಲ: ಜೂಲಿಯಾ ಫ್ಲೆಚರ್ ಕಾರ್ನಿ ಕನ್ನಡಕ್ಕೆ: ಸಿ ಪಿ ರವಿಕುಮಾರ್  ಪುಟ್ಟ ಪುಟ್ಟ ಹನಿಗಳು ಪುಟ್ಟ ಪುಟ್ಟ ಕಣಗಳು ಕೂಡಿ ಕಡಲು ಆಳ  ಮತ್ತು ನೆಲ ವಿಶಾಲ ಎಣಿಸುತ್ತಿವೆ ಟಿಕಿಟಿಕಿಸುತ  ಗಡಿಯಾರದ ದಂತ  ಕ್ಷಣಕ್ಷಣಗಳು ಸೇರಿಕೊಂಡು ಅಪ್ರಮೇಯ ಅನಂತ!

ಕಥೆ ಮತ್ತು ಕಥೆಗಾರ

ಇಮೇಜ್
ನಾನು ಪಿಎಚ್ ಡಿ ಮಾಡುತ್ತಿದ್ದಾಗ ಕೊನೆಯ ಎರಡು ವರ್ಷ ನನಗೆ ಯಾವ ಕೋರ್ಸ್ ಮಾಡುವ ಅಗತ್ಯ ಇರಲಿಲ್ಲ.  ಎಷ್ಟು ಕೋರ್ಸ್ ವರ್ಕ್ ಮಾಡಬೇಕಾಗಿತ್ತೋ ಅಷ್ಟನ್ನು ಮಾಡಿ ಮುಗಿಸಿದ್ದಾಗಿತ್ತು.  ಕೊನೆಯ ವರ್ಷದಲ್ಲಿ ಒಂದು ಘಟನೆ ನಡೆಯಿತು. ನನ್ನ ಪಿಎಚ್ ಡಿ ಮಾರ್ಗದರ್ಶಕರಾದ ಪ್ರೊಫೆಸರ್ ನನ್ನನ್ನು ಕರೆದು "ನಿನಗೆ ರಿಸರ್ಚ್ ಅಸಿಸ್ಟೆಂಟ್ಶಿಪ್ ಕೊಡಲು ನನ್ನ ಬಳಿ ಈ ಸೆಮಿಸ್ಟರ್ ಹಣ ಇಲ್ಲ" ಎಂದು ತಿಳಿಸಿದರು. ಅದನ್ನು ಹೇಳುವಾಗ ಅವರ ಮುಖದಲ್ಲಿ ನೋವಿತ್ತು. ಅವರ ಅಸಹಾಯಕತೆ ಕಂಡು ನಾನು ಅವರಿಗೆ ಸಮಾಧಾನ ಹೇಳಿ "ಪರವಾಗಿಲ್ಲ, ನೀವು ಯೋಚಿಸಬೇಡಿ" ಎಂದು ಹೇಳಿದರೂ ಮುಂದೆ ಹೇಗೆಂದು ಯೋಚನೆಯಾಯಿತು.  ಆಗ ಯೂನಿವರ್ಸಿಟಿಯಲ್ಲಿ ಗ್ರಾಜುಯೇಟ್ ಅಡ್ವೈಸರ್ ಹುದ್ದೆಯಲ್ಲಿದ್ದ ಬಿಲ್ ಬೇಟ್ಸ್  ನನಗೆ ಪರಿಚಿತರು. ನನ್ನನ್ನು ಅಭಿಮಾನದಿಂದ.ಕಾಣುತ್ತಿದ್ದ ಮನುಷ್ಯ.  ನಾನು ಟೀಚಿಂಗ್ ಅಸಿಸ್ಟೆಂಟ್ ಆಗಿದ್ದಾಗ ನನ್ನ ಬಗ್ಗೆ ಒಳ್ಳೆಯ ಮಾತುಗಳು ವಿದ್ಯಾರ್ಥಿಗಳಿಂದ. ಬರುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು. ಬಿಲ್ ಹಾಸ್ಯಪ್ರಿಯ. ಅವರಿಗೆ ಆಗ ಅರವತ್ತು ದಾಟಿದ ಪ್ರಾಯ ಎಂದು ನನ್ನ ಅಂದಾಜು. ಮಿಲಿಟರಿಯಲ್ಲಿ ಕೆಲಸ ಮಾಡಿ ನಿವೃತ್ತಿ ಪಡೆದು ಈಗ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು.  ಎಲ್ಲರೊಂದಿಗೆ ಬಹಳ ಕಡಿಮೆ ಮಾತು. ಎಷ್ಟು ಬೇಕೋ ಅಷ್ಟು. ಆದರೆ ನನಗೆ ಅವರ ಆಫೀಸಿನಲ್ಲಿ ಸದಾ ಸ್ವಾಗತ! ಹೌ ಆರ್ ಯೂ ಮೈ ಫ್ರೆಂಡ್, ವಾಟ್ ಕ್ಯಾನ್ ಐ ಡೂ...

ತನು ನಿನ್ನದು ಜೀವನ ನಿನ್ನದು - ಎರಡು ರಚನೆಗಳು

ಇಮೇಜ್
"ತನುವು ನಿನ್ನದು ಮನವು ನಿನ್ನದು" ಎಂಬುದು ಕುವೆಂಪು ಅವರ ಕವಿತೆ. ಇದನ್ನು ಅನೇಕ ಗಾಯಕರು ಹಾಡಿದ್ದಾರೆ. ತನು ನಿನ್ನದು ಜೀವನ ನಿನ್ನದೋ ರಂಗ ಎಂಬುದು ಕನಕದಾಸರ ರಚನೆ. ಇದನ್ನೂ ಅನೇಕ ಗಾಯಕರು ಹಾಡಿದ್ದಾರೆ. ವಿಕಿಸೋರ್ಸ್ ಸಂಗ್ರಹದಲ್ಲಿ ಕುವೆಂಪು ಅವರ ಕವಿತೆ ಸಿಕ್ಕಿತು. ಪಾಠದಲ್ಲಿ ಒಂದೂ ತಪ್ಪಿಲ್ಲದೆ ಸಂಗ್ರಹಿಸಿಟ್ಟ ಕನ್ನಡ ಬರಹಗಳು ಅಪರೂಪ. ಕನಕದಾಸರ ಕೃತಿಯನ್ನೂ ಯಾರೋ ಸಂಗ್ರಹಿಸಿದ್ದಾರೆ. ಇದನ್ನು ಟೈಪ್ ಮಾಡುವಾಗ ಸ್ವಲ್ಪ ಜಾಗರೂಕತೆ ವಹಿಸಬೇಕಾಗಿತ್ತು. ದ್ವಿತೀಯಾಕ್ಷರ ಪ್ರಾಸ ಸರಿಯಾಗಿ ಹೊಂದುವಂತೆ ಸಾಲುಗಳನ್ನು ಮುರಿಯಬೇಕಾಗಿತ್ತು.  ಪಂಚೇಂದ್ರಿಯಗಳ ಮೂಲಕವೇ ನಮಗೆ ಜೀವನಾನುಭವ ದೊರಕುವುದು. ಐದು ಇಂದ್ರಿಯಗಳ ಜೊತೆಗೆ ಮನಸ್ಸು ಎಂಬ ಆರನೇ ಇಂದ್ರಿಯವೂ ಇದೆ. ಅದು ನಮಗೆ ಬಾಹ್ಯದಲ್ಲಿ ತೋರುವುದಕ್ಕೂ ಮೀರಿ ಏನನ್ನೋ ತೋರಿಸುತ್ತದೆ.  ನಮ್ಮ ಇಂದ್ರಿಯಾನುಭವಗಳೆಲ್ಲ ದೈವವು ನಮಗೆ ನೀಡಿದ ಉಡುಗೊರೆ ಎಂಬ ಅನುಭೂತಿ ಕೂಡಾ ಇಂಥದ್ದೇ. ಕಾಯಜಪಿತ ಎಂದು ತಮ್ಮ ದೈವ ಕಾಗಿನೆಲೆ ಆದಿಕೇಶವನನ್ನು ಕನಕದಾಸರು ಸಂಬೋಧಿಸುತ್ತಿರುವುದು ಯಾಕೆ? ನಮ್ಮ ಪೂಜಾವಿಧಾನಗಳ ಬಗ್ಗೆ ಅವರು ಹೇಳುತ್ತಿರಬಹುದು. ದೇವರಿಗೆ ಬಣ್ಣಬಣ್ಣದ ಹೂವು, ಘಮಘಮಿಸುವ ಗಂಧ, ರುಚಿಯಾದ ಹಣ್ಣು ಪಕ್ವಾನ್ನಗಳ ನೈವೇದ್ಯ, ಘಂಟಾನಾದ/ಮಂತ್ರಘೋಷ  ಇವೆಲ್ಲ ಅರ್ಪಿಸಿ ಧನ್ಯತೆಯ ಭಾವ ಪಡೆಯುವ ಕಾರಣದಿಂದ ಅವರಿಗೆ ದೇವರು ಕಾಯಜಪಿತ ಎನ್ನಿಸುತ್ತಿರಬಹುದು. ನಮ್ಮ ಆರನೇ ಇಂದ್ರಿಯದಿಂದ...

ಮೊನ್ನೆ ಓದಿದ ಹುಚ್ಚುಚ್ಚಾರ ಕವಿತೆ

ಇಮೇಜ್
ಮೊನ್ನೆ ಓದಿದ ಹುಚ್ಚುಚ್ಚಾರ ಕವಿತೆ ಮೂಲ: ಕೆನ್ ನೆಸ್ಬಿಟ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಒಂದು ಕವಿತೆ  ಓದುತ್ತಾ ಇದ್ದೆ ಮೊನ್ನೆ ಕವಿ ಗೀಚಿದ್ದಾನೆ ತೋಚಿದ ಪದಗಳನ್ನೇ ಒಂದು ಬಾಳೆಕಾಯಿ ಪದವೂ ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟೆ ತಲೆಗೆ ಪೆನ್ಸಿಲ್ ಹೋಗದೆ ಒಂದೊಂದು ಜಿಲೇಬಿ ಸಾಲಿನಲ್ಲೂ ಕೂಡಾ ಸೇರಿಸಿದ್ದಾನೆ ಸಾಲಿಗೆ ಸೇರದ ಒಂದು ಪದ ಇಂಥ ಕವಿತೆಯನ್ನು ನಾನು ಬೆಕ್ಕು ಯಾವತ್ತೂ ಕಾಲ್ಚೆಂಡು ಓದಿರಲಿಲ್ಲ ನಿಮ್ಮಲ್ಲೇನು ಗುಟ್ಟು ಯಾವ ಕವಿ ಬರೆದಿರಬಹುದು ಈ ಕವಿತೆ ಮತ್ಸ್ಯ ಈ ಕವಿಗೆ ಚಮಚ ಏನಾದರೂ ಹುಚ್ಚುಗಿಚ್ಚಾ  ಯಾವ ಉಪ್ಪಿನಕಾಯಿ ವ್ಯಕ್ತಿಗೆ ಇಂಥ ಮಿದುಳು ಇದ್ದೀತು ಸೌಟು ಎಂದು ಯೋಚಿಸಿ ಬಂತು ಅಳು  ಓದುತ್ತಾ ಓದುತ್ತಾ ಮಟರ್ ಪನೀರ್ ಅವರೆಕಾಳು  ಹುಚ್ಚು ಹುಚ್ಚಾಗಿತ್ತು ಉಪ್ಪಿಟ್ಟು ಕವಿತೆಯ ಸಾಲು ಇನ್ನಷ್ಟು ಗೋಳಿಬಜೆ ಕೋಡುಬಳೆ ಗೋಜಲು ಆಗುತ್ತಿತ್ತು ಕವ್ವಾಲಿ ಗಜಲ್ ಗುರುರಾಜುಲು  ಕೊನೆಗೂ ಕಬಡ್ಡಿ ಹಂಚಿಕಡ್ಡಿ ಇನ್ವೆಸ್ಟ್ಮೆಂಟ್ ಬಡ್ಡಿ  ಮುಗಿಸಿದೆ ಓದಿ  ಪ್ಯಾರಸಿಟಮಾಲ್  ಆರ್ಗಾನಿಕ್ ಟೆಡ್ಡಿ ಕೊಡಬೇಕು ಅಗ್ಗಿಷ್ಟಿಕೆ ಚುಚ್ಚುಕ ಕೆಂಪು ಹಣಿಗೆ  ಬರೆ ಬುಡಕ್ಕೆ ಬುಡಬುಡಕೆ ಬೀಡಾ ಬರೆದವನಿಗೆ

ತೆಗೆದೆಸೆಯಿರಿ ಅಲಾರಂ ಗಡಿಯಾರ

ಇಮೇಜ್
 ತೆಗೆದೆಸೆಯಿರಿ ಅಲಾರಂ ಗಡಿಯಾರ ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಅನುವಾದ: ಸಿ ಪಿ ರವಿಕುಮಾರ್  ನನ್ನ ಅಪ್ಪನದು ಯಾವಾಗಲೂ ಒಂದೇ ಹಾಡು "ಯಾರು ಬೇಗ ಮಲಗಿ ಬೇಗ ಏಳುವರೋ ಅವರು ಆರೋಗ್ಯ ಹೊಂದುವರು, ಸಂಪತ್ತು ಗಳಿಸುವರು, ಜಾಣರಾಗುವರು." ರಾತ್ರಿ ಎಂಟಕ್ಕೆಲ್ಲ ದೀಪ ನಂದಿಸಿಬಿಡುತ್ತಿದ್ದರು  ನಮ್ಮ ಮನೆಯಲ್ಲಿ ಯಾವತ್ತೂ ಬೆಳಗ್ಗೆ ಎದ್ದಾಗ ಕಾಫಿ-ಉಪಾಹಾರದ  ಘಮಘಮ ಹರಡಿರುತ್ತಿತ್ತು.  ಈ ನಿಯಮವನ್ನು ಉದ್ದಕ್ಕೂ ಪಾಲಿಸುತ್ತಿದ್ದ ಅಪ್ಪ ಸತ್ತಾಗ ಅವನಿಗಿನ್ನೂ ಚಿಕ್ಕ ವಯಸ್ಸು, ಹಣ ಆಸ್ತಿ ಏನಿಲ್ಲ,ತುಸ್ಸು, ಮತ್ತು ಜಾಣ್ಮೆಯ ಲೆಕ್ಕಾಚಾರದಲ್ಲೂ ಕಮ್ಮಿ ಮಾರ್ಕ್ಸು. ಹೀಗಾಗಿ ನಾನು ಅವನ ಸಲಹೆಯನ್ನು ನಿರ್ಲಕ್ಷಿಸಿದ್ದೇನೆ. ತಡವಾಗಿ ಮಲಗಿ ತಡವಾಗಿ ಏಳುತ್ತೇನೆ. ಹಾಗೆಂದು ನಾನೇನೂ ಜಗತ್ತನ್ನೇ ಗೆದ್ದುಬಿಟ್ಟಿಲ್ಲ, ಆದರೆ ಪಾರಾಗಿರುವೆ ಅದೆಷ್ಟೋ ಟ್ರಾಫಿಕ್ ದಟ್ಟಣೆಗಳಿಂದ ಮತ್ತು ಸಾಧಾರಣವಾಗಿ ಜನರು ಜಾರಿ ಬೀಳುವ ಸಂದರ್ಭಗಳಿಂದ. ಹಾಗೂ ಪರಿಚಯ ಮಾಡಿಕೊಂಡಿದ್ದೇನೆ ಎಷ್ಟೋ ಜನ ವಿಚಿತ್ರ ಮತ್ತು ವಿಸ್ಮಯಕಾರಿ ವ್ಯಕ್ತಿಗಳನ್ನು. ಅವರಲ್ಲಿ ಒಬ್ಬ  ನಾನು. ನನ್ನ ಅಪ್ಪ ಎಂದೂ ಭೇಟಿಯಾಗದವನು.

ಕಷ್ಟವೆನ್ನಿಸಿದರೂ ಬೀಳ್ಕೊಡು

ಇಮೇಜ್
ಕಷ್ಟವೆನ್ನಿಸಿದರೂ ಬೀಳ್ಕೊಡು  ಮೂಲ: ಕ್ರಿಸ್ಟಿನಾ ರೊಸೆಟ್ಟಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನನ್ನ ದಾರಿಯ ಕೊನೆಗೆ ತಲುಪಿದಾಗ ನಾನು ಮುಳುಗಿದಾಗ ನನ್ನ ಬಾಳಿನ ಮೇಲೆ ಭಾನು ದುಗುಡ ತುಂಬಿದ ಕೋಣೆಯಲ್ಲಿ ಸಲ್ಲಿಸದಿರಾವ ವಿಧಿವಿಧಾನ ಆತ್ಮವೊಂದು ಮುಕ್ತವಾಗಿದ್ದಕ್ಕೆ ಏತಕ್ಕೆ ರೋದನ? ನಿನ್ನ ಅನುಭವಕ್ಕೆ ಬರಲಿ ನನ್ನ ಅನುಪಸ್ಥಿತಿ, ಆದರೆ ಸ್ವಲ್ಪ ದಿನ ಮಾತ್ರ, ಅದೂ ಹಾಕದೇ ಅಳುಮೋರೆ. ನಮ್ಮನ್ನು ಬಂಧಿಸಿದ್ದ ಪ್ರೀತಿಯನ್ನು ನೆನೆದು ಕಷ್ಟವೆನ್ನಿಸಿದರೂ ನನ್ನನ್ನು ಬೀಳ್ಕೊಡು  ಏಕೆಂದರೆ ಇದು ಎಲ್ಲರೂ ಕೈಗೊಳ್ಳಲೇಬೇಕಾದ ಪಯಣ ಮತ್ತು ಎಲ್ಲರೂ ಒಬ್ಬಂಟಿಯಾಗೇ ಕೈಗೊಳ್ಳಬೇಕು ಇದನ್ನ ಇದೆಲ್ಲವೂ ಪೂರ್ವಯೋಜನೆಯ ಒಂದು ಅಂಗ ಮನೆಯತ್ತ ಮತ್ತೊಂದು ಹೆಜ್ಜೆ ಹಾಕುವ ಪ್ರಸಂಗ ತಾಳಿಕೊಳ್ಳಲಾರದಷ್ಟು ಹೃದಯವಾದರೆ ಭಾರ ತೆಗೆದುಕೋ ನಮ್ಮ ಸ್ನೇಹಿತರ ಆಧಾರ ನಮ್ಮ ಹುಚ್ಚುತನವನ್ನೆಲ್ಲಾ ನೆನೆದು ನಕ್ಕು ಕಷ್ಟವೆನ್ನಿಸಿದರೂ ಬಿಡಿಸು ಬಂಧನದ ಸಿಕ್ಕು.

ನನ್ನೊಳಗೇ

ಇಮೇಜ್
   ಮೂಲ: ಆಲ್ಬರ್ಟ್ ಕಾಮು ಅನುವಾದ: ಸಿ ಪಿ ರವಿಕುಮಾರ್ ದ್ವೇಷದ ನಡುವೆ ಕಂಡುಕೊಂಡೆನು ನಾನು ಇರುವುದು ಅಪರಾಜಿತ ಪ್ರೀತಿ ನನ್ನೊಳಗೆ ಕಂಬನಿಯ ನಡುವೆ ಕಂಡುಕೊಂಡೆನು ನಾನು ನನ್ನೊಳಗಿದೆ ಸೋಲೊಪ್ಪದ ಮುಗುಳ್ನಗೆ  ಗೊಂದಲದ ನಡುವೆ ಕಂಡುಕೊಂಡೆನು ನಾನು ಸೋಲಿಲ್ಲದ ಶಾಂತಿ ನನ್ನೊಳಗಿರುವುದನ್ನು ನನಗಿದು ಸಂತೋಷದ ವಿಷಯ, ಏಕೆಂದರೆ ಜಗತ್ತು ಎಷ್ಟೇ ಬಲವಾಗಿ ನೂಕಿದರೂ ನನ್ನನ್ನು ನನ್ನೊಳಗೇ ಇದೆ ಅದಕ್ಕಿಂತಲೂ ಬಲಶಾಲಿ, ಅದಕ್ಕಿಂತಲೂ ಸಮರ್ಥವಾದ ಎದುರಾಳಿ.

ನನ್ನ ಬದುಕಿದೆಯಲ್ಲ

ಇಮೇಜ್
ನನ್ನ ಬದುಕಿದೆಯಲ್ಲ ಮೂಲ.: ಲಿಯೋ ಮಾರ್ಕ್ಸ್ ಅನುವಾದ: ಸಿ ಪಿ ರವಿಕುಮಾರ್ ನನ್ನ ಈ ಬದುಕಿದೆಯಲ್ಲ ಅದೊಂದೇ ನನ್ನದೆಂಬುದು, ಮತ್ತು ಆ ಬದುಕು ನಿನ್ನದು. ಈ ಬದುಕಿನ ಬಗ್ಗೆ ನನಗಿರುವ ಆಸೆ ನಿನ್ನದು, ನಿನ್ನದು ನಿನ್ನದು! ನಾನು ನಿದ್ರಿಸಬಹುದು ನಾನು ವಿರಮಿಸಬಹುದು ಸಾವು ಕೂಡಾ ಒಂದು ಮಧ್ಯಂತರ ವಿರಾಮ. ಏಕೆಂದರೆ ಹಸಿರು ಉದ್ದ ಹುಲ್ಲಿನೊಳಗೆ  ಬೆರೆತ ನನ್ನ ಮನಃಶಾಂತಿ ನಿನ್ನದು, ನಿನ್ನದು, ನಿನ್ನದು!

ಒಬ್ಬಂಟಿ

ಇಮೇಜ್
 ಒಬ್ಬಂಟಿ ಮೂಲ: ಎಡ್ಗರ್ ಆಲನ್ ಪೋ  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಬಾಲ್ಯದಿಂದಲೂ ನಾನು ಇತರಿರಿಗಿಂತ ಭಿನ್ನ ನನ್ನ ಕಣ್ಣು ಕಾಣಲಿಲ್ಲ ಅವರು ಕಂಡದ್ದನ್ನ ತರಲಿಲ್ಲ ನಾನು ನನ್ನ ಭಾವಬಂಧ ಸಾರ್ವಜನಿಕ ಸರೋವರದಿಂದ  ನನ್ನ ದುಃಖಗಳ ಮೂಲ ಹುಡುಕಿದರೆ ಅದು ಸಾಮಾನ್ಯ ಸ್ರೋತಕ್ಕಿಂತ ಬೇರೆ ಎಲ್ಲರ ಮನಕ್ಕೂ ಮುದ ತರುವ ಇಂಚರ ನನ್ನೆದೆಯಲ್ಲಿ ತರದು ಯಾವುದೇ ಸಂಚಾರ ಮತ್ತು ಯಾವುದಕ್ಕೆ ಒಲಿಯಿತೋ ನನ್ನ ಮನ ಅಲ್ಲಿ ನನ್ನನ್ನುಳಿದು ಇರಲಿಲ್ಲ ಬೇರೆ ಜನ. ಎಂದೋ ಒಂದು ದಿನ ನನ್ನ ಬಾಲ್ಯದಲ್ಲಿ ಗುಡುಗುಮಳೆ ಜೀವನದ ಮುಂಬೆಳಗಿನಲ್ಲಿ ಒಳಿತು ಕೆಡಕುಗಳ ಆಳಗಳಿಂದೆದ್ದು ಬಂದ ರಹಸ್ಯಮಯ ಬಳ್ಳಿಯದೇ ಇಂದಿಗೂ ಬಂಧ: ಹಿಂಬಾಲಿಸುತ್ತದೆ ನನ್ನನ್ನು ಹೋದಲ್ಲೆಲ್ಲ ಇಣುಕುತ್ತದೆ ಮಳೆಯಲ್ಲಿ, ಇಣುಕುತ್ತದೆ ಹೊಳೆಯಲ್ಲಿ, ಕೆಂಪಾದ ಬೆಟ್ಟಗಳ ತುತ್ತತುದಿಯಲ್ಲಿ ಶಿಶಿರದ ಹೊಂಬೆಳಕಿನಲ್ಲಿ ಮಿಂದೆದ್ದ ಸೂರ್ಯ ಪೂರೈಸಿದಾಗ ನನ್ನನ್ನು ಸುತ್ತುವ ಕಾರ್ಯ ಮಳೆಯ ರಾತ್ರಿ ನನ್ನ ಮೇಲೆ ಕಪ್ಪು ಆಗಸದಲ್ಲಿ ಮಿಂಚಾಗಿ ಹೊಳೆಯುವುದು ಹಿನ್ನೆಲೆಯಲ್ಲಿ ಅಲ್ಲೊಂದು ಕಾರ್ಮೋಡ  ಉರುಳುತ್ತ ಬಂದು ನಿಂತಲ್ಲಿ ಕೋರೆ ದಾಡೆಗಳ ಬಾಯ್ತೆರೆದು ಸ್ವರ್ಗದಲ್ಲಿ ಬೇರೆಲ್ಲವೂ ನೀಲಿಯಾಗಿದ್ದರೂ ಕೂಡಾ ರಾಕ್ಷಸನಂತೆ ನನಗೆ ತೋರುತ್ತದೆ ಮೋಡ.

ಐಸ್ ಕ್ರೀಂ ಅಂಗಡಿಯಲ್ಲಿ

ಇಮೇಜ್
ಐಸ್ ಕ್ರೀಂ ಅಂಗಡಿಯಲ್ಲಿ  ಮೂಲ: ಬ್ರಯಾನ್ ಬಿಲ್ಸ್ಟನ್  ಅನುವಾದ: ಸಿಪಿ ರವಿಕುಮಾರ್ ಅವನೆಂದೂ ಸೇವಿಸದಿದ್ದರೂ ಅಜ್ಜನ ಬಳಿ ಇದ್ದೇ ಇರುತ್ತಿತ್ತು ಜೋಬಿನಲ್ಲಿ ಭದ್ರವಾಗಿ ತಂಬಾಕಿನ ಡಬ್ಬಿಯೊಂದು ಸದಾ ಅಲ್ಲಿ ಏನಿಟ್ಟುಕೊಂಡಿರುತ್ತೀಯಾ ಎಂದು ಅಣ್ಣ ಮತ್ತು ನಾನು ಕೇಳಿದಾಗ ಒಂದಿಷ್ಟು ಮರಳಿದೆ ಎಂದು ಉತ್ತರಿಸಿದ. ತಂಬಾಕಿನ ಡಬ್ಬಿಯಲ್ಲಿ ಯಾಕೆ ಮರಳು ಇಟ್ಟುಕೊಳ್ಳುತ್ತೀ ಎಂದು ಕೇಳಿದರೆ ಇನ್ನೆಲ್ಲಿ ಇಟ್ಟುಕೊಳ್ಳಲಿ ಎಂದು ಪ್ರಶ್ನಿಸಿದ. ಹಾಗಲ್ಲ, ಮರಳನ್ನು ಯಾಕೆ ಇಟ್ಟುಕೊಳ್ಳುತ್ತೀ ಎಂದಾಗ  ಅದು ವಿಶೇಷ, ತಂದಿದ್ದೇನೆ ದೂರದ ಫ್ರಾನ್ಸ್ ದೇಶದಿಂದ. ನಾವು ಡಬ್ಬಿಯಲ್ಲಿ ಇಣುಕಿ ಎಷ್ಟು ದುರುಗುಟ್ಟಿ ನೋಡಿದರೂ ಏನೂ ವಿಶೇಷ ಅನ್ನಿಸಲಿಲ್ಲ ಫ್ರಾನ್ಸ್ ದೇಶದ ಮರಳು. ಅವನನ್ನೇ ಏನು ಇದರ ವಿಶೇಷವೆಂದು ಕೇಳಿದರೆ ಒಂದೊಂದು ಕಣವೂ ಒಬ್ಬ ಸ್ನೇಹಿತನ ಕುರುಹು. ಅಜ್ಜನಿಗೆ ಬಹಳ ಜನ ಇರಬಹುದು ಎಳೆತನದ ಸ್ನೇಹಿತರು, ಬಾಲ್ಯದಲ್ಲಿ ಅವರ ಜೊತೆ ಸಮುದ್ರಕ್ಕೆ ಹೋಗಿದ್ದೆಯಾ? ಹಾಗೇ ಅಂದುಕೊಳ್ಳಿ ಎಂದು ಅಜ್ಜ ಐಸ್ ಕ್ರೀಂ ಕೇಳಿದ ಒಂದು ಸಾದಾ, ಇನ್ನೆರಡರ ಮೇಲೆ ಕೆಂಪು ಸಕ್ಕರೆ ಪಾಕ.

ಹೇಸರಗತ್ತೆ ಪ್ರಶ್ನೆ

ಇಮೇಜ್
ಹೇಸರಗತ್ತೆ ಪ್ರಶ್ನೆ ಮೂಲ: ಶೆಲ್ ಸಿಲ್ವರ್ಸ್ಟೀನ್ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಮೃಗಾಲಯದಲ್ಲಿ ಕಂಡಾಗ  ಹೇಸರಗತ್ತೆ  ಕೇಳಿದೆ ಯಾವ ಬಣ್ಣದ್ದು ನಿನ್ನ ಪಟ್ಟೆ  ಬಿಳಿಮೈ ಮೇಲೆ ಕರಿಬಣ್ಣದ ಪಟ್ಟೆಯೋ  ಕರಿಮೈ ಮೇಲೆ ಬಿಳಿಬಣ್ಣದ್ದು ತೊಟ್ಟೆಯೋ ಹೇಸದೆ ಕೇಳಿತು ಹೇಸರಗತ್ತೆ ನನಗೆ ಮರುಪ್ರಶ್ನೆ ಹೇಳು ನೀನು ದುರಭ್ಯಾಸವುಳ್ಳ ಒಳ್ಳೆ ಹುಡುಗನೆ ಅಥವಾ ಒಳ್ಳೆ ಅಭ್ಯಾಸವಿರುವ ದುಷ್ಟನೋ ಏನು! ಗಲಾಟೆ ಎಬ್ಬಿಸುವ ಹುಡುಗನೋ ಮೂಲತಃ ನೀನು ಶಾಂತವಾಗಿರುವೆಯೋ ಒಮ್ಮೊಮ್ಮೆ ಅಥವಾ ಆಗಾಗ ಗಲಾಟೆ ಮಾಡಿದರೂ ಹೊಂದಿರುವೆಯಾ ಶಾಂತಮೂರ್ತಿ ಎಂಬ ಹೆಮ್ಮೆ ಆಗಾಗ ನಗುವ ಅಳುಬುರುಕನೋ  ಒಮ್ಮೊಮ್ಮೆ ಅಳುವ ನಗೆಬುರುಕನೋ ಒಪ್ಪವಾಗಿಟ್ಟುಕೊಳ್ಳುವೆಯಾ ನಿನ್ನ ವಸ್ತುಗಳನ್ನು ಹರಡಿರುತ್ತೀಯ ಒಮ್ಮೊಮ್ಮೆ ಮಾತ್ರ? ಅಥವಾ ಹರಡಿಕೊಂಡೇ ಇರುವುದೋ ನಿನ್ನ ವಸ್ತುಗಳು ಓರಣಗೊಳಿಸುತ್ತೀಯೋ ಒಮ್ಮೊಮ್ಮೆ ಮಾತ್ರ? ಹೀಗೆ ಕೇಳುತ್ತಲೇ ಇತ್ತು ಹೇಸರಗತ್ತೆ ಒಂದಾದ ಮೇಲೊಂದು ಪ್ರಶ್ನೆ ಕೇಳುವುದಿಲ್ಲ ಇನ್ನುಮುಂದೆ ಹೇಸರಗತ್ತೆಯನ್ನು ಎಂದೂ!

ನನ್ನ ಪುಸ್ತಕಗಳು ಹೋದ ಕಡೆ

ಇಮೇಜ್
ನನ್ನ ಪುಸ್ತಕಗಳು ಹೋದ ಕಡೆ ಮೂಲ: ಡಬ್ಲ್ಯು ಬಿ ಯೇಟ್ಸ್ ಅನುವಾದ: ಸಿ ಪಿ ರವಿಕುಮಾರ್ ನಾನು ಆರಿಸಿಕೊಂಡ ಎಲ್ಲಾ ಪದ ಸಮುಚ್ಚಯ ಮತ್ತು ನಾನು ಬರೆದ ಸಮಸ್ತ ಪದಗಳು ಬಿಚ್ಚಿ ರೆಕ್ಕೆಗಳನ್ನು ಹಾರಬೇಕು ನಿರಾಯಾಸ ವಿರಮಿಸಕೂಡದು ಎಲ್ಲೂ ಹಾರಾಟದ ನಡುವೆ, ಸೇರುವವರೆಗೂ ನಿನ್ನ ದುಃಖಿ ಹೃದಯವನ್ನು. ಅಲ್ಲಿ ನಿನಗಾಗಿ ಹಾಡಬೇಕು ರಾತ್ರಿಯಲ್ಲಿ, ದೂರದಲ್ಲಿ ಎಲ್ಲಿ ಚಲಿಸುವುದೋ ನೀರು ಕಾರ್ಮೋಡದಿಂದ ಕಪ್ಪಾಗಿ ಅಥವಾ ನಕ್ಷತ್ರದೀಪ್ತವಾಗಿ.

ಕಡಲ ಕಿನಾರೆಯಲ್ಲಿ

ಇಮೇಜ್
 ಕಡಲ ಕಿನಾರೆಯಲ್ಲಿ ಮೂಲ: ರಾಬರ್ಟ್ ಲೂಯಿ ಸ್ಟೀವನ್ಸನ್ ಅನುವಾದ: ಸಿ ಪಿ ರವಿಕುಮಾರ್ ಕಡಲ ಕಿನಾರೆಗೆ ಹೋಗಿದ್ದೆ ನಾನು ಮರದ ಚುಚ್ಚುಕವನನ್ನು ಕೈಯಲ್ಲಿ ಹಿಡಿದು ಮರಳನ್ನು ಅಗೆದಗೆದು ತೆಗೆದೆ ಹೊರಗೆ. ಅಗೆದಲ್ಲಿ ಒಂದೊಂದು ಮರಳಿನ ಬಟ್ಟಲು, ಒಂದೊಂದರಲ್ಲೂ ಬಂದುಬಿಟ್ಟಿತು  ಕಡಲು, ಇನ್ನು ಬಾರಲು ಸಾಧ್ಯವಾಗದವರೆಗೆ.

ಕಾಫಿ ಬಂತು ಕಾಫಿ

ಇಮೇಜ್
ಮೂಲ: ಈ ಎಲ್ ಸಿಲ್ವೆಸ್ಟರ್ ಅನುವಾದ: ಸಿ ಪಿ ರವಿಕುಮಾರ್ ಪರಿಮಳ ತರುವಳು ಕಾಫಿಯ ಕಿತ್ತಲಿ, ಹೊಮ್ಮುವ ಬಿಸಿಬಿಸಿ ಕಾಫಿ ಹೊಗೆ! ತರುವಳು ಹರಿಣಿ ಹಾಲಿನ ಗಿಂಡಿ, ನಗುತಿದೆ ನೊರೆಹಾಲು ಮುಗುಳುನಗೆ! ಗಾಜಿನ ಬಟ್ಟಲು ತಂದಳು ಕಮಲಾ ನೋಡಿರಿ ಕಿಣಿ ಕಿಣಿ ಎನಿಸುತ್ತಾ! ಫಳ ಫಳ ಹೊಳೆಯುವ ಚಮಚದ ಗೊಂಚಲು ತಂದಳು ನೋಡಿ ಚಾರುಲತಾ! ಎಲ್ಲರಿಗಿಂತ ಕೊನೆಗೆ ಬಂದಿತು ನಮ್ಮ ಪುಟ್ಟಿ ತೂರಾಡುತ್ತಾ ಸಿಹಿಯಲ್ಲವೇ  ನೀನೆಲ್ಲರಿಗಿಂತ, ಸಕ್ಕರೆ ತಂದೆಯಾ, ಬಾ ಪುಟ್ಟಾ !

ಕುಂಭದ ಹಲವು ಮುಖಗಳು

ಇಮೇಜ್
ಕುಂಭದ ಹಲವು ಮುಖಗಳು ಸಿ ಪಿ ರವಿಕುಮಾರ್ ೧ ಪ್ರತಿದಿನವೂ ಓದುತ್ತಾರೆ  ಪ್ರತಿದಿನವೂ ನೋಡುತ್ತಾರೆ  ಕೋಟ್ಯಂತರ ಜನ. ಮುದುಡಿದೆ ಮನ ತಾವು ಹೋಗಲಾರದ ಮಹಾಕುಂಭಕ್ಕೆ ತುಡಿದು. ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು ಎಂದು ನಿಡುಸುಯ್ಯುತ್ತಾರೆ ಹೇಗೆ ಹೋಗುವುದು ಅಲ್ಲಿಗೆ ದೂರದ ದಿಲ್ಲಿಗೆ ಇರಲು ಎಲ್ಲಿ ಸ್ಥಳ ಯೋಚಿಸಿ ವ್ಯಾಕುಲ ಹೋಗಲಾರದು ಮಹಾಕುಂಭಕ್ಕೆಂದು ಮಿಡಿದು. ಕಟ್ಟಿ ಹಾಕಿದ್ದಾರೆ ಯಾರೋ ಕಂಭಕ್ಕೆ ಹಿಡಿದು ಎಂದು ನಿಡುಸುಯ್ಯುತ್ತಾರೆ. ಪುಣ್ಯವಂತರು ಹೋಗಿ ಬಂದರು ಅಲ್ಲಿಂದ ಗಂಗೆ ತಂದರು ಪಾಪಿಗೆ ಇಷ್ಟೇ ಪ್ರಾಪ್ತಿ ಇಷ್ಟೇ ನಮ್ಮ ವ್ಯಾಪ್ತಿ ಶಿವರಾತ್ರಿ ಜಾಗರಣೆ ಉಪವಾಸ ಪಾರಣೆ ಡೊಂಕು ಮಣ್ಣು ನೆಲಕ್ಕೆ ಸಗಣಿ ಸಾರಣೆ ಎಂದು ಹತಾಶರಾಗುತ್ತಾರೆ. ೨ ಮೇಳಕ್ಕೆ ಬಂದಿಳಿದ ಜನ ಭದ್ರಮಾಡುತ್ತಾರೆ ಜೋಬಿನ ಧನ ಕಳೆದುಹೋಗುವ ಭಯ ಭದ್ರವಾಗಿ ಹಿಡಿದು ಕೈಯ ಮುಳುಗಿ ಏಳುತ್ತಾರೆ ಮೂಗು ಮುಚ್ಚಿಕೊಂಡು ಹಣೆಗೆ ವಿಭೂತಿ ಹಚ್ಚಿಕೊಂಡು ಗೆದ್ದೆವು ಎಂದು ಬೀಗುತ್ತಾರೆ ಇಲ್ಲಿ ನಿಲ್ಲಿ ಬಂದು ಹತ್ತಿರ ಸರಿಯಾಗಿ ಉಟ್ಟುಕೊಳ್ಳಿ ಧೋತರ ತೆಗೆಯುತ್ತೇನೆ ಚಿತ್ರ, ನಗಬೇಕು, ಹಾಗೇಕೆ ಗಂಭೀರವಾಗಿರಬೇಕು ಎಲ್ಲರಿಗೂ ಸಿಕ್ಕುವುದೇ ಇಂಥ ಮಹಾಪ್ರವಾಸ ವಿಮಾನದಲ್ಲಿ ಕೂತು ಹೀಗೆ ನಿರಾಯಾಸ ಎಂದು ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ ಅಷ್ಟೆಲ್ಲಾ ಕೋಟಿ ಹಣ  ಗಳಿಸಿ ಏನು ಪ್ರಯೋಜನ ಅಮೇರಿಕಾದಲ್ಲಿ ಸಿಕ್ಕುವುದೇ ಮಹಾಕುಂಭ ಡಿಸ್ನಿ ಲ್ಯಾಂಡ್, ಲೇಕ್ ಟಾಹೋ ಅಂತೆಲ್ಲಾ ಜಂ...

ಹಳದಿ ಇಟ್ಟಿಗೆಗಳ ರಸ್ತೆ

ಇಮೇಜ್
ಹಳದಿ ಇಟ್ಟಿಗೆಗಳ ರಸ್ತೆ ಮೂಲ ಹಾಡು: ಬರ್ನಾರ್ಡ್ ಟಾಪಿನ್ ಮತ್ತು ಎಲ್ಟನ್ ಜಾನ್ ನೀನು ಬರುವುದು ಯಾವಾಗ? ಯಾವಾಗ ನೀನು ಬಂದಿಳಿಯುವುದು? ನಾನು ಹೊಲದಲ್ಲೇ ಇರಬೇಕಾಗಿತ್ತು ಅಪ್ಪನ ಮಾತು ಕೇಳಬೇಕಾಗಿತ್ತು ನೀನು ನನ್ನನ್ನು ಸದಾಕಾಲ ಹಿಡಿದಿಡಲಾರೆ ನಾನೇನೂ ನಿನಗೆ ಬರೆದುಕೊಟ್ಟಿಲ್ಲ  ನಿನ್ನ ಗೆಳೆಯರು ತೆರೆದು ನೋಡಲು ನಾನೊಂದು ಉಡುಗೊರೆಯಲ್ಲ ಈ ಹುಡುಗನದು ಶೋಕಗೀತೆ ಹಾಡುತ್ತಾ  ಕೂಡುವ ವಯಸ್ಸಲ್ಲ ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ ನೀನು ಪೆಂಟ್ ಹೌಸಿನಲ್ಲಿ ನನ್ನನ್ನು ನೆಡಲಾರೆ ಇಗೋ ಮರಳುತ್ತಿರುವೆ ನನ್ನ ನೇಗಿಲಿಗೆ. ಮರಳುತ್ತಿರುವೆ ನಾನು ಗೂಬೆಗಳ ಗುಟುರಿಗೆ ಮರಳುತ್ತಿರುವೆ ನಾನು ಕಪ್ಪೆಗಳ ವಟರಿಗೆ  ಹಳದಿ ಇಟ್ಟಿಗೆಗಳ ರಸ್ತೆಗಳ ಆಚೆಗಿದೆ  ನನ್ನ ಭವಿಷ್ಯವೆಂದು ನಾನು ನಿರ್ಧರಿಸಿರುವೆ. ನೀನು ಏನು ಮಾಡಬಹುದೆಂದು ಯೋಚಿಸುತ್ತೇನೆ. ವಿಮಾನವನ್ನು ಹೊಡೆದು ಉರುಳಿಸುತ್ತೀಯ ತಾನೇ? ಒಂದೆರಡು ಪೆಗ್ ವೋಡ್ಕಾ ಮತ್ತು ಟಾನಿಕ್  ಮತ್ತೆ ಮೇಲೆದ್ದು ನಿಲ್ಲಲು ನಿನಗೆ ಇಷ್ಟು ಸಾಕು ನನ್ನ ಬದಲಿಗೆ ಹಾಕಿಕೊಳ್ಳುವೆ ಯಾರನ್ನೋ ಬೇರೆ ನನ್ನಂಥವರು ಬೇಕಾದಷ್ಟು ಜನ ಸಿಕ್ಕುತ್ತಾರೆ ಬಿಡಿಗಾಸಿಗೂ ಗತಿ ಇಲ್ಲದ ಬೀದಿನಾಯಿಗಳು ನೆಲದ ಮೇಲೆ ಬಿದ್ದ ನಿನ್ನಂಥ ಚೂರುಪಾರನ್ನು ಹುಡುಕುವವರು ಹೀಗಾಗಿ ಇದೋ ವಿದಾಯ ಹಳದಿ ಇಟ್ಟಿಗೆ ರಸ್ತೆಗೆ ಎಲ್ಲಿ ಸಮಾಜದ ನಾಯಿಗಳು ಊಳಿಡುತ್ತವೋ ಅಲ್ಲಿಗೆ...

ಗ್ರಂಥಾಲಯ

 ಗ್ರಂಥಾಲಯ ಮೂಲ ಕವಿತೆ: ಆಲ್ವಿ ಗ್ಯಾಲಘರ್ ಅನುವಾದ: ಸಿ ಪಿ ರವಿಕುಮಾರ್ ಅವಳು ನಮ್ಮನ್ನು ಇಲ್ಲೇಕೆ ಕರೆತರುತ್ತಿದ್ದಳೋ ಪ್ರತಿದಿನ ಅಷ್ಟೊಂದು ಆಸ್ಥೆಯಿಂದ. ಅವಳಾಗ ಯುವತಿ, ಸಮಾಜದಲ್ಲಿ ಹಿಂದೆ ಬಿದ್ದವಳು, ಆದರೆ ನಾವು ಬದುಕುತ್ತಿದ್ದ ಬದುಕಿಗಿಂತಲೂ ಭಿನ್ನವಾದ ಬದುಕಿನ ವಿವರಗಳು ಈ ಪುಸ್ತಕಗಳಲ್ಲಿ ಇದ್ದವೆಂದು ಅವಳಿಗೆ ತಿಳಿದಿತ್ತು.  ತಪ್ಪಿಸಿಕೊಳ್ಳುವ ಮಾರ್ಗ ತೋರುವುದು ಮಾತ್ರ ಕೆಲವರಿಂದ ಸಾಧ್ಯವೇನೋ. ಹಾಗೂ ಅಷ್ಟು ಸಾಕೆಂಬ ತಿಳಿವಳಿಕೆಯೇ ಕ್ಷಮೆಯೇನೋ. ನೋಡಿ, ನಾನು ಮೂವತ್ತು ವರ್ಷ ಓದಿ ಇಲ್ಲಿಗೆ ತಲುಪಿರುವೆ. ಪುಸ್ತಕಗಳಿಂದ ಕಟ್ಟಿಕೊಂಡ ಬದುಕು. ನನ್ನನ್ನು ನಾನು ಒಳಗಿನಿಂದ ತಳಕಂಪಳಕ ಮಾಡಿಕೊಂಡೆ. ಹಾಗಂತ  ಯಾರೂ ಸಾಯಲಿಲ್ಲ. ಯಾರ ಬೆರಳಿಗೂ ಚುಚ್ಚಿದ ಗಾಯ ಆಗಲಿಲ್ಲ. ಇದನ್ನು ಕಲ್ಪಿಸಿಕೊಳ್ಳಿ. ಹಿಂದೊಮ್ಮೆ ನನಗೆ ಮಾತಾಡಲು ಆಗುವುದೋ ಇಲ್ಲವೋ ಎಂಬ ಆತಂಕದಲ್ಲಿ ನಾನು ಇರುತ್ತಿದ್ದೆ. ನಾನು ಹೇಳಿದ್ದಕ್ಕೂ  ಬೇರೆಯವರು ಕೇಳಿದ್ದಕ್ಕೂ ನಡುವೆ ಇರುತ್ತಿತ್ತು ಒಂದು ಗೋಡೆ. ಕಾಗದಕ್ಕೆ ಲೇಖನಿ ಹಚ್ಚುವ ತನಕ ಆಗುತ್ತಲೇ ಇರಲಿಲ್ಲ ನನ್ನ ಕೈಯಲ್ಲಿ ಅನುವಾದ ಕಾರ್ಯ. ಆಗ ಎದುರಾಗಿದ್ದು ನನ್ನ ತಾಯಿನುಡಿ. ನಾನು ನನ್ನ ಜೀವವನ್ನು ಕೆಳಗಿಟ್ಟು ಹೊದ್ದಿಕೆಗಳ ಕೆಳಗೆ ನಡೆದು ಸಾಗಿದೆ ಇನ್ನೊಂದರ ಕಡೆಗೆ.

ಬರವಣಿಗೆ

 ಮೂಲ: ಕ್ರಿಸ್ಟೊಫರ್ ಸೆಕ್ಸ್ಟನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್ ಬರವಣಿಗೆ ಎಂದರೆ ಸಾಮಾನ್ಯವೆಂದು ತಿಳಿಯದಿರಿ ಅದು ಚರ್ಮವನ್ನು ಸ್ಪರ್ಶಿಸದೇ ಅಪರಿಚಿತನ ಆತ್ಮವನ್ನು ಚುಂಬಿಸುವ ಪರಿ, ಎಂದೂ ಸಂಧಿಸದ ಹೃದಯಗಳ ಮೇಲೆ ಹೆಜ್ಜೆ ಗುರುತುಗಳನ್ನು ಮೂಡಿಸುವ ಕಲೆ, ಜಗತ್ತಿನ ಬಿರುಕುಗಳಲ್ಲಿ ಇಣುಕಿ  "ನೀನು ಒಬ್ಬಂಟಿಯಲ್ಲ" ಎಂದು ಪಿಸುಗುಟ್ಟು ಎಲ್ಲೋ ಯಾರೋ ಒಬ್ಬರು ಅದರ ಪ್ರತಿಧ್ವನಿ ಕೇಳಿಸಿಕೊಳ್ಳುವರೆಂಬ ವಿಶ್ವಾಸ.

ವ್ಯೋಮದಲ್ಲೊಂದು ಹಾಡು

ಇಮೇಜ್
 ವ್ಯೋಮದಲ್ಲೊಂದು ಹಾಡು ಮೂಲ:  ಏಡ್ರಿಯನ್ ಮಿಚೆಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಮಾನವನು ಹಾರಿ ಆಕಾಶದಾಚೆಗೆ ಹೋದ ಘಳಿಗೆ ಹಿಂತಿರುಗಿ ನೋಡಿದನು ಭೂಮಿಯ ನೀಲ ಕಣ್ಣೊಳಗೆ ನಿನ್ನ ಕಣ್ಣುಗಳೇಕೆ ಕಡುನೀಲಿ ಎಂದು ಕೇಳಲು ಉತ್ತರ ಬಂತು: ಕಣ್ಣೀರು ತುಂಬಿರುವ ಕಡಲು  ಕಡಲಿನಲ್ಲಿ ಏಕಿದೆ ಅಷ್ಟೊಂದು ಕಣ್ಣೀರು? ನಾನು ಅತ್ತಿದ್ದೇನೆ ಸಂವತ್ಸರ ಸಹಸ್ರಾರು. ವ್ಯೋಮದಲ್ಲಿ ಸಾಗುತ್ತಾ ಏಕೆ ಕಣ್ಣೀರು ಹಾಕುವೆ? ಏಕೆಂದರೆ ನಾನು ಮಾನವಕುಲಕ್ಕೆ ತಾಯಾಗಿರುವೆ.

ಬೇಕಾದಷ್ಟು

ಇಮೇಜ್
 ಬೇಕಾದಷ್ಟು ಮೂಲ: ಏಮಿ ಶ್ಮಿಟ್  ಅನುವಾದ: ಸಿ ಪಿ ರವಿಕುಮಾರ್ ಕೇಕ್ ತಯಾರಿಸಲು ಕಿತ್ತಳೆಯನ್ನು ಹೆರೆಯುವಾಗ ಒಂಟಿತನ ಬಾಧಿಸುವುದು ಸಾಧ್ಯವಿಲ್ಲ ಯಾರನ್ನೂ. ಮೆತ್ತನೆಯ ಸಿಪ್ಪೆಯನ್ನು ಉಜ್ಜಿದಾಗ ಮಣೆಗೆ  ಇಡೀ ಕೋಣೆಯನ್ನು ತುಂಬಿಕೊಳ್ಳುವುದು ಹಣ್ಣು. ಸುತ್ತಲೂ ಒಮ್ಮೆ ನೋಡಿಕೊಳ್ಳಿ: ಅಗತ್ಯಕ್ಕಿಂತಲೂ ಹೆಚ್ಚೇ ಇದೆ ನಿಮ್ಮಲ್ಲಿ ಎಲ್ಲಾ. ಅದು ಸದಾಕಾಲವೂ ಹಾಗೇ ಇತ್ತು, ಇದುವರೆಗೂ ಮನವರಿಕೆ ಆಗಿರಲಿಲ್ಲ.

ಆಮ್ಹರ್ಸ್ಟ್ ೧೯೧೮

 ಆಮ್ಹರ್ಸ್ಟ್ ೧೯೧೮ ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ನನ್ನ ಮುಖದ ಮೇಲೆ ಇಂದು ಧೂಳಿನ ಸಿಂಚನ ಆಗುವ ಕ್ಷಣದಲ್ಲಿ ಕಂಡಿತು ನನಗೊಂದು ಸ್ವಪ್ನ. ಮರುಕಳಿಸಿದ ಕನಸಿನಲ್ಲಿ ನಾನು ಕಂಡದ್ದು ಏನು - ಬಾಲಕನಾಗಿದ್ದೆ, ಆಟದಲ್ಲಿ ತೊಡಗಿದ್ದೆ ನಾನು. ವಿಚಿತ್ರವೆಂದರೆ ಅಂದಿಗಿಂತ ಹೆಚ್ಚೇನೂ ದುಃಖಿಯಾಗಿರುವಂತೆ ತೋರಲಿಲ್ಲ ನಾನು - ಎಲ್ಲವೂ ಯಥಾಪ್ರಕಾರ - ನಾನು  ದಾರಿಯಲ್ಲಿ ಸಾಕಷ್ಟು ಮುಂದೆ ಬಂದಿದ್ದೇನೆ ಆದರೂ  ಅದೇ ಕನಸು ಪುನರಾವರ್ತನೆ.

ತುದಿಗಾಲಿನ ಮೇಲೆ ನಿಂತವನು

ಇಮೇಜ್
  ತುದಿಗಾಲಿನ ಮೇಲೆ ನಿಂತವನು ಭದ್ರವಾಗಿ ನಿಲ್ಲಲಾರ ರಭಸದಲ್ಲಿ ಮುನ್ನುಗ್ಗುವವನು  ಹೋಗಲಾರ ಹೆಚ್ಚು ದೂರ ಮಂದಗೊಳಿಸುವನು ತನ್ನದೇ ಪ್ರಭೆಯನ್ನು  ಹೊಳೆಯಲು ಪ್ರಯತ್ನಿಸಿದವನು ತನ್ನ ನೈಜ ಸ್ವರೂಪವನ್ನು ಅರಿಯಲಾರ  ತನ್ನನ್ನೇ ಬಣ್ಣಿಸುವವನು ಪರರ ಮೇಲೆ ಅಧಿಕಾರ ಹೊಂದಿದವನು ತನ್ನ ಮೇಲೆ ನಿಯಂತ್ರಣ ಸಾಧಿಸಲಾರ ತನ್ನ ಕೆಲಸಕ್ಕೆ ಸದಾ ಅಂಟಿಕೊಂಡವನು ಬಾಳಬಲ್ಲ ಏನನ್ನೂ ಸೃಷ್ಟಿಸಲಾರ ಡಾವೋದೊಂದಿಗೆ ಸಾಧಿಸಬೇಕೆಂದರೆ ಸಾಮರಸ್ಯ ಸುಮ್ಮನೆ ನಿನ್ನ ಕೆಲಸ ಮಾಡಿ ಬಿಟ್ಟುಬಿಡೋ ಮನುಷ್ಯ. ಮೂಲ: ಲಾವೋ ತ್ಸು  ಅನುವಾದ: ಸಿ ಪಿ ರವಿಕುಮಾರ್

ಚಿನ್ನ

ಇಮೇಜ್
 ಚಿನ್ನ ಮೂಲ: ರಾಬರ್ಟ್ ಫ್ರಾಸ್ಟ್ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ನಿಸರ್ಗದ ಮೊದಲ ಹಸಿರು ಹೊಂಬಣ್ಣದ್ದು, ಹಿಡಿದಿಡಲು ಅವಳಿಗೆ ಅತ್ಯಂತ ಕಷ್ಟದ ಬಣ್ಣ. ಅವಳ ಮೊದಲ ಚಿಗುರೆಲೆಯೊಂದು ಪುಷ್ಪ, ಆದರೆ ಒಂದು ಗಂಟೆಯ ಕಾಲ ಮಾತ್ರ. ಅನಂತರ ಎಲೆಯು ಎಲೆಯಾಗಿಬಿಡುವುದು ಹಾಗೇ ಈಡನ್ ದುಃಖದಲ್ಲಿ ಮುಳುಗುವುದು ಹಾಗೇ ನಸುಕು ದಿವಸದಲ್ಲಿ ಕರಗುವುದು ಚಿನ್ನದ ಯಾವುದೂ ಸದಾ ಚಿನ್ನವಾಗಿರದು.

ಗಡಿಯಾರದವನು

ಇಮೇಜ್
 ಗಡಿಯಾರದವನು ಮೂಲ: ಶೆಲ್ ಸಿಲ್ವರ್ಸ್ಟೀನ್ ಅನುವಾದ: ಸಿ ಪಿ ರವಿಕುಮಾರ್ ಕೇಳಿದನು ಮಗುವನ್ನು ಗಡಿಯಾರದವನು, ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ? "ಕೊಡುವುದಿಲ್ಲ ಒಂದೂ ಕಾಸು!" ಉತ್ತರಿಸಿತು ಮಗು "ಮುಗುಳ್ನಗುಗಳಿದ್ದಷ್ಟು ನನ್ನಲ್ಲಿ ದಿನಗಳಿವೆ!" ಮಗು ಯುವಕನಾದಾಗ ಗಡಿಯಾರದವ ಕೇಳಿದನು, ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ? "ಒಂದು ರೂಪಾಯಿ ಕೊಡಬಲ್ಲೆ, ಹೆಚ್ಚೆಂದರೆ ಎರಡು! ಏಕೆಂದರೆ ನನ್ನವೇ ಬೇಕಾದಷ್ಟು ದಿನಗಳಿವೆ!" ಸಾಯುವ ಘಳಿಗೆಯಲ್ಲಿ ಗಡಿಯಾರದವ ಕೇಳಿದನು, ಹೆಚ್ಚುವರಿ ಒಂದು ದಿನಕ್ಕೆಷ್ಟು ಬೆಲೆ ಕೊಡುವೆ? "ಸಪ್ತಸಾಗರದ ಎಲ್ಲಾ ಮುತ್ತುಗಳನ್ನೂ ಕೊಟ್ಟು ಕೊಡುವೆ ಆಗಸದಲ್ಲಿರುವ ಸಕಲ ತಾರೆ."

ಹೆಚ್ಚು ಪ್ರೀತಿಸುವ ವ್ಯಕ್ತಿ

ಇಮೇಜ್
ಮೂಲ: ಡಬ್ಲ್ಯು ಎಚ್ ಆಡೆನ್  ಕನ್ನಡಕ್ಕೆ: ಸಿ ಪಿ ರವಿಕುಮಾರ್  ಕತ್ತೆತ್ತಿ ನೋಡುವಾಗ ನಕ್ಷತ್ರಗಳತ್ತ ನನಗೆ ಒಳಗೊಳಗೇ ಗೊತ್ತು ಅವಕ್ಕೇನೂ ದರದಿಲ್ಲ ನಾನು ನರಕಕ್ಕೆ ಹೋದರೂ ಸತ್ತು  ಭೂಮಿಯ ಮೇಲೆ ಹಾಗಲ್ಲ, ಉಪೇಕ್ಷೆಯು ಅಲ್ಲವೇ ಅಲ್ಲ ಮನುಷ್ಯ ಅಥವಾ ಮೃಗಗಳಿಂದ ನಮಗೆ ಸಿಕ್ಕಬಲ್ಲ ಅತ್ಯಂತ ಕೆಟ್ಟ ವಸ್ತು ಹೇಗಿರುತ್ತಿತ್ತು ನಮ್ಮಲ್ಲಿ ಅನುರಕ್ತಗೊಂಡು ಸುಡುತ್ತಿದ್ದರೆ ನಕ್ಷತ್ರ? ಅವುಗಳ ಭಾವತೀವ್ರತೆಗೆ ಸಮವಾಗಿ ಸ್ಪಂದಿಸಲು ನಮಗೆ ಆಗತ್ತಾ? ಪ್ರೀತಿಯ ತಕ್ಕಡಿಯು ಸಮವಾಗಿಲ್ಲದೇ ಇದ್ದ ಪಕ್ಷ  ನಾನೇ ವಾಲುವುದು ಮೇಲು ಹೆಚ್ಚು ಪ್ರೀತಿಸುವತ್ತ ತಾರೆಗಳ ಅಭಿಮಾನಿ ನಾನೆಂಬುದು ನಿಜವೇ ಆದರೂ ನನಗಾಗಿ ಕ್ಯಾರೇ ಅನ್ನುವುದಿಲ್ಲ ಅವುಗಳಲ್ಲಿ ಯಾರೂ ಈಗ ಅವುಗಳ ಕಡೆಗೆ ನೋಡುತ್ತಾ  ಮನದಟ್ಟಾಗುತ್ತಿದೆ ನನಗೂ  ಬೆಳಗಿಂದ ಅಷ್ಟೇನೂ ಕಾಡಿಲ್ಲ ಅವುಗಳ ಅನುಪಸ್ಥಿತಿ ನನ್ನನ್ನು. ತಾರೆಗಳೆಲ್ಲಾ ಒಣಗಿ ಉದುರಿಹೋದರೆ ಒಂದು ಪಕ್ಷ ಕಲಿಯಬಲ್ಲೆ ನೋಡುತ್ತಾ ನಿಲ್ಲುವುದು ಶೂನ್ಯ ಅಂತರಿಕ್ಷ ಅನುಭವಿಸಲು ಕಲಿಯಬಲ್ಲೆ ಅದರ ಭವ್ಯ ಅಂಧಕಾರ ಸ್ವಲ್ಪ ಕಷ್ಟವಾದೀತು, ಆದರೂ ಕಲಿಯಬಲ್ಲೆ, ಖಚಿತ.

ಪಡಲ್ ಆಟ

ಇಮೇಜ್
  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು!* ಮಳೆ ಬಂದಾಗ ಮೈದಾನದಲ್ಲಿ ನೀರು ನಿಂತಾಗ ನೀನೂ ಬಂದು ಜೊತೆ ಸೇರು ಆಡೋಣ ಅತ್ತಕಡೆಯಿಂದಿತ್ತಕಡೆ ಹಾರಿ ಮತ್ತೆ ಇತ್ತಕಡೆಯಿಂದತ್ತಕಡೆ ಹಾರಿ ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ನೋಡು ನಾನೇ ಹನುಮಂತನಂತೆ ಅದೇ ಲಂಕೆ, ನಡುವೆ ಕಡಲಂತೆ ನೋಡು ಒಂದೇ ಸಲ ಹಾರಿ ಬಂದು ನಿಂತೆ ನೀನೂ ಬಂದರೆ ಜೊತೆಗೇ ಆಡೋಣವಂತೆ  ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! ಛಪ್ ಎಂದು ಕಡಲಲ್ಲಿ ಹಾರಿಸೋಣ ಕೊಚ್ಚೆ ಅಮ್ಮ ಕರೆಯುವವರೆಗೂ ಮನಸೋ ಇಚ್ಛೆ  ಏನೀಗ ಕೊಳೆಯಾದರೆ ಒಂದಿಷ್ಟು ಬಟ್ಟೆ ಒಗೆದರೆ ಬಿಳಿಯಾಗದೇ ಇರುವುದೇ ಮತ್ತೆ! ಕೆಲವರಿಗೆ ಇಷ್ಟ ಕಡಲು ನನಗೆ ಇಷ್ಟ ಪಡಲು! (*ಪಡಲು - puddle. ಮಳೆ ಬಂದಾಗ ನೀರು ಸೇರಿ ಉಂಟಾಗುವ ಪುಟ್ಟ ಹೊಂಡ) ಸಿ ಪಿ ರವಿಕುಮಾರ್

ತೊರೆ ಮತ್ತು ನದಿ

ಇಮೇಜ್
ಕಾಡಿನ ಅಂಚಿಗೆ ಬಂದಾಗ ತೊರೆ ದೊಡ್ಡದಾಗಿ ಬೆಳೆದು ಬಿಟ್ಟಿತ್ತು ಹೆಚ್ಚೂಕಡಿಮೆ ನದಿಯಾಗಿ ಮತ್ತು ಹಾಗೆ ಬೆಳೆದುಬಿಟ್ಟಿದ್ದರಿಂದ ಈಗ ತಗ್ಗಿತ್ತು ಸಾಕಷ್ಟು ಅದರ ವೇಗ ಇನ್ನೂ ಎಳೆಯದಾಗಿದ್ದಾಗ ಹೇಗೆ ಕುಣಿದು ಕುಪ್ಪಳಿಸುತ್ತಿತ್ತೋ ಹಾಗೆ ಜಿಗಿಯದೆ, ಹೊಳೆಯದೆ, ಓಡದೆ ಅತ್ತಿಂದಿತ್ತ ಗಂಭೀರತೆಯಿಂದ ಕೂಡಿತ್ತು ಹೊಳೆಯ ಚಿತ್ತ  ಎಲ್ಲಿಗೆಂದು ಪ್ರಯಾಣ ಈಗ  ನದಿಗೆ ಗೊತ್ತಿತ್ತು ನಿಖರ "ಒಂದು ದಿನ ಮುಟ್ಟುತ್ತೇನೆ ಸಾವಕಾಶ, ಏನವಸರ?" ವನದ ಎತ್ತರಗಳಲ್ಲಿ ಹರಿದು ಬರುವ ಪುಟ್ಟ ಹಳ್ಳ ತೊರೆ ಹಾತೊರೆದು ಹರಿಯುತ್ತಾ ಬರೆಯುತ್ತಿವೆ  ವಕ್ರ ಗೆರೆ ಎಷ್ಟೊಂದಿದೆ ನೋಡಬೇಕಾದದ್ದು, ಕಲಿಯಬೇಕಾದದ್ದು ಎಂಬಂತೆ ಓಡುತ್ತಿವೆ ಅವಸರದಲ್ಲಿ ಬಿದ್ದು ಎದ್ದು. ಮೂಲ: ಎ ಎ ಮಿಲ್ನ್  ಅನುವಾದ: ಸಿ ಪಿ ರವಿಕುಮಾರ್   By the time it came to the edge of the Forest, the stream had grown up, so that it was almost a river, and, being grown-up, it did not run and jump and sparkle along as it used to do when it was younger, but moved more slowly. For it knew now where it was going, and it said to itself, “There is no hurry. We shall get there some day.” But all the little streams higher up in the Forest went this way and that, quickly, eagerly, ...

ಫಾಂಟ್ಆಸ್ಟಿಕ್ ಕನ್ನಡ

ಕನ್ನಡ ಅಕ್ಷರದಲ್ಲಿ ಇಲ್ಲ ಲೋವರ್ ಕೇಸ್, ಅಪ್ಪರ್ ಕೇಸ್  ಇದು ಏನು ತೋರಿಸುತ್ತದೆ ನಮ್ಮಲ್ಲಿ ಇರಲೇ ಇಲ್ಲ ಮೇಲು ಕೀಳು. ಕೇಳೇ ಇರಲಿಲ್ಲ ನಮ್ಮವರು ಕ್ಯಾಪಿಟಲ್ ಲೆಟರ್ಸ್  ಇವೆಲ್ಲಾ ಕ್ಯಾಪಿಟಲಿಸಂ ತಂದ ಗೋಳು. ಬೋಲ್ಡ್ ಫೇಸ್ ಎಲ್ಲಿತ್ತು ನಮ್ಮಲ್ಲಿ ನಮ್ಮದು ಮೆಲುದನಿಯ ಮಾತು ಐಟಾಲಿಕ್ಸ್ ಇರಲೇ ಇಲ್ಲ ಏಕೆಂದರೆ ಅತ್ತಿತ್ತ ಬಾಗದೆ ನಿಲುವು ನೇರವಾಗಿತ್ತು. ಸಿ ಪಿ ರವಿಕುಮಾರ್

ವಿನಯ

ಇಮೇಜ್
ಜನ ಕೇಳಿದಾಗ ಪ್ರಶ್ನೆ ಕೊಡುವೆ ಸಿದ್ಧ ಉತ್ತರವನ್ನೇ : "ಓಹೋ ಚೆನ್ನಾಗಿದ್ದೇನೆ, ಎಲ್ಲಾ ನಿಮ್ಮ ಆಶೀರ್ವಾದ" ಮತ್ತೊಬ್ಬರು ಕೇಳಿದಾಗ ಪ್ರಶ್ನೆ ನನ್ನ ಉತ್ತರ ಪುನರಾವರ್ತನೆ: "ನೀವು ಹೇಗಿದ್ದೀರಿ? ನಾನು ಚೆನ್ನಾಗಿದ್ದೇನೆ! ಧನ್ಯವಾದ!" ನಾನು ಉತ್ತರಿಸುವುದು ಖಂಡಿತ ನನ್ನ ಉತ್ತರ ಪೂರ್ವನಿಶ್ಚಿತ ಮತ್ತು ವಿನಯಪೂರ್ವಕ  ಯಾವಾಗಲೂ. ಆದರೆ    ಕೆಲವೊಮ್ಮೆ ಅಂದುಕೊಳ್ಳುತ್ತೇನೆ       ಅವರು ಏನೂ ಕೇಳದಿದ್ದರೆ ಮೇಲು. ಮೂಲ: ಏ ಏ ಮಿಲ್ನ್  ಕನ್ನಡ ಅನುವಾದ: ಸಿ ಪಿ ರವಿಕುಮಾರ್

ಏಐ ದೂರದರ್ಶಿನಿ

ಇಮೇಜ್
ಸಿ. ಪಿ. ರವಿಕುಮಾರ್  ಟಿವಿ  ನೋಡಿ ಬೋರಾಯ್ತು,ಹೊಸ ಟಿವಿ ಸೆಟ್ ಖರೀದಿಸೋಣ ಎಂದು ಹೆಂಡತಿ ದುಂಬಾಲು ಬಿದ್ದಳು. ಯಾವಾಗ ವಾಗ್ವಾದಗಳು ಆರ್ನಬ್ ರಾಯ್ ಮಟ್ಟವನ್ನು ಮುಟ್ಟಿತೋ ಆಗ ಮಂಜು ನಿರ್ವಾಹವಿಲ್ಲದೆ ಒಂದು ಆಫ್ಲೈನ್ ಅಂಗಡಿಗೆ ಭೇಟಿ ಕೊಡಲು ನಿರ್ಧರಿಸಿದ.  ಅಲ್ಲಿ ಒಬ್ಬ ಸ್ವಾಗತಕಾರಿಣಿ ಅವನನ್ನು ಮುಗುಳ್ನಗೆಯ ಸ್ವಾಗತದಿಂದ ಮೋಡಿ ಮಾಡಿದ್ದಲ್ಲದೆ ಅವನಿಗೆ ಕೂಡಲೇ ಬಿಸಿ ಕಾಫಿ ಕೊಡುವಂತೆ ಪರಿಚಾರಕನಿಗೆ ಕರೆ ಮಾಡಿ ತಿಳಿಸಿದಳು. "ವಾವ್ ಆನ್ಲೈನ್ ಖರೀದಿಯಲ್ಲಿ ಈ ರೀತಿಯ ಸ್ವಾಗತ ಎಲ್ಲಿ ಸಿಕ್ಕುತ್ತೆ!" ಎಂದು ಯೋಚಿಸುತ್ತಾ ಮಂಜುವಿನ ಕಣ್ಣು ಮಂಜಾಯಿತು. ಅಷ್ಟರಲ್ಲಿ ಮಂಜುವಿನ ಡಾಪಲ್ ಗ್ಯಾಂಗರ್ ಎನ್ನಬಹುದಾದ ಒಬ್ಬ ಸೇಲ್ಸ್ಮನ್ ಕಾಣಿಸಿಕೊಂಡು "ಹೇಗಿದ್ದೀರಾ ಸಾರ್! ನಿಮಗೆ ಟಿವಿ ತಾನೇ ಬೇಕಾಗಿರೋದು?" ಎಂದ. "ನಿಮಗೆ ಹೇಗೆ ಗೊತ್ತಾಯಿತು!" "ಸಾರ್ ಈ ಕೆಲಸ ಮಾಡ್ತಾ ಮಾಡ್ತಾ ಇಪ್ಪತ್ತೈದು ವರ್ಷ ಆಯಿತು" ಎಂದು ಡಾಪಲ್ ಗ್ಯಾಂಗರ್ ತನ್ನ ಅರೆಬಕ್ಕ ತಲೆಯನ್ನು ತೋರಿಸಿ ನಕ್ಕ. "ಜನರ ಮುಖ ನೋಡಿಯೇ ನಾನು ಅವರಿಗೆ ವಾಷಿಂಗ್ ಮೆಶೀನ್ ಬೇಕೋ, ಮಿಕ್ಸರ್ ಅಂಡ್ ಗ್ರೈಂಡರ್ ಬೇಕೋ, ಫ್ರಿಜ್ ಬೇಕೋ, ಎಲೆಕ್ಟ್ರಿಕ್ ಶೇವರ್ ಬೇಕೋ, ಟಿವಿ ಬೇಕೋ ಹೇಳಿಬಿಡಬಲ್ಲೆ" "ವಾವ್, ನೋಡಿ ಇದೆಲ್ಲ ಆನ್ಲೈನ್ ಖರೀದಿಯಲ್ಲಿ ಎಲ್ಲಿ ಸಾಧ್ಯ!" ಎಂದು ಮಂಜು ಕಾಫಿಯ ಸಿಪ್ ತೆಗೆದುಕೊಂಡ. ಫಿಲ್ಟರ್ ಕಾಫಿ ನಿಜವಾಗಿಯೂ...